Advertisement

ಅಂತಾರಾಷ್ಟ್ರೀಯ ಗಾಳಿಪಟ ಉತ್ಸವಕ್ಕೆ ಚಾಲನೆ

02:11 PM Jan 22, 2023 | Team Udayavani |

ಹುಬ್ಬಳ್ಳಿ: ಪರೀಕ್ಷೆಯಲ್ಲಿ ಅತಿ ಹೆಚ್ಚಿನ ಅಂಕ ಗಳಿಕೆ ಕುರಿತಾಗಿ ಪಾಲಕರು ಮಕ್ಕಳ ಮೇಲೆ ಒತ್ತಡ ಹಾಕಬಾರದು. ಅದೇ ರೀತಿ ವಿದ್ಯಾರ್ಥಿಗಳು ಪರೀಕ್ಷೆ ಭಯ ಇರಿಸಿಕೊಳ್ಳದೆ ಸಮರ್ಪಕವಾಗಿ ಪರೀಕ್ಷೆ ಎದುರಿಸಬೇಕು ಎಂದು ಕೇಂದ್ರ ಸಂಸದೀಯ ವ್ಯವಹಾರಗಳು, ಕಲ್ಲಿದ್ದಲು ಮತ್ತು ಗಣಿ ಸಚಿವ ಪ್ರಹ್ಲಾದ ಜೋಶಿ ಹೇಳಿದರು.

Advertisement

“ಸಂಸದ ಸಾಂಸ್ಕೃತಿಕ ಮಹೋತ್ಸವ’ ಅಂಗವಾಗಿ ಆಯೋಜಿರುವ ಎರಡು ದಿನಗಳ ಅಂತಾರಾಷ್ಟ್ರೀಯ ಗಾಳಿಪಟ ಹಾಗೂ ಸಾಂಸ್ಕೃತಿಕ ಉತ್ಸವ ಉದ್ಘಾಟಿಸಿ ಮಾತನಾಡಿದ ಅವರು, ಪುಸ್ತಕ ಒಳ್ಳೆಯ ಸಂಗಾತಿ. ಪರೀಕ್ಷೆ ಭಯ ಬೇಡ, ಅದಕ್ಕಾಗಿಯೇ ಪ್ರಧಾನಿ ನರೇಂದ್ರ ಮೋದಿಯವರು ಪರೀಕ್ಷಾ ಸಂದರ್ಭದಲ್ಲಿ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡುತ್ತಿದ್ದು, ಪರೀಕ್ಷಾ ಯೋಧರು ಎಂಬ ಕೃತಿ ಬರೆದಿದ್ದು, ಅದನ್ನು ಪ್ರತಿಯೊಬ್ಬ ವಿದ್ಯಾರ್ಥಿಗಳು ಓದಬೇಕು ಎಂದರು.

ಪರೀಕ್ಷೆ ಕೇವಲ ನಿಮ್ಮ ಓದಿನ ಪರೀಕ್ಷೆಯೇ ವಿನಃ ಜೀವನ ಪರೀಕ್ಷೆ ಅಲ್ಲ. ಜ.27ರಂದು ಪ್ರಧಾನಿ ನರೇಂದ್ರ ಮೋದಿಯವರು ಪರೀಕ್ಷೆ ಕುರಿತಾಗಿ ಮಾತನಾಡಲಿದ್ದು, ಎಲ್ಲ ಶಾಲೆಗಳಲ್ಲಿಯೂ ಸ್ಕ್ರೀನ್‌ ಮೂಲಕ ಪ್ರದರ್ಶನಕ್ಕೆ ವ್ಯವಸ್ಥೆ ಮಾಡಬೇಕು. ಡಿಜಿಟಲ್‌ ಬೋರ್ಡ್‌ ವ್ಯವಸ್ಥೆ ಇದ್ದ ಕಡೆ ಅದನ್ನು ಬಳಸಿಕೊಳ್ಳಬೇಕು ಎಂದು ಡಿಡಿಪಿಐ ಹಾಗೂ ಬಿಇಒ ಅವರಿಗೆ ಸೂಚಿಸಿದರು.

ಪ್ರಧಾನಿಯವರ ಪರೀಕ್ಷಾ ಯೋಧರು ಕೃತಿ ಕನ್ನಡದಲ್ಲಿ ಬಂದಿದ್ದು, ಧಾರವಾಡ ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ವಿವಿಧ ಶಾಲೆಗಳಿಗೆ ನಾಲ್ಕೈದು ಪುಸ್ತಕಗಳನ್ನು ನೀಡಲಾಗುವುದು ಎಂದು ಹೇಳಿದರು.

Advertisement

ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ ಮಾತನಾಡಿ, ಗಾಳಿಪಟ ಉತ್ಸವ ಹಮ್ಮಿಕೊಂಡಿರುವುದು ಉತ್ತಮ ಕಾರ್ಯ. ನಮ್ಮ ಸಂಸ್ಕೃತಿ, ಪರಂಪರೆ, ಗ್ರಾಮೀಣ ಸೊಗಡು ಮರೆಯಾಗುತ್ತಿರುವ, ಗಾಳಿಪಟ ಹಾರಿಸುವುದು ಕಡಿಮೆ ಆಗುತ್ತಿರುವ ಇಂದಿನ ಸ್ಥಿತಿಯಲ್ಲಿ ಅಂತಾರಾಷ್ಟ್ರೀಯ ಗಾಳಿಪಟ ಉತ್ಸವ ಹಮ್ಮಿಕೊಂಡಿರುವುದು ಶ್ಲಾಘನೀಯ ಎಂದರು.

ಡಿಡಿಪಿಐ ಎಸ್‌.ಎಸ್‌. ಕೆಳದಿಮಠ, ಬಿಇಒ ಚನ್ನಪ್ಪಗೌಡ, ಉದ್ಯಮಿ ಡಾ| ವಿಎಸ್‌ವಿ ಪ್ರಸಾದ ಇನ್ನಿತರರಿದ್ದರು. ವಿದ್ಯಾರ್ಥಿಗಳಿಗೆ ಚಿತ್ರಕಲೆ ಸ್ಪರ್ಧೆ ಹಾಗೂ ಪರೀಕ್ಷಾ ಪೇ ಚರ್ಚೆ ಸ್ಪರ್ಧೆ ನಡೆಯಿತು. 120ಕ್ಕೂ ಹೆಚ್ಚು ಶಾಲಾ-ಕಾಲೇಜುಗಳ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.

 

Advertisement

Udayavani is now on Telegram. Click here to join our channel and stay updated with the latest news.

Next