Advertisement

“ಕಿಕ್‌’ಏರಿಸಿದ ಮಧ್ಯಂತರ ಚುನಾವಣೆ “ಬಾಂಬ್‌”

11:00 PM Jun 23, 2019 | Lakshmi GovindaRaj |

ದೇವೇಗೌಡರು ಎಸೆದಿರುವ ವಿಧಾನಸಭೆಯ ಸಂಭವನೀಯ “ಮಧ್ಯಂತರ ಚುನಾವಣೆ’ ಬಾಂಬ್‌ ಮೈತ್ರಿ ಪಕ್ಷಗಳಾದ ಕಾಂಗ್ರೆಸ್‌-ಜೆಡಿಎಸ್‌ ಹಾಗೂ ಪ್ರತಿಪಕ್ಷ ಬಿಜೆಪಿಯಲ್ಲಿ ಒಳಗೊಳಗೇ ಹೊಸ ರಾಜಕೀಯ ಲೆಕ್ಕಾಚಾರಗಳನ್ನು ಹುಟ್ಟುಹಾಕಿದೆ. ಜತೆಗೆ, ದೇವೇಗೌಡರ ಹೇಳಿಕೆ ಮೈತ್ರಿ ಪಕ್ಷಗಳ ನಾಯಕರ ನಡುವಿನ ಮಾತಿನ ಚಕಮಕಿಗೂ ಕಾರಣವಾಗುತ್ತಿದೆ. ಈ ಹಿನ್ನೆಲೆಯಲ್ಲಿ ಭಾನುವಾರ ನಡೆದ ರಾಜಕೀಯ ಬೆಳವಣಿಗೆ ಹಾಗೂ ರಾಜಕೀಯ ನಾಯಕರ ವಾಕ್ಸಮರದ ಸಣ್ಣ ಝಲಕ್‌ ಇಲ್ಲಿದೆ.

Advertisement

ಮೈಸೂರಲ್ಲಿ ರಹಸ್ಯ ಸಭೆ ನಡೆಸಿದ ಸಿದ್ದರಾಮಯ್ಯ
ಮೈಸೂರು: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಭಾನುವಾರ ನಗರದ ಖಾಸಗಿ ಹೋಟೆಲ್‌ನಲ್ಲಿ ಗುಪ್ತಸಭೆ ನಡೆಸಿದರು. ಸಭೆ ವೇಳೆ, ದೇವೇಗೌಡರು ನೀಡಿರುವ ಹೇಳಿಕೆ, ಮೈತ್ರಿ ಸರ್ಕಾರದ ನಡುವಿನ ಗೊಂದಲ, ಲೋಕಸಭಾ ಚುನಾವಣೆಯಲ್ಲಿ ಮೈತ್ರಿ ಅಭ್ಯರ್ಥಿ ಆರ್‌.ಧ್ರುವನಾರಾಯಣ್‌ ಅವರಿಗೆ ವರುಣಾ ಕ್ಷೇತ್ರದಲ್ಲಿ ನಿರೀಕ್ಷಿತ ಪ್ರಮಾಣದಲ್ಲಿ ಮತಗಳು ಬಾರದ ಬಗ್ಗೆ ಚರ್ಚೆಗಳು ನಡೆದವು ಎಂದು ತಿಳಿದು ಬಂದಿದೆ.

ಕಾಂಗ್ರೆಸ್‌ ಕಾರ್ಯಕರ್ತರು ಹಾಗೂ ವರುಣಾ ವಿಧಾನಸಭಾ ಕ್ಷೇತ್ರದ ಗ್ರಾಪಂ ಸದಸ್ಯರು ಸಭೆಯಲ್ಲಿ ಪಾಲ್ಗೊಂಡಿದ್ದರು. ಸಿದ್ದರಾಮಯ್ಯ ಅವರಿಗೆ ಚುನಾವಣೆ ವೇಳೆ ತಾವು ವಹಿಸಿದ ಕಾರ್ಯದ ಬಗ್ಗೆ ಪಕ್ಷದ ಕಾರ್ಯಕರ್ತರು ಮತ್ತು ಗ್ರಾಪಂ ಸದಸ್ಯರು ಮಾಹಿತಿ ನೀಡಿದರು. ಈ ವೇಳೆ, ವರುಣಾ ಕ್ಷೇತ್ರದಲ್ಲಿ ಧ್ರುವನಾರಾಯಣ್‌ ಅವರಿಗೆ ಸಾಕಷ್ಟು ಸಂಖ್ಯೆಯಲ್ಲಿ ಮತ ಬಾರದ ಬಗ್ಗೆ ಸಿದ್ದರಾಮಯ್ಯ ಸಭೆಯಲ್ಲಿ ಹಲವರನ್ನು ತರಾಟೆಗೆ ತೆಗೆದುಕೊಂಡರು ಎಂದು ತಿಳಿದು ಬಂದಿದೆ.

ಮಧ್ಯಂತರ ಚುನಾವಣೆ ಯಾರಿಗೂ ಬೇಕಿಲ್ಲ
ಮುದ್ದೇಬಿಹಾಳ: ರಾಜ್ಯದಲ್ಲಿ ಕಾಂಗ್ರೆಸ್‌, ಜೆಡಿಎಸ್‌, ಬಿಜೆಪಿಯ ಯಾವ ಶಾಸಕರಿಗೂ ಮಧ್ಯಂತರ ಚುನಾವಣೆ ಬೇಕಿಲ್ಲ. ಹೀಗಾಗಿ, ಈ ಸರ್ಕಾರ 4 ವರ್ಷಗಳ ಕಾಲ ಮುಂದುವರಿಯುತ್ತದೆ ಎಂದು ಗೃಹ ಸಚಿವ ಎಂ.ಬಿ.ಪಾಟೀಲ ತಿಳಿಸಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಮ್ಮಿಶ್ರ ಸರ್ಕಾರ ಬೀಳುತ್ತದೆ ಎನ್ನುವ ಮಾತುಗಳಿಗೆಲ್ಲ ಅರ್ಥ ಇಲ್ಲ. ಮೈತ್ರಿ ಎಂದ ಮೇಲೆ ಸಣ್ಣ ಪುಟ್ಟ ಸಮಸ್ಯೆಗಳಿರುವುದು ಸಹಜ. ಒಂದು ಮನೆಯಲ್ಲಿ ಸಮಸ್ಯೆಗಳು ಹೇಗೆ ಇರುತ್ತವೆಯೋ ಹಾಗೇ ಮೈತ್ರಿ ಸರ್ಕಾರದಲ್ಲೂ ಇವೆ ಎಂದರು.

Advertisement

ಮಧ್ಯಂತರ ಚುನಾವಣೆ ಬಗ್ಗೆ ತಮ್ಮ ಹೇಳಿಕೆಯನ್ನು ತಪ್ಪಾಗಿ ಗ್ರಹಿಸಲಾಗಿದೆ ಎಂದು ಮಾಜಿ ಪ್ರಧಾನಿ ದೇವೇಗೌಡರೇ ಸ್ಪಷ್ಟನೆ ಕೊಟ್ಟಿದ್ದಾರೆ. ಹೀಗಾಗಿ, ಆ ಬಗ್ಗೆ ಹೆಚ್ಚು ಮಾತನಾಡುವುದಿಲ್ಲ. ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ ಸೋಲಲು ಮೈತ್ರಿ ಕಾರಣ ಎಂದು ವೀರಪ್ಪ ಮೊಯ್ಲಿ ಹೇಳಿದ್ದು ಅವರ ವೈಯಕ್ತಿಕ ವಿಚಾರ.

ರಾಜಸ್ಥಾನ, ಮಧ್ಯಪ್ರದೇಶದಲ್ಲೂ ಕಾಂಗ್ರೆಸ್‌ ಸೋತಿದೆ. ಆದರೆ, ಅಲ್ಲಿ ಯಾವ ಮೈತ್ರಿಯೂ ಇರಲಿಲ್ಲ. ಇಡೀ ದೇಶಾದ್ಯಂತ ಪಕ್ಷಕ್ಕೆ ಹಿನ್ನಡೆ ಆಗಿದೆ. ಕರ್ನಾಟಕದಲ್ಲಿ ಮೈತ್ರಿ ಇದೆ ಎಂದ ಮಾತ್ರಕ್ಕೆ ಇದನ್ನೇ ಟೀಕಿಸುವುದು ಸರಿ ಅಲ್ಲ. ಜನರ ತೀರ್ಪಿಗೆ ತಲೆಬಾಗಿದ್ದೇವೆ. ಪಕ್ಷವನ್ನು ಮತ್ತೆ ಬಲಿಷ್ಠವಾಗಿ ಕಟ್ಟಲು ಅಧಿ ಕಾರಕ್ಕೆ ಬರುತ್ತೇವೆ ಎಂದರು.

ಗೌಡರು, ಎಚ್‌ಡಿಕೆ ಬಾಯಿ ಮುಚ್ಚಿಸಿದ್ದಾರೆ!: ದೇವೇಗೌಡರ ಹೇಳಿಕೆ, ಸಮ್ಮಿಶ್ರ ಸರ್ಕಾರದ ಬಗ್ಗೆ ಕಾಂಗ್ರೆಸ್‌ನವರ ಹೇಳಿಕೆಗೆ ಪ್ರತಿಕ್ರಿಯಿಸಲು ನಿರಾಕರಿಸಿದ ಮಾಜಿ ಸಚಿವ, ಜೆಡಿಎಸ್‌ ಮುಖಂಡ ಬಸವರಾಜ ಹೊರಟ್ಟಿ, ಏನನ್ನೂ ಪ್ರತಿಕ್ರಿಯಿಸದಂತೆ ಜೆಡಿಎಸ್‌ ವರಿಷ್ಠ ದೇವೇಗೌಡ, ಸಿಎಂ ಕುಮಾರಸ್ವಾಮಿ ಅವರು ಸೂಚಿಸಿ ಬಾಯಿ ಮುಚ್ಚಿ ಬಿಡಿ ಅಂದಿದ್ದಾರೆ. ಹೀಗಾಗಿ, ನಾವು ಈ ಬಗ್ಗೆ ಏನೂ ಹೇಳ್ಳೋಲ್ಲ ಎಂದರು.

ಮೈತ್ರಿ ಸರಕಾರ 5 ವರ್ಷ ಪೂರೈಸಲಿದೆ: ಖಾದರ್‌
ಬಳ್ಳಾರಿ: ರಾಜ್ಯದಲ್ಲಿ ಯಾವುದೇ ಕಾರಣಕ್ಕೂ ಮಧ್ಯಂತರ ಚುನಾವಣೆ ಎದುರಾಗಲ್ಲ. ಮೈತ್ರಿ ಸರ್ಕಾರ ಐದು ವರ್ಷ ಅಧಿಕಾರ ಪೂರೈಸಲಿದೆ ಎಂದು ನಗರಾಭಿವೃದ್ಧಿ ಸಚಿವ ಯು.ಟಿ.ಖಾದರ್‌ ಹೇಳಿದರು.
ನಗರದಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, “ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡ, ಮಾಜಿ ಮುಖ್ಯಮಂತ್ರಿ ವೀರಪ್ಪ ಮೊಯ್ಲಿ ಅವರ ಹೇಳಿಕೆಗಳಿಗೆ ನಾನು ಪ್ರತಿಕ್ರಿಯಿಸಲಾರೆ. ಆದರೆ, ರಾಜ್ಯದಲ್ಲಿ ಮಧ್ಯಂತರ ಚುನಾವಣೆ ಎದುರಾಗಲ್ಲ. ಮೈತ್ರಿ ಸರ್ಕಾರ ಐದು ವರ್ಷ ಇರಲಿದ್ದು, ಎಚ್‌.ಡಿ.ಕುಮಾರಸ್ವಾಮಿ ಐದು ವರ್ಷ ಮುಖ್ಯಮಂತ್ರಿಯಾಗಿ ಮುಂದುವರಿಯಲಿದ್ದಾರೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಎಐಸಿಸಿ ಅಧ್ಯಕ್ಷ ರಾಹುಲ್‌ ಗಾಂ ಧಿ, ಮಾಜಿ ಪ್ರಧಾನಿ ದೇವೇಗೌಡರು ಕೈಗೊಂಡ ನಿರ್ಣಯದ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಮೈತ್ರಿ ಸರ್ಕಾರ ರಚನೆಯಾಗಿದೆ. ಸಿಎಲ್‌ಪಿ ಮುಖಂಡ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಾ| ಜಿ.ಪರಮೇಶ್ವರ್‌ ಮಾರ್ಗದರ್ಶನದಲ್ಲಿ ಸರ್ಕಾರ ಮುಂದುವರಿಯುತ್ತಿದೆ. ಕೆಪಿಸಿಸಿ ಅಧ್ಯಕ್ಷ ದಿನೇಶ್‌ ಗುಂಡೂರಾವ್‌ ಸೇರಿ ನಾವೆಲ್ಲ ಸಹಕಾರ ನೀಡುತ್ತಿದ್ದೇವೆ ಎಂದರು.

“ಪಕ್ಷದ ಕೆಲ ಹಿರಿಯ ನಾಯಕರ ಮಾತಿಗೆ ನಾನು ಪ್ರತಿಕ್ರಿಯಿಸಲ್ಲ. ಪಕ್ಷದ ಹೈಕಮಾಂಡ್‌ ಇವನ್ನೆಲ್ಲ ಸರಿಪಡಿಸಲಿದೆ. ಮೈತ್ರಿ ಸರ್ಕಾರ ಉರುಳಿಸಲು ಬಿಜೆಪಿಯವರು ಯಾವುದೇ ಪ್ರಯತ್ನ ನಡೆಸುತ್ತಿಲ್ಲ. ಜನಬೆಂಬಲ ಐದು ವರ್ಷಕ್ಕೆ ದೊರೆತಿದೆ. ಪ್ರತಿಪಕ್ಷದವರು ನೀಡುವ ಸಲಹೆ, ಸೂಚನೆ ಸ್ವೀಕರಿಸಿ ಆಡಳಿತ ನಡೆಸಲಾಗುವುದು’ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next