Advertisement

ಜಾದು ಕಲೆಯ ಗುಟ್ಟು ವಿನಾಕಾರಣ ರಟ್ಟಾಗುತ್ತಿದೆ : ಕುದ್ರೋಳಿ ಗಣೇಶ್

07:11 PM Mar 07, 2021 | Team Udayavani |

ಉದಯವಾಣಿ ಡಾಟ್ ಕಾಮ್ ಆರಂಭಿಸಿರುವ “ತೆರೆದಿದೆ ಮನೆ ಬಾ ಅತಿಥಿ”   ವಿನೂತನ ಫೇಸ್ ಬುಕ್ ಲೈನ್ ಸರಣಿಯ ಮೊದಲ ಸಂಚಿಕೆಯ ಪ್ರಥಮ ಅತಿಥಿಯಾಗಿ  ಪ್ರಸಿದ್ಧ ಜಾದುಗಾರ ಕುದ್ರೋಳಿ ಗಣೇಶ್ ಭಾಗವಹಿಸಿದರು. ಶನಿವಾರ ( ಮಾರ್ಚ 6 ) ಪ್ರಸಾರವಾದ ಸಂಚಿಕೆಯಲ್ಲಿ ಅಂತರ್ಜಾಲದ ಬೆಳವಣಿಗೆಯಿಂದ ಜಾದು ಕಲೆ ನಶಿಸುತ್ತಿದೆಯೇ” ಎನ್ನುವ ವಿಚಾರದ ಬಗ್ಗೆ ತಮ್ಮ ಅನಿಸಿಕೆಯನ್ನು ಹಂಚಿಕೊಂಡರು.

Advertisement

ಅಂತರ್ಜಾಲವು ಒಂದೆಡೆ ಜಾದು ಕಲೆಯನ್ನು ಅಭ್ಯಾಸ ಮಾಡುವವರಿಗೆ ಗುರು ಸ್ಥಾನದಲ್ಲಿದ್ದುಕೊಂಡು ಕಲೆಗೆ ಸಂಬಂಧಿಸಿದ ಅಪಾರ ಜಾನವನ್ನು ನೀಡುತ್ತಿದೆ ಆದರೆ ಇದೇ ಅಂತರ್ಜಾಲವನ್ನು ದುರುಪಯೋಗಪಡಿಸಿಕೊಂಡು ಬಹಳಷ್ಟು ಮಂದಿ ಪ್ರಾಚೀನ ಇತಿಹಾಸವಿರುವ ಜಾದು ಕಲೆಯ ಗುಟ್ಟುಗಳನ್ನು ವಿನಾಕಾರಣ ರಟ್ಟು ಮಾಡುವ ಕೆಲಸ ಮಾಡುತ್ತಿದ್ದಾರೆ. ಇದರಿಂದ ಒಂದೆಡೆ ಜಾದು ಕಲೆಯ ಮೂಲ ಸ್ವರೂಪವಾಗಿರುವ ಅಚ್ಚರಿ ಉಂಟು ಮಾಡುವ ಭಾವಕ್ಕೆ ಧಕ್ಕೆಯಾಗಿ ಜಾದೂ ಕಲೆಯ ಗೌರವಕ್ಕೆ ಚ್ಯುತಿಯಾಗುತ್ತಿದೆ ಎಂದು ಕುದ್ರೋಳಿ ಗಣೇಶ್ ಕಳವಳ ವ್ಯಕ್ತಪಡಿಸುತ್ತಾರೆ.

ತಮ್ಮ 30 ವರ್ಷಗಳ ಪೂರ್ಣ ವೃತ್ತಿಪರ ಜಾದೂ ಬದುಕನ್ನು ಕುದ್ರೋಳಿ ಗಣೇಶ್ ಸಂಕ್ಷಿಪ್ತವಾಗಿ ಬಿಚ್ಚಿಟಟ್ಟಿರುವುದರ ಜೊತೆಗೆ ಜಾದುವಿನ ಪ್ರಾತ್ಯಕ್ಷಿಕೆಯನ್ನು ಮಾಡಿ ತೋರಿಸಿ, ಫೇಸ್ ಬುಕ್ ಲೈವ್ ನ ಮೂಲಕ ಜನರನ್ನು ತಮ್ಮ ವ್ಯಾಪ್ತಿಯೊಳಗೆ ಸೆಳೆದುಕೊಂಡರು.

ನವರಸ ಪೂರ್ಣವಾಗಿ, ಪ್ರಾದೇಶಿಕ ಸೊಗಡಿಗೆ ಒಗ್ಗಿಸಿಕೊಂಡು ಭಾವನಾತ್ಮಕವಾಗಿ ಸೆಳೆಯುವ ಚಾಣಾಕ್ಷ್ಯತೆಯನ್ನು ಬೆಳಸಿಕೊಂಡರೆ ಜಾದೂವಿನಲ್ಲಿ ಹೊಸ ಆಯಾಮವನ್ನು ಸೃಷ್ಟಿ ಮಾಡುವುದಕ್ಕೆ ಸಾಧ್ಯವಾಗುತ್ತದೆ. ಅಸಡ್ಡೆಯನ್ನು ಮೀರಿಸಿ ನಿಲ್ಲುವ ಕಲೆ ಹಾಗಾಗಿ ಈ ಕಲೆಗೆ ಸರಿಸಾಠಿ ಇನ್ನೊಂದಿಲ್ಲ ಎನ್ನುತ್ತಾರೆ ಕುದ್ರೋಳಿ.

Advertisement

ಶೈಕ್ಷಣಿಕ ಚೌಕಟ್ಟು ಈ ಜಾದುವಿನಲ್ಲಿ ಇಲ್ಲ. ಈಗ ಜಗತ್ತೆ ನಮ್ಮ ಮುಷ್ಟಿಯೊಳಗಿದೆ. ಆ ನಿಟ್ಟಿನಲ್ಲಿ ನಾವು ಗಮನಿಸುವುದಾರೆ ಆನ್ ಲೈನ್ ನಲ್ಲಿಯೂ ಕೂಡ ಕಲಿಸಿಕೊಡುವ ಸಾಧ್ಯತೆಯನ್ನು ಕುದ್ರೋಳಿಯವರು  ಈ ಕೋವಿಡ್ ಲಾಕ್ ಡೌನ್ ಸಂದರ್ಭದಲ್ಲಿ  ಕಂಡುಕೊಂಡವರು.

ಸುಮಾರು 12 ಬ್ಯಾಚ್ ಗಳಲ್ಲಿ ದೇಶಿ ಹಾಗೂ ವಿದೇಶಿ 200 ವಿದ್ಯಾರ್ಥಿಗಳಿಗೆ ಆನ್ ಲೈನ್ ನಲ್ಲಿ ಜಾದೂವನ್ನು ಕಲಿಸಿಕೊಡುವುದರ ಮುಖೇನ ಜಾಗತಿಕ ಗುರುವಾದ ಹೆಚ್ಚುಗಾರಿಕೆ ಕುದ್ರೋಳಿ ಗಣೇಶ್ ಅವರದ್ದು.

ಜಾದುಗೆ ಕಥೆ ಕಟ್ಟುವ ಅಗತ್ಯವಿದೆ, ಕಥೆಗೆ ರಂಜನೆ ಬೇಕು. ಪ್ರಾದೇಶಿಕವಾಗಿ ಹಾಗೂ ನಮ್ಮೆದುರಿನ ಜನರನ್ನು ಅರ್ಥ ಮಾಡಿಕೊಂಡು ಪ್ರದರ್ಶನ ನೀಡಬೇಕಾಗುತ್ತದೆ. ಬುದ್ಧಿವಂತಿಕೆ ಹಾಗೂ ತಂತ್ರಗಾರಿಕೆಯಿಂದ ರೂಢಿಸಿಕೊಂಡಂತಹ ಕಲೆಯನ್ನು ಅಸಡ್ಡೆಯಿಂದ ನೋಡುವ ಕೆಲವು ವೀಕ್ಷಕರಿಂದ ಜಾದೂಗೆ ಧಕ್ಕೆ ಉಂಟಾಗುತ್ತಿದೆ. ಜಾದೂವನ್ನು ಕಲೆಯಾಗಿಯೇ ಪ್ರದರ್ಶನ ಮಾಡಬೇಕು. ಭಾವಕ್ಕೆ ಹೊಂದಿಕೊಳ್ಳುವ ಹಾಗೆ ಜಾದೂವನ್ನು ಮಾಡಿದಾಗ ಮಾತ್ರ ಜಾದೂ  ಗೆಲ್ಲುವುದಕ್ಕೆ ಸಾಧ್ಯ ಎನ್ನುವುದನ್ನು ಆಕ್ರೋಶ, ನೋವು, ಹೆಮ್ಮೆಗಳಿಂದ ಸಮ್ಮಿಲನಗೊಂಡ ಮನಸ್ಸಿಂದ ವ್ಯಕ್ತಪಡಿಸಿಕೊಳ್ಳುತ್ತಾರೆ ಗಣೇಶ್.

ಪವಾಡ ಬಯಲು ಕಾರ್ಯಕ್ರಮಗಳಿಂದ ಜಾದೂ ಕಲೆಗೆ ತೊಂದರೆಯಾಗುತ್ತಿದೆಯೇ ಎಂದು ಕೇಳಿದ ಪ್ರಶ್ನೆಗೆ ಉತ್ತರಿಸಿದ ಕುದ್ರೋಳಿ ಗಣೇಶ್ ಜನರ ಮೂಢ ನಂಬಿಕೆಗಳನ್ನು ದೂರ ಮಾಡಿ ಅವರಲ್ಲಿ ವೈಜ್ನಾನಿಕ ಮನೋಭಾವವನ್ನು ಬೆಳೆಸುವ ಮಹತ್ವದ ಕೆಲಸವನ್ನು ಪ್ರಾಮಾಣಿಕವಾಗಿ ಮಾಡುತ್ತಿರುವ ಪವಾಡ ಬಯಲು ಕಾರ್ಯಕ್ರಮದ ಬುದ್ದಿಜೀವಿಗಳು ಒಂದೆಡೆಯಾದರೆ ಟಿವಿಯಲ್ಲಿ ಕಾಣಿಸಿಕೊಳ್ಳಬೇಕು, ಪ್ರಚಾರ ಗಿಟ್ಟಿಸಿಕೊಳ್ಳಬೇಕು, ದುಡ್ದು ಮಾಡಬೇಕು ಅನ್ನುವ ಉದ್ದೇಶವನ್ನು ಮುಂದಿಟ್ಟುಕೊಂಡು ನಕಲಿ ಪವಾಡ ಬಯಲು ಮಾಡುವವರು ಬೆಳೆಯುತ್ತಿದ್ದಾರೆ.ಇವರಿಗೆ ಜನರಿಗೆ ಒಳ್ಳೆದು ಮಾಡುವ ಉದ್ದೇಶ ಇರುವುದಿಲ್ಲ ಇವರು ಕೇವಲ ಪ್ರಚಾರಕ್ಕಾಗಿ ಜಾದೂ ತಂತ್ರಗಳನ್ನೆ ಬಯಲು ಮಾಡಿ ಅದು ಯಾರೋ ಮಾಡಿರುವ ಪವಾಡ ಎಂದು ತಪ್ಪು ಮಾಹಿತಿ ನೀಡುತ್ತಿದಾರೆ ಎಂದು ಉತ್ತರಿಸಿದರು ಕುದ್ರೋಳಿ.

ಜಾದು ಕಲೆ ಯಾವತ್ತೂ ಸಾಯೋದಿಲ್ಲ ಆದರೆ ಅದನ್ನು ಪ್ರದರ್ಶನ ಮಾಡುವ ಕಲಾವಿದರರಿಗೆ ಸರಿಯಾದ ಅವಕಾಶ ಸಿಗದೇ ಹೋದರೆ ಆತ ಮೂಲೆಗುಂಪಾಗುವ ಸಾಧ್ಯತೆ ಇದೆ, ಆಗ ಜಾದು ಕಲೆಯ ಪ್ರದರ್ಶನಗಳು ವಿರಳವಾಗುತ್ತದೆ ಎಂದು ಹೇಳಿದ ಕುದ್ರೋಳಿ ಗಣೇಶ್ ಜನರಿಗೆ ಮೆಚ್ಚುಗೆಯಾಗುವ ರೀತಿಯಲ್ಲಿ ಜಾದು ಕಲಾವಿದರೂ ತಮ್ಮ ಪ್ರದರ್ಶನವನ್ನು ಉನ್ನತ ದರ್ಜೆಗೆ ಏರಿಸುವ ಕೆಲಸ ಮಾಡಲಿ ಆ ಮೂಲಕ ಜಾದು ಕಲೆಯ ಜನಪ್ರಿಯತೆ ಮತ್ತಷ್ಟು ಹೆಚ್ಚುವಂತಾಗಲಿ ಎನ್ನುವ ಅಭಿಪ್ರಾಯವನ್ನು ವ್ಯಕ್ತಪಡಿಸಿದರು.

ಶಿಕ್ಷಣಕ್ಕಾಗಿ, ಸಮಾಜಕ್ಕಾಗಿ, ಸ್ವಚ್ಚತೆಗಾಗಿ, ಎಲ್ಲಾ ತರದ ವರ್ಗವನ್ನು ಜಾದೂವಿನ ಮೂಲಕ ತಲುಪಿದ ಮೇರು ಜಾದು ಕಲಾವಿದ ಕುದ್ರೋಳಿ ಗಣೇಶ್. ‘ತೆರೆದಿದೆ ಮನೆ’ಯಲ್ಲಿ ತಮ್ಮ ಸಂಪೂರ್ಣ ತಮ್ಮ ಮನಸ್ಸನ್ನು ತೆರೆದಿಟ್ಟರು. ಜಾದು ಸೂರ್ಯ ಚಂದ್ರರಿರುವ ಕಾಲದ ತನಕವೂ ಉಳಿಯುತ್ತದೆ ಎನ್ನುತ್ತಾರೆ ಅಂತರಾಷ್ಟ್ರೀಯ ಮಟ್ಟದ ಜಾದೂ ಕಲೆಯ ಸಾಮ್ರಾಟ ಕುದ್ರೋಳಿ ಗಣೇಶ್.

ಜಾದು ಎನ್ನುವುದು ಮೂಡನಂಬಿಕೆ ಅಲ್ಲ. ಅದು ಬುದ್ಧಿವಂತಿಕೆ ಹಾಗು ತಂತ್ರಗಾರಿಕೆ ನಡುವೆ ಸಮ್ಮೀಲನಗೊಂಡಿರುವ ಕಲೆಯಲ್ಲಿ ನಭಚುಂಬಿಸುತ್ತುವ ಕುದ್ರೋಳಿ ಗಣೇಶ್ ಈ ಭಾಗದ ಹೆಮ್ಮೆ. ಅವರ ಆಶಯ ಈಡೇರಲಿ ಎನ್ನುವುದು ನಮ್ಮ ಸದಾಶಯ.

ಕುದ್ರೋಳಿ ಗಣೇಶ್ ಅವರ ಸಾಧನೆಗೆ ಉದಯವಾಣಿ ಬಳಗ ಸೆಲ್ಯೂಟ್ ಮಾಡುತ್ತದೆ.

Advertisement

Udayavani is now on Telegram. Click here to join our channel and stay updated with the latest news.

Next