Advertisement

ಸ್ವಾತಂತ್ರ್ಯ ಯೋಧರಿಗೆ ಅವಮಾನ ಆರೋಪ-ಪ್ರತಿಭಟನೆ

06:12 PM Jul 27, 2022 | Team Udayavani |

ಧಾರವಾಡ: ಸ್ವಾತಂತ್ರ್ಯ ಅಮೃತ ಮಹೋತ್ಸವ ಹೆಸರಿನಲ್ಲಿ ಕೇಂದ್ರ ವಾರ್ತಾ ಇಲಾಖೆ ಆಯೋಜಿಸಿರುವ ಛಾಯಾಚಿತ್ರ ಪ್ರದರ್ಶನದಲ್ಲಿ ಸ್ವಾತಂತ್ರ್ಯ ಯೋಧರಿಗೆ ಹಾಗೂ ಈವರೆಗೂ ದೇಶ ಮುನ್ನಡೆಸಿದ ಮಹನೀಯರಿಗೆ ಅವಮಾನ ಮಾಡಲಾಗಿದೆ ಎಂದು ಆರೋಪಿಸಿ ಕೆಸಿಡಿ ಆವರಣದಲ್ಲಿ ಕಾಂಗ್ರೆಸ್‌ ಮುಖಂಡರು ಮಂಗಳವಾರ ಪ್ರತಿಭಟನೆ ನಡೆಸಿದರು.

Advertisement

ಹಲವರ ತ್ಯಾಗ ಬಲಿದಾನದಿಂದಾಗಿ ನಮಗೆ ಸ್ವಾತಂತ್ರ್ಯ ಲಭಿಸಿದೆ. ಹಾಗೆಯೇ ನಂತರ ತಮ್ಮ ದೂರದೃಷ್ಟಿತ್ವದ ಮೂಲಕ ಮಹತ್ವದ ಯೋಜನೆಗಳನ್ನು ರೂಪಿಸಿ ಹಲವು ಪ್ರಧಾನಿಗಳು, ರಾಷ್ಟ್ರಪತಿಗಳು ದೇಶವನ್ನು ಮುನ್ನಡೆಸಿದ್ದಾರೆ. ಆದರೆ ಅವರೆಲ್ಲರನ್ನೂ ಬಿಟ್ಟು, ಕೇವಲ ಪ್ರಧಾನಿ ನರೇಂದ್ರ ಮೋದಿ ಅವರ ಸಾಧನೆ ಹೇಳಲು ಈ ಪ್ರದರ್ಶನ ಆಯೋಜಿಸಲಾಗಿದೆ ಎಂದು ದೂರಿದರು.

ಗಾಂಧೀಜಿ ಅವರ ಕುರಿತು ಸರಿಯಾದ ಮಾಹಿತಿ ಹಾಕಿಲ್ಲ. ಜವಾಹರಲಾಲ್‌ ನೆಹರು ಅವರ ಚಿತ್ರವನ್ನು ಕಾಣದಂತೆ ಮೂಲೆಯಲ್ಲಿ ಹಾಕಲಾಗಿದೆ. ದೇಶಕ್ಕಾಗಿ ಪ್ರಾಣವನ್ನೇ ನೀಡಿದ ಲಾಲ್‌ ಬಹದ್ದೂರ್‌ಶಾಸ್ತ್ರಿ, ಇಂದಿರಾಗಾಂಧಿ, ರಾಜೀವ ಗಾಂಧಿ, ಉದಾರ ಆರ್ಥಿಕ ನೀತಿ ತಂದ ನರಸಿಂಹ ರಾವ್‌, ಡಾ| ಮನಮೋಹನ ಸಿಂಗ್‌ ಅವರ ಚಿತ್ರಗಳು ಇಲ್ಲ. ತಮ್ಮದೇ ಪಕ್ಷದ ಅಟಲ್‌ ಬಿಹಾರಿ ವಾಜಪೇಯಿ ಅವರ ಕುರಿತ ಚಿತ್ರ ಹಾಗೂ ಮಾಹಿತಿ ಇಲ್ಲಿ ಇಲ್ಲ. ಕೇವಲ ಮೋದಿ ಅವರನ್ನು ವಿಜೃಂಭಿಸಲು ಈ ಪ್ರದರ್ಶನ ಬಳಸಲಾಗಿದೆ ಎಂದು ಆರೋಪಿಸಿದರು.

ಮುಖಂಡರಾದ ರಾಬರ್ಟ್‌ ದದ್ದಾಪುರಿ, ದೀಪಕ ಚಿಂಚೋರೆ ಮಾತನಾಡಿ, ಕಾಲೇಜು ಆವರಣದಲ್ಲಿ ಆಯೋಜಿಸಿರುವ ಈ ಪ್ರದರ್ಶನದಲ್ಲಿ ಸುಳ್ಳು ಮಾಹಿತಿಗಳನ್ನು ಹಾಕಲಾಗಿದೆ. ಇತಿಹಾಸ ತಿರುಚುವ ಕೆಲಸ ಮಾಡಲಾಗುತ್ತಿದೆ. ಇದನ್ನು ಸ್ವಾತಂತ್ರ್ಯ ಅಮೃತ ಮಹೋತ್ಸವ ಎನ್ನುವ ಬದಲು ಮೋದಿ ಸರ್ಕಾರದ ಸಾಧನೆ ಎಂದು ಆಯೋಜಿಸಲಿ ಎಂದರು.

ಇದು ಈ ದೇಶಕ್ಕೆ ಮಾಡಿರುವ ಅಪಮಾನ. ಹಾಗೆಯೇ ದೇಶದ ಪ್ರಧಾನಿ ಹುದ್ದೆಗೆ ಏರಿದ ಏಕೈಕ ಕನ್ನಡಿಗ ಎಚ್‌.ಡಿ.ದೇವೇಗೌಡರ ಚಿತ್ರ ಹಾಕದೇ ಇಡೀ ಕರ್ನಾಟಕಕ್ಕೆ ಅವಮಾನ ಮಾಡಲಾಗಿದೆ. ಸ್ವಾತಂತ್ರ್ಯೋತ್ಸವದ ಹೆಸರಿನಲ್ಲಿ ಆಯೋಜಿಸಿರುವ ಕೇಂದ್ರದ ಸಾಧನೆ ಪ್ರದರ್ಶನ ಕೂಡಲೇ ಸ್ಥಗಿತಗೊಳಿಸಬೇಕು. ಇಲ್ಲವಾದಲ್ಲಿ ಬುಧವಾರವೂ ಪ್ರತಿಭಟನೆ ಮುಂದುವರಿಸಲಾಗುವುದು ಎಂದು ಎಚ್ಚರಿಸಿದರು.

Advertisement

ಸ್ಥಳಕ್ಕೆ ಬಂದ ಉಪನಗರ ಠಾಣೆ ಪೊಲೀಸರು ಪ್ರತಿಭಟನಾಕಾರರನ್ನು ವಶಕ್ಕೆ ಪಡೆದು, ನಂತರ ಬಿಡುಗಡೆಗೊಳಿಸಿದರು. ಪಾಲಿಕೆ ಸದಸ್ಯರಾದ ಕವಿತಾ ಕಬ್ಬೇರ, ಸುರವ್ವ ಪಾಟೀಲ, ದೀಪಾ ನೀರಲಕಟ್ಟಿ, ಮಂಜುನಾಥ ಬಡಕುರಿ, ಶಂಭು ಸಾಲಿಮನಿ, ಗಣೇಶ ಮುಧೋಳ, ದೊರೆರಾಜ ಮಣಿಕುಂಟ್ಲ, ಪಕ್ಷದ ಬ್ಲಾಕ್‌ ಅಧ್ಯಕ್ಷ ಬಸವರಾಜ ಕಿತ್ತೂರ, ಆನಂದ ಜಾಧವ, ಜೇಮ್ಸ… ಯಾಮಾ, ಸುಧಾ ಮಣಿಕುಂಟ್ಲ, ಸದಾನಂದ ಡಂಗನವರ, ಸತೀಶ ತುರಮರಿ, ಗೌರಮ್ಮ ನಾಡಗೌಡ, ಸತೀಶ
ಗಿರಿಯನ್ನವರ, ಸಲೀಂ ಸಂಗನಮುಲ್ಲ, ಶಿವು ಚಿನ್ನಗೌಡ ಇನ್ನಿತರರಿದ್ದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next