Advertisement

ಸುರಕ್ಷೆಗಾಗಿ ಸಿಟಿ ಬಸ್‌ಗಳಲ್ಲಿ ಸಿಸಿ ಕೆಮರಾ ಅಳವಡಿಕೆ

05:38 PM Jan 25, 2022 | Team Udayavani |

ಮಹಾನಗರ: ಪ್ರಯಾಣಿಕರು ಮತ್ತು ಬಸ್‌ನ ಸುರಕ್ಷೆಯ ಉದ್ದೇಶದಿಂದ ನಗರದಲ್ಲಿ ಓಡಾಡುವ ಕೆಲವು ಸಿಟಿ ಬಸ್‌ಗಳಲ್ಲಿ ಬಸ್‌ ಮಾಲಕರು ಸಿಸಿ ಕೆಮರಾ ಅಳವಡಿಸಿದ್ದು ಇದು ಪ್ರಯಾಣಿಕರ ಮೆಚ್ಚುಗೆಗೆ ಕಾರಣವಾಗಿದೆ.

Advertisement

ಸ್ಟೇಟ್‌ಬ್ಯಾಂಕ್‌-ತಲಪಾಡಿ ನಡುವೆ ಸಂಚರಿಸುವ 2 ಹಾಗೂ ಶೇಡಿಗುರಿ-ಸ್ಟೇಟ್‌ಬ್ಯಾಂಕ್‌ ನಡುವೆ ಸಂಚರಿಸುವ ಒಂದು ಬಸ್‌ಗೆ ಈಗಾಗಲೇ ಸಿಸಿ ಕೆಮರಾ ಅಳವಡಿಸಲಾಗಿದ್ದು, ಇದರಿಂದಾಗಿ ಬಸ್‌ ಮಾಲಕರು, ನಿರ್ವಾಹಕರು ಮತ್ತು ಪ್ರಯಾಣಿಕರಿಗೂ ಅನುಕೂಲವಾಗಿದೆ ಎಂಬ ಅಭಿಪ್ರಾಯಗಳು ಕೇಳಿಬಂದಿವೆ.

ರಾತ್ರಿ ವೇಳೆ ನಿಲ್ಲಿಸಲಾಗುವ ಬಸ್‌ಗಳ ಬ್ಯಾಟರಿ ಕಳ್ಳತನ ಮಾಡುವುದು, ಬಸ್‌ಗಳಿಗೆ ಹಾನಿ ಮಾಡುವುದು, ಪ್ರಯಾಣಿಕರ ಮೊಬೈಲ್‌ ಮತ್ತಿತರ ಸೊತ್ತುಗಳ ಕಳ್ಳತನ, ಮಹಿಳೆಯರಿಗೆ ಕಿರುಕುಳ ಮೊದಲಾದ ಸಂದರ್ಭ ಆರೋಪಿಗಳನ್ನು ಪತ್ತೆ ಮಾಡಲು ನೆರವಾಗುತ್ತಿವೆ.

ಒಮ್ಮೆ ಯಾವುದೋ ಒಂದು ಪ್ರಕರಣದ ಆರೋಪಿಯನ್ನು ಬೆನ್ನು ಹತ್ತಿ ಬಂದಿದ್ದ ಪೊಲೀಸರಿಗೆ ಆರೋಪಿ ಒಂದು ಸಿಟಿ ಬಸ್‌ನಲ್ಲಿ ಹೋಗಿರುವ ಮಾಹಿತಿ ದೊರೆಯಿತು. ಅನಂತರ ಆ ಸಿಟಿ ಬಸ್‌ನ ಸಿಸಿ ಕೆಮರಾ ಪರಿಶೀಲಿಸಿ ಪೊಲೀಸರು ತನಿಖೆ ಮುಂದುವರಿಸಿದ್ದರು. ಇನ್ನೊಂದು ಘಟನೆಯಲ್ಲಿ ಸಿಟಿ ಬಸ್‌ ನಿರ್ವಾಹಕನೊಂದಿಗೆ ವ್ಯಕ್ತಿಯೋರ್ವ ಕ್ಷುಲ್ಲಕ ಕಾರಣಕ್ಕೆ ಜಗಳಕ್ಕಿಳಿದ ದೃಶ್ಯ ಕೂಡ ಸಿಸಿ ಕೆಮರಾದಲ್ಲಿ ದಾಖಲಾಗಿ ಆತನ ವಿರುದ್ಧ ಕ್ರಮ ತೆಗೆದುಕೊಳ್ಳಲು ಅನುಕೂಲವಾಗಿದೆ. ಡೀಸೆಲ್‌ ಪಂಪ್‌ ರೀಡಿಂಗ್‌ನ ದೃಶ್ಯ ದಾಖಲಾಗುವುದರಿಂದಲೂ ನೆರವಾಗುತ್ತಿದೆ ಎನ್ನುತ್ತಾರೆ ಸಿಸಿ ಕೆಮರಾ ಅಳವಡಿಸಿರುವ ಬಸ್‌ನ ಮಾಲಕರು.

ಎಲ್ಲರಿಗೂ ಪ್ರಯೋಜನ
ನಮ್ಮ ಮಾಲಕರು ಒಂದು ಬಸ್‌ಗೆ ಸಿಸಿ ಕೆಮರಾ ಹಾಕಿಸಿದ್ದಾರೆ. ಇದರಿಂದ ಎಲ್ಲರಿಗೂ ಪ್ರಯೋಜನವಾಗಿದೆ. ಒಂದು ಕೆಮರಾ ಇಡೀ ಬಸ್‌ನ ದೃಶ್ಯ ಸೆರೆ ಹಿಡಿಯುತ್ತದೆ. ಸಿಸಿ ಕೆಮರಾದಲ್ಲಿ ದಾಖಲಾಗುವ ದೃಶ್ಯವನ್ನು ಮಾಲಕರು ಪರಿಶೀಲಿಸುತ್ತಾರೆ.
– ಅಲ್ವಿನ್‌, ಬಸ್‌ ಚಾಲಕರು

Advertisement

ಶ್ಲಾಘನೀಯ ನಡೆ
ಬಸ್‌, ಪ್ರಯಾಣಿಕರ ಸುರಕ್ಷೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ಸಿಸಿ ಕೆಮರಾ ಅಳವಡಿಸಿರುವುದು ಶ್ಲಾಘನೀಯ. ಮಹಿಳಾ ಪ್ರಯಾಣಿಕರಿಗೆ ಕಿರುಕುಳ, ಬಸ್‌ಗೆ ಹಾನಿ, ಪಿಕ್‌ಪಾಕೆಟ್‌ ಮೊದಲಾದ ಸಂದರ್ಭದಲ್ಲಿ ತ್ವರಿತ ಕ್ರಮ ಕೈಗೊಳ್ಳಲು ಇದರಿಂದ ಸಾಧ್ಯವಾಗಲಿದೆ. ಇತರ ಬಸ್‌ಗಳ ಮಾಲಕರು ಕೂಡ ಇದೇ ರೀತಿ ಸಿಸಿ ಕೆಮರಾ ಅಳವಡಿಸಿದರೆ ಉತ್ತಮ.
– ಎನ್‌. ಶಶಿಕುಮಾರ್‌, ಪೊಲೀಸ್‌ ಆಯುಕ್ತರು ಮಂಗಳೂರು

-ಸಂತೋಷ್‌ ಬೊಳ್ಳೆಟ್ಟು

Advertisement

Udayavani is now on Telegram. Click here to join our channel and stay updated with the latest news.

Next