Advertisement

ವ್ಹೀಲ್ ‌ಚೇರ್‌ಗೆ ರೆಕ್ಕೆ ಕಟ್ಟಿಕೊಂಡು ಹಾರಿದ!

07:48 PM Sep 08, 2020 | Suhan S |

ಅಪರೂಪದ ಅನುವಂಶಿಕ ಕಾಯಿಲೆಯಿಂದ ಬಳಲುತ್ತಿದ್ದ ಆತ, ಬಾಲ್ಯದಲ್ಲಿ ವೈದ್ಯಕೀಯ ಲೋಕಕ್ಕೆ ಒಂದು ಸವಾಲಾಗಿದ್ದ. ಪೈಲಟ್‌ ಆಗಬೇಕೆಂಬ ಕನಸು ಹೊತ್ತಿದ್ದ ಅವನನ್ನು, ಆ ಕಾಯಿಲೆ ವ್ಹೀಲ್‌ಚೇರ್‌ಗೆ ಕಟ್ಟಿಹಾಕಿತ್ತು. ಇಂಥ ಸಂದರ್ಭದಲ್ಲಿ ಬೇರೆ ಮಕ್ಕಳು ಏನು ಮಾಡುತ್ತಿದ್ದರೋ ಗೊತ್ತಿಲ್ಲ. ಆದರೆ, ಸಾರ್ಥಕ ಕಾಮತ್‌ ಎಂಬ ಹುಡುಗ, ತನ್ನ ಅಂಗವೈಕಲ್ಯಕ್ಕೇ ಸಡ್ಡು ಹೊಡೆದು ನಿಂತ. ತಾನು ಕುಳಿತಿದ್ದ ವ್ಹೀಲ್‌ಚೇರ್‌ಗೆ ರೆಕ್ಕೆ ಕಟ್ಟಿಕೊಂಡು ತನ್ನ ಇಚ್ಛೆಯಂತೆ ಹಾರಿದ, ಹಾಡಿದ, ಓದಿದ! ಪರಿಣಾಮ, ಆತನೀಗ ವೈದ್ಯ!

Advertisement

ಇದು, 14 ವರ್ಷಗಳ ಹಿಂದೆ ಏಳನೇ ತರಗತಿಯಲ್ಲಿದ್ದಾಗ ಶಾಲೆಯಿಂದ ಹೊರಹಾಕಲ್ಪಟ್ಟು, ಇತ್ತೀಚೆಗಷ್ಟೇ ಕೆಂಪೇಗೌಡ ವೈದ್ಯಕೀಯ ಮಹಾವಿದ್ಯಾಲಯದಲ್ಲಿ (ಕಿಮ್ಸ್) ವೈದ್ಯಕೀಯ ಸ್ನಾತಕೋತ್ತರ ಪದವಿ (ಎಂ.ಡಿ) ಪಡೆದು ಮನೋವೈದ್ಯರಾಗಿರುವ ಬೆಂಗಳೂರಿನ ಡಾ. ಸಾರ್ಥಕ್‌ ಕಾಮತ್‌ ಅವರ ಯಶೋಗಾಥೆಯ ಒಂದು ಝಲಕ್‌. ಹುಟ್ಟುತ್ತಾ ಆರೋಗ್ಯವಾಗಿದ್ದ ಸಾರ್ಥಕ್‌, ತನ್ನ 12ನೇ ವಯಸ್ಸಿನಲ್ಲಿ ಡುಷನ್‌ ಮಸ್ಕಾéಲರ್‌ ಡಿಸ್ಟ್ರೋμ ಎಂಬ ಅಪರೂಪದ ಹಾಗೂ ವಾಸಿಯಾಗದ ಕಾಯಿಲೆಗೆ ತುತ್ತಾದರು. ಈ ಕಾಯಿಲೆ ಬಂದರೆ ದೇಹದ ವಿವಿಧ ಅಂಗಗಳ ಸ್ನಾಯು ನಿಷ್ಕ್ರಿಯವಾಗುತ್ತಾ ಹೋಗುತ್ತದೆ. ಆರಂಭದಲ್ಲಿ ಕಾಲಿನ ಸ್ನಾಯುಗಳ ಶಕ್ತಿ ಕಳೆದುಕೊಂಡು ವ್ಹೀಲ್‌ಚೇರ್‌ಗೆ ಸೀಮಿತವಾದರು. ಆದರೆ, ಅವರ ಆಲೋಚನೆ, ಕನಸು, ಸಾಧಿಸಬೇಕೆಂಬ ಮನಸ್ಸು ಮಾತ್ರ ಇದ್ಯಾವುದಕ್ಕೂ ಬಗ್ಗಲಿಲ್ಲ, ಕುಗ್ಗಲಿಲ್ಲ. ಅಂಗವೈಕಲ್ಯವನ್ನು ಮೆಟ್ಟಿನಿಂತು ಸಾಧನೆ ಮಾಡಿದ ಹಲವರಿಂದ ಸ್ಫೂರ್ತಿ ಪಡೆದ ಸಾರ್ಥಕ್‌, ಪೋಷಕರ ಸಹಕಾರದೊಂದಿಗೆ ವಿದ್ಯಾಭ್ಯಾಸ ಆರಂಭಿಸಿದರು.

ಶೇ.91 ರಷ್ಟು ಅಂಕದೊಂದಿಗೆ ಎಸ್‌ಎಸ್‌ಎಲ್‌ಸಿ ತೇರ್ಗಡೆಯಾದರು. ಶೇಷಾದ್ರಿಪುರಂ ಕಾಲೇಜಿನಲ್ಲಿ ಪಿಯುಸಿ ಮುಗಿಸಿ, ರಾಮಯ್ಯ ವೈದ್ಯಕೀಯ ಮಹಾವಿದ್ಯಾಲಯದಲ್ಲಿ 2017ರಲ್ಲಿ ವೈದ್ಯಕೀಯ ಪದವಿ ಪಡೆದರು. ಕಳೆದ ತಿಂಗಳು ಕಿಮ್ಸ್ ನಲ್ಲಿ ಮನೋರೋಗಶಾಸ್ತ್ರ ವಿಷಯದಲ್ಲಿ ಪ್ರಥಮ ದರ್ಜೆ ಫ‌ಲಿತಾಂಶದೊಂದಿಗೆ ಸ್ನಾತಕೋತ್ತರ ಪದವಿ ಪೂರ್ಣಗೊಳಿಸಿದ್ದಾರೆ. ವಿಶ್ವದಲ್ಲಿ ಡುಷನ್‌ ಮಸ್ಕ್ಯಾಲರ್‌ ಡಿಸ್ಟ್ರೋಫಿ ಕಾಯಿಲೆಯಿಂದ ಬಳಲುತ್ತಿರುವವರ ಪೈಕಿ, ವೈದ್ಯಕೀಯ ಪದವಿ ಪಡೆದ ಮೊದಲ ವ್ಯಕ್ತಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಇವರ ತಾಯಿ ಸ್ನೇಹ, ತಂದೆ ಕೆ.ಎನ್‌.ಕಾಮತ್‌ ಮಗನಿಗೆ ಬೆನ್ನೆಲುಬಾಗಿ ನಿಂತು, ಸಾಧನೆಯ ಹಾದಿಗೆ ಮೆಟ್ಟಿಲಾಗಿದ್ದಾರೆ. ಇದೇ ಕಾರಣಕ್ಕೆ ಸ್ನೇಹ ಅವರನ್ನು ಅಮೆರಿಕದ ಪ್ರತಿಷ್ಠಿತ ಮಾಧ್ಯಮ ಸಂಸ್ಥೆಯೊಂದು, AWESOME MUM ಎಂದು ಕರೆದು ಗೌರವಿಸಿದೆ.

ಬಹುಮುಖ ಪ್ರತಿಭೆ :  ಓದಿನಲ್ಲಿ ಮುಂದಿರುವುದು ಮಾತ್ರವಲ್ಲ; ಹಲವು ಚಟುವಟಿಕೆಗಳಲ್ಲಿ ಸಾರ್ಥಕ್‌ ಆಸಕ್ತಿ ಹೊಂದಿದ್ದಾರೆ. ಅವರು ಚೆಸ್‌ಆಡುತ್ತಾರೆ. ಕೀ ಬೋರ್ಡ್‌ ನುಡಿಸುತ್ತಾರೆ. ಕ್ವಿಜ್‌ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಅನೇಕ ಬಹುಮಾನಗಳನ್ನು ಪಡೆದಿದ್ದಾರೆ. ಇತ್ತೀಚೆಗೆ ನಡೆದ ರಾಜ್ಯಮಟ್ಟದ ಮನೋರೋಗಶಾಸ್ತ್ರ ಕ್ವಿಜ್‌ನಲ್ಲಿ ದ್ವಿತೀಯ ಸ್ಥಾನ ಪಡೆದಿದ್ದಾರೆ. ಎರಡು ವರ್ಷಗಳ ಹಿಂದೆ, ಅಂತಾರಾಷ್ಟ್ರೀಯ ವೇದಿಕೆ ಯಾದ ಟೆಡೆ ಎಕ್ಸ್ ಟಾಕ್‌ ನಲ್ಲಿ ಭಾಷಣಕಾರರಾಗಿ ಭಾಗವಹಿಸಿದ್ದಾರೆ. ಇವರ ಸಾಧನೆ ಯನ್ನು ದಾಖಲಿಸಿಕೊಳ್ಳಲು ಲಿಮ್ಕಾ ಬುಕ್‌ ಆಫ್ ರೆಕಾರ್ಡ್ಸ್ ಸಂಸ್ಥೆ ಮುಂದೆ ಬಂದಿತ್ತು. ಆದರೆ, ಶೈಕ್ಷಣಕ ಸಾಧನೆಗಿಂತ ಜೀವನದಲ್ಲಿ ಸಾಧಿಸುವುದು ಬಹಳಷ್ಟಿದೆ ಎಂದು ಡಾ. ಸಾರ್ಥಕ್‌ ಅವರೇ ನಿರಾಕರಿಸಿದ್ದಾರೆ.­

ಶಾಲೆಯಿಂದ ಆಚೆ ಕಳುಹಿಸಿದ್ದರು! :  ಸಾರ್ಥಕ್‌ ಏಳನೇ ತರಗತಿಯಲ್ಲಿದ್ದಾಗ, ಒಂದು ದಿನ ತರಗತಿಯಲ್ಲಿಯೇ ಕಾಲು ಸ್ವಾಧೀನ ಕಳೆದುಕೊಂಡವು. ಆಗ ಶಾಲೆಯಲ್ಲಿ ಯಾರೊಬ್ಬರೂ ಸಹಾಯಕ್ಕೆ ಬರಲಿಲ್ಲ. ಮರುದಿನ ವ್ಹೀಲ್‌ಚೇರ್‌ ಹಾಗೂ ಒಬ್ಬರು ಸಹಾಯಕರ ಜೊತೆಯಲ್ಲಿ ಶಾಲೆಗೆ ಬಂದರೆ ಮುಖ್ಯಶಿಕ್ಷಕರು- “ನಿಮ್ಮ ಮಗನಿಗೆ ನಮ್ಮ ಶಾಲೆಯಲ್ಲಿ ಅವಕಾಶವಿಲ್ಲ . ಇತರೆ ವಿದ್ಯಾರ್ಥಿಗಳಿಗೆ ತೊಂದರೆಯಾಗುತ್ತದೆ’ ಎಂದುಶಾಲೆಯಿಂದ ಹೊರಕಳುಹಿಸಿದ್ದರು. ನಮ್ಮ ಮಗನೀಗ ಪ್ರಥಮ ದರ್ಜೆಯಲ್ಲಿ ವೈದ್ಯಕೀಯ ಸ್ನಾತಕ ಪದವಿ ಪಡೆದಿರುವುದು, ಅನೇಕ ಶಾಲೆಗಳು, ಸಂಘ ಸಂಸ್ಥೆಗಳು, ದೊಡ್ಡ ದೊಡ್ಡ ವೇದಿಕೆಗಳು ಅವನನ್ನು ಆಹ್ವಾನಿಸಿ ಸನ್ಮಾನಿಸುತ್ತಿರುವುದನ್ನು ಕಂಡು ಹೆಮ್ಮೆ ಎನಿಸುತ್ತಿದೆ ಎನ್ನುತ್ತಾರೆ, ಸಾರ್ಥಕ್‌ ಅವರ ತಂದೆ ಕೆ.ಎನ್‌. ಕಾಮತ್‌.

Advertisement

ಪೈಲಟ್‌ ಆಗಬೇಕು ಎಂದು ಕನಸು ಕಂಡಿದ್ದೆ. ನನ್ನ ದೇಹ ಸ್ಥಿತಿ ಮತ್ತು ಅನಾರೋಗ್ಯದ ಕಾರಣಕ್ಕೆ ಅದು ಸಾಧ್ಯವಾಗಲಿಲ್ಲ. ನನ್ನಂತಹ ಅನೇಕರಿಗೆ ನೆರವಾಗುವ, ಆತ್ಮಸ್ಥೈರ್ಯ ತುಂಬುವ ಆಶಯದಿಂದ ವೈದ್ಯನಾದೆ. ಆಸ್ಪತ್ರೆಯೊಂದರಲ್ಲಿ ಕೆಲಸ ಮಾಡುವ, ವಿದೇಶಕ್ಕೆ ತೆರಳಿ ಉನ್ನತ ಶಿಕ್ಷಣ ಮಾಡುವ, ದೇಶದ ಪ್ರತಿಷ್ಠಿತ ಸಂಸ್ಥೆಯಲ್ಲಿ ಸಂಶೋಧನೆ ಆರಂಭಿಸುವ ಆಯ್ಕೆಗಳು ಸದ್ಯ ನನ್ನ ಮುಂದಿವೆ.   ಡಾ. ಸಾರ್ಥಕ್‌ ಕಾಮತ್

 

-ಜಯಪ್ರಕಾಶ್‌ ಬಿರಾದಾರ್‌

Advertisement

Udayavani is now on Telegram. Click here to join our channel and stay updated with the latest news.

Next