Advertisement

CM ಸಿದ್ದರಾಮಯ್ಯಗೆ ವಿಚಾರಣೆ ಅನಿವಾರ್ಯ:ದೂರುದಾರರು ಹೇಳಿದ್ದೇನು?

01:26 AM Aug 18, 2024 | Team Udayavani |

ಬೆಂಗಳೂರು: ಸಿದ್ದರಾಮಯ್ಯ ವಿರುದ್ಧ ಭ್ರಷ್ಟಾಚಾರ ನಿಯಂತ್ರಣ ಕಾಯಿದೆಯ ಸೆಕ್ಷನ್‌ 17(ಎ) ಪ್ರಕಾರ ರಾಜ್ಯಪಾಲರು ಅಭಿಯೋಜನೆಗೆ ಅನುಮತಿ ನೀಡಿರುವುದರಿಂದ ವಿಚಾರಣೆಯಿಂದ ತಪ್ಪಿಸಿಕೊಳ್ಳುವುದಕ್ಕೆ ಸಿದ್ದರಾಮಯ್ಯ ಅವರಿಗೆ ಅಸಾಧ್ಯವಾಗ ಬಹುದು ಎಂದೇ ಕಾನೂನು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

Advertisement

ರಾಜ್ಯಪಾಲರು ಭ್ರಷ್ಟಾಚಾರ ನಿಯಂತ್ರಣ ಕಾಯಿದೆ ಸೆಕ್ಷನ್‌ 19(ಎ) ಪ್ರಕಾರ ಅನುಮತಿ ನೀಡಿದ್ದರೆ ನೇರವಾಗಿ ಇದನ್ನು ಪ್ರಶ್ನಿಸುವುದಕ್ಕೆ ಅವಕಾಶವಿರುತ್ತಿತ್ತು. ಆದರೆ 17(ಎ) ಪ್ರಕಾರ ನೀಡಿರುವುದರಿಂದ ದೂರುದಾರ ಅಭಿಯೋಜನಾ ಅನುಮತಿ ಪತ್ರದೊಂದಿಗೆ ನ್ಯಾಯಾಲಯಕ್ಕೆ ಹಾಜರಾಗಿ ವಿಚಾರಣೆಗೆ ಅನುಮತಿ ಕೋರಬಹುದು. ಆಗ ನ್ಯಾಯಾಲಯ ಖಾಸಗಿ ದೂರು ದಾಖಲಿಸಿಕೊಂಡು ಸೆಕ್ಷನ್‌ 202 ಅಡಿಯಲ್ಲಿ ಪ್ರಕರಣಕ್ಕೆ ಸಂಬಂಧಪಟ್ಟಂತೆ ವಿಚಾರಣೆ ನಡೆಸಿ ವರದಿ ಕೊಡಿ ಎಂದು ಲೋಕಾಯುಕ್ತ ಅಥವಾ ಪೊಲೀಸ್‌ಗೆ ಸೂಚನೆ ನೀಡಬಹುದು. ಹೀಗಾಗಿ ವಿಚಾರಣೆ ಅನಿವಾರ್ಯವಾಗಿ ಪರಿಣಮಿಸುತ್ತದೆ.

ಈ ಹಂತದಲ್ಲಿ ದೂರುದಾರನ ಪ್ರಮಾಣೀಕೃತ ಹೇಳಿಕೆ, ಆರೋಪಿತ ಸ್ಥಾನದಲ್ಲಿರುವವರಿಗೆ ಸಮನ್ಸ್‌ ಇತ್ಯಾದಿ ಪ್ರಕ್ರಿಯೆಗಳು ನಡೆಯಲೇಬೇಕಾಗುತ್ತದೆ. ಇದೆಲ್ಲ ಆದ ಬಳಿಕ ದೂರುದಾರ ಮತ್ತೆ ರಾಜ್ಯಪಾಲರಿಂದ ಅಭಿಯೋಜನಾ ಅನುಮತಿ ಕೇಳಬೇಕಾಗುತ್ತದೆ. ಆಗ 19(ಎ) ಪ್ರಕಾರ ರಾಜ್ಯಪಾಲರು ಅನುಮತಿ ನೀಡಬೇಕಾಗುತ್ತದೆ.

ಈ ಪ್ರಕರಣ ಸಂಬಂಧ ಒಬ್ಬ ದೂರುದಾರ ಈಗಾಗಲೇ ನ್ಯಾಯಾ ಲಯದಲ್ಲಿ ಕೇವಿಯಟ್‌ ಸಲ್ಲಿಸಿದ್ದಾರೆ. ಜನಪ್ರತಿನಿಧಿಗಳ ವಿಶೇಷ ನ್ಯಾಯಾ ಲಯದಲ್ಲಿ ಈಗಾಗಲೇ ವಿಚಾರಣೆ ನಡೆಯುತ್ತಿದ್ದು ರಾಜ್ಯಪಾಲರ ಅನುಮತಿ ಪ್ರತಿ ಹಾಜರುಪಡಿಸಿ ಖಾಸಗಿ ದೂರು ದಾಖಲಿಸಬಹುದಾಗಿದೆ. ಹೀಗಾಗಿ ಸಿದ್ದರಾಮಯ್ಯನವರು ಕಾನೂನು ಹೋರಾಟದಲ್ಲಿ ಸಮಗ್ರ ವಾಗಿ ರಾಜ್ಯಪಾಲರ ಅನುಮತಿ ಪ್ರಶ್ನಿಸುತ್ತಾರೋ ಅಥವಾ 17(ಎ) ಪ್ರಶ್ನಿಸು ತ್ತಾರೋ ಎಂಬ ಕುತೂಹಲ ಮೂಡಿದೆ.

ನಿರ್ದಿಷ್ಟವಾಗಿ ಹೇಳಬೇಕೆಂದರೆ ಇದು ಅಭಿಯೋಜನೆಗೆ ನೀಡಿದ ಅನುಮತಿಯಲ್ಲ, ರಾಜ್ಯಪಾಲರ ಮುಂದೆ ಇದ್ದ ದೂರಿನ ಆಧಾರದ ಮೇಲೆ ಭ್ರಷ್ಟಾಚಾರ ನಿಯಂತ್ರಣ ಕಾಯಿದೆ ಅಡಿ ಪೊಲೀಸರು ತನಿಖೆ ನಡೆಸುವುದಕ್ಕೆ ನೀಡಿದ ಅನುಮತಿ. 17(ಎ) ಪ್ರಕಾರ ಅನುಮತಿ ನೀಡಿರುವುದರಿಂದ ತನಿಖೆ ನಡೆಸುವುದಕ್ಕೆ ಪೊಲೀಸರಿಗೆ ಇದ್ದ ಅಡ್ಡಿ ನಿವಾರಣೆಯಾಗಿದೆ. ಹೈಕೋರ್ಟ್‌ ಹಾಗೂ ಸುಪ್ರೀಂ ಕೋರ್ಟ್‌ನಲ್ಲಿ ರಿಟ್‌ ಅರ್ಜಿ ಸಲ್ಲಿಸಿ ಪ್ರಶ್ನಿಸುವುದಕ್ಕೆ ಅವಕಾಶವಿದೆ.
– ಬಿ.ವಿ. ಆಚಾರ್ಯ, ಹಿರಿಯ ನ್ಯಾಯವಾದಿ

Advertisement

ರಾಜ್ಯಪಾಲರು ತಮ್ಮ ವಿವೇಚನಾಧಿಕಾರ ಬಳಸುವುದಕ್ಕೆ ಅವಕಾಶವಿದೆ. ಅವರು ಸಂಪುಟದ ಸಲಹೆಯನ್ನು ಕಡ್ಡಾಯವಾಗಿ ಪಾಲಿಸಲೇಬೇಕು ಎಂದೇನೂ ಇಲ್ಲ. ಆದರೆ ರಾಜ್ಯಪಾಲರ ಈ ನಿರ್ಧಾರವನ್ನು ನ್ಯಾಯಾಲಯದಲ್ಲಿ ಪ್ರಶ್ನಿಸುವುದಕ್ಕೂ ಅವಕಾಶವಿದೆ. ರಾಜ್ಯಪಾಲರ ನಡೆ ಹೇಗೆ ಕಾನೂನು ರೀತಿ ಇಲ್ಲ ಎಂದು ಮನವರಿಕೆ ಮಾಡಿಕೊಡುವುದಕ್ಕೆ ಹಾಗೂ ಕಾನೂನು ಹೋರಾಟ ಮಾಡುವುದಕ್ಕೆ ಅವಕಾಶವಿದೆ.
– ಅಶೋಕ ಹಾರ್ನಳ್ಳಿ, ನಿವೃತ್ತ ಅ. ಜನರಲ್‌

ನನ್ನ ಕಾನೂನು ಅರಿವಿನ ಪ್ರಕಾರ 17(ಎ) ಪ್ರಕಾರ ರಾಜ್ಯಪಾಲರು ಅಭಿಯೋಜನೆ ನಡೆಸುವುದಕ್ಕೆ ಅನುಮತಿ ನೀಡಿರುವುದರಲ್ಲಿ ಯಾವುದೇ ತಪ್ಪಿಲ್ಲ. ಸಿಎಂ ರಾಜೀನಾಮೆ ನೈತಿಕತೆಗೆ ಸಂಬಂಧಪಟ್ಟ ವಿಚಾರ. ಆದರೆ ಅಭಿಯೋಜನೆ ಪತ್ರವನ್ನು ಮುಂದಿಟ್ಟುಕೊಂಡು ಸಲ್ಲಿಕೆಯಾಗುವ ಖಾಸಗಿ ದೂರನ್ನು ನ್ಯಾಯಾಲಯ ಎತ್ತಿ ಹಿಡಿದಾಗ ಸಮಸ್ಯೆಯಾಗಬಹುದು. ಇದರ ಜತೆಗೆ ಈ ನಿರ್ಣಯವನ್ನು ಹೈಕೋರ್ಟ್‌ನಲ್ಲಿ ಪ್ರಶ್ನಿಸುವುದಕ್ಕೂ ಅವರಿಗೆ ಅಧಿಕಾರವಿದೆ.
– ಸಿ.ಎಚ್‌. ಹನುಮಂತರಾಯ,ಹಿರಿಯ ನ್ಯಾಯವಾದಿ

ಈ ಪ್ರಕರಣದಲ್ಲಿ ಏನಾಗಬಹುದು ಎಂದು ಇದಮಿತ್ಥಂ ಎನ್ನಲು ಸಾಧ್ಯವಿಲ್ಲ. ಸದ್ಯಕ್ಕೆ ಸಿದ್ದರಾಮಯ್ಯನವರ ಮುಂದೆ ಇರುವ ಅವಕಾಶಗಳ ಪೈಕಿ ರಾಜ್ಯಪಾಲರ ನಿರ್ಣಯವನ್ನು ಪ್ರಶ್ನಿಸುವುದಾಗಿರಬಹುದು. ಇದಕ್ಕೆ ಅವಕಾಶವಿದೆ.
– ಉದಯ ಹೊಳ್ಳ, ರಾಜ್ಯ ಸರಕಾರದ ನಿವೃತ್ತ ಅಡ್ವೊಕೇಟ್‌ ಜನರಲ್‌

ದೂರುದಾರರು ಹೇಳಿದ್ದೇನು?
ರಾಜ್ಯಪಾಲರು ನೀಡಿರುವ ಅನುಮತಿ ಮೇಲ್ನೋಟಕ್ಕೆ ಅತ್ಯಂತ ಸ್ಪಷ್ಟವಾಗಿದೆ. ಒಂದಿಷ್ಟು ಸ್ಪಷ್ಟನೆ ಅಗತ್ಯವಿತ್ತು, ಅದನ್ನು ಸಹ ಪಡೆದುಕೊಂಡಿದ್ದೇನೆ. ಇನ್ನು ನ್ಯಾಯಾಲಯಕ್ಕೆ ಈ ಅನುಮತಿ ಪತ್ರವನ್ನು ನೀಡುತ್ತೇನೆ ಎಂದು ದೂರುದಾರರಲ್ಲಿ ಒಬ್ಬರಾಗಿ ರುವ ಟಿ.ಜೆ. ಅಬ್ರಹಾಂ ಹೇಳಿದ್ದಾರೆ.

ಪ್ರಾಸಿಕ್ಯೂಷನ್‌ ಅನುಮತಿ ಸಂಬಂಧ ರಾಜಕೀಯವಾಗಿ ನಾನು ಪ್ರತಿಕ್ರಿಯಿಸ ಲಾರೆ. ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ಕೊಡಬೇಕೆಂದು ನಾನು ಹೇಳುವುದಿಲ್ಲ. ಕಾನೂನು ಹೋರಾಟ ಮುಂದುವರಿಸುತ್ತೇನೆ. ಸೋಮವಾರ ಹೈಕೋರ್ಟ್‌ನಲ್ಲಿ ಕೇವಿಯಟ್‌ ಅರ್ಜಿ ಸಲ್ಲಿಸ ಲಾಗುವುದು ಎಂದರು.

ಮತ್ತೋರ್ವ ದೂರುದಾರ ಸ್ನೇಹಮಯಿ ಕೃಷ್ಣ ಪ್ರತಿಕ್ರಿಯಿಸಿ, ನಮ್ಮ ಹೋರಾಟಕ್ಕೆ ಜಯ ಸಿಕ್ಕಿದೆ. ಮುಂದೆ ಕಾನೂನು ಹೋರಾಟ ನಡೆಸುತ್ತೇವೆ. ಮುಖ್ಯಮಂತ್ರಿ ಅವರ ಪತ್ನಿ ಸೇರಿದಂತೆ ಎಲ್ಲರಿಗೂ ಶಿಕ್ಷೆ ಕೊಡಿಸಲು ಮುಂದಾಗುತ್ತೇನೆ. ಸಿಎಂ ರಾಜೀನಾಮೆಗೆ ಒತ್ತಾಯಿಸುವುದಿಲ್ಲ. ಅವರೇ ನೈತಿಕವಾಗಿ ರಾಜೀನಾಮೆ ಕೊಟ್ಟರೆ ಗೌರವ ಹೆಚ್ಚಾಗಲಿದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next