Advertisement

ಮತಾಂಧತೆಗೆ ಬಲಿಯಾಗುವ ಅಮಾಯಕ ಜೀವಗಳು !

08:25 PM Aug 17, 2019 | Sriram |

ನೆನಪಿರಬಹುದು, ಈ ವರ್ಷದ ಈಸ್ಟರ್‌ ಭಾನುವಾರ ಶ್ರೀಲಂಕಾದ ಪಾಲಿಗೆ ಕರಾಳ ದಿನವಾಗಿತ್ತು! ಕೊಲೊಂಬೋದ ಮೂರು ಚರ್ಚುಗಳಲ್ಲಿ ಬೆಳಗ್ಗೆ ಶಾಂತವಾಗಿ ಪ್ರಾರ್ಥನೆಯಲ್ಲಿ ತೊಡಗಿದ್ದ ನೂರಾರು ಅಮಾಯಕ ಜೀವಗಳು ಮತಾಂಧರ ಬಾಂಬ್‌ ಅಟ್ಟಹಾಸದಲ್ಲಿ ನೆಲಕ್ಕೊರಗಿದವು. ಮೂರು ಪಂಚತಾರಾ ಹೊಟೇಲ್‌ಗ‌ಳಲ್ಲಿದ್ದ ದೇಶೀಯರನ್ನು ಗುರಿಯಾಗಿರಿಸಿಕೊಂಡು ಆತ್ಮಹತ್ಯಾ ಬಾಂಬ್‌ ಸ್ಫೋಟಿಸಲಾಗಿತ್ತು. ಇನ್ನೂರು ತೊಂಬತ್ತು ಮುಗ್ಧ ಜೀವಗಳ ಬಲಿಯೊಂದಿಗೆ ನೂರಾರು ಜನರು ಗಂಭೀರವಾಗಿ ಗಾಯಗೊಂಡರು. ಶಾಂಗ್ರಿಲಾ ಹೊಟೇಲ್‌ನಲ್ಲಿ ನಡೆದ ಬಾಂಬ್‌ ಸ್ಫೋಟದಲ್ಲಿ ತಕ್ಷಣವೇ ಸಾವನ್ನಪ್ಪಿದವರಲ್ಲಿ ರಜೀನಾ ಕೂಡ ಒಬ್ಬರು. ಶಾಂತ ಸ್ವಭಾವದ ಆಕೆ ಶ್ರೀಲಂಕಾದ ಮಗಳು, ಮಂಗಳೂರಿನ ಸೊಸೆ!

Advertisement

ಶ್ರೀಲಂಕಾದಲ್ಲಿ ಮುದ್ದಿನ ಮಡದಿಯೊಂದಿಗೆ ಹತ್ತು ದಿನ ಬಂಧುಬಳಗ ಎಂದೆಲ್ಲ ಸುತ್ತಾಡಿ, ರಜೆ ಕಳೆದು ದುಬೈಗೆ ಮರಳಿದ ಅಬ್ದುಲ್‌ ಖಾದರ್‌ ಕುಕ್ಕಾಡಿ ವಿಮಾನವಿಳಿದು ಹೊರಹೊರಟಿದ್ದರಷ್ಟೇ. ಸುದ್ದಿ ಬಂದು ಅಪ್ಪಳಿಸಿತು, ಕಿವಿಗಳಿಗೆ ಕಾದ ಸೀಸದಂತೆ. ಕೆಲವೇ ಗಂಟೆಗಳ ಹಿಂದೆ ತನ್ನನ್ನು ಬೀಳ್ಕೊಂಡ ಹೆಂಡತಿ ಇದೀಗ ಯಾರೋ ಸಿಡಿಸಿದ ಬಾಂಬಿಗೆ ಬಲಿಯಾಗಿ ನೆಲಕ್ಕೊರಗಿದ್ದಾಳೆ ಎಂದರೆ ನಂಬುವುದಾದರೂ ಹೇಗೆ? ಮತ್ತೂಂದು ವಿಮಾನದಲ್ಲಿ ಮರಳಿ ಶ್ರೀಲಂಕಾಕ್ಕೆ ಹೊರಟ ಅಬ್ದುಲ್ಲರ ಮನದಲ್ಲಿ ಸುನಾಮಿಯಂತೆ ಏಳುತ್ತಿದ್ದ ಭಾವನೆಗಳು… ಬಾಂಬ್‌ ಸಿಡಿಸಿದವರ ಮೇಲೆ ಕೋಪ ಜ್ವಾಲಾಮುಖೀಯಂತೆ ಒಳಗೇ ಕುದಿಯುತ್ತಿತ್ತು. ಮನದಾಳದಲ್ಲಿ ಹತಾಶೆ, ದುಃಖ, ಅಸಹಾಯಕತೆ ಮಡುಗಟ್ಟಿತ್ತು. ನಾಲ್ಕು ದಶಕಗಳ ಹೆಂಡತಿಯ ಸಾಂಗತ್ಯವನ್ನು ಅರೆಕ್ಷಣದಲ್ಲಿ ಬಾಂಬ್‌ ಸ್ಫೋಟ ಛಿದ್ರಗೊಳಿಸಿತ್ತು.

ಹೌದು, ಆ ದಿನ ರಜೀನಾ ದುಬೈಗೆ ಹೋಗಲಿದ್ದ ಗಂಡನನ್ನು ವಿಮಾನನಿಲ್ದಾಣಕ್ಕೆ ಕಳಿಸಿ, ಹೊಟೇಲ್‌ಗೆ ಮರಳಿ, ತಿಂಡಿ ತಿನ್ನಲೆಂದು ಲಾಬಿಗೆ ಹೋಗಿದ್ದರಷ್ಟೇ… ಏನಾಯಿತೆಂದು ಮುಂದೆ ಹೇಳಲು ಅವರಿರಲಿಲ್ಲ. ಮತಾಂಧರು ಸಿಡಿಸಿದ ಬಾಂಬಿನಲ್ಲಿ ಮಂಗಳೂರು, ಕಾಸರಗೋಡು ಮತ್ತು ಶ್ರೀಲಂಕಾ, ಮೂರೂ ನೆಲದ ಕಂಪನ್ನು ಅರವತ್ತು ವಸಂತಗಳ ಕಾಲ ಎದೆಯಲ್ಲಿ ಕಾಪಿಟ್ಟುಕೊಂಡಿದ್ದ ಜೀವವೊಂದು ಅನಂತ ಮೌನಕ್ಕೆ ಜಾರಿತು. ಶ್ರೀಲಂಕಾದಲ್ಲಿ ನಾಲ್ಕು ತಿಂಗಳ ಹಿಂದೆ ನಡೆದ ಬಾಂಬ್‌ ಬ್ಲಾಸ್ಟ್‌ ನಮಗೀಗ ಮರೆತುಹೋದ ಒಂದು ಸುದ್ದಿ ತುಣುಕಾಗಿರಬಹುದು. ಆದರೆ ರಜೀನಾ ಮತ್ತು ರಜೀನಾರಂತಹ ಅಮಾಯಕ ಜೀವಗಳನ್ನು ಬಲಿತೆಗೆದುಕೊಂಡ ಆ ದುರಂತ ಘಟನೆ ಅವರ ಕುಟುಂಬ, ಸ್ನೇಹಿತರ ಪಾಲಿಗೆ ಹಾಗೆ ಮರೆಗೆ ಸರಿಯುವ ಒಂದು ಕಾಲಂನ ಸುದ್ದಿಯಲ್ಲ. ಆ ಬಾಂಬ್‌ ಅವರೆಲ್ಲರ ಎದೆಗಳಲ್ಲಿ ಇನ್ನೂ ಸದ್ದುಮಾಡುತ್ತಲೇ ಇದೆ… ಯಾಕೆ…. ಯಾಕೆ ಆ ಎಲ್ಲ ಮುಗ್ಧಜೀವಗಳಿಗೆ ವಿನಾಕಾರಣ ಶಿಕ್ಷೆ ಎಂದು ಕೇಳುತ್ತಲೇ ಇದೆ.

ಆ ದಿನ ಆತ್ಮಹತ್ಯಾ ಬಾಂಬರ್‌ಗಳು ಚರ್ಚ್‌ ಮತ್ತು ತಾರಾ ಹೊಟೇಲ್‌ಗ‌ಳಲ್ಲಿ ಗರಿಷ್ಠ ಜನರನ್ನು ಕೊಲ್ಲಲು ಸರಿಯಾದ ಸಮಯವನ್ನು ಆಯ್ಕೆ ಮಾಡಿಕೊಂಡಿದ್ದರು. ಭಾನುವಾರದ ಈಸ್ಟರ್‌ ಪ್ರಾರ್ಥನೆಗೆ ಹೇಗಿದ್ದರೂ ತುಂಬ ಜನರು ಚರ್ಚಿಗೆ ಬರುತ್ತಾರೆ, ಪಂಚತಾರಾ ಹೊಟೇಲ್‌ನಲ್ಲಿ ಬೆಳಗ್ಗೆ ಬಫೆ ಬ್ರೇಕ್‌ಫಾಸ್ಟ್‌ ಸಮಯದಲ್ಲಿ ಹೆಚ್ಚಿನವರು ಕೆಫೆಯಲ್ಲಿರುತ್ತಾರೆ ಎಂದು ಬೆಳಗ್ಗೆ ಎಂಟರಿಂದ ಒಂಬತ್ತರ ನಡುವೆ ಸರಣಿ ಬಾಂಬ್‌ ಸ್ಫೋಟ ನಡೆಸಿದ್ದರು.

ರಜೀನಾ ಖಾದರ್‌… ಮನೆಯವರ, ಆಪ್ತರ ಪಾಲಿಗೆ ಅಕ್ಕರೆಯ ಜೀನಾ. ಮಕ್ಕಳಿಗೆ ಪ್ರೀತಿಯ ಅಮ್ಮಿ. ಆಕೆ ಹುಟ್ಟಿ ಬೆಳೆದಿದ್ದು ಶ್ರೀಲಂಕಾದಲ್ಲಿ. ತಂದೆಯ ಬೇರುಗಳು ಇದ್ದಿದ್ದು ಕೇರಳದ ಕಾಸರಗೋಡಿನಲ್ಲಿ. ಬಹಳ ವರ್ಷಗಳ ಹಿಂದೆಯೇ ಶ್ರೀಲಂಕಾಕ್ಕೆ ವಲಸೆ ಹೋಗಿ, ಅಲ್ಲಿಯೇ ನೆಲೆ ಕಟ್ಟಿಕೊಂಡಿದ್ದ ವ್ಯಾಪಾರಸ್ಥ ಆತ. ಮಂಗಳೂರು ಮೂಲದ ಬ್ಯಾರಿ ಸಮುದಾಯದ ಅಬ್ದುಲ್‌ ಖಾದರ್‌ ಕುಕ್ಕಡಿಯವರನ್ನು ಮದುವೆಯಾದಾಗ ರಜೀನಾಗೆ ಇನ್ನೂ ಹತ್ತೂಂಬತ್ತರ ಪ್ರಾಯ. ಆ ಅವಿಭಕ್ತ ಕುಟುಂಬದ ತುಂಬಿದ ಮನೆಯಲ್ಲಿ ಅಬ್ದುಲ್ಲರ ಸಹೋದರರೆಲ್ಲರಿಗೂ ತಾಯಿಯಂತೆ ಆರೈಕೆ, ಅಕ್ಕರೆಯ ಹೊಳೆ ಹರಿಸಿದ ರಜೀನಾ ಕೆಲವೇ ದಿನಗಳಲ್ಲಿ ಎಲ್ಲರಿಗೂ ಅಚ್ಚುಮೆಚ್ಚಾಗಿದ್ದಳು. ಮಂಗಳೂರಿನ ಗಂಡನ ಕುಟುಂಬದವರು, ಶ್ರೀಲಂಕಾದಲ್ಲಿದ್ದ ತಂದೆಯ ಕಡೆಯ ಸಂಬಂಧಿಕರು, ಕೇರಳದಲ್ಲಿದ್ದ ತಂದೆಯ ದಾಯಾದಿ ಹಾಗೂ ಇನ್ನುಳಿದ ಬಂಧುಗಳು, ಎಲ್ಲರನ್ನು ಬೆಸೆದ ಒಂದು ಕೊಂಡಿಯಾಗಿದ್ದರು ರಜೀನಾ. ಮೂರೂ ನೆಲದ ಸಾಮಾಜಿಕ, ಸಾಂಸ್ಕೃತಿಕ ಭಿನ್ನತೆಗಳನ್ನು ಗೌರವಿಸುತ್ತಲೇ, ಮೂರನ್ನೂ ತನ್ನೊಳಗೆ ಸಮನ್ವಯಗೊಳಿಸಿದ್ದಳಾಕೆ.
ಸಾಂಪ್ರದಾಯಿಕ ಪದ್ಧತಿಗಳನ್ನು ಚಾಚೂತಪ್ಪದೇ ಪಾಲಿಸುತ್ತಿದ್ದ ರಜೀನಾ ಇಸ್ಲಾಂ ಧರ್ಮದ ಮೂಲತತ್ವಗಳನ್ನು ಅರಿತುಕೊಂಡಿದ್ದರು. ತನ್ನ ಸುತ್ತಲೂ ಪ್ರೀತಿ, ಶಾಂತಿ ಮತ್ತು ಸಂತಸವನ್ನು ಹರಡುವುದೇ ಧರ್ಮದ ಮೂಲಬೇರು ಎಂಬುದನ್ನು ಕಂಡುಕೊಂಡಿದ್ದರು. ಬೇರೆ ಸಂಸ್ಕೃತಿ, ಮತಗಳನ್ನು ಆದರಿಸುತ್ತಿದ್ದ ಆಕೆ ತನ್ನೊಳಗೊಂದು ಆಧುನಿ ಕತೆಯ ಕಣ್ಣನ್ನು ಸದಾ ತೆರೆದಿಟ್ಟುಕೊಂಡಿದ್ದರು. ಸಂಗೀತದ ಕುರಿತು ತೀವ್ರ ಒಲವು ಹೊಂದಿದ್ದ ಆಕೆ ಶಾಸ್ತ್ರೀಯ ಸಂಗೀತದಿಂದ ಹಿಡಿದು ಪಾಪ್‌ ಸಂಗೀತದವರೆಗೆ ಎಲ್ಲವನ್ನೂ ಖುಷಿಯಿಂದ ಆಲಿಸುತ್ತಿದ್ದರು. ಪಿಯಾನೋ ನುಡಿಸುವುದನ್ನು ಕಲಿತಿದ್ದರು. ನನ್ನ ಹರೆಯದ ದಿನಗಳಲ್ಲಿ ಬ್ರಿಟ್ನಿ ಸ್ಪಿಯರ್, ಸ್ಪೆ çಸ್‌ ಗರ್ಲ್ಸ್‌ ಇವರನ್ನೆಲ್ಲ ನನಗೆ ಪರಿಚಯಿಸಿದ್ದೇ ನನ್ನಮ್ಮ. ಒಮ್ಮೆ ಕೇಳಿದರೆ ಸಾಕು, ಹಾಗೆಯೇ ಅದನ್ನು ಪಿಯಾನೋದಲ್ಲಿ ನುಡಿಸುತ್ತಿದ್ದರು. ನನ್ನಮ್ಮ ಯಾರನ್ನೂ ನೋಯಿಸಿದವಳಲ್ಲ, ಯಾರಾದ್ರೂ ಅವಳಿಗೆ ಏನಾದರೂ ಒರಟಾಗಿ ಹೇಳಿದರೂ ಅವರನ್ನು ಕ್ಷಮಿಸಿದ್ದಳು. ಎಲ್ಲರ ಬಗ್ಗೆ ಪ್ರೀತಿ ಇತ್ತು ಅವಳಿಗೆ-ಎಂದು ಆಕೆಯ ಮಗಳು ಫ‌ರ್ಹಾನಾ ನೆನಪಿಸಿಕೊಳ್ಳುತ್ತಾರೆ. ಯಾವುದೇ ಕೆಲಸ ಮಾಡಿದರೂ ಅದರಲ್ಲಿ ಒಂದು ಪರಿಪೂರ್ಣತೆ ಇರಬೇಕೆಂದು ಬಯಸುತ್ತಿದ್ದ ರಜೀನಾಗೆ ಹೊಸ ಹೊಸ ಅಡುಗೆಗಳನ್ನು ಕಲಿಯುವುದರಲ್ಲಿಯೂ ತುಂಬ ಆಸಕ್ತಿಯಿತ್ತು.

Advertisement

ರಜೀನಾ ಬಾಲ್ಯ, ಹರೆಯವನ್ನು ಕಳೆದಿದ್ದು ಶ್ರೀಲಂಕಾದಲ್ಲಿ. ಅಲ್ಲಿಯ ನಾಗರಿಕ ಯುದ್ಧ ಸಮಾಜದ ಮೇಲೆ ಚಾಚಿದ್ದ ಕ್ರೌರ್ಯ, ಭಯ, ತಲ್ಲಣಗಳ ಕರಿನೆರಳಿನಲ್ಲಿಯೇ ಮನಸ್ಸನ್ನು ಗಟ್ಟಿಯಾಗಿರಿಸಿಕೊಂಡು ಬೆಳೆದಿದ್ದರು. ಎಲ್‌ಟಿಟಿಇ ಗೆರಿಲ್ಲಾಗಳು ಅವಳ ತಂದೆಯನ್ನು ಅಪಹರಿಸಿ, ಕಾಡಿನಲ್ಲಿ ಒತ್ತೆಯಾಳಾಗಿ ಇರಿಸಿಕೊಂಡಿದ್ದರು. ಆ ಸಂಕಟದ ಸಮಯದಲ್ಲಿ ತಾಯಿಗೆ, ಸಹೋದರರಿಗೆ ಧೈರ್ಯ ತುಂಬಿ, ಸಾಂತ್ವನ ನೀಡಿದ್ದು ರಜೀನಾ!

ಸ್ವದೇಶಾಭಿಮಾನಿ !
ಶ್ರೀಲಂಕಾದ ಜನಜೀವನ ಉತ್ತಮಗೊಳ್ಳಬೇಕು, ಆ ದೇಶ ಮತ್ತೆ ಪ್ರವಾಸೀತಾಣವಾಗಿ ಸಮೃದ್ಧಿಯತ್ತ ಸಾಗಬೇಕು ಎಂದು ಆಕೆ ತಮ್ಮ ಮಾತುಕತೆಗಳಲ್ಲಿ ಸದಾ ಹೇಳುತ್ತಿದ್ದರು. ಶ್ರೀಲಂಕಾಕ್ಕೆ ಕೆಲವು ವರ್ಷಗಳ ನಂತರ ಗಂಡನೊಂದಿಗೆ ಹೋಗಿದ್ದ ಆಕೆ ಅಲ್ಲಿಯ ಬಂಧು, ಬಾಂಧವರನ್ನು ಕಂಡು ಸಂತೋಷಪಟ್ಟಿದ್ದರು. ಶಾಂಗ್ರೀಲಾ ಹೊಟೇಲ್‌ನಲ್ಲಿ ಹತ್ತು ದಿನ ಕಳೆದ ನಂತರ ಭಾನುವಾರ ಬೆಳಗ್ಗೆ ಗಂಡ ಅಬ್ದುಲ್‌ ದುಬೈಗೆ ವಾಪಾಸಾದರು. ಎಲ್ಲ ಸರಿಯಾಗಿದ್ದಿದ್ದರೆ ಅದೇ ದಿನ ಸಂಜೆ ಆ ಹೊಟೇಲ್‌ನಿಂದ ಚೆಕ್‌ಔಟ್‌ ಆಗಿ, ತನ್ನ ತಮ್ಮನ ಮನೆಗೆ ಹೋಗಿ, ಅಲ್ಲಿ ಒಂದೆರಡು ದಿನವಿದ್ದು, ನಂತರ ರಜೀನಾ ದುಬೈಗೆ ಮರಳಬೇಕೆಂದು ಅಂದುಕೊಂಡಿದ್ದರು. ಆದರೆ, ಸರಣಿ ಬಾಂಬ್‌ಹಂತಕರು ವಿಧಿಯಾಟವನ್ನು ನಿಯಂತ್ರಿಸಿದ್ದರು. ಶ್ರೀಲಂಕಾದಲ್ಲಿ ರಜೆಯನ್ನು ಖುಷಿಯಿಂದ ಗಂಡ ಮತ್ತು ಬಂಧುಗಳೊಂದಿಗೆ ಕಳೆಯುತ್ತಿದ್ದಾಗ ರಜೀನಾ ಕೊನೆಯ ಬಾರಿ ಪಿಯಾನೋ ನುಡಿಸಿದ್ದರು. ವ್ಯಂಗ್ಯವೆಂದರೆ ಆಕೆಯ ಬೆರಳುಗಳು ಕೊನೆಯದಾಗಿ ಪಿಯಾನೋದಲ್ಲಿ ನುಡಿಸಿದ್ದು ಶ್ರೀಲಂಕಾದ ರಾಷ್ಟ್ರಗೀತೆಯಾಗಿತ್ತು! ರಜೀನಾಳ ಸುಂದರ ಮುಖದಲ್ಲಿ ಕಿರುನಗೆಯಿತ್ತು. ಬೆಳಗ್ಗೆಯಷ್ಟೇ ಗಂಡನನ್ನು ಕಳಿಸಿ, ಅಮೆರಿಕದಲ್ಲಿದ್ದ ಮಗನೊಂದಿಗೆ ಫೋನಿನಲ್ಲಿ ಮಾತನಾಡಿದ ರಜೀನಾ, ಹುಚ್ಚು ಮತಾಂಧತೆಯ ಕಿಚ್ಚಿಗೆ ಬಲಿಯಾಗಿದ್ದರು.

ರಜೀನಾಳಿಲ್ಲದ ಬದುಕು ಇನ್ನು ಮೊದಲಿನಂತೆ ಇರುವುದು ಸಾಧ್ಯವೇ ಇಲ್ಲ. ಅವಳೆಂತಹ ಅದ್ಭುತ ಮಾನವೀಯ ಅಂತಃಕರಣದ ವ್ಯಕ್ತಿ… ಯಾಕೆ ಅವಳಿಗೇ ಹೀಗೆ ಆಗಬೇಕು… ಯಾಕೆ ನಮ್ಮ ಕುಟುಂಬಕ್ಕೆ ಈ ಕಟುಶಿಕ್ಷೆ ಅಬ್ದುಲ್ಲರು ನೋವಿನಿಂದ ಕೇಳುತ್ತಾರೆ. ಅಬ್ದುಲ್ಲರಂತೆಯೇ ಆಪ್ತರನ್ನು ಕಳೆದುಕೊಂಡ ಕುಟುಂಬಗಳು ಉತ್ತರ ಸಿಗದ ಪ್ರಶ್ನೆಯನ್ನು ಕೇಳುತ್ತಲೇ ಇವೆ.

-ಸುಮಂಗಲಾ

Advertisement

Udayavani is now on Telegram. Click here to join our channel and stay updated with the latest news.

Next