Advertisement

ವಿವಿಧೆಡೆ ಮಾಹಿತಿ ಕಾರ್ಯಾಗಾರ; ಮಳೆಕೊಯ್ಲು ಅಳವಡಿಕೆಗೆ ಉತ್ತೇಜನ

11:14 PM Jul 04, 2019 | Sriram |

ಮಹಾನಗರ: ಮಳೆ ನೀರು ಹಿಡಿದಿಟ್ಟುಕೊಂಡು ಬೇಸಗೆ ಕಾಲಕ್ಕೆ ನೆರವಾಗುವ “ಮನೆ ಮನೆಗೆ ಮಳೆಕೊಯ್ಲು’ ಉದಯವಾಣಿ ಅಭಿಯಾನಕ್ಕೆ ಇದೀಗ ಜಿಲ್ಲೆಯಾದ್ಯಂತ ಉತ್ತಮ ಸ್ಪಂದನೆ ವ್ಯಕ್ತವಾಗುತ್ತಿದೆ.

Advertisement

ಒಂದೆಡೆ, ಅಭಿಯಾನದಿಂದ ಪ್ರೇರಿತರಾಗಿ ಜನರು ಹೆಚ್ಚಿನ ಸಂಖ್ಯೆಯಲ್ಲಿ ತಮ್ಮ ಮನೆಗಳಲ್ಲಿ ಮಳೆಕೊಯ್ಲು ಅಳವಡಿಸಿಕೊಳ್ಳುತ್ತಿದ್ದರೆ. ಇನ್ನೊಂದೆಡೆ ಶಾಲಾ-ಕಾಲೇಜುಗಳು, ಸಾಮಾಜಿಕ ಸಂಘ-ಸಂಸ್ಥೆಗಳು ಜನರಲ್ಲಿ ಮಳೆ ನೀರು ಸಂರಕ್ಷಣೆ ಕುರಿತಂತೆ ಜಾಗೃತಿ ಮೂಡಿಸುವುದಕ್ಕೆ ಅಲ್ಲಲ್ಲಿ ಮಾಹಿತಿ ಕಾರ್ಯಾಕ್ರಮಗಳನ್ನು ಆಯೋಜಿಸುತ್ತಿವೆ. ಆ ಮೂಲಕ, ಉದಯವಾಣಿಯ ಈ ಅಭಿಯಾನಕ್ಕೆ ಸಾಥ್‌ ನೀಡುವ ಜತೆಗೆ ಇನ್ನಷ್ಟು ಜನರನ್ನು ಮಳೆಕೊಯ್ಲು ಅಳವಡಿಕೆಯತ್ತ ಉತ್ತೇಜಿಸುವುದಕ್ಕೆ ಮುಂದಾಗಿರುವುದು ಗಮನಾರ್ಹ.

ಇಂದು ಸುರತ್ಕಲ್‌ನಲ್ಲಿ ಮಾಹಿತಿ ಕಾರ್ಯಾಗಾರ
“ಜಲ ಸಂರಕ್ಷಣೆ ಮತ್ತು ಅದರ ಅಗತ್ಯತೆ’ ಎಂಬ ವಿಷಯಕ್ಕೆ ಸಂಬಂಧಿಸಿ ವಿದ್ಯಾರ್ಥಿಗಳಿಗೆ ಮಾಹಿತಿ ಕಾರ್ಯಾಗಾರ ಸುರತ್ಕಲ್‌ನ ಅನುದಾನಿತ ವಿದ್ಯಾದಾಯಿನಿ ಫೌÅಢಶಾಲೆಯಲ್ಲಿ ಜು. 5ರಂದು ಬೆಳಗ್ಗೆ 10.30ರಿಂದ 12ರ ವರೆಗೆ ನಡೆಯಲಿದೆ. “ಉದಯವಾಣಿ’ ಕೈಗೊಂಡ ಮಳೆಕೊಯ್ಲು ಅಭಿಯಾನಕ್ಕೆ ಪೂರಕವಾಗಿ ಈ ಕಾರ್ಯಾಗಾರ ನಡೆಯಲಿದ್ದು, ನಿರ್ಮಿತಿ ಕೇಂದ್ರದ ರಾಜೇಂದ್ರ ಕಲಾºವಿ ವಿಶೇಷ ಮಾಹಿತಿ ನೀಡಲಿದ್ದಾರೆ.

ಕುಂಪಲದಲ್ಲಿ ಕಾರ್ಯಾಗಾರ
ಮಂಗಳೂರಿನ ನಿರ್ಮಿತಿ ಕೇಂದ್ರ ಹಾಗೂ ಉದಯವಾಣಿ ಸಹಭಾಗಿತ್ವದಲ್ಲಿ ರೋಟರಿ ಕ್ಲಬ್‌ ಮಂಗಳೂರು, ರೋಟರಿ ಸಮುದಾಯ ದಳ ಕುಂಪಲ, ಕೇಸರಿ ಮಿತ್ರ ವೃಂದ ಸೇವಾ ಟ್ರಸ್ಟ್‌, ಕೇಸರಿ ಮಾತೃಮಂಡಲಿ, ನಿವೃತ್ತ ಸೈನಿಕರ ಸಂಘದ ಸಹಭಾಗಿತ್ವದಲ್ಲಿ “ಮನೆ ಮನೆಗೆ ಮಳೆಕೊಯ್ಲು’ ಮಾಹಿತಿ ಕಾರ್ಯಾಗಾರ, ಪ್ರಾತ್ಯಕ್ಷಿಕೆ ಕುಂಪಲ ಕೇಸರಿ ಸಭಾಭವನದಲ್ಲಿ ಜು. 7ರಂದು ಆಯೋಜಿಸಲಾಗಿದೆ. ಸಂಜೆ 4.30ಕ್ಕೆ ಕಾರ್ಯಕ್ರಮ ನಡೆಯಲಿದೆ.

ಆಸಕ್ತರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾಹಿತಿ ಪಡೆದುಕೊಂಡು ತಮ್ಮ ಮನೆ/ಸಂಸ್ಥೆಗಳಲ್ಲಿ ಮಳೆಕೊಯ್ಲು ಅಥವಾ ನೀರು ಇಂಗಿಸುವ ವಿಧಾನವನ್ನು ಅಳವಡಿಸಬಹುದು.

Advertisement

ಮೇರಿಹಿಲ್‌ನಲ್ಲಿ ಕಾರ್ಯಾಗಾರ “ಉದಯವಾಣಿ’ ಕೈಗೊಂಡ ಮಳೆಕೊಯ್ಲು ಅಭಿಯಾನದಿಂದ ಪ್ರೇರಿತಗೊಂಡಿರುವ ಮಂಗಳೂರು ಮೇರಿಹಿಲ್‌ನ ಗುರುನಗರ ಜಾಗೃತಾ ಸಮಿತಿಯು ಮಳೆಕೊಯ್ಲು ಬಗ್ಗೆ ಜನರಲ್ಲಿ ಅರಿವು ಮೂಡಿಸುವ ನೆಲೆಯಲ್ಲಿ ವಿಶೇಷ ಕಾರ್ಯಕ್ರಮ ಆಯೋಜಿಸಿದೆ. ಜು. 7ರಂದು ಬೆಳಗ್ಗೆ 8 ಗಂಟೆಗೆ ಮೇರಿಹಿಲ್‌ನ ಗುರುನಗರ ಪಾರ್ಕ್‌ನಲ್ಲಿ ಮಳೆಕೊಯ್ಲು ಮಾಹಿತಿ ಕಾರ್ಯಾಗಾರ ಆಯೋಜಿಸಲಾಗಿದ್ದು, ನಿರ್ಮಿತಿ ಕೇಂದ್ರದ ರಾಜೇಂದ್ರ ಅವರು ಮಳೆಕೊಯ್ಲು ಬಗ್ಗೆ ಮಾಹಿತಿ ನೀಡಲಿದ್ದಾರೆ.

ವೆಲೆನ್ಸಿಯಾದಲ್ಲಿ ಕಾರ್ಯಕ್ರಮ
ವೆಲೆನ್ಸಿಯಾದಲ್ಲಿರುವ ವಿನ್ಸೆಂಟ್‌ ಪೆರಾರ್‌ ಚರ್ಚ್‌ನಲ್ಲಿ ಅಳವಡಿಸುತ್ತಿರುವ ಮಳೆನೀರು ಕೊಯ್ಲು ಕಾರ್ಯಕ್ರಮದ ಉದ್ಘಾಟನೆಯು ಚರ್ಚ್‌ನ ಗೋಲ್ಡನ್‌ ಜುಬ್ಲಿ ಸಭಾಂಗಣದಲ್ಲಿ ಜು. 7ರಂದು ಬೆಳಗ್ಗೆ 8.45ಕ್ಕೆ ನಡೆಯಲಿದೆ. ನಿರ್ಮಿತಿ ಕೇಂದ್ರದ ಯೋಜನ ನಿರ್ದೇಶಕ ರಾಜೇಂದ್ರ ಕಲಾºವಿ ಮಳೆಕೊಯ್ಲು ಬಗ್ಗೆ ಮಾಹಿತಿ ನೀಡಲಿದ್ದಾರೆ.

ನೀರಿನ ಸಮಸ್ಯೆ ಬಿಗಡಾಯಿಸದಿರಲು ಮಳೆಕೊಯ್ಲು ಪಡುಪಣಂಬೂರು ನಿವಾಸಿ ಉಮಾನಾಥ್‌ ಶೆಟ್ಟಿಗಾರ್‌ ಅವರು ಸುಮಾರು 10 ದಿನಗಳ ಹಿಂದಷ್ಟೇ ತಮ್ಮ ಮನೆಯ ಬಾವಿಗೆ ಮಳೆಕೊಯ್ಲು ವ್ಯವಸ್ಥೆ ಅಳವಡಿಸಿದ್ದಾರೆ.

“ಉದಯವಾಣಿ’ಯಲ್ಲಿ ಪ್ರಕಟವಾದ ಮಳೆಕೊಯ್ಲು ಮಾಹಿತಿಯನ್ನು ಗಮನಿಸಿ ಎನ್‌ಐಟಿಕೆಯಲ್ಲಿ ನಿರ್ಮಿತಿ ಕೇಂದ್ರದವರ ಮಳೆಕೊಯ್ಲು ಪ್ರಾತ್ಯಕ್ಷಿಕೆಯಲ್ಲಿ ಭಾಗವಹಿಸಿದ್ದರು. ಬಳಿಕ ಅಲ್ಲಿ ಸಿಕ್ಕಿದ ಮಾಹಿತಿಯಿಂದ ಪ್ರೇರಣೆಗೊಂಡು ಮನೆಯವರ ಸಹಕಾರದೊಂದಿಗೆ ಮಳೆಕೊಯ್ಲು ವ್ಯವಸ್ಥೆಯನ್ನು ಮಾಡಿಕೊಂಡಿದ್ದಾರೆ. ಛಾವಣಿ ನೀರನ್ನು ಪೈಪ್‌ ಮುಖಾಂತರ ಬಾವಿಗೆ ಹಾಯಿಸಿದ್ದಾರೆ. ನಡುವೆ ನೀರು ಶುದ್ಧೀಕರಣಗೊಳ್ಳಲು ಫಿಲ್ಟರಿಂಗ್‌ ವ್ಯವಸ್ಥೆ ಅಳವಡಿಸಿಕೊಂಡಿದ್ದಾರೆ. ಈ ಬೇಸಗೆಯಲ್ಲಿ ನೀರಿನ ಸಮಸ್ಯೆ ಕಂಡು ಬಂದಿದ್ದರಿಂದ ಭವಿಷ್ಯದಲ್ಲಿ ಸಮಸ್ಯೆ ಬಿಗಡಾಯಿಸದಿರಲು ಮುನ್ನೆಚ್ಚರಿಕೆಯಾಗಿ ಈ ಕ್ರಮ ಅಳವಡಿಸಲಾಗಿದೆ ಎನ್ನುತ್ತಾರೆ ಉಮಾನಾಥ್‌ ಶೆಟ್ಟಿಗಾರ್‌.

ನೀವೂ ಅಳವಡಿಸಿ, ವಾಟ್ಸಪ್‌ ಮಾಡಿ
ಉದಯವಾಣಿಯ ಅಭಿಯಾನದಿಂದ ಪ್ರೇರಣೆಗೊಂಡು ಕಾರ್ಯಾಗಾರದಲ್ಲಿ ಭಾಗವಹಿಸಿದವರು ಈಗ ಕಾರ್ಯೋನ್ಮುಖರಾಗಿ ಮಳೆ ನೀರು ಕೊಯ್ಲು ಪದ್ಧತಿಯನ್ನು ತಮ್ಮ ಮನೆಗಳಲ್ಲಿ ಅಳವಡಿಸುತ್ತಿದ್ದಾರೆ.ಜತೆಗೆ ತಮ್ಮ ಖುಷಿಯನ್ನು ಉಳಿದವರೊಂದಿಗೂ ಹಂಚಿಕೊಳ್ಳುತ್ತಿದ್ದಾರೆ. ಹೀಗಿರುವಾಗ, “ಮನೆ ಮನೆಗೆ ಮಳೆಕೊಯ್ಲು’ ಅಭಿಯಾನದಿಂದ ಪ್ರೇರಿತರಾಗಿ ನೀವೂ ನಿಮ್ಮ ಮನೆಗಳಲ್ಲಿ ಮಳೆ ಕೊಯ್ಲು ಪದ್ಧತಿ ಅಳವಡಿಸಿಕೊಂಡಿದ್ದರೆ ಫೋಟೋ ಸಮೇತ ನಮಗೆ ವಿವರವನ್ನು ವಾಟ್ಸಪ್‌ ಮಾಡಿ. ಅವುಗಳನ್ನು ಪತ್ರಿಕೆಯಲ್ಲಿ ಪ್ರಕಟಿಸಿ ಮತ್ತಷ್ಟು ಜನರನ್ನು ಉತ್ತೇಜಿಸೋಣ. 9900567000

ಮಳೆ ನೀರು ಪೋಲಾಗದಿರಲು ಈ ಕ್ರಮ
ಪದವಿನಂಗಡಿ ಪಿಂಟೋ ಗಾರ್ಡನ್‌ ನಿವಾಸಿ ಸುಧೀರ್‌ ಅವರ ಮನೆಯಲ್ಲಿ ಸುಮಾರು 40 ವರ್ಷ ಹಿಂದಿನ ಬಾವಿಯಿದ್ದು, ಈವರೆಗೆ ನೀರಿನ ಸಮಸ್ಯೆ ಉಂಟಾಗಿಲ್ಲ. ಆದರೆ, ಭವಿಷ್ಯದ ಮುನ್ನೆಚ್ಚರಿಕೆಯಾಗಿ ಮತ್ತು ಮಳೆ ನೀರು ಪೋಲಾಗಬಾರದೆಂಬ ಕಾರಣಕ್ಕೆ ಅವರು ಮಳೆಕೊಯ್ಲು ವ್ಯವಸ್ಥೆ ಅಳವಡಿಸಿಕೊಂಡಿದ್ದಾರೆ.

ಛಾವಣಿ ನೀರನ್ನು ಪೈಪ್‌ ಮುಖಾಂತರ ಬಾವಿಗೆ ಸಂಪರ್ಕ ಕಲ್ಪಿಸಿದ್ದಾರೆ. ಕಸ ಕಡ್ಡಿ ನೀರಿಗೆ ಸೇರದಂತೆ ಜಾಲಿ ಅಳವಡಿಸಿಕೊಂಡಿದ್ದಾರೆ. ಸುಮಾರು 8 ಸಾವಿರ ರೂ.ಗಳನ್ನು ಇದಕ್ಕಾಗಿ ಖರ್ಚು ಮಾಡಿದ್ದು, ಮಳೆ ನೀರು ಪೋಲಾಗದಂತೆ ಮಾಡಿದ ಸಮಾಧಾನವಿದೆ ಎನ್ನುತ್ತಾರೆ ಸುಧೀರ್‌. “ಮಳೆಕೊಯ್ಲು ಅಳವಡಿಸಬೇಕೆಂಬ ಕನಸು ಹಿಂದಿನಿಂದಲೇ ಇತ್ತು. ಉದಯವಾಣಿಯಲ್ಲಿ ಬಂದ ಲೇಖನಗಳನ್ನು ಗಮನಿಸುತ್ತಿದೆ. ಸುಮಾರು 1 ತಿಂಗಳ ಹಿಂದೆ ಮಳೆಕೊಯ್ಲು ಅಳವಡಿಸಿಕೊಂಡಿದ್ದೇನೆ’ ಎನ್ನುತ್ತಾರೆ ಅವರು.

Advertisement

Udayavani is now on Telegram. Click here to join our channel and stay updated with the latest news.

Next