Advertisement

ಡಿಸೆಂಬರ್‌ 13ರಂದು ಕೃಷ್ಣಾ ಜಲವಿವಾದ ವಿಚಾರಣೆಗೆ ಸುಪ್ರೀಂ ಸೂಚನೆ

07:09 PM Nov 29, 2021 | Team Udayavani |

ಬೆಂಗಳೂರು: ಕೃಷ್ಣಾ ಜಲ ವಿವಾದ ನ್ಯಾಯಾಧಿಕರಣದ 2010ರ ಮತ್ತು 2013ರ ಅಂತಿಮ ಐತೀರ್ಪುಗಳನ್ನು ಕೇಂದ್ರ ಸರ್ಕಾರದ ಅಧಿಕೃತ ಗೆಜೆಟ್‌ ನಲ್ಲಿ ತಕ್ಷಣ ಪ್ರಕಟಿಸಬೇಕೆಂದು ಕರ್ನಾಟಕ ಮಹಾರಾಷ್ಟ್ರ ಸರ್ಕಾರಗಳು ಕೋರಿ ಸಲ್ಲಿಸಿರುವ ಅರ್ಜಿಗಳನ್ನು ವಿಚಾರಣೆ ನಡೆಸಿದ ಸರ್ವೋಚ್ಛ ನ್ಯಾಯಾಲಯದ ದ್ವಿಸದಸ್ಯ ಪೀಠ ಡಿಸೆಂಬರ್‌ 13 ರಂದು ವಿಸ್ತೃತ ವಿಚಾರಣೆಗೆ ಈ ಪ್ರಕರಣವನ್ನು ಪಟ್ಟಿ ಮಾಡಬೇಕೆಂದು ಸೂಚಿಸಿದೆ.

Advertisement

ಕೇಂದ್ರ ಸರ್ಕಾರದ ಹಿರಿಯ ನ್ಯಾಯವಾದಿ ವಾಸೀಂ ಎ. ಖಾದ್ರಿಯವರು ಈ ಪ್ರಕರಣದಲ್ಲಿ ಕೇಂದ್ರ ಸರ್ಕಾರದ ಪ್ರತಿಕ್ರಿಯೆ ಸಲ್ಲಿಸುವ ಪ್ರಕ್ರಿಯೆ ಕೇಂದ್ರ ಸರ್ಕಾರದ ಉನ್ನತ ಹಂತದಲ್ಲಿ ವಿಲೇವಾರಿ ಕುರಿತು ಪರಿಶೀಲನೆಯಲ್ಲಿರುವುದರಿಂದ ಎರಡು ವಾರಗಳ ಹೆಚ್ಚಿನ ಕಾಲಾವಕಾಶ ಅಗತ್ಯವಿದೆ ಎಂದು ಕೋರಿದ ಹಿನ್ನೆಲೆಯಲ್ಲಿ ಕರ್ನಾಟಕದ ವಾದವನ್ನು ಆಲಿಸಿದ ನಂತರ ಡಿಸೆಂಬರ್‌ 13ರಂದು ವಿಚಾರಣೆಗೆ ಕಲಾಪದ ಪಟ್ಟಿಯಲ್ಲಿ ಸೇರ್ಪಡೆ ಮಾಡಲು ಆದೇಶಿಸಿತು.

ಕರ್ನಾಟಕದ ಪರವಾಗಿ ವಿಸ್ತೃತ ವಾದ ಮಂಡಿಸಿದ ನ್ಯಾಯವಾದಿ ಶ್ಯಾಂ ದಿವಾನ್‌ ಕೇಂದ್ರ ಸರ್ಕಾರವು ನ್ಯಾಯಾಧಿಕರಣದ ಆದೇಶಗಳನ್ನು ಗೆಜೆಟ್‌ ನಲ್ಲಿ ಪ್ರಕಟಿಸಲು ಸರ್ವೋತ್ಛ ನ್ಯಾಯಾಲಯವು 2011ರ ಸೆಪ್ಟಂಬರ್‌ 16 ರಂದು ನೀಡಿದ ತಡೆಯಾಜ್ಞೆ ಅಡ್ಡಿ ಯುಂಟುಮಾಡುತ್ತಿದೆ. ಆದರೆ, ಅಂತರರಾಜ್ಯ ಜಲವಿವಾದ ಕಾಯಿದೆಯ ಕಲಂ 6ರ ಅಡಿಯಲ್ಲಿ ನ್ಯಾಯಾಧಿಕರಣದ ಐತೀರ್ಪುಗಳು ಸರ್ವೋಚ್ಛ ನ್ಯಾಯಾಲಯದ ಡಿಕ್ರಿಗೆ ಸಮಾನವಾಗಿದ್ದು ತಕ್ಷಣ ಅವುಗಳನ್ನು ಗೆಜೆಟ್‌ ನಲ್ಲಿ ಪ್ರಕಟಿಸಬೇಕೆಂದು ಕಾನೂನಿನಲ್ಲಿ ಅವಕಾಶ ಕಲ್ಪಿಸಲಾಗಿದೆ.

ಇದನ್ನೂ ಓದಿ:ಗೋವಾ : ಸಂತ ಫ್ರಾನ್ಸಿಸ್ ಜೇವಿಯರ್ ರವರ 9 ದಿನಗಳ ಪ್ರಾರ್ಥನಾ ಸಭೆ

ಕಾವೇರಿ ನ್ಯಾಯಾಧಿಕರಣದ ಐತೀರ್ಪನ್ನು ಪ್ರಕಟಿಸಲು ಸರ್ವೋತ್ಛ ನ್ಯಾಯಾಲಯ ನಿರ್ದೇಶನ ನೀಡಿದಂತೆ ಈ ಪ್ರಕರಣದಲ್ಲೂ ನಿರ್ದೇಶನ ನೀಡಿ ಗೆಜೆಟ್‌ ಪ್ರಕಟಣೆಗೆ ಅವಕಾಶ ಕಲ್ಪಿಸಬೇಕೆಂದು ಸರ್ವೋಚ್ಛ ನ್ಯಾಯಾಲಯವನ್ನು ಪ್ರಾರ್ಥಿಸಿದರು.

Advertisement

ಕೃಷ್ಣಾ ಜಲ ವಿವಾದ ನ್ಯಾಯಾಧಿಕರಣ-2 (ಬ್ರಿಜೇಶ್‌ ಕುಮಾರ್‌ ಆಯೋಗ) ಐತೀರ್ಪು 2050ನೇ ಇಸವಿ ವರೆಗೆ ಜಾರಿಯಲ್ಲಿ ಇರುತ್ತದೆ. ಈಗಾಗಲೇ 10 ಅಮೂಲ್ಯ ವರ್ಷಗಳನ್ನು ನಾವು ಕಳೆದುಕೊಂಡಿದ್ದೇವೆ. 1205 ಕಿ.ಮೀ. ಉದ್ದದ ಕಾಲುವೆ ಜಾಲವನ್ನು ನಿರ್ಮಾಣ ಮಾಡಿದ್ದು, 13321 ಕೋಟಿ ರೂಪಾಯಿಗಳನ್ನು ವ್ಯಯಿಸಲಾಗಿದೆ. ಆದರೆ, ನೀರು ಮಾತ್ರ ವ್ಯರ್ಥವಾಗಿ ಬಂಗಾಳ ಕೊಲ್ಲಿ ಸಾಗರವನ್ನು ಸೇರುತ್ತಿದೆ. ರೈತರು ಕಾಲುವೆಗಳಿಗೆ ನೀರು ಒದಗಿಸುವಂತೆ ಚಳುವಳಿ ಮಾಡುತ್ತಿದ್ದಾರೆ ಎಂದು ಸಮರ್ಥವಾಗಿ ವಾದ ಮಂಡಿಸಿದರು.

ತೆಲಂಗಾಣದ ನ್ಯಾಯವಾದಿ ಸಿ.ಎಸ್‌.ವೈದ್ಯನಾಥನ್‌ ರವರು ಈ ಪ್ರಕರಣದಲ್ಲಿ ವಿವರವಾದ ವಾದ ಮಂಡನೆಗೆ ಅವಕಾಶ ಕೋರಿದರು. 4 ರಾಜ್ಯಗಳು ತಮ್ಮ ವಾದ ಪ್ರತಿವಾದಗಳ ಪ್ರಮುಖ ಅಂಶಗಳನ್ನು ಒಳಗೊಂಡ ಮೂರು ಪುಟದ ಟಿಪ್ಪಣಿಯನ್ನು ವಿಚಾರಣೆಗೆ 48 ಗಂಟೆಗಳಿಗೂ ಮುನ್ನ ಸರ್ವೋಚ್ಛ ನ್ಯಾಯಾಲಯಕ್ಕೆ ಸಲ್ಲಿಸಬೇಕೆಂದು ಸೂಚಿಸಿ ಡಿಸೆಂಬರ್‌ 13ರಂದು ಪ್ರಕರಣದ ವಿಚಾರಣೆಗೆ ನಿಗದಿಪಡಿಸಿದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next