Advertisement

ಗಟಾರವಾದ ಇಂದ್ರಾಣಿ ನದಿ: ಪುನಶ್ಚೇತನ ಕಾಲ ಸನ್ನಿಹಿತ

09:00 AM Jul 27, 2019 | sudhir |

ಉಡುಪಿ: ಉಡುಪಿಯಲ್ಲಿ ಹುಟ್ಟಿ ಉಡುಪಿಯಲ್ಲೇ ಕಡಲು ಸೇರುವ ಪುಟ್ಟ ನದಿ ಇಂದ್ರಾಣಿ. ಕೇವಲ ಕೆಲವೇ ದಶಕಗಳ ಹಿಂದೆ ಶ್ರೀಕೃಷ್ಣಮಠದ ಆನೆಯನ್ನುಇಲ್ಲಿ ಸ್ನಾನ ಮಾಡಿಸಲು ಕರೆದೊಯ್ಯ ಲಾಗುತ್ತಿತ್ತು.

Advertisement

ನಾಗರಿಕತೆ ಶಬ್ದದಿಂದ ಉಂಟಾದ ನಗರೀಕರಣದ ದುಷ್ಪರಿಣಾಮಕ್ಕೆ ಸಿಲುಕಿ ಈ ಜೀವನದಿ ಈಗ ಅಕ್ಷರಶಃ ಗಟಾರವಾಗಿ ಪರಿವರ್ತನೆಗೊಂಡಿದೆ. ಇದಕ್ಕೆ ಸಾವಿರಾರು ಜನರ ತ್ಯಾಜ್ಯದ ಕೊಡುಗೆ ಇದೆ. ತಮಗೆ ಎಷ್ಟು ಸಾಧ್ಯವೋ ಅಷ್ಟು ಕೊಳೆಯನ್ನು ಎಸೆಯುವ ಮೂಲಕ, ಕೊಳಚೆ ನೀರನ್ನು ಹರಿಸುವ ಮೂಲಕ ಇಂದ್ರಾಣಿಯನ್ನು ಅಸಹನೀಯಗೊಳಿಸಿದ್ದಾರೆ.

ದುಷ್ಪರಿಣಾಮ

ಇಂದ್ರಾಣಿ ಶ್ರೀ ಪಂಚದುರ್ಗಾ ಪರಮೇಶ್ವರಿ ದೇವಸ್ಥಾನದ ಬಳಿಯಲ್ಲಿ ಒಂದು ಆಂಜನೇಯ ಸ್ವಾಮಿ ಗುಡಿ ಇದೆ. ಇದರ ಪಕ್ಕದಲ್ಲಿ ಒಂದು ಪುಟ್ಟ ತೊರೆ ಹರಿದು ಸರೋವರವನ್ನು ಸೇರುತ್ತದೆ. ಇದೇ ಬೃಹದಾಕಾರವಾಗಿ 10 ಕಿ.ಮೀ. ಹರಿಯುತ್ತದೆ ಎಂದರೆ ಅಚ್ಚರಿಯಾಗದೆ ಇರದು. ಇಷ್ಟು ಪ್ರಾಕೃತಿಕ ಅಚ್ಚರಿಗೂ ಇತರ ಪ್ರಾಕೃತಿಕ ಕೊಡುಗೆ ಇರುವಂತೆ ದುಷ್ಪರಿಣಾಮಕ್ಕೂ ಇದಕ್ಕಿಂತ ಸಾವಿರ ಪಟ್ಟು ಜನರ ಕೊಡುಗೆ ಇದೆ.

ತೋಡು ಕಲುಷಿತ

Advertisement

ಸರೋವರದಿಂದ ಹರಿದ ನೀರಿಗೆ ಮುಂದೆ ಬುಡ್ನಾರಿನಲ್ಲಿ ಸಣ್ಣ ಜಲಪಾತದ ಕೊಡುಗೆ ಸೇರುತ್ತದೆ. ಇಂದ್ರಾಣಿ ರೈಲು ನಿಲ್ದಾಣದ ಬಳಿ ಅಲೆವೂರು ನದಿಯ ಒಂದು ಕವಲು ಸೇರುತ್ತದೆ. ಸಮಸ್ಯೆ ಇರುವುದು ಇನ್ನು ಮುಂದಿನ ನದಿ ಪಾತ್ರದ ಆಸುಪಾಸು. ಚಿಟ್ಪಾಡಿ ಬಳಿಕ ಮಳೆ ನೀರಿನ ತೋಡು ಸೇರುತ್ತದೆ. ಮಳೆ ನೀರಿನ ತೋಡೆಲ್ಲವೂ ಈಗ ಕಲುಷಿತ ನೀರಿನ ತೋಡುಗಳಾಗಿವೆ. ಶ್ರೀಕೃಷ್ಣಮಠದ ಪಾರ್ಕಿಂಗ್‌ ಪ್ರದೇಶ, ವೆಂಕಟರಮಣ ದೇವಸ್ಥಾನದ ಹಿಂಭಾಗ, ತೆಂಕುಪೇಟೆ, ಬಡಗುಪೇಟೆ ಪರಿಸರದ ಮನೆ, ಛತ್ರಗಳ ಕೊಳಚೆ ಸೇರಿಕೊಂಡು ಕಲ್ಸಂಕದಿಂದ ಮುಂದೆ ಸಾಗಿ ಸಿಟಿ ಮತ್ತು ಸರ್ವಿಸ್‌ ಬಸ್‌ ನಿಲ್ದಾಣದ ಸಮೀಪದಿಂದ ಹರಿಯುವ ಎಲ್ಲ ಪ್ರತಿಷ್ಠಿತರ ಕೊಳಚೆಗಳನ್ನು ತನ್ನ ಗರ್ಭದಲ್ಲಿ ಸೇರಿಸಿಕೊಳ್ಳುತ್ತದೆ.

ಇಡೀ ನಗರದ ಅವ್ಯವಸ್ಥಿತ ಒಳಚರಂಡಿ ಯೋಜನೆಯ ನೀರು ನಿಟ್ಟೂರಿನಲ್ಲಿ ಸಂಸ್ಕರಣಗೊಳ್ಳುವಾಗ ಅದರ ತ್ಯಾಜ್ಯವೂ ಇದೇ ನದಿಗೆ ಸೇರುತ್ತದೆ. ನಿಟ್ಟೂರಿನಲ್ಲಿ ಆಚೀಚೆ ದಾಟುವಾಗಲೇ ಮೂಗುಮುಚ್ಚಿಕೊಂಡಿರಬೇಕಾದರೆ ಅದರ ಮಾಲಿನ್ಯ ನದಿಗೆ ಸೇರಿದರೆ ಹೇಗಿರಬಹುದು ಎಂದು ಯೋಚಿಸಬೇಕು. ಮುಂದೆ ಹೋದರೆ ಮರದ ಸಾಮಿಲ್ ಬಳಿ, ನ್ಯೂ ಕಾಲನಿ, ಕೊಡವೂರು ಸೇತುವೆ, ಕಲ್ಮಾಡಿ ಬಳಿ ವರೆಗೆ ಅಪಾರ್ಟ್‌ಮೆಂಟ್, ಮನೆ, ಸಣ್ಣ ಪುಟ್ಟ ದೊಡ್ಡ ಉದ್ಯಮಗಳ ಹಲವು ಕೊಳಚೆಗಳು ಸೇರಿಕೊಂಡು ಸಮುದ್ರಕ್ಕೆ ಸೇರುತ್ತ್ತದೆ.

ಕೃಷಿ ಸಂಸ್ಕೃತಿಗೆ ಮಾರಕ

ಇದರ ಪರಿಣಾಮವೆಂದರೆ ಇಡೀ ನಗರದಲ್ಲಿ ವಿಶೇಷವಾಗಿ ಮಠದ ಬೆಟ್ಟು, ಬೈಲಕೆರೆಯಲ್ಲಿ ಕೃಷಿ ಸಂಸ್ಕೃತಿ ಇಲ್ಲವಾಗಿದೆ. ಚಿಟ್ಪಾಡಿ ಮತ್ತು ಕೊಡವೂರಿನಲ್ಲಿ ಎರಡು ಕಂಬಳಗಳು ನಡೆಯುತ್ತಿದ್ದವು. ಕೃಷಿ ಕಡಿಮೆಯಾದ ಮೇಲೆ ಕಂಬಳವೂ ನೆಪಮಾತ್ರಕ್ಕೆ ಇದೆ. ನದಿ ಪರಿಸರದಲ್ಲಿ ಸುಮಾರು 250 ಬಾವಿಗಳ ನೀರು ಹಾಳಾಗಿ ನಗರಸಭೆಯ ನೀರಿನ ಮೇಲೆ ಅವಲಂಬಿತರಾಗಿದ್ದಾರೆ. ಇದರಲ್ಲಿ ನಡೆಯುತ್ತಿದ್ದ ಹಿನ್ನೀರ ಮೀನುಗಾರಿಕೆ ಸಂಪೂರ್ಣ ವಾಗಿ ನಿಂತೇ ಹೋಗಿದೆ.

ಇಂದ್ರಾಣಿ ನದಿ ಉಳಿಸಲು ಪಣ

ಈಗ ಇಂದ್ರಾಣಿ ನದಿಯನ್ನು ಉಳಿಸಲು ಪರಿಸರಪ್ರೇಮಿಗಳು ಟೊಂಕ ಕಟ್ಟಿದ್ದಾರೆ. ಹಿಂದೊಮ್ಮೆ ಬಾಲಕೃಷ್ಣ ಕೊಡವೂರು ಅವರು ನದಿ ಕಲುಷಿತ ಗೊಂಡಿರುವುದನ್ನು ಸರಕಾರದ ಗಮನಕ್ಕೆ ತಂದು ಹೋರಾಟ ನಡೆಸಿದ್ದರು. ಈಗ ಮತ್ತೆ ಹೋರಾಟಕ್ಕೆ ಚಾಲನೆ ಕೊಡಲಾಗು ತ್ತಿದೆ. ಶ್ರೀಕಾಂತ ಶೆಟ್ಟಿಯವರ ಸಂಚಾಲಕತ್ವ ದಲ್ಲಿ ಡಾ| ರವೀಂದ್ರನಾಥ ಶ್ಯಾನುಭಾಗ್‌ರಂತಹ ತಜ್ಞರು ಸೇರಿಕೊಂಡ ಗುಂಪು ರಚನೆಯಾಗಿದೆ. ಹಲವು ಸಂಘಟನೆಗಳು ಈಗಾಗಲೇ ಬೆಂಬಲ ಸಾರಿವೆ. ಜು. 28ರ ಬೆಳಗ್ಗೆ 9ಕ್ಕೆ ಇಂದ್ರಾಣಿ ತೊರೆ ಹುಟ್ಟುವ ಸ್ಥಳದಲ್ಲಿ ಜಾಥಾಕ್ಕೆ ಚಾಲನೆ ನೀಡಲಾಗುತ್ತಿದೆ. ಈ ಜಾಥಾ ನದಿ ಪಾತ್ರದ ಹತ್ತೂ ಕಿ.ಮೀ. ದೂರ ಸಾಗಿ ಕಲ್ಮಾಡಿಯಲ್ಲಿ ಕೊನೆಗೊಳ್ಳಲಿದೆ.

ಈ ನದಿಯನ್ನು ಸ್ವಚ್ಛವಾಗಿ ಹರಿಯಲು ಬಿಟ್ಟರೆ ಉಡುಪಿಯ ಅರ್ಧ ನೀರಿನ ಸಮಸ್ಯೆ ತನ್ನಿಂತಾನೆ ಪರಿಹಾರಗೊಳ್ಳುತ್ತದೆ. ಮಲೇರಿಯಾ, ಡೆಂಗ್ಯೂನಂತಹ ಆರೋಗ್ಯ ಸಮಸ್ಯೆಗಳಿಗೂ ಇಲ್ಲಿ ಪರಿಹಾರ ಇರುತ್ತದೆ.

ಇರ್ಪೆ ಮೀನು ಎಂತಹ ಕಠಿನ ಪರಿಸ್ಥಿತಿಯಲ್ಲಿಯೂ ಬದುಕಬಲ್ಲದು ಮತ್ತು ರುಚಿಕರವಾದ ಮೀನು. ಆದರೆ ಇಂದ್ರಾಣಿ ನದಿಯಲ್ಲಿ ಈ ಮೀನು ಬದುಕಲಾರದಂತಹ ಪರಿಸ್ಥಿತಿಗೆ ಬಂದಿದೆ. ಅಷ್ಟೂ ವಿಷಮಯವಾಗಿದೆ. ಇದು ಸಮುದ್ರದಲ್ಲಿ ಇರುವುದಿಲ್ಲ. ಸಿಹಿನೀರಿನಲ್ಲಿಯೇ ಇರುವಂಥವು.

ಇರ್ಪೆ ಮೀನು ನಾಪತ್ತೆ!

ಇರ್ಪೆ ಮೀನು ಎಂತಹ ಕಠಿನ ಪರಿಸ್ಥಿತಿಯಲ್ಲಿಯೂ ಬದುಕಬಲ್ಲದು ಮತ್ತು ರುಚಿಕರವಾದ ಮೀನು. ಆದರೆ ಇಂದ್ರಾಣಿ ನದಿಯಲ್ಲಿ ಈ ಮೀನು ಬದುಕಲಾರದಂತಹ ಪರಿಸ್ಥಿತಿಗೆ ಬಂದಿದೆ. ಅಷ್ಟೂ ವಿಷಮಯವಾಗಿದೆ. ಇದು ಸಮುದ್ರದಲ್ಲಿ ಇರುವುದಿಲ್ಲ. ಸಿಹಿನೀರಿನಲ್ಲಿಯೇ ಇರುವಂಥವು.
– ಮಟಪಾಡಿ ಕುಮಾರಸ್ವಾಮಿ
Advertisement

Udayavani is now on Telegram. Click here to join our channel and stay updated with the latest news.

Next