ಹುಬ್ಬಳ್ಳಿ: ಮಾಜಿ ಪ್ರಧಾನಿ ದಿ| ಇಂದಿರಾ ಗಾಂಧಿ ಅವರು ಸದಾಕಾಲ ಮಹಿಳೆಯರ ಏಳ್ಗೆ ಬಗ್ಗೆ ಚಿಂತನೆ ಮಾಡುತ್ತಿದ್ದರು. ಪ್ರಪಂಚಕ್ಕೆ ಮಹಿಳಾ ಶಕ್ತಿ ಏನೆಂಬುದನ್ನು ತೋರಿಸಿದರು ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ, ಧಾರವಾಡ ವಿಧಾನ ಪರಿಷತ್ ಚುನಾವಣೆ ಕಾಂಗ್ರೆಸ್ ಅಭ್ಯರ್ಥಿ ಸಲೀಂ ಅಹ್ಮದ್ ಹೇಳಿದರು.
ಕಾರವಾರ ರಸ್ತೆಯ ಗ್ರಾಮೀಣ ಜಿಲ್ಲಾ ಕಾಂಗ್ರೆಸ್ ಸಮಿತಿ ಕಚೇರಿಯಲ್ಲಿ ವಿಧಾನ ಪರಿಷತ್ ಚುನಾವಣೆ ಅಂಗವಾಗಿ ಶುಕ್ರವಾರ ಹಮ್ಮಿಕೊಂಡಿದ್ದ ಜಿಲ್ಲಾ ಮಹಿಳಾ ಕಾಂಗ್ರೆಸ್ ಸಭೆಯಲ್ಲಿ ಅವರು ಮಾತನಾಡಿದರು.
ಇಂದಿರಾ ಗಾಂಧಿ ಅವರು ರೈತರು, ಕಾರ್ಮಿಕರು, ಯುವಕರು, ಬಡವರು ವಿಶೇಷವಾಗಿ ಮಹಿಳೆಯರಿಗೆ ಹೆಚ್ಚು ಒತ್ತುಕೊಟ್ಟು ಶಕ್ತಿ ನೀಡಿದರು. ವಿಧವಾ ವೇತನ ಜಾರಿಗೊಳಿಸಿದರು. ಬ್ಯಾಂಕ್ಗಳ ರಾಷ್ಟ್ರೀಕರಣ ಮಾಡಿದರು. ಅವರು ತಮ್ಮ ಕೊನೆಯ ಭಾಷಣದಲ್ಲಿ ನನ್ನ ರಕ್ತದ ಕೊನೆ ಹನಿ ಈ ದೇಶದ ಏಕತೆಗೆ ಅರ್ಪಣೆ ಮಾಡುತ್ತೇನೆಂದು ಹೇಳಿದ್ದರು. ಕೊನೆಗೆ ದೇಶಕ್ಕಾಗಿ ತಮ್ಮ ಜೀವ ತ್ಯಾಗ ಮಾಡಿದರು. ಇಂದಿಗೂ ಗ್ರಾಮೀಣ ಭಾಗದಲ್ಲಿ ಮತ ಕೇಳುವಾಗ ಇಂದಿರಾ ಗಾಂಧಿಯವರ ಪಕ್ಷ ಕಾಂಗ್ರೆಸ್ಗೆ ಮತ ಹಾಕಿ ಎಂದು ಯಾಚಿಸುತ್ತೇವೆ. ಅಂತಹ ದೊಡ್ಡ ಪಕ್ಷಕ್ಕೆ ತನ್ನದೆಯಾದ ಇತಿಹಾಸವಿದೆ.
ಪ್ರಥಮ ಪ್ರಾಶಸ್ತದ ಮತ ನೀಡುವ ಮೂಲಕ ಬಹುಮತದಿಂದ ಆರಿಸಿ ತನ್ನಿರಿ ಎಂದರು. ಗ್ರಾಮೀಣ ಜಿಲ್ಲಾ ಮಹಿಳಾ ಕಾಂಗ್ರೆಸ್ ಸಮಿತಿ ಅಧ್ಯಕ್ಷೆ ಶಾಂತಮ್ಮ ಗುಂಜಳ ಮಾತನಾಡಿ, ಮಹಿಳೆಯರಿಗೆ ಸ್ಥಾನಮಾನ ಸಿಕ್ಕಿದ್ದೇ ಕಾಂಗ್ರೆಸ್ ಪಕ್ಷದಿಂದ. ರಾಜೀವ ಗಾಂಧಿ ಗ್ರಾಪಂಗಳ ಅಭಿವೃದ್ಧಿಗೆ ಒತ್ತು ಕೊಟ್ಟರು. ಇದನ್ನೆಲ್ಲ ಮತದಾರರಿಗೆ ತಿಳಿಸುವ ಕಾರ್ಯ ಪಕ್ಷದ ಎಲ್ಲರಿಂದ ಆಗಬೇಕು ಎಂದು ಹೇಳಿದರು.
ಮಹಿಳಾ ಕಾಂಗ್ರೆಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಸ್ವಾತಿ ಮಳಗಿ ಮಾತನಾಡಿ, ಧಾರವಾಡ ವಿಧಾನ ಪರಿಷತ್ ಚುನಾವಣೆಯಲ್ಲಿ ಶೇ. 50 ಮಹಿಳಾ ಮತದಾರರಿದ್ದಾರೆ. ಪ್ರತಿಯೊಬ್ಬ ಮಹಿಳಾ ಮತದಾರರ ಮನೆ ಮನೆಗೆ ಭೇಟಿಕೊಟ್ಟು ಅವರ ಸಮಸ್ಯೆ ಆಲಿಸಿ, ನಮ್ಮ ಉದ್ದೇಶ ಏನೆಂಬುದನ್ನು ತಿಳಿಸಿ ಪಕ್ಷದ ಅಭ್ಯರ್ಥಿ ಪರ ಮತ ಹಾಕುವಂತೆ ಮನವರಿಕೆ ಮಾಡುವ ಜವಾಬ್ದಾರಿ ನಮ್ಮದಾಗಿದೆ ಎಂದರು.
ರಾಜೇಶ್ವರಿ ಪಾಟೀಲ, ರಾಜೇಶ್ವರಿ ಬಿಲ್ಲಾನ, ಪ್ರಭಾವತಿ ವಡ್ಡಿನ, ಸುನಿತಾ ಹುರಕಡ್ಲಿ, ಗೌರಮ್ಮ ನಾಡಗೌಡ ಮೊದಲಾದವರು ಮಾತನಾಡಿ, ಪಕ್ಷದ ಅಭ್ಯರ್ಥಿ ಸಲೀಂ ಅಹ್ಮದರಿಗೆ ಪ್ರಥಮ ಪ್ರಾಶಸ್ತ್ಯದ ಮತ ನೀಡುವಂತೆ ಎಲ್ಲರಿಗೆ ಮನವರಿಕೆ ಮಾಡಬೇಕು. ಬಹುಮತದಿಂದ ಆರಿಸಿ ತರಲು ನಾವೆಲ್ಲ ಒಟ್ಟಾಗಿ ಶ್ರಮಿಸಬೇಕು ಎಂದರು. ಅನಿಲಕುಮಾರ ಪಾಟೀಲ, ಅಲ್ತಾಫ ಹಳ್ಳೂರ, ನಿರ್ಮಲಾ ಹೊಂಗಲ ಸೇರಿದಂತೆ ಪಕ್ಷದ ಗ್ರಾಪಂ ಸದಸ್ಯೆಯರು, ಪಾಲಿಕೆ ಸದಸ್ಯೆಯರು ಇದ್ದರು. ಹು-ಧಾ ಮಹಾನಗರ ಜಿಲ್ಲಾ ಮಹಿಳಾ ಕಾಂಗ್ರೆಸ್ ಸಮಿತಿ ಅಧ್ಯಕ್ಷೆ ದೀಪಾ ಗೌರಿ ಪ್ರಾಸ್ತಾವಿಕ ಮಾತನಾಡಿದರು. ರೇಣುಕಾ ಕಳ್ಳಿಮನಿ ಸ್ವಾಗತಿಸಿದರು.
ಮಹಿಳೆಯರಿಗೆ ಪ್ರಾತಿನಿಧ್ಯ ನೀಡಿ
ಪಾಲಿಕೆ ನೂತನ ಸದಸ್ಯರಾದ ಸುವರ್ಣಾ ಕಲ್ಲಕುಂಟ್ಲ, ಸರೋಜಾ ಪಾಟೀಲ ಮಾತನಾಡಿ, ಪಕ್ಷದ ಎಲ್ಲ ಕಾರ್ಯಕ್ರಮಗಳಲ್ಲಿ ಮಹಿಳೆಯರಿಗೆ ಹೆಚ್ಚಿನ ಪ್ರಾತಿನಿಧ್ಯ ಕೊಡಬೇಕು. ವಾರ್ಡ್ ಗಳ ಅಭಿವೃದ್ಧಿಗೆ ಪಾಲಿಕೆಯಿಂದ ಪಕ್ಷದ ಸದಸ್ಯರಿಗೆ ಹೆಚ್ಚಿನ ಅನುದಾನ ಸಿಗುವಂತೆ ಮಾಡಬೇಕು. ಹೆಚ್ಚಿನ ವರ್ಕ್ ಆರ್ಡರ್ ಕೊಡಿಸಬೇಕು. ಎಂತಹ ಕಾಮಗಾರಿಗಳನ್ನು ಮಾಡಿಸಬೇಕು, ಸಾಮಾನ್ಯ ಸಭೆಯಲ್ಲಿ ಯಾವ ರೀತಿ ವಿಷಯ ಮಂಡಿಸಬೇಕೆಂಬುದರ ಬಗ್ಗೆ ತರಬೇತಿ-ಸಲಹೆಗಳನ್ನು ನೀಡಬೇಕು ಎಂದು ಹೇಳಿದರು.