Advertisement

ಸೋರುತಿಹುದು ಇಂದಿರಾ ಕ್ಯಾಂಟೀನ್‌

09:19 PM Jul 28, 2021 | Team Udayavani |

ಕುಂದಾಪುರ:  ಬಡ ವರ್ಗದವರು, ಕೂಲಿ ಕಾರ್ಮಿಕರು ಹಸಿದ ಹೊಟ್ಟೆಯಲ್ಲಿ ಇರಬಾರದು. ಅವರಿಗೆ ಕನಿಷ್ಠ ದರದಲ್ಲಿ ಉತ್ಕೃಷ್ಟ ಗುಣಮಟ್ಟದ ಆಹಾರ ದೊರೆಯುವಂತಾಗಬೇಕು ಎಂದು ಆಶಯದಿಂದ ನಿರ್ಮಾಣವಾದ ಇಲ್ಲಿನ ಶಾಸ್ತ್ರಿ ಸರ್ಕಲ್‌ನಲ್ಲಿ ಇರುವ ಇಂದಿರಾ ಕ್ಯಾಂಟೀನ್‌ ಮೂರು ವರ್ಷ ಭರ್ತಿಯಾಗುವ ಮೊದಲೇ ಸೋರುತ್ತಿದೆ. ಪರಿಣಾಮ ವಿದ್ಯುತ್‌ ಶಾರ್ಟ್‌ ಸರ್ಕ್ನೂಟ್‌ ಆಗಿದ್ದು  ವಯರಿಂಗ್‌ ಹಾಗೂ ಕೆಲವು ಪರಿಕರಗಳು ಸುಟ್ಟು ಹೋಗಿವೆ.

Advertisement

ಆರಂಭ:

ಈಗಲೂ ಇನ್ನೂ ಎಲ್ಲ ತಾಲೂಕುಗಳಲ್ಲಿ ಇಂದಿರಾ ಕ್ಯಾಂಟೀನ್‌ ಆರಂಭವಾಗಿಲ್ಲ. ಆದರೆ ಕುಂದಾಪುರದಲ್ಲಿ 2018 ನವೆಂಬರ್‌ 21ರಂದು ಅಂದಿನ ಸಚಿವೆ ಡಾ| ಜಯಮಾಲಾ ಅವರು ಕ್ಯಾಂಟೀನ್‌ ಉದ್ಘಾಟಿಸಿದ್ದರು. ಸಿದ್ದರಾಮಯ್ಯ ನೇತೃತ್ವದ ಸರಕಾರದ ಮಹತ್ವಾಕಾಂಕ್ಷೆಯ ಯೋಜನೆ ಇದಾಗಿದೆ. ಬೆಳಗ್ಗೆ  7.30ಯಿಂದ 10ರ ವರೆಗೆ 5 ರೂ.ಗೆ ಉಪಾಹಾರ, ಮಧ್ಯಾಹ್ನ 1ರಿಂದ 3.30ವರೆಗೆ 10 ರೂ.ಗೆ ಊಟ, ಸಂಜೆ 7.30ರಿಂದ ರಾತ್ರಿ 9.30ರ ವರೆಗೆ 10 ರೂ.ಗೆ ಊಟ ಇಲ್ಲಿ ದೊರೆಯುತ್ತದೆ.

ಖರೀದಿ:

ದಿನಗೂಲಿ ಕಾರ್ಮಿಕರು, ವಲಸೆ ಕಾರ್ಮಿಕರು, ವಿದ್ಯಾರ್ಥಿಗಳು ಹಾಗೂ ಇತರರು ಇಲ್ಲಿ  ರಿಯಾಯಿತಿ ದರದ ಆಹಾರ ಪಡೆಯುತ್ತಾರೆ. ಬೆಳಗ್ಗೆ 200 ಮಂದಿಗೆ, ಮಧ್ಯಾಹ್ನ 250 ಮಂದಿಗೆ, ಸಂಜೆ 100 ಮಂದಿಗೆ ಎಂದು ಮಿತಿಯಿದೆ. ಲಾಕ್‌ಡೌನ್‌ ಬಳಿಕ ಕಾಲೇಜು ಆರಂಭಗೊಂಡ ಬಳಿಕ ಊಟ ಪಡೆಯುವವರ ಸಂಖ್ಯೆ ಏರಿದೆ. ಇಲ್ಲದಿದ್ದರೆ ದಿನಕ್ಕೆ 180ರಷ್ಟು ಮಂದಿ ಊಟ ಮಾಡುತ್ತಿದ್ದರು. ರವಿವಾರ 180ರಷ್ಟು ಮಂದಿ ಊಟ ಮಾಡುತ್ತಾರೆ. ಇತರ ದಿನಗಳಲ್ಲಿ 250 ಊಟವೂ ಖಾಲಿಯಾಗುವ ಸಂಭವವೇ ಹೆಚ್ಚು,

Advertisement

ಅವಘಡ:

ಮಳೆನೀರು ಸೋರಿದ್ದರಿಂದಾ ಗಿ ವಯರಿಂಗ್‌  ಮೇಲೆ ಪರಿ ಣಾಮ ಬೀರಿದೆ. ಎಲೆಕ್ಟ್ರಿಕ್‌ ಉಪಕರಣಗಳು ಸುಟ್ಟು ಹೋಗಿವೆ. ಪ್ಲಗ್‌ ಪಾಯಿಂಟ್‌ಗಳಲ್ಲಿ ಶಾಕ್‌ ಬರುತ್ತಿದೆ. ಬಲ್ಬ್ಗಳು ಕೂಡ ಉರಿಯದ ಸ್ಥಿತಿಗೆ ಬಂದಿದೆ. ರಾಜ್ಯ ಸರಕಾರ ಇದನ್ನು ಪ್ರತ್ಯೇಕ ಯೋಜನೆಯಾಗಿ ನಿರ್ಮಿಸಿದ್ದರೂ ಸ್ಥಳ ನೀಡಬೇಕಾದ್ದು, ನಿರ್ವಹಣೆ ಮಾಡಬೇಕಾದ್ದು ಸ್ಥಳೀಯ ಸಂಸ್ಥೆ. ಆದ್ದರಿಂದ ಈಗ ಇದರ ದುರಸ್ತಿ ಹೊಣೆ ಪುರಸಭೆ ಹೆಗಲಿಗೇರಿದೆ.

ಎಲ್ಲ ಕಡೆಯೂ ನೀರು :

ಮೂರು ವರ್ಷವೂ ಭರ್ತಿಯಾಗದ ಈ ಕಟ್ಟಡ ಈಗಲೇ ಸೋರುತ್ತಿದೆ. ಇದು ಇಲ್ಲೇ ಇಟ್ಟಿಗೆ ಸಿಮೆಂಟ್‌ನಿಂದ ನಿರ್ಮಿಸಿದ ಕಟ್ಟಡವೇನೂ ಅಲ್ಲ. ಸಿಮೆಂಟ್‌ನಿಂದ ತಯಾರಿಸಿದ ಸಿದ್ಧ ಶೀಟ್‌ಗಳನ್ನೇ ಗೋಡೆ, ಮಾಡುಗಳನ್ನಾಗಿ ಮಾಡಿ ತಯಾರಿಸಿದ ರಾಜ್ಯಾದ್ಯಂತ ಇರುವ ಒಂದೇ ಮಾದರಿಯ ಕಟ್ಟಡ. ಶೀಟ್‌ಗಳನ್ನು ಜೋಡಿಸಿದ ಭಾಗದಲ್ಲಿ ಮಳೆ ಬಂದಾಗ ನೀರು ಕ್ಯಾಂಟೀನ್‌ ಒಳಗೆ ಒಸರುತ್ತದೆ. ಹಾಗೆ ಸೋರಿದ ನೀರು ಊಟ ಕೊಡುವ ಜಾಗ, ಊಟ ಮಾಡುವ ಜಾಗ, ಅಡುಗೆ ಸಿದ್ಧಪಡಿಸುವ ಪ್ರದೇಶ ಎಂದು ಭೇದ ಮಾಡದೇ ಎಲ್ಲ ಕಡೆಯೂ ನಿಂತಿರುತ್ತದೆ. ಊಟ ನೀಡುತ್ತಿರುವಾಗಲೇ ಅದರ ಮೇಲೆ ಮಳೆ ನೀರು ಸೋರಿದ್ದೂ ಉಂಟು ಎನ್ನುತ್ತಾರೆ ಕ್ಯಾಂಟೀನ್‌ನ ಮೇಲ್ವಿಚಾರಕರು.

ಇಂದಿರಾ ಕ್ಯಾಂಟೀನ್‌ ಸೋರುತ್ತಿರುವುದು ಗಮನಕ್ಕೆ ಬಂದಿದೆ. ಆಡಳಿತ ಮಂಡಳಿಯ ಗಮನಕ್ಕೂ ತರಲಾಗಿದೆ. ದುರಸ್ತಿಗೆ 1.5 ಲಕ್ಷ ರೂ.ಗಳ ಅಂದಾಜುಪಟ್ಟಿಗೆ ಸಾಮಾನ್ಯ ಸಭೆ ಅನುಮೋದನೆ ನೀಡಿದೆ. ಲೀಕ್‌ಪ್ರೂಫ್, ವಯರಿಂಗ್‌ ದುರಸ್ತಿಯನ್ನು ಈ ಮೂಲಕ ಮಾಡಿಸಲಾಗುವುದು.-ಗೋಪಾಲಕೃಷ್ಣ  ಶೆಟ್ಟಿ,  ಮುಖ್ಯಾಧಿಕಾರಿ, ಪುರಸಭೆ 

Advertisement

Udayavani is now on Telegram. Click here to join our channel and stay updated with the latest news.

Next