Advertisement

ಜಾಗತಿಕ ಸವಾಲುಗಳನ್ನು ಮೆಟ್ಟಿ ನಿಲ್ಲಲಿದೆ ಭಾರತದ ಆರ್ಥಿಕತೆ

12:11 AM Sep 22, 2022 | Team Udayavani |

ಭಾರತ ಮಾತ್ರವಲ್ಲದೆ ವಿಶ್ವದ ಬಹುತೇಕ ರಾಷ್ಟ್ರಗಳ ಅಭಿವೃದ್ಧಿ ಚಟುವಟಿಕೆಗಳಿಗೆ ಅಡ್ಡಿಪಡಿಸಿದ್ದ ಕೊರೊನಾ ಸಾಂಕ್ರಾಮಿಕ ಮತ್ತು ಭೌಗೋಳಿಕ ­ರಾಜಕೀಯ ಬಿಕ್ಕಟ್ಟುಗಳ ಉದ್ವಿಗ್ನ ಪರಿಸ್ಥಿತಿಯ ಹೊರತಾಗಿಯೂ ವಿಶ್ವದ ಇತರ ರಾಷ್ಟ್ರಗಳಿಗೆ ಹೋಲಿಸಿದಲ್ಲಿ ಭಾರತದ ಆರ್ಥಿಕತೆಯು ಸಂಕಷ್ಟದ ಹಾದಿಯನ್ನು ದಾಟಿ ಚೇತರಿ ಸಿಕೊಂಡಿರುವು ದಲ್ಲದೆ ರಚನಾತ್ಮಕ ಬೆಳವಣಿಗೆಯ ಹಾದಿಯನ್ನು ಹಿಡಿದಿದೆ. ಸ್ವಾವಲಂಬಿ ಭಾರತ ಅಭಿಯಾನ (ಆತ್ಮನಿರ್ಭರ)ದ ರಾಷ್ಟ್ರೀಯ ನೀತಿಯ ದೃಷ್ಟಿಕೋನದಿಂದಾಗಿ ಭಾರತ ವಿಶ್ವಾದ್ಯಂತ ಉತ್ಪಾದನಾ ಶಕ್ತಿ ಕೇಂದ್ರವೆಂದು ಪರಿಗಣಿಸಲ್ಪಡುತ್ತಿದೆ. ವಿಶ್ವದ ಅತೀ ದೊಡ್ಡ ಆರ್ಥಿಕತೆಯ ಪಟ್ಟಿಯಲ್ಲಿ 5ನೇ ಸ್ಥಾನಕ್ಕೇರಿದೆ.

Advertisement

ಪ್ರಸಕ್ತ ಸನ್ನಿವೇಶದಲ್ಲಿ ಜಾಗತಿಕ ಆರ್ಥಿಕ ವಿದ್ಯಮಾನಗಳೇ ದೇಶಕ್ಕೆ ಬಹುದೊಡ್ಡ ಸವಾಲಾಗಿ ಪರಿಣಮಿಸುವ ಸಂದರ್ಭವನ್ನು ತಳ್ಳಿ ಹಾಕಲಾಗದು. ವಿಶ್ವದ ಹಲವಾರು ಕೇಂದ್ರೀಯ ಬ್ಯಾಂಕ್‌ಗಳು ಬಡ್ಡಿದರ ಏರಿಕೆ ಮುಂತಾದ ಬಿಗಿಕ್ರಮಗಳ ಮೊರೆ ಹೋಗುತ್ತಿರುವ ಹಿನ್ನಲೆಯಲ್ಲಿ ವಿಶ್ವಬ್ಯಾಂಕ್‌ ಮುಂದಿನ ವರ್ಷ ಜಗತ್ತು ಹಿಂದೆಂದೂ ಕಂಡರಿಯದ ಪ್ರಮಾಣದಲ್ಲಿ ಆರ್ಥಿಕ ಹಿಂಜರಿಕೆಯನ್ನು ಎದುರಿಸಲಿದೆ ಎಂದು ವರದಿ ಮಾಡಿದೆ. ಕೊರೊನಾ ಸಾಂಕ್ರಾಮಿಕದಿಂದಾದ ಆರ್ಥಿಕ ಏರಿಳಿತಗಳು, ನಿಲ್ಲದ ರಷ್ಯಾ-ಉಕ್ರೇನ್‌ ನಡುವಣ ಯುದ್ಧ ಸಂಘರ್ಷ, ಹವಾಮಾನ ಬದಲಾವಣೆ, ಏರುತ್ತಿರುವ ಇಂಧನ ಬೆಲೆ ಇವೆಲ್ಲವೂ ಆರ್ಥಿಕ ಹಿಂಜರಿಕೆಗೆ ಪ್ರಮುಖ ಕಾರಣಗಳಾಗಿವೆ.

2023ಕ್ಕೆ ಕೆಲವು ದೇಶಗಳು ಆರ್ಥಿಕ ಹಿಂಜರಿತಕ್ಕೆ ಸಿಲುಕುವ ಸಾಧ್ಯತೆಯಿದೆಯೆಂದು ಐಎಂಎಫ್ ಕೂಡ ವರದಿ ಮಾಡಿದೆ. ಜಾಗತಿಕ ಪ್ರಭಾವಗಳಿಂದ ದೇಶೀಯ ಮಾರುಕಟ್ಟೆಯೂ ಸಂಕುಚಿತಗೊಂಡಿದೆ. ರೂಪಾಯಿ ದುರ್ಬಲವಾಗುತ್ತಿರುವುದು ಮತ್ತು ವಿದೇಶೀ ನಿಧಿಯ ಹೊರಹರಿವುಗಳಿಂದ ಆರ್ಥಿಕತೆಗೆ ಧಕ್ಕೆಯುಂಟಾಗುತ್ತಿದೆ. ರೂಪಾಯಿಯನ್ನು ಸ್ಥಿರಗೊಳಿಸಿ ಮೌಲ್ಯ ಹೆಚ್ಚಿಸಲು ಸರಕಾರ ಮತ್ತು ಆರ್‌ಬಿಐ ಗಂಭೀರ ಪ್ರಯತ್ನ ಮಾಡುತ್ತಿದೆ. ಜಾಗತಿಕ ಆರ್ಥಿಕ ಉದ್ವಿಗ್ನತೆಗಳು ಮುಂದುವರಿದರೆ ಜಾಗತಿಕ ಬೆಳವಣಿಗೆ ದರವು ತೀವ್ರಗತಿಯಲ್ಲಿ ಕುಸಿಯುತ್ತದೆ. ಬಡ ಮತ್ತು ಅಭಿವೃದ್ಧಿಶೀಲ ದೇಶಗಳಲ್ಲಿನ ಜನರ ಮೇಲೆ ದೀರ್ಘಾ ವಧಿಯ ಪ್ರತಿಕೂಲ ಪರಿಣಾಮ ಬೀರುತ್ತದೆ ಎಂದು ವಿಶ್ವಬ್ಯಾಂಕ್‌ ತನ್ನ ಕಳವಳವನ್ನು ವ್ಯಕ್ತಪಡಿಸಿದೆ.

ಅಮೆರಿಕ ಮತ್ತು ಯುರೋಪ್‌ನಲ್ಲಿ ಬಡ್ಡಿದರ ಏರಿಕೆಯಾದರೆ ಭಾರತದ ಐಟಿ ಉದ್ಯಮಕ್ಕೆ ನೇರ ಹೊಡೆತ ಬೀಳಲಿದೆ. ಅಮೆರಿಕ ಮತ್ತು ಯುರೋಪ್‌ನಿಂದಲೇ ತಂತ್ರಜ್ಞಾನವು ಹೆಚ್ಚಿನ ಪ್ರಮಾಣದ ವರಮಾನ ಗಳಿಸುತ್ತಿದೆ. ಬಡ್ಡಿದರ ಹೆಚ್ಚಾದರೆ ಕಂಪೆನಿಗಳಿಗೆ ಬರುವ ವರಮಾನ ಕಡಿಮೆಯಾಗುವ ಅಪಾಯವಿದೆ. ಅಮೆರಿಕದ ಆರ್ಥಿಕ ಹಿಂಜರಿತ ಸೃಷ್ಟಿಸುವ ಹೊಡೆತವನ್ನು ಭಾರತದ ಸದೃಢ ಆರ್ಥಿಕತೆಗೆ ತಡೆದುಕೊಳ್ಳುವ ಶಕ್ತಿಯಿದೆ. ಮೇಕ್‌ ಇನ್‌ ಇಂಡಿಯಾ, ಆತ್ಮ ನಿರ್ಭರ್‌ನಿಂದ ಈ ಪರಿಣಾಮಗಳು ಸೌಮ್ಯ ಮತ್ತು ಅಲ್ಪಾವಧಿಯಾ¨ªಾಗಿರಲಿವೆ ಎಂದು ಅಂದಾಜಿಸಲಾಗಿದೆ.

ನುರಿತ ಆರ್ಥಿಕ ತಜ್ಞರಿಗೂ ಆರ್ಥಿಕತೆಯ ಬಗ್ಗೆ ಭವಿಷ್ಯ ಹೇಳಲು ಸಾಧ್ಯವಾಗಲಾರದು. ಆದುದರಿಂದ ಆರ್ಥಿಕ ಹಿಂಜರಿತವು ಜಾಗತಿಕ ಮಟ್ಟದ್ದಾಗಿರಲಿದೆಯೇ ಎಂದು ಈಗಲೇ ಹೇಳಲಾಗದು. ಆದರೆ ಇಂದಿನ ಜಾಗತೀಕರಣ ಮತ್ತು ಡಿಜಿಟಲೀಕ ರಣ ನೀತಿಯಿಂದ ಯಾವುದೇ ದೇಶವು ಸ್ವತಂತ್ರವಾಗಿರಲು ಸಾಧ್ಯವಿಲ್ಲ. ಆರ್ಥಿಕ, ಸಾಮಾಜಿಕ ನೆಲೆಗಟ್ಟಿನಲ್ಲಿ ಬೇರೆ ದೇಶಗಳೊಂದಿಗೆ ಸಂಬಂಧ ಬೆಳೆಸುವುದು ಅನಿವಾರ್ಯವಾಗಿದೆ. ಈಗಾಗಲೇ 100ಕ್ಕೂ ಹೆಚ್ಚಿನ ದೇಶಗಳ ಆರ್ಥಿಕತೆಗೆ ಧಕ್ಕೆಯುಂಟಾಗಿದೆ. ರಷ್ಯಾವು ಉಕ್ರೇನ್‌ ಮೇಲೆ ನಡೆಸಿದ ಆಕ್ರಮಣ ಹಾಗೂ ಚೀನದಲ್ಲಿನ ಲಾಕ್‌ಡೌನ್‌ನ ಅನಂತರದಲ್ಲಿ ದೇಶದ ಹಣದುಬ್ಬರ ಸಮಸ್ಯೆಯು ತೀವ್ರಗೊಂಡಿದೆ. ಜಗತ್ತಿನ ಪ್ರಮುಖ ಕೇಂದ್ರ ಬ್ಯಾಂಕ್‌ಗಳು ಬಡ್ಡಿದರವನ್ನು ಹೆಚ್ಚಿಸಿದರೂ ಹಣದುಬ್ಬರವನ್ನು ತಗ್ಗಿಸಲು ಈ ಕ್ರಮ ಸಾಕಾಗಲಾರದು ಎಂಬುದು ವಿಶ್ವಬ್ಯಾಂಕ್‌ ಆರ್ಥಿಕ ತಜ್ಞರ ಅಭಿಪ್ರಾಯ. ಹಣದು ಬ್ಬರಕ್ಕೆ ಅಂಕುಶ ಹಾಕಲು ಕೈಗೊಂಡ ವಿತ್ತೀಯ ನಿಯಂತ್ರಣದ ಬಿಗಿ ಕ್ರಮಗಳಿಂದ ಬಂಡವಾಳ ಹೂಡಿಕೆ ಕುಸಿಯಬಹುದು ಮತ್ತು ಉದ್ಯೋಗ ನಷ್ಟವಾಗಬಹುದು. ಜತೆಗೆ ಆರ್ಥಿಕ ಬೆಳವಣಿಗೆಗೆ ಅಡ್ಡಿಯಾಗುವ ಅಪಾಯವಿದೆಯೆಂದು ಎಚ್ಚರಿಸಿದೆ. ಅದಲ್ಲದೆ ಬೇಡಿಕೆ ತಗ್ಗಿಸುವುದಕ್ಕಿಂತ ಹೆಚ್ಚಾಗಿ ಉತ್ಪಾದನೆಯನ್ನು ಹೆಚ್ಚಿಸುವತ್ತ ನೀತಿ ನಿರೂಪಕರು ಗಮನ ಹರಿಸಬೇಕು ಎಂದು ವಿಶ್ವಬ್ಯಾಂಕ್‌ ವಿವಿಧ ದೇಶಗಳಿಗೆ ಕಿವಿಮಾತು ಹೇಳಿದೆ.

Advertisement

ಜಿಡಿಪಿ ಮತ್ತು ಹಣದುಬ್ಬರ ದೇಶದ ಆರ್ಥಿಕ ಸ್ಥಿತಿಗತಿಯನ್ನು ಸೂಚಿಸುವ ಪ್ರಮುಖ ಮಾನದಂಡಗಳು. ಹಣದುಬ್ಬರವನ್ನು ಅಲ್ಪಾವಧಿಯಲ್ಲಿ ತಡೆಗಟ್ಟುವುದು ಕಷ್ಟವಾಗುತ್ತದೆ. ದೇಶದ ಹಣದುಬ್ಬರಕ್ಕೆ ಪ್ರಮುಖ ಕಾರಣ ತೈಲ ಬೆಲೆ ಮತ್ತು ಯುದ್ಧ. ಇಲ್ಲಿ ಜಾಗತಿಕ ಮಾರುಕಟ್ಟೆಗಳ ಚಂಚಲತೆಯೇ ಹಣದುಬ್ಬರಕ್ಕೆ ಕಾರಣ ವಾ ಗುತ್ತಿದ್ದು ಹಣದುಬ್ಬರದ ನಿರೀಕ್ಷೆಗಳು ಅಸ್ಥಿರಗೊಂಡಿರುವುದು ಗೋಚರವಾಗುತ್ತದೆ.

ಹಣದುಬ್ಬರ ನಿಯಂತ್ರಿಸಲು ರೆಪೋ ದರ ಹೆಚ್ಚಿಸುವುದು ಹಾಗೂ ವ್ಯವಸ್ಥೆಯಲ್ಲಿನ ನಗದು ಹರಿವನ್ನು ಕಡಿಮೆ ಮಾಡುವು ದನ್ನು ಹೊರತು ಪಡಿಸಿದರೆ ಆರ್‌ಬಿಐ ಬಳಿ ಹೆಚ್ಚಿನ ಅಸ್ತ್ರಗಳಿಲ್ಲ. ಅದಲ್ಲದೆ ಸರಕಾರ ಮತ್ತು ಆರ್‌ಬಿಐ ನಿರ್ಧಾರಗಳೇ ರೆಪೋ ದರ ಪರಿಷ್ಕರಣೆಗೆ ಮಾನದಂಡವಾಗುವುದಿಲ್ಲ. ಅಂತಾರಾಷ್ಟ್ರೀಯ ವಿದ್ಯಮಾನಗಳು, ದೇಶದ ಆರ್ಥಿಕ ಸ್ಥಿತಿಗತಿ, ಇಂಗ್ಲೆಂಡ್‌ನ‌ ಲಿಬರ್‌ ಮತ್ತು ಅಮೆರಿಕ ಫೆಡ್‌ರೇಟ್‌ಗಳ ಮೇಲೂ ಅವಲಂಬಿಸಿರುತ್ತದೆ. ಚಿಲ್ಲರೆ ಹಣದುಬ್ಬರ ಆಗಸ್ಟ್‌ನಲ್ಲಿ ಮತ್ತೆ ಏರಿಕೆಯ ಹಾದಿಗೆ ತಿರುಗಿದೆ. ಹಿಂದಿನ ಮೂರು ತಿಂಗಳು ಇಳಿಕೆಯ ಹಾದಿಯಲ್ಲಿತ್ತು. ಆದರೆ ಆಗಸ್ಟ್‌ನಲ್ಲಿ ಶೇ. 7ಕ್ಕೇರಿದೆ. ಆಹಾರ ವಸ್ತುಗಳ ಬೆಲೆಯೇರಿಕೆಯೇ ಹಣದುಬ್ಬರದ ಏರಿಕೆಗೆ ಪ್ರಮುಖ ಕಾರಣವಾಗಿದೆ. ಸತತ 8 ನೇ ತಿಂಗಳು ಹಣದುಬ್ಬರ ದರವು ಶೇ. 6ಕ್ಕಿಂತ ಅಧಿಕ ಮಟ್ಟದಲ್ಲಿದೆ. ಮಳೆ ಹಾಗೂ ಬೆಳೆ ಹಾನಿಯ ಕಾರಣಗಳಿಂದ ತರಕಾರಿಗಳ ಬೆಲೆಯಲ್ಲಿ ತೀವ್ರ ಹೆಚ್ಚಳವಾಗಿದೆ.

ಹಣದುಬ್ಬರ ನಿಯಂತ್ರಣಕ್ಕೆ ಪ್ರಸಕ್ತ ಸನ್ನಿವೇಶದಲ್ಲಿ ಏರಿಕೆಯಾದ ರೆಪೋ ದರವು ಸಾಲದೆಂಬ ಸುಳಿವನ್ನು ಆರ್‌ಬಿಐ ನೀಡಿದೆ. ಆದುದರಿಂದ ಈ ಮಾಸಾಂತ್ಯದ ಸಭೆಯಲ್ಲಿ ಬಡ್ಡಿ ದರವನ್ನು (ರೆಪೋ) ಶೇ. 0.50ರಷ್ಟು ಏರಿಕೆ ಮಾಡುವ ಸಂಭವವಿದೆ. ರೆಪೋ ತಟಸ್ಥ ದರವು ಶೇ. 6ರಿಂದ ಶೇ. 6.5 ಹಾಗೂ ಅಲ್ಲಿಯವರೆಗೆ ಬಡ್ಡಿದರ ಮುಂದುವರಿದರೂ ಆಶ್ಚರ್ಯವಿಲ್ಲವೆಂಬುದು ತಜ್ಞರ ಅಭಿಪ್ರಾಯ. ಆರ್‌ಬಿಐ ರೆಪೋ ದರ ಹೆಚ್ಚಳವಾದರೆ ವಿವಿಧ ಸಾಲಗಳ ಮೇಲಿನ ಬಡ್ಡಿದರಗಳನ್ನು ಬ್ಯಾಂಕ್‌ಗಳು ಮತ್ತೆ ಏರಿಕೆ ಮಾಡುತ್ತವೆ. ಪ್ರಸಕ್ತ ಮೇ ತಿಂಗಳಿನಿಂದ ರೆಪೋ ದರ ಶೇ. 1.4ರಷ್ಟು ಹೆಚ್ಚಳವಾಗಿದೆ. ರೆಪೋ ಹೆಚ್ಚಿಸದಿದ್ದರೆ ಠೇವಣಿದಾರರಿಗೆ ಲಾಭದಾಯಕ ಮೊತ್ತ ಸಿಗುವುದಿಲ್ಲ.
ಹಣದುಬ್ಬರಕ್ಕೆ ಕಡಿಮೆ ಬಡ್ಡಿ ದರ ಹಾಗೂ ಹೆಚ್ಚಿನ ನಗದು ಚಲಾವಣೆ ಮಾತ್ರವೇ ಕಾರಣವಲ್ಲ. ಪೂರೈಕೆ ವ್ಯವಸ್ಥೆಯಲ್ಲಿನ ಸಮಸ್ಯೆಗಳು, ದೇಶೀ ಮಾರುಕಟ್ಟೆಯಲ್ಲಿ ಪೆಟ್ರೋಲ್‌ ಹಾಗೂ ಡೀಸೆಲ್‌ ಬೆಲೆ ಹೆಚ್ಚಿನ ಮಟ್ಟದಲ್ಲಿರುವುದು ಕೂಡ ಕಾರಣವಾಗು ತ್ತದೆ. ಹಣದುಬ್ಬರ ನಿರೀಕ್ಷಿತ ಪ್ರಮಾಣಕ್ಕಿಂತ ಹೆಚ್ಚಾಗಿದೆ. ನವೆಂಬರ್‌ನಿಂದ ಇಳಿಕೆಯಾಗಬಹುದು. ಮುಂದಿನ ಎರಡು ವರ್ಷಗಳಲ್ಲಿ ಹಣದುಬ್ಬರ ದರವನ್ನು ನಿಗದಿತ ಗುರಿಯಾದ ಶೇ. 4ರ ಸಮೀಪ ತರಲಾಗುವುದು ಎಂದು ಆರ್‌ಬಿಐ ಹೇಳಿದೆ.

ಜಾಗತಿಕ ಪೂರೈಕೆಗೆ ಮತ್ತು ಮೌಲ್ಯ ಸರಪಣಿಗೆ ಧಕ್ಕೆಯಾಗಿದೆ ಯಾದರೂ ಕೇಂದ್ರ ಹಾಗೂ ಆರ್‌ಬಿಐ ಕೈಗೊಂಡ ಕ್ರಮಗಳಿಂದ ಭಾರತವು ವಿಶ್ವದ ಅತ್ಯಂತ ವೇಗದ ಬೆಳವಣಿಗೆ ಹೊಂದುತ್ತಿರುವ ದೇಶವಾಗಿದೆ. ಜಿಎಸ್‌ಟಿ ಸತತ 5 ತಿಂಗಳು ರೂ. 1.49 ಲಕ್ಷ ಕೋಟಿ ಗಿಂತ ಮೇಲಿದೆ. ದೇಶವು ಕೈಗೊಂಡ ಸ್ವಾವಲಂಬನೆಯ ಸ್ತಂಭಗ ಳಾದ ಆರ್ಥಿಕತೆ, ಮೂಲ ಸೌಕರ್ಯ, ಬೇಡಿಕೆ ಈಡೇರಿಸಲು ಕೃಷಿ ಪೂರೈಕೆಯ ಸುಧಾರಣೆ, ತರ್ಕಬದ್ಧ ತೆರಿಗೆ ವ್ಯವಸ್ಥೆ, ಬಲಶಾಲಿ ಹಣಕಾಸು ವ್ಯವಸ್ಥೆಯ ಪ್ರಯತ್ನಗಳು ಕಾರ್ಯಗತವಾದುದರಿಂದ ಆರ್ಥಿಕತೆಯ ಅಡಿಪಾಯಗಳು ಭದ್ರವಾಗಿವೆ. ರಫ್ತಿಗೆ ಒತ್ತು ನೀಡಿ ಜಾಗತಿಕ ಮಟ್ಟದಲ್ಲಿ ವಹಿವಾಟು ಹೆಚ್ಚಿಸುವ ಉದ್ದೇಶ ಆರ್‌ಬಿಐಗಿದೆ. ಡಾಲರ್‌ ಎದುರು ರೂಪಾಯಿ ಮೌಲ್ಯವರ್ಧನೆಗೆ ಕ್ರಮವಹಿಸಿದೆ. ಮುಂದಿನ ದಿನಗಳಲ್ಲಿ ದೇಶದ ಅರ್ಥ ವ್ಯವಸ್ಥೆ ಇನ್ನು ಸದೃಢವಾಗಲಿದೆ ಮತ್ತು 2029ರ ವೇಳೆಗೆ ವಿಶ್ವದ 3ನೇ ಬಲಾಡ್ಯ ಅರ್ಥಿಕತೆ ಹೊಂದಿದ ರಾಷ್ಟ್ರ ಎಂಬ ಹೆಗ್ಗಳಿಕೆಗೆ ಪಾತ್ರವಾ ಗಲಿದೆ ಎಂಬ ವಿಶ್ವಾಸ ಆರ್‌ಬಿಐ ಮತ್ತು ಕೇಂದ್ರ ಸರಕಾರದ್ದಾಗಿದೆ. ಈ ದಿಸೆಯಲ್ಲಿ ಕೇಂದ್ರ ಸರಕಾರ ದೃಢ ಹೆಜ್ಜೆಯನ್ನಿರಿಸಿದ್ದು ಆರ್‌ಬಿಐ ಕೂಡ ಬಿಗಿ ನಿಲುವಿನ ಮೂಲಕ ಇದಕ್ಕೆ ಸಾಥ್‌ ನೀಡಿದೆ.

ಇವೆಲ್ಲವೂ ಸದ್ಯದ ಬೆಳವಣಿಗೆ ಮತ್ತು ಆಶಾವಾದ ಎಂಬುದ ನ್ನಿಲ್ಲಿ ಉಲ್ಲೇಖೀಸಲೇಬೇಕು. ಆದರೆ ಮುಂಬರುವ ದಿನಗಳಲ್ಲಿನ ಜಾಗತಿಕ ಬೆಳವಣಿಗೆಗಳು ಭಾರತ ನಿರೀಕ್ಷಿತ ಗುರಿಯನ್ನು ತಲುಪಲು ಅಡಚಣೆಯಾದೀತೇ? ಎಂಬ ಆತಂಕವಂತೂ ಇದ್ದೇ ಇದೆ. ಅಷ್ಟು ಮಾತ್ರವಲ್ಲದೆ ವಿಶ್ವಬ್ಯಾಂಕ್‌ ಮತ್ತು ಐಎಂಎಫ್ ಈಗಾಗಲೇ ಅಂದಾಜಿಸಿರುವಂತೆ 2023ರ ಅಮೆರಿಕ ಮತ್ತು ಯುರೋಪ್‌ ರಾಷ್ಟ್ರಗಳಲ್ಲಿನ ಸರಿಸುಮಾರು ಐದು ದಶಕಗಳ ಬಳಿಕದ ಮಹಾ ಆರ್ಥಿಕ ಹಿಂಜರಿಕೆ ಭಾರತದ ಆರ್ಥಿಕತೆಗೆ ಮಾತ್ರವಲ್ಲದೆ ಜನಸಾಮಾನ್ಯರ ಬದುಕಿನ ಮೇಲೆ ಯಾವ ರೀತಿಯ ಪರಿಣಾಮ ಬೀರೀತು? ಎಂಬ ಕುತೂಹಲ ಮತ್ತು ಆತಂಕವಂತೂ ಇದ್ದೇ ಇದೆ.

-ಚೇರ್ಕಾಡಿ ಸಚ್ಚಿದಾನಂದ ಶೆಟ್ಟಿ

Advertisement

Udayavani is now on Telegram. Click here to join our channel and stay updated with the latest news.

Next