ಬೆಳ್ತಂಗಡಿ: ಎಲ್ಲ ಸಂಶೋಧನೆಗಳೂ ಅತಿ ಹೆಚ್ಚು ಕಲಿತವರಿಂದ, ವಿಜ್ಞಾನಿಗಳಿಂದಲೇ ಆಗಬೇಕು ಎಂದೇನಿಲ್ಲ. ಭಾರತೀಯ ಕೃಷಿಕರು ಸಂಶೋಧನ ಸ್ವಭಾವ ಉಳ್ಳವರು. ಕೃಷಿಗೆ ಸಂಬಂಧಿಸಿದ ಅನೇಕ ಆವಿಷ್ಕಾರಗಳನ್ನು ಕೃಷಿಕರೇ ಮಾಡಿ ಸಫಲರಾಗಿದ್ದಾರೆ ಎಂದು ಧರ್ಮಸ್ಥಳದ ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆ ಹೇಳಿದರು.
ಅವರು ಉಜಿರೆ ಎಸ್ಡಿಎಂ ಎಂಜಿನಿಯರಿಂಗ್ ಕಾಲೇಜಿನಲ್ಲಿ ಎಸ್ಡಿಎಂ ಐಟಿ, ಎಆರ್ಡಿಎಫ್ (ಅರೆಕನಟ್ ರಿಸರ್ಚ್ ಆ್ಯಂಡ್ ಡೆವಲಪ್ಮೆಂಟ್ ಫೌಂಡೇಶನ್) ಮಂಗಳೂರು, ಕ್ಯಾಂಪ್ಕೊ ಮಂಗಳೂರು ಸಹಯೋಗದಲ್ಲಿ ನಡೆದ ಅಡಿಕೆಯ ಮೂಲಕ ಉದ್ಯಮಶೀಲತೆ ಅಭಿವೃದ್ಧಿ ಹಾಗೂ ಕೈಗಾರಿಕಾ ಅವಕಾಶಗಳು ಎಂಬ ವಿಚಾರ ಸಂಕಿರಣದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಅಡಿಕೆಯಿಂದ ಚಹಾ, ಶ್ಯಾಂಪೂ, ಸಾಬೂನು ತಯಾರಾಗಿದ್ದು, ಮೌಲ್ಯವರ್ಧನೆಗೆ ಇನ್ನಷ್ಟು ಮುತುವರ್ಜಿ ಅಗತ್ಯ ಎಂದರು.
ಕಾಸರಗೋಡಿನ ಸಿಪಿಸಿಆರ್ಐ ನಿರ್ದೇಶಕ ಡಾ| ಪಿ. ಚೌಡಪ್ಪ, ಕ್ಯಾಂಪ್ಕೋ ಅಧ್ಯಕ್ಷ ಎಸ್.ಆರ್. ಸತೀಶ್ಚಂದ್ರ ಮಾತನಾಡಿದರು.
ಎಸ್ಡಿಎಂ ಎಂಜಿನಿಯರಿಂಗ್ ಕಾಲೇಜಿನ ಪ್ರಾಚಾರ್ಯ ಡಾ| ಕೆ. ಸುರೇಶ್, ಎಆರ್ಡಿಎಫ್ನ ನಿರ್ದೇಶಕ ಡಾ| ಕೇಶವ ಭಟ್, ಅಖೀಲ ಭಾರತ ಅಡಿಕೆ ಬೆಳೆಗಾರರ ಸಂಘದ ಅಧ್ಯಕ್ಷ ಮಂಚಿ ಶ್ರೀನಿವಾಸ ಆಚಾರ್, ಕಾಲೇಜಿನ ಐಇಡಿಸಿ ವಿಭಾಗ ಮ್ಯುಸ್ಥ ಡಾ| ಬಸವ ಟಿ. ಮೊದಲಾದವರು ಉಪಸ್ಥಿತರಿದ್ದರು.ಪ್ರೊ| ಮನೋಜ್ ಗಡಿಯಾರ್ ಅತಿಥಿ ಪರಿಚಯ ಮಾಡಿದರು. ಸಂಘಟಕರಾದ ಪ್ರೊ| ಬಸವರಾಜ್ ಪಾಟೀಲ್ ನಿರ್ವಹಿಸಿ, ಡಾ| ಬಸವ ಟಿ. ಸ್ವಾಗತಿಸಿ, ಪ್ರೊ| ಅವಿನಾಶ್ ಎಸ್. ವಂದಿಸಿದರು.