Advertisement

ಐದು ವರ್ಷ ಬಳಿಕ ಮುಂಬಯಿಗೆ ಟೆಸ್ಟ್‌ ಆತಿಥ್ಯ

11:10 PM Dec 01, 2021 | Team Udayavani |

ಮುಂಬಯಿ: ಭಾರತ-ನ್ಯೂಜಿಲ್ಯಾಂಡ್‌ ನಡುವಿನ ದ್ವಿತೀಯ ಹಾಗೂ ಅಂತಿಮ ಟೆಸ್ಟ್‌ ಪಂದ್ಯ ಶುಕ್ರವಾರದಿಂದ ಮುಂಬಯಿಯಲ್ಲಿ ನಡೆಯಲಿದೆ. ಇದರೊಂದಿಗೆ 5 ವರ್ಷಗಳ ಬಳಿಕ “ವಾಂಖೇಡೆ ಸ್ಟೇಡಿಯಂ’ಗೆ ಟೆಸ್ಟ್‌ ಕ್ರಿಕೆಟ್‌ ಮರಳಿದಂತಾಗುತ್ತದೆ. ಹಾಗೆಯೇ 33 ವರ್ಷಗಳಷ್ಟು ಸುದೀರ್ಘಾವಧಿಯ ತರುವಾಯ ಭಾರತ-ನ್ಯೂಜಿಲ್ಯಾಂಡ್‌ ಇಲ್ಲಿ ಮುಖಾಮುಖಿ ಆಗುತ್ತಿವೆ.

Advertisement

ಮುಂಬಯಿ ಭಾರತೀಯ ಟೆಸ್ಟ್‌ ಇತಿಹಾಸದ ಪ್ರಥಮ ಕೇಂದ್ರ. ವಾಂಖೇಡೆ ಸೇರಿದಂತೆ ಇಲ್ಲಿ 3 ಸ್ಟೇಡಿಯಂಗಳಿವೆ. 1933-34ರ ಭಾರತ-ಇಂಗ್ಲೆಂಡ್‌ ನಡುವಿನ ಪ್ರಥಮ ಟೆಸ್ಟ್‌ ಪಂದ್ಯಕ್ಕೆ ಸಾಕ್ಷಿಯಾದದ್ದು “ಮುಂಬೈ  ಗ್ರೌಂಡ್‌’. ದ್ವಿತೀಯ ವಿಶ್ವಯುದ್ಧದ ಬಳಿಕ “ಬ್ರೆಬೋರ್ನ್ ಸ್ಟೇಡಿಯಂ’ನಲ್ಲಿ ಟೆಸ್ಟ್‌ ಪಂದ್ಯಗಳು ನಡೆಯಲಾರಂಭಿಸಿದವು. ಇಲ್ಲಿ ಒಟ್ಟು 17 ಪಂದ್ಯಗಳನ್ನು ಆಡಲಾಗಿದೆ.

ವಾಂಖೇಡೆ ಸ್ಟೇಡಿಯಂ’ ಟೆಸ್ಟ್‌ ಕ್ರಿಕೆಟಿಗೆ ತೆರೆದುಕೊಂಡದ್ದು 1975ರಲ್ಲಿ. ಭಾರತ-ವೆಸ್ಟ್‌ ಇಂಡೀಸ್‌ ಇಲ್ಲಿ ಮೊದಲ ಸಲ ಎದುರಾಗಿದ್ದವು. ಇದು 6 ದಿನಗಳ ಟೆಸ್ಟ್‌ ಆಗಿತ್ತು. 201 ರನ್ನುಗಳ ಭಾರೀ ಸೋಲಿನೊಂದಿಗೆ ಭಾರತವಿಲ್ಲಿ ಆಘಾತಕಾರಿ ಆರಂಭ ಪಡೆದಿತ್ತು.

25 ಟೆಸ್ಟ್‌ ಆತಿಥ್ಯ
“ವಾಂಖೇಡೆ ಸ್ಟೇಡಿಯಂ’ನಲ್ಲಿ ಈ ವರೆಗೆ 25 ಟೆಸ್ಟ್‌ ಪಂದ್ಯಗಳನ್ನು ಆಡಲಾಗಿದೆ. ಭಾರತ 11ರಲ್ಲಿ ಜಯ ಸಾಧಿಸಿದ್ದು, ಏಳರಲ್ಲಿ ಸೋಲನುಭವಿಸಿದೆ. ಉಳಿದ 7 ಪಂದ್ಯಗಳು ಡ್ರಾಗೊಂಡಿವೆ. 2016ರಲ್ಲಿ ಇಂಗ್ಲೆಂಡ್‌ ವಿರುದ್ಧ ಇಲ್ಲಿ ಕೊನೆಯ ಸಲ ಟೆಸ್ಟ್‌ ನಡೆದಿತ್ತು.

ಭಾರತ-ನ್ಯೂಜಿಲ್ಯಾಂಡ್‌ ವಾಂಖೇಡೆಯಲ್ಲಿ ಎರಡು ಸಲ ಎದುರಾಗಿವೆ. 1976ರ ಮೊದಲ ಮುಖಾಮುಖಿಯನ್ನು ಭಾರತ 162 ರನ್ನುಗಳ ಅಂತರದಿಂದ ಜಯಿಸಿತ್ತು. ಅನಂತರದ ಮುಖಾಮುಖಿ ಸಾಗಿದ್ದು 1988ರಲ್ಲಿ. ಇಲ್ಲಿ ಭಾರತಕ್ಕೆ 136 ರನ್ನುಗಳ ಸೋಲು ಎದುರಾಗಿತ್ತು.

Advertisement

ಭಾರತ-ಕಿವೀಸ್‌ 1-1
ಸುನೀಲ್‌ ಗಾವಸ್ಕರ್‌ (119) ಮತ್ತು ನ್ಯೂಜಿಲ್ಯಾಂಡಿನ ಜಾನ್‌ ಪಾರ್ಕರ್‌ ಅವರ ಶತಕ (104), ಸಯ್ಯದ್‌ ಕಿರ್ಮಾನಿ ಅವರ ಆಕರ್ಷಕ ಬ್ಯಾಟಿಂಗ್‌ (88), ನಾಯಕ ಬಿಷನ್‌ ಸಿಂಗ್‌ ಬೇಡಿ ಅವರ ಸ್ಪಿನ್‌ ಆಕ್ರಮಣವೆಲ್ಲ 1976ರ ಮುಖಾಮುಖಿಯ ರೋಚಕ ಕ್ಷಣಗಳಾಗಿದ್ದವು. 304 ರನ್‌ ಗುರಿ ಪಡೆದ ಗ್ಲೆನ್‌ ಟರ್ನರ್‌ ಪಡೆ, ಬೇಡಿ ದಾಳಿಗೆ (27ಕ್ಕೆ 5) ತತ್ತರಿಸಿ 141ಕ್ಕೆ ಆಲೌಟ್‌ ಆಗಿತ್ತು.

1988ರಲ್ಲಿ ಕೊನೆಯ ಸಲ ಇತ್ತಂಡಗಳು ಇಲ್ಲಿ ಎದುರಾಗಿದ್ದವು. ನಾಯಕರಾಗಿದ್ದವರು ದಿಲೀಪ್‌ ವೆಂಗ್‌ಸರ್ಕಾರ್‌ ಮತ್ತು ಜಾನ್‌ ರೈಟ್‌. ಮೊದಲ ಇನ್ನಿಂಗ್ಸ್‌ನಲ್ಲಿ ನ್ಯೂಜಿಲ್ಯಾಂಡ್‌, ಭಾರತ ಸಮಬಲದ ಸಾಧನೆಗೈದಿದ್ದವು (236 ಮತ್ತು 234). 282 ರನ್‌ ಗುರಿ ಪಡೆದ ಭಾರತ ಜಾನ್‌ ಬ್ರೇಸ್‌ವೆಲ್‌ (51ಕ್ಕೆ 6) ಮತ್ತು ರಿಚರ್ಡ್‌ ಹ್ಯಾಡ್ಲಿ (39ಕ್ಕೆ 4) ದಾಳಿಗೆ ತತ್ತರಿಸಿ 145ಕ್ಕೆ ಕುಸಿದಿತ್ತು.

ಇದನ್ನೂ ಓದಿ:ಕತ್ರಿನಾ-ವಿಕ್ಕಿ ಮದುವೆ ಆಹ್ವಾನಿತರಿಗೆ ಇದೆಯಂತೆ ಟಫ್ ರೂಲ್ಸ್‌

ಚೇತೇಶ್ವರ್‌ ಪೂಜಾರ ಓಪನಿಂಗ್‌?
ಮುಂಬಯಿ ಟೆಸ್ಟ್‌ ಪಂದ್ಯದಲ್ಲಿ ಚೇತೇಶ್ವರ್‌ ಪೂಜಾರ ಓಪನಿಂಗ್‌ ಬರುವರೇ? ಇಂಥದೊಂದು ಸಾಧ್ಯತೆ ಇದೆ ಎಂಬುದಾಗಿ ತಿಳಿದು ಬಂದಿದೆ. ನಾಯಕ ವಿರಾಟ್‌ ಕೊಹ್ಲಿಗೆ ಜಾಗ ಮಾಡಿಕೊಡುವುದಗೋಸ್ಕರ ಪೂಜಾರ ಅವರಿಗೆ ಭಡ್ತಿ ನೀಡುವುದು, ಒನ್‌ಡೌನ್‌ನಲ್ಲಿ ಶ್ರೇಯಸ್‌ ಅಯ್ಯರ್‌ ಅವರನ್ನು ಆಡಿಸುವುದು ಟೀಮ್‌ ಇಂಡಿಯಾದ ಯೋಜನೆಗಳಲ್ಲೊಂದು ಎನ್ನಲಾಗಿದೆ. ಆಗ ಮಾಯಾಂಕ್‌ ಅಗರ್ವಾಲ್‌ ಅವರನ್ನು ಹೊರಗಿಡಬೇಕಾಗುತ್ತದೆ.

ವೃದ್ಧಿಮಾನ್‌ ಸಾಹಾ ಚೇತರಿಕೆ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ಲಭ್ಯವಾಗಿಲ್ಲ. ಫಿಟ್‌ ಆದರೆ ಸಾಹಾ ಅವರೇ ಕೀಪರ್‌ ಆಗಿ ಮುಂದುವರಿಯಲಿದ್ದಾರೆ. ಇಲ್ಲವಾದರೆ ಈ ಸ್ಥಾನಕ್ಕೆ ಶ್ರೀಕರ್‌ ಭರತ್‌ ಬರಲಿದ್ದಾರೆ.

ಅಷ್ಟೇನೂ ಪರಿಣಾಮ ಬೀರದ ವೇಗಿ ಇಶಾಂತ್‌ ಶರ್ಮ ಸ್ಥಾನ ಉಳಿಸಿಕೊಳ್ಳುವ ಬಗ್ಗೆ ಅನುಮಾನವಿದೆ. ಆಗ ಈ ಸ್ಥಾನ ಮೊಹಮ್ಮದ್‌ ಸಿರಾಜ್‌ ಪಾಲಾಗಲಿದೆ.

ಭಾರತದ ಸಂಭಾವ್ಯ ತಂಡ: ಗಿಲ್‌, ಪೂಜಾರ, ಅಯ್ಯರ್‌, ಕೊಹ್ಲಿ (ನಾಯಕ), ರಹಾನೆ, ಸಾಹಾ/ಭರತ್‌, ಜಡೇಜ, ಅಶ್ವಿ‌ನ್‌, ಪಟೇಲ್‌, ಸಿರಾಜ್‌, ಯಾದವ್‌.

ವಾಂಖೇಡೆ ಟೆಸ್ಟ್‌ ದಾಖಲೆ
-ಅತ್ಯಧಿಕ ಸ್ಕೋರ್‌: 631, ಭಾರತ; ಇಂಗ್ಲೆಂಡ್‌ ವಿರುದ್ಧ (2016)
– ಕನಿಷ್ಠ ಸ್ಕೋರ್‌: 93, ಆಸೀಸ್‌;ಭಾರತ ವಿರುದ್ಧ (2004)
-ಸರ್ವಾಧಿಕ ರನ್‌: 1,122; ಗಾವಸ್ಕರ್‌ (11 ಟೆಸ್ಟ್‌)
– ಸರ್ವಾಧಿಕ ಶತಕ: 5 , ಗಾವಸ್ಕರ್‌ (20 ಇನ್ನಿಂಗ್ಸ್‌)
-ಅತ್ಯಧಿಕ ವೈಯಕ್ತಿಕ ರನ್‌: 242*, ಲಾಯ್ಡ (1975)
-ಸರ್ವಾಧಿಕ ವಿಕೆಟ್‌: 38, ಅನಿಲ್‌ ಕುಂಬ್ಳೆ (7 ಟೆಸ್ಟ್‌)
– ಅತ್ಯುತ್ತಮ ಬೌಲಿಂಗ್‌: 48ಕ್ಕೆ 7, ಇಯಾನ್‌ ಬೋಥಂ (1980) ಹರ್ಭಜನ್‌ (2002, ವಿಂಡೀಸ್‌ ವಿರುದ್ಧ)

ಮಳೆ: ಕ್ರಿಕೆಟಿಗರ ಅಭ್ಯಾಸ ರದ್ದು
ಮಳೆಯಿಂದಾಗಿ ಭಾರತ ಮತ್ತು ನ್ಯೂಜಿಲ್ಯಾಂಡ್‌ ಕ್ರಿಕೆಟಿಗರ ಬುಧವಾರದ ಅಭ್ಯಾಸ ರದ್ದುಗೊಂಡಿತು. ಇದರಿಂದ ದ್ವಿತೀಯ ಟೆಸ್ಟ್‌ ಪಂದ್ಯದ ಸಿದ್ಧತೆಗೆ ಹಿನ್ನಡೆಯಾಗಿದೆ. ಸರಣಿಯ 2ನೇ ಹಾಗೂ ಅಂತಿಮ ಟೆಸ್ಟ್‌ ಪಂದ್ಯ ಶುಕ್ರವಾರದಿಂದ ಇಲ್ಲಿನ “ವಾಂಖೇಡೆ ಸ್ಟೇಡಿಯಂ’ನಲ್ಲಿ ಆರಂಭವಾಗಲಿದೆ.

ಎರಡೂ ತಂಡಗಳು ಬುಧವಾರ ಇಲ್ಲಿ ಮೊದಲ ಸುತ್ತಿನ ಅಭ್ಯಾಸ ನಡೆಸಬೇಕಿತ್ತು. ಆದರೆ ಬೆಳಗ್ಗಿನಿಂದಲೇ ಸುರಿಯಲಾರಂಭಿಸಿದ ಮಳೆಯಿಂದಾಗಿ ಇದು ಸಾಧ್ಯವಾಗಲಿಲ್ಲ ಎಂದು ಬಿಸಿಸಿಐ ತಿಳಿಸಿದೆ. ಪಿಚ್‌ಗೆ ಸಂಪೂರ್ಣ ಹೊದಿಕೆ ಹಾಕಿ ಇಡಲಾಗಿದೆ.

ಕಾನ್ಪುರ ಟೆಸ್ಟ್‌ ಮುಗಿಸಿದ ಎರಡೂ ತಂಡಗಳ ಆಟಗಾರರು ಮಂಗಳವಾರ ಸಂಜೆ ಮುಂಬಯಿಗೆ ಆಗಮಿಸಿದ್ದರು. ಅಭ್ಯಾಸ ಸಾಧ್ಯವಾಗದ ಕಾರಣ ಆಟಗಾರರೆಲ್ಲ ಜಿಮ್‌ನಲ್ಲಿ ವ್ಯಾಯಾಮ ನಡೆಸಿದರು.

Advertisement

Udayavani is now on Telegram. Click here to join our channel and stay updated with the latest news.

Next