Advertisement

ಲಾರ್ಡ್ಸ್‌ನಲ್ಲಿ ಲಾರ್ಡ್‌ ಆಗುವ ಅವಕಾಶ: ಸರಣಿ ಗೆಲುವಿನ ಯೋಜನೆಯಲ್ಲಿ ಭಾರತ

11:29 PM Jul 13, 2022 | Team Udayavani |

ಲಂಡನ್‌: ವಿಶ್ವ ಚಾಂಪಿಯನ್‌ ಖ್ಯಾತಿಯ ಇಂಗ್ಲೆಂಡ್‌ ತಂಡವನ್ನು ಅವರದೇ ನೆಲದಲ್ಲಿ ಇದಕ್ಕಿಂತ ಹೀನಾಯವಾಗಿ ಸೋಲಿಸಲು ಸಾಧ್ಯವೇ ಇಲ್ಲ ಎಂಬ ರೀತಿಯಲ್ಲಿ ಮಂಗಳವಾರ ರಾತ್ರಿ ಓವಲ್‌ ಅಂಗಳದಲ್ಲಿ ಪರಾಕ್ರಮ ಮೆರೆದ ಟೀಮ್‌ ಇಂಡಿಯಾ ಈಗ ಮತ್ತೊಂದು ವಿಜಯಕ್ಕಾಗಿ ಹಾತೊರೆಯುತ್ತಿದೆ.

Advertisement

ಐತಿಹಾಸಿಕ ಲಾರ್ಡ್ಸ್‌ ಅಂಗಳದಲ್ಲಿ ಗುರುವಾರ ದ್ವಿತೀಯ ಏಕದಿನ ಪಂದ್ಯ ಏರ್ಪಡಲಿದೆ. ಇದನ್ನೂ ಅಧಿಕಾರಯುತವಾಗಿ ಗೆದ್ದು ಲಾರ್ಡ್ಸ್‌ನಲ್ಲಿ ಲಾರ್ಡ್‌ ಎನಿಸಿಕೊಳ್ಳುವುದೇ ಭಾರತದ ಗುರಿ. ಆಗ ಸರಣಿಯೂ ರೋಹಿತ್‌ ಪಡೆಯ ಬುಟ್ಟಿಗೆ ಬೀಳಲಿದೆ.

ಓವಲ್‌ನಲ್ಲಿ ಏನಾಯಿತೆಂಬುದು ಗೊತ್ತೇ ಇದೆ. 100 ಓವರ್‌ಗಳ ಆಟ ಕೇವಲ 44 ಓವರ್‌ಗಳಿಗೆ ಫಿನಿಶ್‌! ಭಾರತೀಯ ಕಾಲಮಾನದಂತೆ ನಡು ರಾತ್ರಿ ಒಂದು ಗಂಟೆಗೆ ಮುಗಿಯಬೇಕಿದ್ದ ಪಂದ್ಯ 9.30ಕ್ಕೇ ಸಮಾಪ್ತಿ. ಇಂಗ್ಲೆಂಡಿನ ಹತ್ತೂ ವಿಕೆಟ್‌ ಪತನಗೊಂಡರೆ, ಭಾರತವನ್ನು ರೋಹಿತ್‌ ಶರ್ಮ-ಶಿಖರ್‌ ಧವನ್‌ ಇಬ್ಬರೇ ಸೇರಿಕೊಂಡು ದಡ ಮುಟ್ಟಿಸಿದರು. ಜಸ್‌ಪ್ರೀತ್‌ ಬುಮ್ರಾ ಅತ್ಯಂತ ಘಾತಕ ಬೌಲಿಂಗ್‌ ನಡೆಸಿ ಅರ್ಧ ಡಜನ್‌ ವಿಕೆಟ್‌ ಉಡಾಯಿಸಿದ ಸಾಹಸವನ್ನು ಮರೆಯುವಂತೆಯೇ ಇಲ್ಲ. ಜತೆಗೆ ಮೊಹಮ್ಮದ್‌ ಶಮಿ ಕೂಡ ಪರಿಣಾಮಕಾರಿ ಬೌಲಿಂಗ್‌ ಸಂಘಟಿಸಿದರು. ಕ್ರಿಕೆಟ್‌ ಜನಕರ ನಾಡಿನಲ್ಲಿ ಆಗಾಗ ಒಂದಲ್ಲ ಒಂದು ಐತಿಹಾಸಿಕ ಸಾಧನೆ ಮಾಡುತ್ತಲೇ ಇರುವ ಭಾರತದ ಸಾಹಸಕ್ಕೆ ನೂತನ ಸೇರ್ಪಡೆಯೇ ಈ ಓವಲ್‌ ಪಂದ್ಯ.

ಬಿಗ್‌ ಹಿಟ್ಟರ್‌ಗಳ ಸೊನ್ನೆ…
ಓವಲ್‌ ಪಂದ್ಯದ ಸ್ಕೋರ್‌ಬೋರ್ಡ್‌ನಲ್ಲಿ ಆಂಗ್ಲರ 4 ಸೊನ್ನೆ, ಎರಡಂಕೆಯ ಕೇವಲ 4 ಮೊತ್ತವೇ ಎದ್ದು ಕಾಣುತ್ತದೆ. ಈ ಸೊನ್ನೆ ಸುತ್ತಿ ದವ ರ್ಯಾರೂ ಮಾಮೂಲು ಬ್ಯಾಟರ್‌ಗಳಲ್ಲ… ರಾಯ್‌, ರೂಟ್‌, ಸ್ಟೋಕ್ಸ್‌ ಮತ್ತು ಲಿವಿಂಗ್‌ಸ್ಟೋನ್‌. ಕ್ರೀಸ್‌ ಆಕ್ರಮಿಸಿಕೊಂಡರೆ ಪಂದ್ಯದ ಗತಿ  ಯನ್ನೇ ಬದಲಿಸಲು ಇವರೊಬ್ಬಬ್ಬರೇ ಸಾಕು. ಬರ್ಮಿಂಗ್‌ಹ್ಯಾಮ್‌ ಟೆಸ್ಟ್‌ನಲ್ಲಿ 378 ರನ್‌ ಚೇಸ್‌ ಮಾಡಿ ಹೋದ ಸಾಹಸಿಗರಿವರು. ಆದರೆ ಏಕದಿನದಲ್ಲಿ ಯಾವ ಗುಂಗಿನಲ್ಲಿದ್ದರೋ ತಿಳಿಯದು!

ಇಂಥದೊಂದು ಅತ್ಯಂತ ಹೀನಾಯ ಪ್ರದರ್ಶನ ವರ್ಲ್ಡ್ ಚಾಂಪಿಯನ್‌ ಇಂಗ್ಲೆಂಡಿಗೆ ದೊಡ್ಡ ಕಳಂಕವನ್ನೇ ಮೆತ್ತಿದೆ. ಇದನ್ನು ತೊಳೆದುಕೊಳ್ಳುವುದು ಹೇಗೆ ಎಂಬ ಬಗ್ಗೆ ಇಂಗ್ಲೆಂಡ್‌ ಡ್ರೆಸ್ಸಿಂಗ್‌ ರೂಮ್‌ನಲ್ಲಿ ದೊಡ್ಡ ಮಟ್ಟದ ಚರ್ಚೆಯೇ ನಡೆದಿರಬಹುದು. ಲಾರ್ಡ್ಸ್‌ನಲ್ಲಿ ತಿರುಗಿ ಬೀಳದೆ ಹೋದರೆ ಮತ್ತೂಂದು ಕಳಂಕ ತಪ್ಪಿದ್ದಲ್ಲ. ಸೇಡು ತೀರಿಸಿಕೊಳ್ಳುವ ಸಾಮರ್ಥ್ಯ ಬಟ್ಲರ್‌ ಬಳಗಕ್ಕೆ ಖಂಡಿತ ಇದೆ. ಆದರೆ ಇದು ಸುಲಭವಲ್ಲ.

Advertisement

ಮೊದಲೆರಡು ಪಂದ್ಯಗಳನ್ನು ಗೆದ್ದು ಟಿ20 ಸರಣಿ ವಶಪಡಿಸಿಕೊಂಡ ಭಾರತವೀಗ ಅದೇ ಹಾದಿ ಯಲ್ಲಿದೆ. ಓವಲ್‌ ಜಯಭೇರಿ ಮೂಡಿ ಸಿದ ಸ್ಫೂರ್ತಿ, ಉತ್ಸಾಹ ಇನ್ನೂ ಕೆಲವು ಕಾಲ ಕ್ಕಾಗುವಷ್ಟಿದೆ. 3ನೇ ಟಿ20 ಪಂದ್ಯದಲ್ಲಿ ಇಂಗ್ಲೆಂಡ್‌ ಗೆಲುವಿಗೆ ಮುಖ್ಯ ಕಾರಣ, ಭಾರತ ಮಾಡಿದ ಪ್ರಯೋಗ. ಅಲ್ಲಿ ನಮ್ಮವರ ಬೌಲಿಂಗ್‌ ತೀರಾ ದುರ್ಬಲವಾಗಿತ್ತು. ಇಂಗ್ಲೆಂಡ್‌ ಇದರ ಲಾಭ ವೆತ್ತಿತು, ಅಷ್ಟೇ. ಸದ್ಯ ಏಕದಿನದಲ್ಲಿ ಪ್ರಯೋಗ ನಡೆಯದು.

ವಿರಾಟ್‌ ಕೊಹ್ಲಿ ಅನುಮಾನ
ಭಾರತ ತನ್ನ ಆಡುವ ಬಳಗದಲ್ಲಿ ಬದಲಾವಣೆ ಮಾಡಿಕೊಳ್ಳುವ ಸಾಧ್ಯತೆ ಕಡಿಮೆ. ಅಂದಹಾಗೆ ಓವಲ್‌ನಲ್ಲಿ ರೋಹಿತ್‌-ಧವನ್‌ ಹೊರತುಪಡಿಸಿ ನಮ್ಮ ಬ್ಯಾಟಿಂಗ್‌ ಸರದಿಯಲ್ಲಿ ಯಾರಿದ್ದರು ಎಂಬುದನ್ನು ಅರಿತವರು ಕಡಿಮೆ. “ಗಾಯಾಳು’ ಕೊಹ್ಲಿ ಹೊರಗುಳಿದಿದ್ದರು. ಲಾರ್ಡ್ಸ್‌ನಲ್ಲೂ ಆಡುವ ಸಾಧ್ಯತೆ ಇಲ್ಲ. ಉಳಿದಂತೆ ಅಯ್ಯರ್‌, ಸೂರ್ಯಕುಮಾರ್‌, ಪಂತ್‌ ಮತ್ತು ಪಾಂಡ್ಯ ಬ್ಯಾಟಿಂಗ್‌ ಲೈನ್‌ಅಪ್‌ನಲ್ಲಿ ಕಾಯುತ್ತಿದ್ದರು. ಬೌಲಿಂಗ್‌ ತಾಕತ್ತು ಈಗಾಗಲೇ ಜಗಜ್ಜಾಹೀರಾಗಿದೆ. ಇಲ್ಲಿ ಪರಿವರ್ತನೆ ಖಂಡಿತ ಇಲ್ಲ ಎನ್ನಬಹುದು.

ಆದರೆ ಭಾರತ ಒಂದು ಎಚ್ಚರಿಕೆ ಯಲ್ಲಿರ ಬೇಕು. ಅಕಸ್ಮಾತ್‌ ಓವಲ್‌ನಲ್ಲಿ ಭಾರತಕ್ಕೆ ಮೊದಲು ಬ್ಯಾಟಿಂಗ್‌ ಲಭಿಸಿದರೆ ಏನಾಗುತ್ತಿತ್ತು?ಇಂಗ್ಲೆಂಡ್‌ಗೆ ಆದ ಗತಿಯೇ ನಮಗೂ ಎದು ರಾಗುತ್ತಿತ್ತೇ? ಯೋಚಿಸಬೇಕಾದುದು ಅಗತ್ಯ. ಏಕೆಂದರೆ ಲಾರ್ಡ್ಸ್‌ನಲ್ಲಿ ಯಾರೇ ಟಾಸ್‌ ಗೆದ್ದರೂ ಮೊದಲು ಬೌಲಿಂಗ್‌ ಆಯ್ದುಕೊಳ್ಳುವ ಸಾಧ್ಯತೆಯೇ ಹೆಚ್ಚು. ಭಾರತಕ್ಕೆ ಮೊದಲ ಬ್ಯಾಟಿಂಗ್‌ ಅವಕಾಶ ಲಭಿಸಿದರೆ? ಓವಲ್‌ನಲ್ಲಿ ಕಂಡುಬಂದ ಇಂಗ್ಲೆಂಡಿನ ಮಹಾಪತನ ಎನ್ನು ವುದು ರೋಹಿತ್‌ ಬಳಗಕ್ಕೆ ಪಾಠವೂ ಆಗಬೇಕಿದೆ.

ನಾಟ್‌ವೆಸ್ಟ್‌ ಜಯಭೇರಿಯೂ ಸ್ಫೂರ್ತಿ!
ಲಾರ್ಡ್ಸ್‌ನಲ್ಲಿ ದ್ವಿತೀಯ ಏಕದಿನ ಆಡಲಿಳಿಯುವಾಗ ಪ್ರವಾಸಿ ಭಾರತಕ್ಕೆ ಓವಲ್‌ ಸಾಹಸದೊಂದಿಗೆ ಇನ್ನೂ ಒಂದು ಗೆಲುವು ಸ್ಫೂರ್ತಿ ತುಂಬಲಿದೆ. ಅದೆಂದರೆ ಐತಿಹಾಸಿಕ “ನಾಟ್‌ವೆಸ್ಟ್‌’ ವಿಜಯೋತ್ಸವ!

ಸೌರವ್‌ ಗಂಗೂಲಿ ಸಾರಥ್ಯದ ಭಾರತ ತಂಡ ಯುವರಾಜ್‌ ಸಿಂಗ್‌ ಮತ್ತು ಮೊಹಮ್ಮದ್‌ ಕೈಫ್ ಅವರ ಬ್ಯಾಟಿಂಗ್‌ ಪರಾಕ್ರಮದಿಂದ “ನಾಟ್‌ವೆಸ್ಟ್‌’ ಟ್ರೋಫಿ ಗೆದ್ದು ಬುಧವಾರಕ್ಕೆ ಭರ್ತಿ 20 ವರ್ಷ ತುಂಬಿತು. 2002ರ ಜುಲೈ 13ರಂದು ಭಾರತ 326 ರನ್ನುಗಳ ಬೃಹತ್‌ ಮೊತ್ತವನ್ನು ಬೆನ್ನಟ್ಟಿ 2 ವಿಕೆಟ್‌ಗಳ ಅಸಾಮಾನ್ಯ ಗೆಲುವು ಸಾಧಿಸಿ ಇಂಗ್ಲೆಂಡಿಗೆ ಮರ್ಮಾಘಾತವಿಕ್ಕಿತ್ತು. 146ಕ್ಕೆ 5 ವಿಕೆಟ್‌ ಉರುಳಿಸಿಕೊಂಡು ಸೋಲು ಖಚಿತ ಎಂಬ ಸ್ಥಿತಿಯಲ್ಲಿದ್ದ ಭಾರತದ ಪಾಲಿಗೆ ಯುವರಾಜ್‌ (69)-ಕೈಫ್ (ಅಜೇಯ 87) ಆಪದ್ಬಾಂಧವರಾಗಿ ಮೂಡಿಬಂದಿದ್ದರು. ಗೆಲುವಿನ ಬಳಿಕ ಗಂಗೂಲಿ ಲಾರ್ಡ್ಸ್‌ ಬಾಲ್ಕನಿಯಲ್ಲಿ ಶರ್ಟ್‌ ಕಳಚಿ ಸಂಭ್ರಮಿಸಿದ್ದನ್ನು ಮರೆಯಲಾದೀತೇ!

ಈ ಲಾರ್ಡ್ಸ್‌ ಅಂಗಳದಲ್ಲೇ ಭಾರತ ದ್ವಿತೀಯ ಏಕದಿನ ಪಂದ್ಯ ಆಡಲಿದೆ. ಎರಡು ದಶಕಗಳ ಬಳಿಕ ಟೀಮ್‌ ಇಂಡಿಯಾಕ್ಕೆ ಏನು ಕಾದಿದೆಯೋ ನೋಡೋಣ.

ಸಿಕ್ಸರ್‌ ಏಟು ತಿಂದ ಬಾಲಕಿಗೆ
ಟೆಡ್ಡಿಬೇರ್‌ ಕೊಟ್ಟ ರೋಹಿತ್‌
ಓವಲ್‌ ಏಕದಿನ ಪಂದ್ಯದಲ್ಲಿ ರೋಹಿತ್‌ ಶರ್ಮ ಸಿಕ್ಸರ್‌ ಬಾರಿಸಿದಾಗ ಸ್ಟೇಡಿಯಂನಲ್ಲಿದ್ದ ಮೀರಾ ಎಂಬ 6 ವರ್ಷದ ಪುಟ್ಟ ಬಾಲಕಿಗೆ ಚೆಂಡು ಬಡಿದ ಘಟನೆ ಸಂಭವಿಸಿತು. ಕೂಡಲೇ ಇಂಗ್ಲೆಂಡ್‌ ತಂಡದ ವೈದ್ಯರು ಸ್ಟೇಡಿಯಂಗೆ ಧಾವಿಸಿ ಆ ಬಾಲಕಿಯ ಆರೋಗ್ಯ ಗಮನಿಸಿದರು. ಇದೇನೂ ಗಂಭೀರ ಏಟಲ್ಲ ಎಂಬುದು ಖಾತ್ರಿಯಾಯಿತು. ಪಂದ್ಯದ ಬಳಿಕ ಆ ಬಾಲಕಿಯನ್ನು ಭೇಟಿ ಮಾಡಿದ ರೋಹಿತ್‌ ಶರ್ಮ, ಆಕೆಗೆ ಟೆಡ್ಡಿಬೇರ್‌ ಹಾಗೂ ಚಾಕ್ಲೇಟ್‌ ನೀಡಿ ಕ್ರೀಡಾಸ್ಫೂರ್ತಿ ತೋರಿದರು.

ಇಂದು ದ್ವಿತೀಯ ಏಕದಿನ
ಸ್ಥಳ: ಲಾರ್ಡ್ಸ್‌, ಲಂಡನ್‌
ಆರಂಭ: ಸಂಜೆ 5.30
ಪ್ರಸಾರ: ಸೋನಿ ಸ್ಪೋರ್ಟ್ಸ್

Advertisement

Udayavani is now on Telegram. Click here to join our channel and stay updated with the latest news.

Next