Advertisement

ವಿಶ್ವದ ಮುಂಚೂಣಿಯ ಆರ್ಥಿಕತೆಯತ್ತ ಭಾರತ

05:53 PM Nov 21, 2022 | Team Udayavani |

ಜಾಗತಿಕ ನೆಲೆಯಲ್ಲಿ ಆರ್ಥಿಕ ಸಂಕಷ್ಟದ ಲಕ್ಷಣಗಳು ಗೋಚರಿಸು ತ್ತಿರುವಾಗಲೇ ಭಾರತವು 2027ಕ್ಕೆ ವಿಶ್ವದ ಮೂರನೆಯ ಅತೀ ದೊಡ್ಡ ವಿತ್ತ ವ್ಯವಸ್ಥೆಯಾಗಿ ಹೊರಹೊಮ್ಮಲಿದೆ ಮತ್ತು ಷೇರು ಪೇಟೆ 2030ರ ಹೊತ್ತಿಗೆ ವಿಶ್ವದಲ್ಲಿ ಮೂರನೆಯ ಸ್ಥಾನ ಪಡೆಯಲಿದೆಯೆಂದು ಪ್ರಮುಖ ವಿತ್ತೀಯ ಸಲಹಾ ಸಂಸ್ಥೆ ಮಾರ್ಗನ್‌ ಸ್ಟಾನ್ಲಿ ಅಂದಾಜಿಸಿದೆ. ಜಾಗತಿಕವಾಗಿ ಹೊರಗುತ್ತಿಗೆಯ ಹೆಚ್ಚಳ, ಡಿಜಿಟಲೀಕರಣ ಮತ್ತು ಇಂಧನ ಮೂಲಗಳ ಅವಲಂಬನೆಯಲ್ಲಿ ಅಗುತ್ತಿರುವ ಬದಲಾವಣೆಗಳು ದೇಶದ ಆರ್ಥಿಕತೆಯನ್ನು ಉತ್ತುಂಗಕ್ಕೆ ಕೊಂಡೊಯ್ಯಲಿದೆ ಮತ್ತು 2031ಕ್ಕೆ ದೇಶದ ಜಿಡಿಪಿ ಮೌಲ್ಯ ಹಾಲಿ 3.5 ಟ್ರಿಲಿಯನ್‌ ಡಾಲರ್‌ಗಳಿಂದ 7.1 ಟ್ರಿಲಿಯನ್‌ ಡಾಲರ್‌ಗಳಿಗೇರುವ ಸಾಧ್ಯತೆ ಯಿದೆ ಹಾಗೂ ರಫ್ತು ಕ್ಷೇತ್ರದಲ್ಲಿಯೂ ದಾಖಲೆಯ ಪ್ರಗತಿಯಾಗಲಿದೆಯೆಂಬ ಮುನ್ಸೂಚನೆ ನೀಡಲಾಗಿದೆ. ಒಟ್ಟಾರೆ ಜಾಗತಿಕ ಮಟ್ಟಕ್ಕೆ ಹೋಲಿಸಿದಲ್ಲಿ ಭಾರತದ ಆರ್ಥಿಕ ವ್ಯವಸ್ಥೆ ಆಶಾದಾಯಕವಾಗಿದೆ ಎಂದು ಹೇಳಬಹುದು.

Advertisement

ಕೊರೊನಾ ಸರಿದು ಹೋದರೂ ಅದರ ಪರೋಕ್ಷ ಪರಿಣಾಮ ಮತ್ತು ರಷ್ಯಾ-ಉಕ್ರೇನ್‌ ನಡುವೆ ಯುದ್ಧ ಮುಂದುವರಿದಿರುವುದು ಇಡೀ ವಿಶ್ವದ ಆರ್ಥಿಕತೆಯನ್ನು ನಲುಗಿಸಿದೆ. ವಿಶ್ವದ ವಿವಿಧ ದೇಶಗಳು ಯು.ಎಸ್‌.ನ ಕೇಂದ್ರ ಬ್ಯಾಂಕ್‌ ತೆಗೆದುಕೊಳ್ಳುತ್ತಿರುವ ಕಠಿನ ನಿರ್ಧಾರಗಳ ಪರಿಣಾಮಕ್ಕೆ ತತ್ತರಿಸುತ್ತಿವೆ. ಶಕ್ತಿಶಾಲಿಯಾಗಿರುವ ಯು.ಎಸ್‌. ಡಾಲರ್‌ ಇತರ ದೇಶಗಳ ಕರೆನ್ಸಿಗಳನ್ನು ಅಪಮೌಲ್ಯಗೊಳಿಸುತ್ತಿದ್ದು, ಅಲ್ಲಿನ ಕೇಂದ್ರ ಬ್ಯಾಂಕ್‌ಗಳು ಬಡ್ಡಿದರವನ್ನು ಹೆಚ್ಚಿಸಬೇಕಾದ ಒತ್ತಡದಲ್ಲಿವೆ. ಆದರೆ ರೂಪಾಯಿಯು ಡಾಲರ್‌ ವಿರುದ್ಧ ಸಾರ್ವಕಾಲಿಕ ಕುಸಿತವನ್ನು ದಾಖಲಿಸಿದೆಯಾದರೂ ಇತರ ರಾಷ್ಟ್ರಗಳ ಕರೆನ್ಸಿಗೆ ತುಲನೆ ಮಾಡಿದರೆ ರೂಪಾಯಿ ಕೊಂಚ ಮಟ್ಟಿನ ಸ್ಥಿರತೆಯನ್ನು ಕಾಯ್ದುಕೊಂಡಿದೆ.

ಅಂತಾರಾಷ್ಟ್ರೀಯ ಮಟ್ಟದಲ್ಲಿ ಆರ್ಥಿಕ ಪರಿಸ್ಥಿತಿಗಳು ನಿರಾಶಾ ದಾಯಕವಾಗಿವೆ. ಡಾಲರ್‌ ಮೌಲ್ಯ ಹೆಚ್ಚಳದ ಬಿಸಿ ನಮ್ಮ ದೇಶದ ಸಮಸ್ಯೆ ಮಾತ್ರವಲ್ಲ ಎಲ್ಲ ದೇಶಗಳ ಆರ್ಥಿಕತೆಯ ಮೇಲೂ ತಟ್ಟಿದೆ. ಡಾಲರ್‌ ಮೌಲ್ಯ ಹೆಚ್ಚಲು ಅಮೆರಿಕದ ಫೆಡ್‌ ರಿಸರ್ವ್‌ ಬ್ಯಾಂಕ್‌ ಬಡ್ಡಿ ದರ ಹೆಚ್ಚಿಸಿರುವುದು ಮುಖ್ಯ ಕಾರಣವಾಗಿದೆ. ಈಗ ಡಾಲರ್‌ ಹೊರತುಪಡಿಸಿ ಬೇರೆ ಯಾವ ಕರೆನ್ಸಿಯೂ ಸಶಕ್ತವಾಗಿಲ್ಲ. ಆದ್ದರಿಂದ ಬಂಡವಾಳ ಹೂಡಿಕೆದಾರರು ಡಾಲರ್‌ ಅನ್ನೇ ಅವಲಂಬಿಸುವುದು ಸಹಜ. ಭಾರತದಲ್ಲಿ ವಿದೇಶೀ ಬಂಡವಾಳ ಹೂಡಿಕೆ ಕಡಿಮೆಯಾಗಲು ಇದೂ ಒಂದು ಕಾರಣವಾಗಿದೆ. ಆರ್ಥಿಕತೆಯ ಚಾಲನೆಯಲ್ಲಿ ಬಂಡವಾಳ ಹೂಡಿಕೆಯ ಪ್ರಮಾಣ ಪ್ರಮುಖ ಪಾತ್ರ ವಹಿಸುತ್ತದೆ. ವಿದೇಶೀ ನೇರ ಬಂಡವಾಳವನ್ನು ಆಕರ್ಷಿಸಲು ಕೇಂದ್ರ ಸರಕಾರ ಎಲ್ಲ ಪ್ರಯತ್ನಗಳನ್ನು ಮಾಡುತ್ತಿದ್ದರೆ ಆರ್‌ಬಿಐ ಮಾತ್ರ ದ್ವಂದ್ವದಲ್ಲಿ ಸಿಲುಕಿದೆ.

ಜಾಗತಿಕ ಅನಿಶ್ಚಿತತೆಯಿಂದ ಭಾರತಕ್ಕೆ ಅಪಾಯವಂತೂ ಇದ್ದೇ ಇದೆ. ಡಾಲರ್‌ ಮೌಲ್ಯ ಹೆಚ್ಚುತ್ತಿರುವ ಈ ಸಂದರ್ಭದಲ್ಲಿ ರೂಪಾಯಿಯ ಮೌಲ್ಯ ಕುಸಿಯದಂತೆ ನೋಡಿಕೊಳ್ಳಬೇಕಿದೆ. ರಫ್ತು ಅಧಿಕಗೊಂಡಲ್ಲಿ ಡಾಲರ್‌ ಮೂಲಕ ಹೆಚ್ಚಿನ ವರಮಾನವನ್ನು ಪಡೆಯಬಹುದು ಮತ್ತು ಆಮದನ್ನು ಸಾಧ್ಯವಾದಷ್ಟು ಕಡಿಮೆಗೊಳಿಸಿ ಡಾಲರ್‌ ಬಳಕೆಗೆ ಕಡಿವಾಣ ಹಾಕಬೇಕು. ವಿದೇಶದಿಂದ ಆಮದು ಮಾಡಿಕೊಳ್ಳುವ ವಸ್ತುಗಳನ್ನು ದೇಶದಲ್ಲೇ ಉತ್ಪಾದಿಸಲು ಇನ್ನೂ ಹೆಚ್ಚಿನ ಉತ್ತೇಜನ ನೀಡಬೇಕಿದೆ.

ಹಣದುಬ್ಬರದ ಒತ್ತಡ ಮತ್ತು ಆರ್ಥಿಕ ಬೆಳವಣಿಗೆಗಳಿಗೆ ಆತಂಕಕಾರಿಯಾದ ಜಾಗತಿಕ ಆರ್ಥಿಕ ಪರಿಸ್ಥಿತಿಗಳೇ ಸವಾಲಾಗಿದೆ. ಇದು ನಮ್ಮ ಹಣದುಬ್ಬರ ನಿಯಂತ್ರಣದಲ್ಲಿ ಪ್ರತ್ಯಕ್ಷ ಮತ್ತು ಪರೋಕ್ಷ ಪರಿಣಾಮ ಬೀರಿದೆ. ದೇಶವು ಕಳೆದ 9 ತಿಂಗಳುಗಳಿಂದ ಹಣದುಬ್ಬರದ ನಿಯಂತ್ರಣದ ಗುರಿ ಸಾಧಿಸುವಲ್ಲಿನ ವೈಫ‌ಲ್ಯದ ಬಗ್ಗೆ ಆರ್‌ಬಿಐ ಸರಕಾರಕ್ಕೆ ವರದಿ ಸಲ್ಲಿಸಿದೆ. ಆರ್‌ಬಿಐ ಗವರ್ನರ್‌ ಹಣದುಬ್ಬರ ನಿಯಂತ್ರಣದಲ್ಲಿ ವಿಫ‌ಲವಾಗಿರುವುದನ್ನು ಒಪ್ಪಿಕೊಂಡಿದ್ದಾರೆ ಮತ್ತು ಹಣದುಬ್ಬರ ಏರಿಕೆಗೆ ಅನುಗುಣವಾಗಿ ಬಡ್ಡಿದರ ಏರಿಸದೇ ಆರ್ಥಿಕತೆಗೆ ಬೆಂಬಲ ನೀಡಲಾಗುತ್ತಿದೆ ಎಂದಿದ್ದಾರೆ. ಡಾಲರ್‌-ರೂಪಾಯಿ ದರ ಏರಿಳಿತಕ್ಕಿಂತ ಹಣದುಬ್ಬರ ಮತ್ತು ಬೆಲೆಯೇರಿಕೆ ಸಮಸ್ಯೆಗಳು ದೇಶವನ್ನು ಪ್ರಮುಖವಾಗಿ ಕಾಡುತ್ತಿರುವುದು ಕಳವಳಕಾರಿ ವಿಷಯ. ಹಣದುಬ್ಬರ ಕಡಿಮೆ ಮಾಡಲು ಮಾರ್ಗೋಪಾಯಗಳನ್ನು ಕಂಡುಕೊಳ್ಳಬೇಕಾಗಿದೆ. ಇದೀಗ ಚಿಲ್ಲರೆ ಹಣದುಬ್ಬರವು 5 ತಿಂಗಳ ಅತ್ಯಧಿಕ ಶೇ. 7.41ಕ್ಕೆ ಏರಿಕೆಯಾಗಿದೆ. ಹಣದುಬ್ಬರ ಗರಿಷ್ಠ ಮಟ್ಟದಲ್ಲಿದ್ದರೆ ಖರೀದಿ ಸಾಮರ್ಥ್ಯ ಮತ್ತು ಹೂಡಿಕೆಯ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತದೆ.

Advertisement

ಇಂಧನ ಮತ್ತು ಆಹಾರ ವಸ್ತುಗಳ ಬೆಲೆ ಹೆಚ್ಚಾಗಿರುವುದರ ಪರಿಣಾಮವಾಗಿ ಹಣದುಬ್ಬರ ನಿಯಂತ್ರಣ ಕೈ ಮೀರಿದೆ. ಸದ್ಯ ಹಣದುಬ್ಬರದ ಒತ್ತಡವು ತೀವ್ರವಾಗಿರುವುದರಿಂದ ಹಣದುಬ್ಬರದ ಗುರಿ ನಿಗದಿಪಡಿಸುವುದು ದೊಡ್ಡ ಪರೀಕ್ಷೆಯೇ ಆಗಿದೆ. ದೇಶದ ಗೋಧಿ ದಾಸ್ತಾನು ಇಳಿಮುಖವಾಗಿದ್ದು ಬೆಲೆಯು ಶೇ. 18ರಷ್ಟು ಅಧಿಕಗೊಂಡಿದೆ. ಅತಿವೃಷ್ಟಿಯಿಂದ ಬಾಸುಮತಿ ಅಕ್ಕಿ ಇಳುವರಿ ಕುಂಠಿತವಾಗಿದೆ. ಹಾಲು, ತರಕಾರಿ, ಬೇಳೆಕಾಳುಗಳ ಬೆಲೆ ಅಧಿಕಗೊಂಡಿದೆ. ಪೆಟ್ರೋಲ್‌ ಮತ್ತು ಡೀಸೆಲ್‌ ಬೆಲೆಗಳನ್ನು ಇಳಿಸದ ಹೊರತು ಹಣದುಬ್ಬರ ತಗ್ಗುವುದಿಲ್ಲ. ಇದೀಗ ತೈಲ ಉತ್ಪಾದನೆಯನ್ನು ಕಡಿತಗೊಳಿಸುವ ಒಪೆಕ್‌ ಹಾಗೂ ಮಿತ್ರ ರಾಷ್ಟ್ರಗಳ ನಿರ್ಧಾರವು ಜಾರಿಯಾಗಿದೆ. ಭಾರತ, ಅಮೆರಿಕ ಸಹಿತ ಒಪೆಕ್‌ ತೈಲವನ್ನು ಅವಲಂಬಿಸಿರುವ ಜಗತ್ತಿನ ಬಹುತೇಕ ರಾಷ್ಟಗಳಿಗೆ ಇದರಿಂದ ದೊಡ್ಡ ಮಟ್ಟದ ಹೊಡೆತ ಬೀಳಲಿದೆ. ತೈಲ ಬೆಲೆಗಳಲ್ಲಾಗುವ ಬದಲಾವಣೆಯಿಂದ ಮುಂದಿನ ದಿನಗಳಲ್ಲಿ ಎದುರಾಗಬಹುದಾದ ಆರ್ಥಿಕ ಅನಿಶ್ಚಿತತೆಗಳತ್ತ ನಿಗಾ ಇರಿಸಬೇಕಿದೆ.

ಇದೇ ಸಂದರ್ಭದಲ್ಲಿ ದೇಶದ ನಿರುದ್ಯೋಗ ದರವು ಅಕ್ಟೋಬರ್‌ ತಿಂಗಳಲ್ಲಿ ಶೇ. 7.7ಕ್ಕೆ ಏರಿಕೆಯಾಗಿದೆ. 2022 ಸೆಪ್ಟಂಬರ್‌ನಲ್ಲಿ ಶೇ. 6.43 ರಷ್ಟಿತ್ತು ಎಂದು ಸಿಎಂಐಇ ವರದಿ ಹೇಳಿದೆ. ಇದು ದೇಶದ ಆರ್ಥಿಕ ದೃಷ್ಟಿಯಿಂದ ಹಿತಕರ ಬೆಳವಣಿಗೆಯಲ್ಲ. ಕೋವಿಡ್‌ ಸಂದರ್ಭವನ್ನು ಹೊರತುಪಡಿಸಿದರೆ ದೇಶದ ನಿರುದ್ಯೋಗ ಪ್ರಮಾಣವು ಸಾಕಷ್ಟು ನಿಯಂತ್ರಣದಲ್ಲಿತ್ತು. ಆದರೆ ಈಗ ಒಂದೇ ತಿಂಗಳಿನಲ್ಲಿ ಶೇ. 1.34ರಷ್ಟು ಹೆಚ್ಚಿರುವುದು ಕಳವಳಕಾರಿ.

ಪ್ರಸಕ್ತ ಸನ್ನಿವೇಶದಲ್ಲಿ ದೇಶದ ಆರ್ಥಿಕ ಚಟುವಟಿಕೆಗಳು ಗರಿಗೆದರಿವೆ. ಅಕ್ಟೋಬರ್‌ನಲ್ಲಿ ಜಿಎಸ್‌ಟಿ 1.52 ಲಕ್ಷ ಕೋಟಿ ರೂ. ಸಂಗ್ರಹಣೆ ಯಾಗಿರುವುದು ಜಿಎಸ್‌ಟಿ ಜಾರಿಗೆ ಬಂದ ಅನಂತರದ ಎರಡನೆಯ ಅತೀ ಹೆಚ್ಚಿನ ಮಾಸಿಕ ವರಮಾನ. ಎಪ್ರಿಲ್‌ನಲ್ಲಿ 1.68 ಲಕ್ಷ ಕೋಟಿ ರೂ. ಜಿಎಸ್‌ಟಿ ಸಂಗ್ರಹವಾಗಿತ್ತು. ತೆರಿಗೆಗಳ ಸಮರ್ಥ ನಿರ್ವಹಣೆ ಮತ್ತು ದಕ್ಷತೆಯಿಂದಾಗಿ ಸತತ ಎಂಟು ತಿಂಗಳುಗಳಿಂದ ಜಿಎಸ್‌ಟಿ ಸಂಗ್ರಹ 1.40 ಲಕ್ಷ ಕೋಟಿ ರೂ. ಮೀರಲು ಸಾಧ್ಯವಾಗಿದೆ. ಕೋವಿಡ್‌ ಅನಂತರ ಎಲ್ಲ ವಲಯಗಳೂ ಚೇತರಿಕೆಯ ಹಾದಿಯಲ್ಲಿವೆ. ಭಾರತವು ಸಮೃದ್ಧ ವಿದೇಶೀ ವಿನಿಯಮ ಹೊಂದಿರುವ ಹಿನ್ನಲೆಯಲ್ಲಿ ಸಕಾರಾತ್ಮಕ ಸೂಚಿಗಳಿಂದ ಹಿಂಜರಿತದ ಆತಂಕವಿಲ್ಲ, ಅದಲ್ಲದೆ ಭಾರತದ ವಿದೇಶೀ ಸಾಲದ ಮೊತ್ತವೂ ಕಡಿಮೆ ಇರುವುದರಿಂದ ಆರ್ಥಿಕ ಬಿಕ್ಕಟ್ಟು ಸೃಷ್ಟಿಯಾಗಲಾರದು. “ಮೇಕ್‌ ಇನ್‌ ಇಂಡಿಯಾ’ ಫ‌ಲಪ್ರದವಾಗಿ ಸ್ವಾವಲಂಬನೆಯ ಗುರಿಯತ್ತ ಮುಖ ಮಾಡಿದೆ.

ಇದೇ ಸಂದರ್ಭದಲ್ಲಿ ಕೃಷಿ ಪ್ರಧಾನವಾದ ನಮ್ಮ ಆರ್ಥಿಕ ವ್ಯವಸ್ಥೆ ಸದ್ಯ ದೇಶ ಎದುರಿಸುತ್ತಿರುವ ಜ್ವಲಂತ ಸಮಸ್ಯೆಗಳಿಗೆ ಪರಿಹಾರ ನೀಡುವ ವಿಶ್ವಾಸವನ್ನು ಮೂಡಿಸುತ್ತಿದೆ. ಈ ಬಾರಿಯ ಮುಂಗಾರು ಹಂಗಾಮು ಚೇತರಿಸಿಕೊಂಡಿರುವ ಕಾರಣ ಮತ್ತು ದೇಶದ ಬಹುತೇಕ ಜಲಾಶಯಗಳು ಭರ್ತಿಯಾಗಿರುವುದು ಆರ್ಥಿಕತೆಗೆ ಪೂರಕವಾಗಲಿದೆ.

– ಚೇರ್ಕಾಡಿ ಸಚ್ಚಿದಾನಂದ ಶೆಟ್ಟಿ

Advertisement

Udayavani is now on Telegram. Click here to join our channel and stay updated with the latest news.

Next