Advertisement

ಚೀನ, ತೀವ್ರಗಾಮಿಗಳಿಗೆ ಎಚ್ಚರಿಕೆ ಸಂದೇಶ ರವಾನಿಸಿದ ಭಾರತ

12:02 AM Nov 22, 2021 | Team Udayavani |

ದೇಶದ ಮೊದಲ ವೈರಿ ರಾಷ್ಟ್ರ ಎಂದೇ ಗುರುತಿಸಲ್ಪಟ್ಟಿರುವ ಚೀನದ ಎಲ್ಲ ಷಡ್ಯಂತ್ರಗಳಿಗೆ ತಕ್ಕ ಪ್ರತ್ಯುತ್ತರ ನೀಡಲು ಭಾರತ ಸರ್ವಸನ್ನದ್ಧ ವಾಗಿದೆ. ಎಲ್‌ಎಸಿಯುದ್ದಕ್ಕೂ ಹೆಚ್ಚಿನ ಸಂಖ್ಯೆಯಲ್ಲಿ ಸಶಸ್ತ್ರ ಪಡೆಗಳನ್ನು ಮತ್ತು ಅತ್ಯಾಧುನಿಕ ಶಸ್ತ್ರಾಸ್ತ್ರಗಳನ್ನು ನಿಯೋಜಿಸಲು ನಿರ್ಧರಿಸಿದೆ.

Advertisement

ಗಡಿ ಭಾಗದಲ್ಲಿ ಚೀನ ಸೇನೆ ಸಮರಾಭ್ಯಾಸ, ಗಸ್ತು ಕಾರ್ಯ ಮತ್ತಿತರ ಚಟುವಟಿಕೆಗಳನ್ನು ಹೆಚ್ಚಿಸುವ ಮೂಲಕ ಭಾರತದ ವಿರುದ್ಧ ಸಂಚು ರೂಪಿಸುತ್ತಲೇ ಬಂದಿದೆ. ಇದೀಗ ಚೀನ ಮತ್ತೆ ಅರುಣಾಚಲ ಪ್ರದೇಶದ ಗಡಿ ಭಾಗದಲ್ಲಿ ಸೇನಾ ಗ್ರಾಮಗಳನ್ನು ನಿರ್ಮಿಸಿರುವ ಬಗೆಗೆ ವರದಿಯಾಗಿದೆ. ಅಷ್ಟು ಮಾತ್ರವಲ್ಲದೆ ಹೆಚ್ಚಿನ ಸಂಖ್ಯೆಯಲ್ಲಿ ಸೇನಾ ಪಡೆಗಳನ್ನು ಮತ್ತು ಅತ್ಯಾಧುನಿಕ ಶಸ್ತ್ರಾಸ್ತ್ರಗಳನ್ನು ಎಲ್‌ಎಸಿಯಲ್ಲಿ ನಿಯೋಜಿಸುವ ಮೂಲಕ ಭಾರತದ ವಿರುದ್ಧ ಪರೋಕ್ಷ ದಾಳಿಗೆ ಸಜ್ಜಾಗುತ್ತಿರುವುದು ಬೆಳಕಿಗೆ ಬಂದಿದೆ.

ಈ ಹಿನ್ನೆಲೆಯಲ್ಲಿ ಭಾರತ ಕೂಡ ಚೀನಕ್ಕೆ ಸಡ್ಡು ಹೊಡೆಯುವ ನಿಟ್ಟಿನಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ತನ್ನ ಸೇನಾ ಪಡೆಗಳನ್ನು ನಿಯೋಜಿಸಿರುವುದೇ ಅಲ್ಲದೆ ಗಡಿಯುದ್ದಕ್ಕೂ ತೀವ್ರ ಕಟ್ಟೆಚ್ಚರ ವಹಿಸಿದೆ. ಇದರ ಜತೆಯಲ್ಲಿ ಸದ್ಯದಲ್ಲಿಯೇ ಅಂದರೆ ಮುಂದಿನ ವರ್ಷದ ಆರಂಭದಲ್ಲಿ ಎಲ್‌ಎಸಿಯಲ್ಲಿ ಲಡಾಖ್‌ ಮತ್ತು ಅರುಣಾಚಲ ಪ್ರದೇಶದಲ್ಲಿ ರಷ್ಯಾ ನಿರ್ಮಿತ ಅತ್ಯಾಧುನಿಕ ಎರಡು ಎಸ್‌-400 ಕ್ಷಿಪಣಿ ನಿರೋಧಕ ವ್ಯವಸ್ಥೆಯನ್ನು ನಿಯೋಜಿಸುವ ನಿರ್ಧಾರ ಕೈಗೊಂಡಿದೆ.

ತನ್ನ ಆಪ್ತ ರಾಷ್ಟ್ರಗಳಲ್ಲೊಂದಾಗಿರುವ ರಷ್ಯಾದಿಂದ ಭಾರತ ಎಸ್‌-400 ಕ್ಷಿಪಣಿ ನಿರೋಧಕ ವ್ಯವಸ್ಥೆಯನ್ನು ಖರೀದಿಸಲಿದ್ದು ಈಗಾಗಲೇ ಇದರ ಒಂದೊಂದೇ ಉಪಕರಣಗಳು ಭಾರತಕ್ಕೆ ಪೂರೈಕೆಯಾಗ ತೊಡಗಿವೆ. ಸದ್ಯದಲ್ಲಿಯೇ ಅತ್ಯಾಧುನಿಕ ರೆಡಾರ್‌ಗಳು ಭಾರತ ತಲು ಪಲಿವೆ. ಸರಿಸುಮಾರು 400 ಕಿ.ಮೀ. ಪ್ರದೇಶದವರೆಗೂ ವಾಯು ದಾಳಿಯ ಮೇಲೆ ನಿಗಾ ಇರಿಸುವುದರ ಜತೆಯಲ್ಲಿ ಪ್ರತಿದಾಳಿ ನಡೆಸುವ ಸಾಮರ್ಥ್ಯವನ್ನು ಎಸ್‌-400 ಕ್ಷಿಪಣಿ ನಿರೋಧಕ ವ್ಯವಸ್ಥೆ ಹೊಂದಿದೆ.

ಇದನ್ನೂ ಓದಿ:ಪೊಲೀಸರ ಮೇಲೆ ಹಲ್ಲೆಗೆ ಯತ್ನ : ರೌಡಿಶೀಟರ್‌ ಬಂಧನ

Advertisement

ಏತನ್ಮಧ್ಯೆ ಭಾರತದ ಈಶಾನ್ಯ ರಾಜ್ಯಗಳಲ್ಲಿ ಕೆಲವು ತಿಂಗಳುಗಳಿಂದೀಚೆಗೆ ಸ್ಥಳೀಯ ಬಂಡುಕೋರ ಸಂಘಟನೆಗಳು ಮತ್ತೆ ಸಕ್ರಿಯವಾಗಿರುವ ಹಿನ್ನೆಲೆಯಲ್ಲಿ ಸರಕಾರ ಈ ಬೆಳವಣಿಗೆಯನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಿದೆ. ಈ ಹಿಂದೆ ಪರಿಸ್ಥಿತಿ ಸಹಜ ಸ್ಥಿತಿಗೆ ಮರಳುತ್ತಿರುವ ಹಿನ್ನೆಲೆಯಲ್ಲಿ ಕೇಂದ್ರ ಸರಕಾರ ಈ ರಾಜ್ಯಗಳಲ್ಲಿ ನಿಯೋಜಿಸಲಾಗಿದ್ದ ಸೇನಾ ಪಡೆಗಳನ್ನು ಹಂತಹಂತವಾಗಿ ವಾಪಸು ಕರೆಸಿಕೊಳ್ಳಲು ನಿರ್ಧರಿಸಿತ್ತು. ಆದರೆ ವಾರದ ಹಿಂದೆ ಮಣಿಪುರದಲ್ಲಿ ಅಸ್ಸಾಂ ರೈಫ‌ಲ್ಸ್‌ ಯೋಧರ ಮೇಲೆ ಬಂಡುಕೋರ ಸಂಘಟನೆಗಳು ಭೀಕರ ದಾಳಿ ನಡೆಸಿದ್ದರಿಂದ ಮತ್ತೆ ಈ ರಾಜ್ಯಗಳಲ್ಲಿ ಹೆಚ್ಚುವರಿ ಸೇನಾಪಡೆಗಳನ್ನು ನಿಯೋಜಿಸಲು ತೀರ್ಮಾನಿಸಲಾಗಿದೆ.

ಇದೇ ವೇಳೆ ದೇಶದ ಹಲವೆಡೆ ನಕ್ಸಲ್‌ ಚಟುವಟಿಕೆಗಳು ಕೂಡ ಹೆಚ್ಚಳವಾಗಿದೆ. ಸರಕಾರದ ಬಿಗು ನಿಲುವಿನಿಂದಾಗಿ ಕಳೆದ ಕೆಲವು ವರ್ಷಗಳಿಂದ ದೇಶದಲ್ಲಿ ನಕ್ಸಲ್‌ ಮತ್ತು ಇತರ ಬಂಡುಕೋರ ಸಂಘಟನೆಗಳ ಚಟುವಟಿಕೆಗಳು ಕ್ಷೀಣಿಸಿದ್ದವು. ಆದರೆ ಇದೀಗ ಈ ಸಂಘಟನೆಗಳು ಮತ್ತೆ ಬಾಲ ಬಿಚ್ಚಲಾರಂಭಿಸಿದ್ದು ಭದ್ರತಾ ಪಡೆಗಳು, ಆಡಳಿತ ವ್ಯವಸ್ಥೆ ಮತ್ತು ಸ್ಥಳೀಯ ನಾಗರಿಕರ ಸುರಕ್ಷೆಗೆ ಅಪಾಯಕಾರಿಯಾಗಿ ಪರಿಣಮಿಸಿವೆ. ಈ ಸಂಘಟನೆಗಳಿಗೆ ಪರೋಕ್ಷವಾಗಿ ಚೀನ ಮತ್ತು ಪಾಕಿಸ್ಥಾನ ಬೆಂಬಲ ನೀಡುತ್ತಿರುವುದು ಸರಕಾರದ ಗಮನಕ್ಕೂ ಬಂದಿದೆ.

ಈ ಎಲ್ಲ ರಾಷ್ಟ್ರ ವಿರೋಧಿ ಚಟುವಟಿಕೆಗಳನ್ನು ಮೊಳಕೆಯಲ್ಲಿಯೇ ಹೊಸಕಿ ಹಾಕಲು ಕೇಂದ್ರ ಸರಕಾರ ತೀರ್ಮಾನಿಸಿದೆ. ದೇಶದ ಸಮಗ್ರತೆ, ಸಾರ್ವಭೌಮತೆ ಮತ್ತು ಶಾಂತಿಗೆ ಧಕ್ಕೆ ತರುವಂತಹ ಕೃತ್ಯಗಳನ್ನು ಸಹಿಸುವ ಪ್ರಶ್ನೆಯೇ ಇಲ್ಲ ಎಂದು ಕೇಂದ್ರ ಸರಕಾರ ಘೋಷಿಸುವ ಮೂಲಕ ಎಲ್ಲ ತೀವ್ರಗಾಮಿ ಸಂಘಟನೆಗಳಿಗೆ ಎಚ್ಚರಿಕೆಯ ಸಂದೇಶ ರವಾನಿಸಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next