Advertisement

ಐಟಿ ಕ್ಷೇತ್ರದಲ್ಲಿ ಭಾರತ ವಿಶ್ವದಲ್ಲೇ ಅಗ್ರಮಾನ್ಯ; ಸಚಿವ ರಾಜೀವ್‌ ಚಂದ್ರಶೇಖರ್‌

05:51 PM Nov 26, 2022 | Team Udayavani |

ದಾವಣಗೆರೆ: ಜಾಗತಿಕ ಮಾಹಿತಿ ತಂತ್ರಜ್ಞಾನ, ಡಿಜಿಟಲ್‌ ಹಾಗೂ ಕೃತಕ ಬುದ್ಧಿಮತ್ತೆಯ ಪಾಲುದಾರಿಕೆಯಲ್ಲಿ ಭಾರತ ಅಗ್ರಮಾನ್ಯ ರಾಷ್ಟ್ರವಾಗಿ ಬೆಳೆದಿದೆ. ದೇಶದ ಯುವಕರು ಅಭಿವೃದ್ಧಿಪಡಿಸಿದ ತಂತ್ರಜ್ಞಾನ ಆಧಾರಿತ ಉತ್ಪನ್ನಗಳನ್ನು ಇಂದು ವಿದೇಶಗಳಿಗೆ ರಫ್ತು ಆಗುತ್ತಿದೆ ಎಂದು ಕೇಂದ್ರ ಸರ್ಕಾರದ ಎಲೆಕ್ಟ್ರಾನಿಕ್ಸ್‌ ಮತ್ತು ಮಾಹಿತಿ ತಂತ್ರಜ್ಞಾನ ಕೌಶಲ್ಯಾಭಿವೃದ್ಧಿ ಹಾಗೂ ಉದ್ಯಮಶೀಲತೆ ರಾಜ್ಯ ಖಾತೆ ಸಚಿವ ರಾಜೀವ್‌ ಚಂದ್ರಶೇಖರ್‌ ಹೇಳಿದರು.

Advertisement

ಇಲ್ಲಿಯ ಜಿ.ಎಚ್‌.ಪಾಟೀಲ್‌ ನಗರದ ಕರ್ನಾಟಕ ಮುಕ್ತ ವಿಶ್ವವಿದ್ಯಾಲಯದಲ್ಲಿ ಪ್ರಾದೇಶಿಕ ಕೇಂದ್ರದಲ್ಲಿ ಪ್ರಾರಂಭಿಸಿರುವ ಸಾಫ್ಟ್‌ವೇರ್‌ ಟೆಕ್ನಾಲಜಿ ಪಾರ್ಕ್ಸ್ ಆಫ್‌ ಇಂಡಿಯಾ ಉಪಕೇಂದ್ರವನ್ನು ಶುಕ್ರವಾರ ವರ್ಚುವಲ್‌ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು.

ಭಾರತ ಇಂದು ಬೇರೆ ರಾಷ್ಟ್ರಗಳು ಅಭಿವೃದ್ಧಿಪಡಿಸಿದ ತಂತ್ರಜ್ಞಾನ ಬಳಸುವ ರಾಷ್ಟ್ರವಾಗಿ ಉಳಿದಿಲ್ಲ. ಯುವಜನತೆಯ ಆವಿಷ್ಕಾರಗಳ ಫಲವಾಗಿ ನಮ್ಮ ತಂತ್ರಜ್ಞಾನ ವಿದೇಶಗಳಿಗೆ ದೊಡ್ಡ ಪ್ರಮಾಣದಲ್ಲಿ ರಫ್ತಾಗುತ್ತಿದೆ. ಕಳೆದ ನಾಲ್ಕೈದು ವರ್ಷಗಳಲ್ಲಿ ಭಾರತದ ಆರ್ಥಿಕತೆಯೂ ವೇಗವಾಗಿ ಬೆಳೆಯುತ್ತಿದೆ. 104ಯುನಿಕಾರ್ನ್ ಕಂಪನಿಗಳು, 75 ಸಾವಿರ ಸ್ಟಾರ್ಟ್‌ ಅಪ್‌ ಗಳು ಉದ್ದಿಮೆಗಳು ಸ್ಥಾಪಿಸಲ್ಪಟ್ಟಿವೆ. ದೇಶದಲ್ಲಿ ಡಿಜಿಟಲ್‌ಉದ್ದಿಮೆಗಳು ಇನ್ನೂ ಹೆಚ್ಚಾಗಲಿವೆ. ದಾವಣಗೆರೆ ಯುವ ಜನತೆ ಎಸ್‌ಟಿಪಿಐ ಉಪಕೇಂದ್ರ ಬಳಸಿಕೊಂಡು ನೂತನ ಸ್ಟಾರ್ಟ್‌ ಅಪ್‌ ಗಳನ್ನು ತೆರೆಯಬೇಕು ಎಂದರು.

ನಮ್ಮ ದೇಶದಲ್ಲಿ 2014ರಲ್ಲಿ ಶೇ. 92ರಷ್ಟು ಮೊಬೈಲ್‌ ಗಳನ್ನು ಆಮದು ಮಾಡಿಕೊಳ್ಳಲಾಗುತ್ತಿತ್ತು. ಇಂದು ದೇಶದ ಬಳಸುತ್ತಿರುವ ಶೇ.97ರಷ್ಟು ಮೊಬೈಲ್‌ಗ‌ಳು ಭಾರತದಲ್ಲೇ ಉತ್ಪಾದನೆಯಾಗುತ್ತಿವೆ. 2014ರಲ್ಲಿ ಮೊಬೈಲ್‌ಗ‌ಳ ರಫ್ತು ಶೂನ್ಯವಾಗಿತ್ತು. ಇಂದು 72ಸಾವಿರ ಕೋಟಿ ರೂ. ಮೊತ್ತದ ಮೊಬೈಲ್‌ ರಪು¤ ಮಾಡಲಾಗುತ್ತಿದ್ದು ಇದರಿಂದ ಮೇಡ್‌ ಇನ್‌ ಇಂಡಿಯಾ ಮೊಬೈಲ್‌ಗ‌ಳು ಯೂರೋಪ್‌, ಅಮೆರಿಕಾ, ಆಫ್ರಿಕಾ ಖಂಡಗಳಿಗೆ ರಫ್ತಾಗುತ್ತಿವೆ ಎಂದು
ತಿಳಿಸಿದರು. ಭಾರತದ ಯುವಜನರು ಸ್ಥಾಪಿಸಿರುವ ಸ್ಟಾರ್ಟ್‌ ಅಪ್‌ಗ್ಳು ತಮ್ಮ ಸಂಶೋಧನೆ ಹಾಗೂ ಸಾಮರ್ಥ್ಯಗಳಿಂದ ಜಾಗತಿಕ ಮನ್ನಣೆಗಳಿಸಿವೆ.

ನವಯುವ ಡಿಜಿಟಲ್‌ ಉದ್ದಿಮೆದಾರ ಕನಸಿಗೆ ಇಂಬು ಕೊಡುವ ನಿಟ್ಟಿನಲ್ಲಿ ದಾವಣಗೆರೆ ನಗರದಲ್ಲಿ ಎಸ್‌ಟಿಪಿಐ ಕೇಂದ್ರ ಸ್ಥಾಪಿಸಲಾಗಿದೆ. ಇದನ್ನು ಸದುಪಯೋಗಪಡಿಸಿಕೊಂಡು ಯುವ ಜನರು ತಂತ್ರಜ್ಞಾನ ಆಧಾರಿತ ಡಿಜಿಟಲ್‌ ಉತ್ಪನ್ನಗಳ ತಯಾರಿಕೆಯಲ್ಲಿ ಪ್ರಗತಿ ಸಾಧಿಸಬೇಕು ಎಂದರು. ಸಂಸದ ಜಿ.ಎಂ. ಸಿದ್ದೇಶ್ವರ ಮಾತನಾಡಿ, ಮಾಹಿತಿ ತಂತ್ರಜ್ಞಾನ ಮತ್ತು ಮಾಹಿತಿ ತಂತ್ರಜ್ಞಾನದ ಉದ್ದಿಮೆದಾರರನ್ನು ಉತ್ತೇಜಿಸಲು ನಗರದಲ್ಲಿ ಎಸ್‌ ಟಿಪಿಐ ಉಪಕೇಂದ್ರ ಸ್ಥಾಪಿಸಲಾಗಿದೆ. ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ಸಂಶೋಧನೆ ಹಾಗೂ ಅಭಿವೃದ್ಧಿ, ಅನ್ವೇಷಣೆ, ಸ್ಟಾರ್ಟ್‌ಅಪ್‌ಗ್ಳನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಈ ಕೇಂದ್ರ ಸಹಕಾರಿಯಾಗಲಿದೆ. ನಗರ ಹಾಗೂ ಸುತ್ತಲಿನ ಜಿಲ್ಲೆಗಳಲ್ಲಿರುವ ಎಂಜಿನೀಯರಿಂಗ್‌ ಕಾಲೇಜಿನ ವಿದ್ಯಾರ್ಥಿಗಳಿಗೆ ತರಬೇತಿ ಹಾಗೂ ಸ್ವಉದ್ಯೋಗಕ್ಕೂ ಸಹಕಾರಿಯಾಗಲಿದೆ ಎಂದರು.

Advertisement

ಕಟ್ಟಡ ಅನುದಾನಕ್ಕೆ ಮನವಿ: ಎಸ್‌ಟಿಪಿಐ ಕಟ್ಟಡಕ್ಕಾಗಿ ದಾವಣಗೆರೆ ಹರಿಹರ ಮಧ್ಯೆ ದೊಗ್ಗಳ್ಳಿ ರೇಲ್ವೆ ಜಂಕ್ಷನ್‌ ಬಳಿ ಜಮೀನು ಗುರುತಿಸಲಾಗಿದೆ. ಶೀಘ್ರ ಜಮೀನು ಮಂಜೂರು ಮಾಡಲಾಗುವುದು. ಉಪಕೇಂದ್ರದ ಕಟ್ಟಡಕ್ಕೆ ಬೇಕಾದ ಅಗತ್ಯ ಅನುದಾನವನ್ನು ಕೂಡಲೇ ಬಿಡುಗಡೆಗೊಳಿಸಿ ತಮ್ಮ ಅವಧಿಯಲ್ಲೇ ಕಟ್ಟಡವನ್ನೂ ಉದ್ಘಾಟಿಸಬೇಕು ಎಂದು ಸಂಸದರು, ಇದೇ ಸಂದರ್ಭದಲ್ಲಿ ಸಚಿವ ರಾಜೀವ್‌ ಚಂದ್ರಶೇಖರ್‌ ಅವರನ್ನು ಮನವಿ ಮಾಡಿದರು.

ನಗರಾಭಿವೃದ್ಧಿ ಹಾಗೂ ಜಿಲ್ಲಾ ಉಸ್ತವಾರಿ ಸಚಿವ ಬಿ.ಎ. ಬಸವರಾಜ ಹಾಗೂ ಐಟಿ, ಬಿಟಿ, ಕೌಶಲ್ಯಾಭಿವೃದ್ಧಿ ಮತ್ತು ತರಬೇತಿ, ಕೈಗಾರಿಕೆ ವಾಣಿಜ್ಯ ಇಲಾಖೆ ರಾಜ್ಯ ಸರ್ಕಾರದ ಪ್ರಧಾನ ಕಾರ್ಯದರ್ಶಿ ಡಾ| ಇ.ವಿ. ರಮಣರೆಡ್ಡಿ ಮಾತನಾಡಿದರು. ನಗರದ ಮೂರು ಸ್ಟಾರ್ಟ್‌ ಅಪ್‌ ಕಂಪನಿಗಳಿಗೆ ಎಸ್‌ಟಿಪಿಐ ವತಿಯಿಂದ ನೋಂದಣಿ ಹಾಗೂ ಸ್ಥಳಾವಕಾಶದ ಪ್ರಮಾಣಪತ್ರ ವಿತರಿಸಲಾಯಿತು.

ಶಾಸಕ ಎಸ್‌.ಎ. ರವೀಂದ್ರನಾಥ್‌, ಮಹಾನಗರ ಪಾಲಿಕೆ ಮೇಯರ್‌ ಆರ್‌.ಜಯಮ್ಮ ಗೋಪಿನಾಯ್ಕ, ಉಪಮೇಯರ್‌ ಗಾಯತ್ರಿಬಾಯಿ, ಧೂಡಾ ಅಧ್ಯಕ್ಷ ಎ.ವೈ. ಪ್ರಕಾಶ್‌, ಕೇಂದ್ರ ಸರ್ಕಾರದ ಎಲೆಕ್ಟ್ರಾನಿಕ್ಸ್‌ ಮತ್ತು ಮಾಹಿತಿ ತಂತ್ರಜ್ಞಾನ ಇಲಾಖೆಯ ಕಾರ್ಯದರ್ಶಿ ಅಖೀಲೇಶಕುಮಾರ್‌ ಶರ್ಮಾ, ಕರ್ನಾಟಕ ರಾಜ್ಯ ಮುಕ್ತ ವಿಶ್ವ ವಿದ್ಯಾಲಯದ ಉಪಕುಲಪತಿ ಡಾ.ಬಿ.ಶರಣಪ್ಪ ಹಲಸೆ, ಇನ್ವೆಸ್ಟ್‌ ದಾವಣಗೆರೆ ಸ್ಥಾಪಕ ನಾಗರಾಜ ರೆಡ್ಡಿ, ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next