Advertisement

UV Fusion: ಭಾರತ ಜಗತ್ತಿನ ಅತೀ ದೊಡ್ಡ ಸ್ನೇಹ ಸಾಮ್ರಾಜ್ಯ

04:43 PM Aug 07, 2023 | Team Udayavani |

ಸ್ನೇಹ ಅನ್ನುವುದು ಜಗತ್ತಿನ ಅತ್ಯಂತ ಪವಿತ್ರವಾದ ಸಂಬಂಧ, ಸುಂದರವಾದ ಬಾಂಧವ್ಯ ಅಂತೆಲ್ಲಾ ಸಾಲು ಸಾಲು ನುಡಿಚಿತ್ರಗಳನ್ನು ಓದುತ್ತೇವೆ. ಹೌದು, ಸ್ನೇಹ ಒಂದು ಮಧುರ ಭಾಂದವ್ಯ. ಅದು ಜಗತ್ತಿನ ಅತ್ಯಂತ ಶ್ರೇಷ್ಠ ವ್ಯವಸ್ಥೆ. ಇವತ್ತು ಜಗತ್ತಿನಾದ್ಯಂತ ಫ್ರೆಂಡ್‌ ಶಿಪ್‌ ಡೇ ಆಚರಿಸುತ್ತೇವೆ. ಆದರೆ ಭಾರತೀಯರಾದ ನಾವು ಸಾವಿರಾರು ವರ್ಷಗಳ ಹಿಂದೆಯೇ ಸ್ನೇಹಕ್ಕೆ ನೀಡಿದ ಗೌರವ, ಮರ್ಯಾದೆ ಅದು ಜಗತ್ತಿನ ಜನರು ಕಂಡು ಕೇಳರಿಯದ್ದು.

Advertisement

ಭಾರತದಲ್ಲಿ ಸ್ನೇಹ ಅಂದಾಗ ಸಾಲು ಸಾಲು ಉದಾಹರಣೆಗಳು ನಮ್ಮ ಕಣ್ಣ ಮುಂದೆ ಬರುತ್ತವೆ. ಮರ್ಯಾದಾ ಪುರುಷೋತ್ತಮ ಶ್ರೀ ರಾಮಚಂದ್ರ ಮತ್ತು ಗುಹ, ರಾಮ ಮತ್ತು ಸುಗ್ರೀವ, ರಾಮ ಮತ್ತು ಆಂಜನೇಯ, ಶ್ರೀಕೃಷ್ಣ ಮತ್ತು ಕುಚೇಲ, ಕೃಷ್ಣ ಮತ್ತು ಸುಧಾಮ, ಕೃಷ್ಣ ಮತ್ತು ಅರ್ಜುನ, ದುರ್ಯೋಧನ ಮತ್ತು ಕರ್ಣಒಂದೇ ಎರಡೇ. ಸ್ನೇಹಕ್ಕಾಗಿ ತಮ್ಮ ಸರ್ವಸ್ವವನ್ನೂ ಅರ್ಪಿಸಿದವರಿಂದ ಹಿಡಿದು ಆ ಸ್ನೇಹವನ್ನು ಉಳಿಸಿಕೊಳ್ಳಲು ತಮ್ಮನ್ನು ತಾವೇ ಅರ್ಪಿಸಿಕೊಂಡವರವರೆಗೆ ಭಾರತದ ಸ್ನೇಹ ಪರಂಪರೆ ಅತ್ಯಂತ ಶ್ರೇಷ್ಠವಾದದ್ದು.

ಅಯೋಧ್ಯೆಯ ಚಕ್ರವರ್ತಿ ಶ್ರೀರಾಮ, ಸಾಮಾನ್ಯ ಅನ್ನುವ ಅಂಬಿಗ ಗುಹನನ್ನು ತನ್ನೆರಡೂ ಬಾಹುಗಳಿಂದ ಅಪ್ಪಿ ಹಿಡಿಯುವಾಗ ಸ್ನೇಹದ ಪರಾಕಾಷ್ಟೆ ಕಾಣುತ್ತದೆ. ಅಲ್ಲಿ ರಾಜ, ಪ್ರಜೆ, ಮೇಲ್ಜಾತಿ ಕೀಳ್ಜಾತಿ ಅನ್ನುವ ಯಾವ ಭಾವವೂ ಇರೋದಿಲ್ಲ. ಅಲ್ಲಿರುವುದು ಕೇವಲ ಅಚಲವಾದ ಪ್ರೀತಿ ಮಾತ್ರ. ರಾಮನಿಗೆ ಬೇಕಾಗಿದ್ದದ್ದು ತನ್ನ ಮಡದಿಯನ್ನು ಮರಳಿ ಪಡೆಯಲು ಸಹಾಯ ಅಷ್ಟೇ. ಅದನ್ನು ಯಾರೂ ಮಾಡಬಹುದಿತ್ತು. ರಾವಣನನ್ನು ಕ್ಷಣ ಮಾತ್ರದಲ್ಲಿ ಸೋಲಿಸಿ ಸೀತೆಯನ್ನು ಕರೆತರುವ ಸಾಮರ್ಥ್ಯ ವಾಲಿಗೆ ಇತ್ತು. ಆದರೆ ಸುಗ್ರೀವನ ಜತೆಗಿನ ಸ್ನೇಹಕ್ಕಾಗಿ ರಾಮ ಸುಗ್ರೀವನ ಜೊತೆಗೆ ನಿಂತ. ಅಲ್ಲಿ ರಾಮನಿಗೆ ತನ್ನ ಅವಶ್ಯಕತೆಗಿಂತ ಸ್ನೇಹಿತನಿಗೆ ನೀಡಿದ ಮಾತು ಮುಖ್ಯವಾಗಿತ್ತು.

ಪ್ರಸ್ತುತ ಸಮಾಜದಲ್ಲಿ ಬಾಲ್ಯದ ಸ್ನೇಹಿತರು ಅಂದರೆ ಅವರು ಬಾಲ್ಯಕ್ಕೆ ಮಾತ್ರ ಸೀಮಿತ. ನಮ್ಮ ಸ್ನೇಹಿತರು ನಮ್ಮ ಅಂತಸ್ತು, ಘನತೆಗೆ ಸರಿ ಹೊಂದಬೇಕು ಎಂದು ಬಯಸುವ ನಾವೆಲ್ಲಿದ್ದೇವೆ?! ಅನೇಕ ವರ್ಷಗಳ ಕಾಲ ಸಂಪರ್ಕವೇ ಇಲ್ಲದೆ ಹೋದರೂ ತಾನೊಂದು ಸಾಮ್ರಾಜ್ಯದ ಚಕ್ರಾ ಧಿಪತಿಯಾದರೂ ಇಂದೂ ಬಡ ಬ್ರಾಹ್ಮಣನಾಗಿಯೇ ಇದ್ದ ಬಾಲ್ಯದ ಪ್ರಾಣಸ್ನೇಹಿತ ಸುಧಾಮ ಕೊಟ್ಟ ಒಂದು ಹಿಡಿ ಅವಲಕ್ಕಿ ಶ್ರೀಕೃಷ್ಣನಿಗೆ ಪರಮಶ್ರೇಷ್ಠವಾದ ಮೃಷ್ಠಾನ್ನವಾಗುತ್ತದೆ. ಕಾರಣ ಅಲ್ಲಿ ಇದ್ದದ್ದು ನಿಷ್ಕಲ್ಮಷವಾದ ಸ್ನೇಹ ಮಾತ್ರವೇ ಹೊರತು ಯಾವ ಅಧಿಕಾರ ಅಂತಸ್ತು ಸಹ ಅಲ್ಲ…

ನಾವು ನೀನೇನು ಚಿಂತೆ ಮಾಡ್ಬೇಡ ನಿನಗಾಗಿ ಜೀವ ಬೇಕಾದ್ರು ಕೊಡ್ತೇನೆ ಅಂತೆಲ್ಲಾ ಹೇಳಿ ಸ್ನೇಹಿತನ ಅವಶ್ಯಕತೆಗಾಗುವಾಗ ಇಲ್ಲ ಬ್ರೊ ಸ್ವಲ್ಪ ಕಷ್ಟ ಮುಂದಿನಸಲ ಅಂತ ಜಾರಿ ಬಿಡುತ್ತೇವೆ. ಆದರೆ ಶ್ರೀ ಕೃಷ್ಣ ಕರ್ಣನಿಗೆ ಅವನ ಜನ್ಮ ರಹಸ್ಯವನ್ನು ತಿಳಿಸಿ ನೀನು ನಿನ್ನ ಅಣ್ಣ ತಮ್ಮಂದಿರನ್ನು ಸೇರಿಕೋ ಅವರ ಜತೆ ಸೇರಿ ಯುದ್ಧ ಮಾಡು ಕೆಟ್ಟವರ ಸಂಘವನ್ನು ಬಿಡು ಎಂದು ಹೇಳಿದಾಗ ಕರ್ಣ ಕೌರವನ ಋಣವನ್ನು ತೀರಿಸಿ ಇದೇ ರಣರಂಗದಲ್ಲಿ ಅವನಿಗಾಗಿಯೇ ಮಡಿಯುತ್ತೇನೆ ಅಲ್ಲದೆ ಅವನಿಗೆ ದ್ರೋಹ ಬಗೆಯಲಾರೆ ಎಂದು ಹೇಳುವಾಗ ಅವನಲ್ಲಿದ್ದ ಸ್ನೇಹದ ಪರಾಕಾಷ್ಠೆ ಎಂತಹದ್ದು ಎಂದು ಅರಿವಾಗುತ್ತದೆ. ಕರ್ಣನಿಗೆ ತನ್ನ ಜೀವಕ್ಕಿಂತಲೂ ಸ್ನೇಹ ಮುಖ್ಯವಾಗುತ್ತದೆ.

Advertisement

ಇದು ಭಾರತದ ಸ್ನೇಹ ಪರಂಪರೆ ಇಲ್ಲಿ ಸ್ನೇಹದ ಸರಿ ಸಮಾನವಾಗಿ ನಿಂತ ಮತ್ತೊಂದು ಅಂಶ ಕಾಣಲು ಸಿಗುವುದಿಲ್ಲ. ಯಾವ ರಕ್ತ ಸಂಬಂಧಗಳೂ ಸ್ನೇಹದ ಮುಂದೆ ಸಮಾನ ಆಗಲಿಲ್ಲ. ಇದಕ್ಕಾಗಿಯೇ ಭಾರತ ಜಗತ್ತಿನ ಅತೀ ದೊಡ್ಡ ಸ್ನೇಹ ಸಾಮ್ರಾಜ್ಯ. ಸ್ನೇಹ ಅದೊಂದು ಮಧುರ ಬಾಂಧವ್ಯ ಸುಮಧುರ ಪ್ರೀತಿ ಅಲ್ಲಿ ಸ್ನೇಹವನ್ನು ಬಿಟ್ಟು ಯಾವ ಭಾವವೂ ಇರೋದಿಲ್ಲ ಅದೊಂದೇ ಪರಮಸುಖ ತಾಣ. ಇದರ ಅರಿವು ನಮಗಾಗದೇ ಹೋದಲ್ಲಿ ಸ್ನೇಹ ತನ್ನ ಅಸ್ತಿತ್ವವನ್ನೇ ಕಳೆದುಕೊಂಡು ಬಿಡಬಹುದು.

ಲತೇಶ್‌ ಸಾಂತ
ಅಂತಿಮ ಬಿ.ಎ, ಪತ್ರಿಕೋದ್ಯಮ ವಿಭಾಗ
ವಿಶ್ವವಿದ್ಯಾನಿಲಯ ಕಾಲೇಜು ಮಂಗಳೂರು

Advertisement

Udayavani is now on Telegram. Click here to join our channel and stay updated with the latest news.

Next