ನವದೆಹಲಿ: ಪುಲ್ವಾಮಾ ದಾಳಿಯ ಸಂಚು ಕೋರ, ಜೈಶ್ ಉಗ್ರ ಮಸೂದ್ ಅಜರ್ನನ್ನು ಅಂತಾರಾಷ್ಟ್ರೀಯ ಉಗ್ರ ಎಂದು ಘೋಷಿಸಲು ಚೀನಾ ಅಡ್ಡಿಪಡಿಸಿದ ಹಿನ್ನೆಲೆಯಲ್ಲಿ, ಈ ನಿಟ್ಟಿನಲ್ಲಿ ಚೀನಾ ಜೊತೆಗೆ ಯಾವುದೇ ಒಪ್ಪಂದ ಅಥವಾ ರಾಜಿಗೆ ಭಾರತ ಸಿದ್ಧವಿಲ್ಲ ಎಂದು ಸ್ಪಷ್ಟಪಡಿಸಲಾಗಿದೆ. ಅಷ್ಟೇ ಅಲ್ಲ, ಪಾಕಿಸ್ತಾನದ ಜೊತೆಗೆ ಚೀನಾ ಮಾತುಕತೆ ನಡೆಸಿ ಸಮಸ್ಯೆ ಬಗೆಹರಿಸಿಕೊಳ್ಳಬೇಕು. ಭಾರತ ಎಲ್ಲ ಸಾಕ್ಷ್ಯ ಗಳನ್ನೂ ವಿಶ್ವಸಂಸ್ಥೆಗೆ ನೀಡಿದೆ. ಭಾರತದ ವಾದ ಬಲವಾಗಿರುವುದರಿಂದ ಅಜರ್ ಉಗ್ರರ ಪಟ್ಟಿಗೆ ಮುಂದೊಂದು ದಿನ ಸೇರುವುದು ಖಚಿತ. ಅಲ್ಲಿಯವರೆಗೂ ಭಾರತ ಶ್ರಮಿಸ ಲಿದೆ. ಚೀನಾಗೆ ಇನ್ನಷ್ಟು ಸಮಯ ಬೇಕಾದರೆ, ಭಾರತ ನಿರೀಕ್ಷಿಸಲು ಸಿದ್ಧವಿದೆ.
ಇನ್ನೊಂದು ಮೂಲಗಳ ಪ್ರಕಾರ, ಅಮೆರಿಕ, ಫ್ರಾನ್ಸ್ ಹಾಗೂ ಇತರ ದೇಶಗಳು ಅಜರ್ ವಿಚಾರದ ಕುರಿತಂತೆ ಚೀನಾದೊಂದಿಗೆ ಮಾತುಕತೆ ನಡೆಸಲಿವೆ. ಚೀನಾ ಇದಕ್ಕೆ ಒಪ್ಪದಿದ್ದರೆ, ಆಗ ವಿಶ್ವಸಂಸ್ಥೆ ಭದ್ರತಾ ಮಂಡಳಿ ಮುಂದಿನ 6 ತಿಂಗಳಲ್ಲಿ ಸಭೆ ಸೇರಿದಾಗ ಚೀನಾವನ್ನು ಪ್ರಶ್ನಿಸಲಿವೆ. ಅಲ್ಲದೆ, ಈ ಸಭೆಯನ್ನು ಮುಕ್ತವಾಗಿ ನಡೆಸಿ, ಚೀನಾವನ್ನು ಇಕ್ಕಟ್ಟಿಗೆ ಸಿಲುಕಿಸಲಿವೆ.
ಎದ್ದು ಬಂದ ಮಸೂದ್!: ಜೈಶ್ ಉಗ್ರ ಕೆಲವೇ ದಿನಗಳ ಹಿಂದೆ ಸಾವನ್ನಪ್ಪಿದ್ದಾನೆ ಎಂದು ಸುದ್ದಿ ಹಬ್ಬಿತ್ತಾದರೂ, ನಾನು ಆರೋಗ್ಯವಾಗಿದ್ದೇನೆ ಎಂದು ಅಜರ್ ಹೇಳಿದ್ದಾನೆ. ಸಂಘಟನೆಯ ಮುಖವಾಣಿ ಅಲ್ ಖಲಂ ಎಂಬ ಪತ್ರಿಕೆ ಯಲ್ಲಿ ಒಂದು ಅಂಕಣವನ್ನೂ ಬರೆದಿದ್ದಾನೆ. ನಾನು ಸತ್ತಿದ್ದೇನೆ ಎಂದು ಸುಳ್ಳು ಸುದ್ದಿ ಹರಡಿಸಿದ್ದು ಭಾರತದ ಪ್ರಧಾನಿ ಮೋದಿಯ ಕುತಂತ್ರ ಎಂದಿದ್ದಾನೆ. ಬಾಲಕೋಟ್ದಾಳಿ ಯಲ್ಲಿ ಯಾವ ಹಾನಿಯೂ ಆಗಿಲ್ಲ ಎಂದೂ ಹೇಳಿದ್ದಾನೆ. ಇದೇ ವೇಳೆ ಪಾಕಿಸ್ತಾನವು ಉಗ್ರ ನಿಗ್ರಹಕ್ಕೆ ನಿಜವಾಗಿಯೂ ಪ್ರಯತ್ನ ನಡೆಸುತ್ತಿದೆ ಎಂದಾ ದರೆ ಭೂಗತ ಪಾತಕಿ ದಾವೂದ್ ಇಬ್ರಾಹಿಂ, ಹಿಜ್ಬುಲ್ ಉಗ್ರ ಸಯ್ಯದ್ ಸಲಾಹುದ್ದೀನ್ನನ್ನು ಭಾರತಕ್ಕೆ ಹಸ್ತಾಂತರಿಸಬೇಕು ಎಂದು ಕೇಂದ್ರ ಸರ್ಕಾರದ ಹಿರಿಯ ಅಧಿಕಾರಿ ಶನಿವಾರ ತಿಳಿಸಿದ್ದಾರೆ.