Advertisement

ಕೋವಿಡ್ ವಿರುದ್ಧ  ಸಶಸ್ತ್ರ  ಪಡೆಗಳ ವಿಭಿನ್ನ  ಸಮರ

01:09 AM May 07, 2021 | Team Udayavani |

ಹೊಸದಿಲ್ಲಿ: ದೇಶ ಮತ್ತೂಮ್ಮೆ ಕೋವಿಡ್ ಸಂಕಷ್ಟಕ್ಕೆ ಸಿಲುಕಿದೆ. ದೇಶದ ಮೂರು ರಕ್ಷಣ ಪಡೆಗಳು ಮತ್ತು ಪ್ರಮುಖ ರಕ್ಷಣ ಸಂಸ್ಥೆಗಳು ಕೋವಿಡ್ ವಿರುದ್ಧದ ಯುದ್ಧದಲ್ಲಿ ಸರಕಾರಕ್ಕೆ ದೊಡ್ಡ ಮಟ್ಟದ ನೆರವು ನೀಡುತ್ತಿವೆ. ವಿದೇಶಗಳಿಂದ ವೈದ್ಯಕೀಯ ಸಹಾಯವನ್ನು ಹೊತ್ತು ತರುವುದರ ಜತೆಗೆ ದೇಶ ಮಟ್ಟದಲ್ಲಿಯೂ ಜನಸಾಮಾನ್ಯರ ಸೇವೆಗೆ ತಮ್ಮನ್ನು ಸಮರ್ಪಿಸಿಕೊಂಡಿವೆ.

Advertisement

ಭೂಸೇನೆ ಭರಪೂರ ನೆರವು :

ಭೂಸೇನೆ ಭಾರತೀಯ ವೈದ್ಯಕೀಯ ರಂಗದ ಜತೆಗೆ ಕೈ ಜೋಡಿಸಿದೆ. ಕಳೆದ ವರ್ಷದಂತೆ ಈ ವರ್ಷವೂ ಮಹತ್ವದ ಸೇವೆ ನೀಡುತ್ತಿದೆ. ಜನತಾ ಕರ್ಫ್ಯೂ, ವೀಕೆಂಡ್‌ ಕರ್ಫ್ಯೂಗಳಂಥ ನಿರ್ಬಂಧಗಳನ್ನು ಜಾರಿಗೊಳಿಸುವಲ್ಲಿ ಮಹತ್ವದ ಕೊಡುಗೆ ನೀಡುತ್ತಿರುವುದರ ಜತೆಗೆ ಆಮ್ಲಜನಕ, ವೈದ್ಯಕೀಯ ಪರಿಕರಗಳ ರವಾನೆಗಾಗಿ ತನ್ನ ಸಿಬಂದಿ ಮತ್ತು ವಾಹನಗಳನ್ನು ಒದಗಿಸುತ್ತಿದೆ.

ಮೂರು ದಿನಗಳ ಹಿಂದಷ್ಟೇ “ಕೊ-ಜೀತ್‌’ ಎಂಬ ಕಾರ್ಯಕ್ರಮವನ್ನು ಭೂಸೇನೆ ಘೋಷಿ ಸಿದ್ದು, ಇದರ ಮೂಲಕ ವೈದ್ಯಕೀಯ ಮೂಲ ಸೌಕರ್ಯ ಗಳನ್ನು ಮೇಲ್ದರ್ಜೆಗೇರಿಸುವ, ಉನ್ನತೀ ಕರಿಸುವ, ಕೋವಿಡ್‌ ವಿಚಾರದಲ್ಲಿ ಜನರಲ್ಲಿ ಜಾಗೃತಿ ಮೂಡಿಸುವ ಅಭಿಯಾನಕ್ಕೆ ಕೈ ಹಾಕಿದೆ. ದಿಲ್ಲಿ ಕಂಟೋನ್ಮೆಂಟ್‌ನಲ್ಲಿರುವ ಸೇನಾ ಆಸ್ಪತ್ರೆ (ಬಿಎಚ್‌ಡಿಸಿ)ಯನ್ನು ಸಂಪೂರ್ಣವಾಗಿ ಕೊರೊನಾ ಆಸ್ಪತ್ರೆ ಯನ್ನಾಗಿ ಬಳಸಲಾಗುತ್ತಿದೆ. “ಇ-ಸೆಹತ್‌’ ಅಭಿ ಯಾನದ ಮೂಲಕ ಸಾರ್ವಜನಿಕರಿಗೆ ಸೇನಾಧಿಕಾರಿಗಳಿಂದ ಕೊರೊನಾ ಕುರಿತ ಸಲಹೆ ನೀಡಲಾಗುತ್ತಿದೆ.

ಸೇನಾ ಆಸ್ಪತ್ರೆಗಳಿಂದ ನೆರವು :

Advertisement

ಸೇನಾ ಆಸ್ಪತ್ರೆಗಳ ನುರಿತ ತಜ್ಞರನ್ನು ದೇಶದ ವಿವಿಧ ಆಸ್ಪತ್ರೆಗಳಿಗೆ ರವಾನಿಸಲಾಗಿದೆ. ಉತ್ತರ ಪ್ರದೇಶದ ಲಕ್ನೋ, ಪ್ರಯಾಗ್‌ರಾಜ್‌ನ ಸೇನಾ ಆಸ್ಪತ್ರೆಗಳಲ್ಲಿ ತಲಾ 100 ಹಾಸಿಗೆಗಳನ್ನು ಸಾರ್ವಜನಿಕರಿಗೆ ಮೀಸಲಿರಿಸಿದೆ.

ಸಂಗೂರ್‌ನಲ್ಲಿ 40 ಹಾಸಿಗೆ ಸೌಲಭ್ಯ ವುಳ್ಳ ಸುಸಜ್ಜಿತ ಐಸೋಲೇಶನ್‌ ಕೇಂದ್ರವನ್ನು  ಸಜ್ಜುಗೊಳಿಸಿದೆ. ಭೋಪಾಲ, ಜಬಲ್ಪುರದ ಆಸ್ಪತ್ರೆಗಳಲ್ಲಿ ತಲಾ 100 ಹಾಸಿಗೆ, ಗ್ವಾಲಿಯರ್‌ನಆಸ್ಪತ್ರೆಯಲ್ಲಿ 40 ಹಾಸಿಗೆಗಳನ್ನು ಸ್ಥಳೀಯ ಸೋಂಕುಪೀಡಿತರಿಗಾಗಿ ಮೀಸಲಿರಿಸಲಾಗಿದೆ. ಮಹಾರಾಷ್ಟ್ರದ ಪುಣೆಯಲ್ಲಿ 60 ಐಸಿಯು ಹಾಸಿಗೆ, ಪಟಿಯಾಲಾದ ಆಸ್ಪತ್ರೆಗಳಿಗೆ ಸೇನೆ ತನ್ನ ದಾದಿಯರ ಪಡೆಯನ್ನು ರವಾನಿಸಿದೆ.

ನೌಕಾಪಡೆಯಿಂದ “ಸಮುದ್ರ ಸೇತು – 2′ :

ವಿದೇಶಗಳಿಂದ ಆಮ್ಲಜನಕ, ವೈದ್ಯ ಕೀಯ ಪರಿಕರಗಳು, ಲಸಿಕೆಗಳ ದಾಸ್ತಾನು ಸಾಗಣೆಗೆ ನೌಕಾಪಡೆಯು ತನ್ನ ಯುದ್ಧ ನೌಕೆಗಳನ್ನೇ ಕಣಕ್ಕಿಳಿಸಿದೆ. ಮುಂಬಯಿ, ವಿಶಾಖಪಟ್ಟಣ, ನವಮಂಗಳೂರು, ಕೊಚ್ಚಿಯ ಬಂದರುಗಳಿಂದ ಈ ಹಡಗು ಗಳು ಸಮುದ್ರಕ್ಕಿಳಿದು ತಮಗೆ ವಹಿಸಿರುವ ಕಾರ್ಯಗಳನ್ನು ನೆರವೇರಿಸುತ್ತಿವೆ.

ಮುಖ್ಯವಾಗಿ ಪರ್ಷಿಯನ್‌ ಕೊಲ್ಲಿಯ ಕುವೈಟ್‌, ಬಹ್ರೈನ್‌, ಕತಾರ್‌ ಮಾತ್ರವಲ್ಲದೆ ಸಿಂಗಾಪುರ ಮತ್ತು ಆಗ್ನೇಯ ಏಷ್ಯಾದ ದೇಶಗಳಿಂದ ಬರುವ ಸಾಮಗ್ರಿಗಳನ್ನು, ದ್ರವರೂಪದ ಆಮ್ಲಜನಕವನ್ನು ಈ ಯುದ್ಧ ಹಡಗುಗಳು ತರುತ್ತಿವೆ.

ಡಿಆರ್‌ಡಿಒ ಸೇವೆ :

ಭಾರತೀಯ ರಕ್ಷಣ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್‌ಡಿಒ) ದೇಶದ ಅಲ್ಲಲ್ಲಿ ಇರುವ ತನ್ನ ಲ್ಯಾಬ್‌ಗಳಲ್ಲಿ ಸಾವಿರಾರು ಲೀಟರ್‌ ಸ್ಯಾನಿಟೈಸರ್‌ ಉತ್ಪಾದಿಸಿ ನೀಡಿದೆ.

ಬೆಂಗಳೂರು-ಮೈಸೂರಿನ ಕೊಡುಗೆ :  

ಬೆಂಗಳೂರಿನಲ್ಲಿರುವ ಡಿಆರ್‌ಡಿಒ ಲ್ಯಾಬ್‌, ಮೈಸೂರಿನಲ್ಲಿರುವ ಡಿಆರ್‌ಡಿಒ ಸಹಯೋಗಿ ಸಂಸ್ಥೆ ಸ್ಕಾನ್‌ರೇ ಟೆಕ್‌ ಪ್ರೈ.ಲಿ.ಗಳಲ್ಲಿ ಕ್ರಿಟಿಕಲ್‌ ಕೇರ್‌ ವೆಂಟಿಲೇಟರ್‌ಗಳನ್ನು ತಯಾರಿಸಿ ಸರಬರಾಜು ಮಾಡಲಾಗುತ್ತಿದೆ. ಬೆಂಗಳೂರಿನ ಡಿಫೆನ್ಸ್‌ ಬಯೋ ಎಂಜಿನಿಯರಿಂಗ್‌ ಆ್ಯಂಡ್‌ ಎಲೆಕ್ಟ್ರೋ ಮೆಡಿಕಲ್‌ ಲ್ಯಾಬೊರೇಟರಿ (ಡಿಇಬಿಇಎಲ್‌) ಕೂಡ ಕೈ ಜೋಡಿಸಿದೆ.

ಈ ಕಾರ್ಯಕ್ರಮದಡಿ ಮಾರ್ಚ್‌ನಲ್ಲಿ 5 ಸಾವಿರ ವೆಂಟಿಲೇಟರ್‌ ತಯಾರಿಸಲಾಗಿತ್ತು. ಎಪ್ರಿಲ್‌ನಲ್ಲಿ 10 ಸಾವಿರ ವೆಂಟಿಲೇಟರ್‌ ಉತ್ಪಾದಿಸಲಾಗಿದೆ. ದಿಲ್ಲಿಯ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕೋವಿಡ್ ಆಸ್ಪತ್ರೆ ಸಹಿತ ದೇಶದ ನಾನಾ ಭಾಗಗಳಲ್ಲಿ ಕೊರೊನಾ ಆಸ್ಪತ್ರೆಗಳನ್ನು ಡಿಆರ್‌ಡಿಒ ತೆರೆದಿದೆ.

ಎಚ್‌ಎಎಲ್‌ನಿಂದಲೂ ಸೇವೆ :

ರಕ್ಷಣ ಇಲಾಖೆಯ ಅಧೀನದ ಸಂಸ್ಥೆಗಳಾದ ಹಿಂದೂಸ್ತಾನ್‌ ಏರೋನಾಟಿಕ್ಸ್‌ ಲಿ., ಆರ್ಡಿನೆನ್ಸ್‌ ಫ್ಯಾಕ್ಟರಿ ಬೋರ್ಡ್‌ ಸಂಸ್ಥೆಗಳು ಕೂಡ ದೇಶಾದ್ಯಂತ ತಮ್ಮ ಸಿಬಂದಿ ಆಸ್ಪತ್ರೆಗಳಲ್ಲಿ ಆಮ್ಲಜನಕ ಸೌಲಭ್ಯ ವುಳ್ಳ ಬೆಡ್‌, ವೆಂಟಿಲೇಟರ್‌ಗಳ ಸೌಲಭ್ಯವನ್ನು ಸ್ಥಳೀಯ ನಾಗರಿಕರಿಗೂ ವಿಸ್ತರಿಸಿವೆ.

ದೇಶದಲ್ಲಿ ಆಮ್ಲಜನಕದ ಅಭಾವ ತಲೆದೋರಿದಾಗ ಅಮೆರಿಕ, ಸಿಂಗಾಪುರ, ರಷ್ಯಾ ಸಹಿತ ಅನೇಕ ದೇಶಗಳು ಆಮ್ಲಜನಕ ದಾಸ್ತಾನನ್ನು ಅಥವಾ ಪರಿಕರಗಳನ್ನು ಭಾರತಕ್ಕೆ ಕಳುಹಿಸಿದವು. ಅವೆಲ್ಲವನ್ನೂ ಭಾರತೀಯ ವಾಯುಪಡೆಯ ಸರಕು ಸಾಗಣೆ ವಿಮಾನಗಳಲ್ಲಿ  ತರಲಾಯಿತು. ಈ ಕಾರ್ಯ ಇನ್ನೂ ಚಾಲ್ತಿಯಲ್ಲಿದೆ. ಇದಲ್ಲದೆ ವಿದೇಶಗಳು ನೀಡುತ್ತಿರುವ ಲಸಿಕೆಗಳನ್ನೂ ಭಾರತಕ್ಕೆ ತರುವಲ್ಲಿ ವಾಯುಪಡೆ ಮಹತ್ವದ ಪಾತ್ರ ವಹಿಸಿದೆ.

ಈವರೆಗೆ 50 ಸಾರ್ಟಿ ವಿಮಾನಗಳು 1,142 ಮೆ. ಟನ್‌ ಸಾಮರ್ಥ್ಯದ 61 ಆಮ್ಲಜನಕ ಕಂಟೈನರ್‌ಗಳನ್ನು ಏರ್‌ಲಿಫ್ಟ್ ಮಾಡಿವೆ. ದೇಶದೊಳಗೆ 344 ಸಾರ್ಟಿ ವಿಮಾನಗಳನ್ನು ಈ ಸೇವೆಗಾಗಿ ಅಣಿಗೊಳಿಸಲಾಗಿದ್ದು, ಮೇ 5ರ ಹೊತ್ತಿಗೆ ಒಟ್ಟಾರೆ 4,527 ಮೆ. ಟನ್‌ ಸಾಮರ್ಥ್ಯದ 230 ಆಮ್ಲಜನಕ ಕಂಟೈನರ್‌ಗಳನ್ನು ಇವು ಸಾಗಿಸಿವೆ.

ಸೇವಾನಿರತ ನೌಕಾಪಡೆ ಹಡಗುಗಳು :

ಐಎನ್‌ಎಸ್‌ ತಲ್ವಾರ್‌ :

27 ಮೆ. ಟನ್‌ನ 2 ಆಮ್ಲಜನಕ ಟ್ಯಾಂಕ್‌ ತಂದಿದೆ.

ಐಎನ್‌ಎಸ್‌ ಜಲಾಶ್ವ :

ಔಷಧಗಳನ್ನು ತಂದಿದೆ.

ಐಎನ್‌ಎಸ್‌ ಕೋಲ್ಕತಾ :

27 ಟನ್‌ ಸಾಮರ್ಥ್ಯದ 2 ಆಮ್ಲಜನಕ ಟ್ಯಾಂಕ್‌, 400  ಸಿಲಿಂಡರ್‌, 47 ಕಾನ್ಸಂಟ್ರೇಟರ್‌ಗಳನ್ನು ಹೊತ್ತು ತಂದಿದೆ.

ಐಎನ್‌ಎಸ್‌ ಐರಾವತ :

3,600 ಆಮ್ಲಜನಕ ಸಿಲಿಂಡರ್‌, 27 ಟನ್‌ ಸಾಮರ್ಥ್ಯದ 8 ಟ್ಯಾಂಕ್‌ಗಳು, 10,000 ರ್ಯಾಪಿಡ್‌ ಆ್ಯಂಟಿಜೆನ್‌ ಡಿಟೆಕ್ಷನ್‌ ಟೆಸ್ಟ್‌ ಕಿಟ್‌, 7 ಆಮ್ಲಜನಕ ಕಾನ್ಸಂಟ್ರೇಟರ್‌ಗಳನ್ನು ಸಾಗಿಸಿದೆ.

ಐಎನ್‌ಎಸ್‌ ಶಾರ್ದೂಲ್‌ :

27 ಟನ್‌ ಸಾಮರ್ಥ್ಯದ ಆಮ್ಲಜನಕ ಟ್ಯಾಂಕ್‌ಗಳು, 1,500 ಆಮ್ಲಜನಕ ಸಿಲಿಂಡರ್‌ಗಳನ್ನು ಸಾಗಾಟ ಮಾಡಿದೆ.

Advertisement

Udayavani is now on Telegram. Click here to join our channel and stay updated with the latest news.

Next