Advertisement

ಸ್ವಾತಂತ್ರ್ಯೋತ್ಸವದ ಸದಾಶಯ

10:13 PM Aug 11, 2022 | Team Udayavani |

ಸ್ವಾತಂತ್ರ್ಯ ಎಂದರೇನು? ಭಾರತ ವರ್ಷದ ಬಿಡುಗಡೆಯ ಅಮೃತ ಮಹೋತ್ಸವದ ಸ್ವಗತದ ಪ್ರಶ್ನೆಯಿದು. ಜತೆ ಜತೆಗೇ ಹರ್‌ ಘರ್‌ ತಿರಂಗಾದ ಸಂಭ್ರಮದ ಹೊಸ್ತಿಲಲ್ಲೇ ನಿಂತು ಜನ ಗಣ ಮನದ ಆತ್ಮಾವಲೋಕನದ ಸೊಬಗಿನ ಪ್ರಶ್ನೆಯೂ ಇದು. ಕಾಲದ ಕಡಲಿನ ಒಡಲಿಗೆ ಸೇರಿ ಹೋದ ನಿನ್ನೆಗಳನ್ನು ಒಂದಿನಿತು ಸವಿದು, ಇರುವ ಇಂದಿನ ಸಲಿಲದಲ್ಲಿ ಮೈಮನ ತಣಿಸಿ, ಭವಿಷ್ಯದ ಸೂರ್ಯೋದಯಗಳಿಗೆ ಸಿದ್ಧಗೊಳ್ಳುವ ತವಕದ ಶುಭಗಳಿಗೆಯಿದು. ದೂರದ ಐರೋಪ್ಯರ ವಸಾಹತುಶಾಹಿ ಅಸ್ತಂಗತಗೊಂಡು, ಯೂನಿಯನ್‌ ಜ್ಯಾಕ್‌ ಕೆಳಗಿಳಿದು, ನಾಡಿನ ಬಿಡುಗಡೆಯ ವಂದೇ ಮಾತರಂ ಪಲ್ಲವಿಯೊಂದಿಗೆ ತ್ರಿವರ್ಣ ಧ್ವಜವೇರಿದ ಅಮೃತ ಗಳಿಗೆಯಿದು.

Advertisement

ಸ್ವಾತಂತ್ರ್ಯ ಎಂದರೆ ಜವಾಬ್ದಾರಿ; ಸ್ವಾತಂತ್ರ್ಯ ಎಂದರೆ ಪ್ರಗತಿಯ ಗತಿ, ಸಂವರ್ಧನೆಯ ಮೂಲತೈಲ. ಸ್ವಾತಂತ್ರ್ಯ ಎಂದರೆ ಧನಾತ್ಮಕ ಚಿಹ್ನೆ, ಅದೊಂದು ತಿಳಿ ಬೆಳಕು; ಚಿಂತನಾ ಲಹರಿ; ಕಾರ್ಯಕ್ಷಮತೆಯ ಪರಿಧಿ. ಸ್ವಾತಂತ್ರ್ಯ ಎಂದರೆ ಸ್ವೇಚ್ಛೆ ಅಲ್ಲ ಅದೊಂದು ನಾಗರಿಕತೆಯ ಕುರುಹು; ಸಭ್ಯತೆಯ ಸಾರ್ವಕಾಲಿಕ ಚಿಹ್ನೆ; ಮೌಲ್ಯ ಕೂಡ. ಸ್ವಾತಂತ್ರ್ಯ ಇತಿಮಿತಿಯ ಸಮಾಜದ ದ್ಯೋತಕ; ವ್ಯವಹಾರ ಕೌಶಲವೂ ಹೌದು. ಪರರಿಗೆ ನೋವುಣಿಸದೆ ಸಹಕಾರ ಎನ್ನುವ ತತ್ತ್ವ ಹಾಗೂ ಸತ್ವದ ಸರಳ ಸಾಕ್ಷಾತ್ಕಾರ. ವ್ಯಕ್ತಿಗತ ನಡೆ ನುಡಿಯ ಅದೇ ರೀತಿ, ಸಾಮಾಜಿಕ ಬದುಕಿನ ಪೋಷಕಧಾತು. ಒಟ್ಟಿನಲ್ಲಿ ಭಾರತದಂತಹ ವಿಶಾಲ ರಾಷ್ಟ್ರದ ಸಾಮೂಹಿಕ ಬದುಕಿನ ಮೂಲ ಬುನಾದಿಯೇ ಇದು. ಸಮಾನತೆಯ ತಂಗಾಳಿ ಹೊಮ್ಮಿದಾಗ ಅರಳುವ ಸೌಗಂಧ ಭರಿತ ಸುಮವೇ ಸ್ವಾತಂತ್ರ್ಯ. ಯಾವುದೇ ಮೀಟರಿನಲ್ಲಿ ಅಥವಾ ಲೀಟರಿನಲ್ಲಿ ಅಳೆಯಲಾಗದ, ಮುಕ್ತ ಪರಿಸರವಿದು. ಪಂಚೇಂದ್ರಿಯಗಳಿಂದ ಅನುಭವಿಸಲ್ಪಡುವ ಸಿಹಿ, ಕಹಿ, ಪರಿಮಳ-ದುರ್ಗಂಧ‌, ವರ್ಣ-ವೈವಿಧ್ಯ, ಇಂಪು-ಕರ್ಕಶ, ಶೀತೋಷ್ಣ- ಇವುಗಳಲ್ಲಿ ಯಾವುದರ ಬಗೆಗೂ ಒಂದೇ ಒಂದು ಶಬ್ದವನ್ನೂ ಉಲಿದು ವಿವರಣಾತ್ಮಕವಾಗಿ ತಿಳಿಸಲಾರೆವು, ಅದೇ ತೆರನಾಗಿದೆ ಸ್ವಾತಂತ್ರ್ಯ ಶಬ್ದದ ಎತ್ತರ ಬಿತ್ತರ; ನಿಖರವಾಗಿ ವಿವರಿಸಲಾಗದ ಆಗರವಿದು.

ಇದೇ ರೀತಿ ರಾಷ್ಟ್ರ ಎನ್ನುವ ಶಬ್ದವೂ ಒಂದು ನಿಟ್ಟಿನಲ್ಲಿ ಊಹನಾತ್ಮಕ, ಭಾವನಾತ್ಮಕ, ನಿಸರ್ಗದ ಸೃಷ್ಟಿಯೆನಿಸಿದ ಶತ ಶತ ಕೋಟಿ ಸಂವತ್ಸರಗಳ ಆಯುರ್‌ ಮಾನದ ಈ ಭೂಮಿಯಲ್ಲಿ ನಮ್ಮದು, ನಿಮ್ಮದು ಎಂಬ ಜನ ಸಮೂಹದ ವಿಂಗಡಣೆಯೊಂದೆಡೆ; ಇತಿಹಾಸದ ಅಗಾಧ ಏರುಪೇರುಗಳ ಜಂಜಾಟದಲ್ಲಿ ಮಥಿಸಿ  ಮೂಡಿದ ಗಡಿರೇಖೆಗಳ ಇನ್ನೊಂದೆಡೆ. ಹೀಗೆ ರಾಷ್ಟ್ರಗಳ ಪರಿಕಲ್ಪನೆಯ ನಾಡುಗಳಲ್ಲೊಂದು, ಅತ್ಯಂತ ಪ್ರಾಚೀನ ಸಂಸ್ಕೃತಿ, ಸಭ್ಯತೆಯ ನಮ್ಮ ಭಾರತ ನಿಸರ್ಗದ ಮುನಿಸು ಎನಿಸದೆ ಮಾನವ ನಿರ್ಮಿತ ದುರಂತದ ಮಾರಣ ಹೋಮ ಎನಿಸಿದ ಮಹಾಯುದ್ಧ ದ್ವಯಗಳು ಇತಿಹಾಸದ‌ ಮೈಲುಗಲ್ಲುಗಳು. ತತ್ಪರಿಣಾಮ ಹಳೆಯ ಜಗತ್ತಿನ ಉದರದಿಂದ ಹೊಸ ಜಗತ್ತಿನ ಆವಿರ್ಭಾವ! ಬಿಳಿಯರ ಹೆಗಲೇರಿದ ಜವಾಬ್ದಾರಿ ಎಂಬ ಮದಭರಿತ ಪದವನ್ನು ಒದ್ದು, ಮೇಲೆದ್ದು ಹಾರಾಡಿದ ಹತ್ತಾರು ಏಷ್ಯನ್‌ ಹಾಗೂ ಆಫ್ರಿಕನ್‌ ರಾಷ್ಟ್ರ ಧ್ವಜಗಳಲ್ಲಿ ಒಂದು ನಮ್ಮ ಹೆಮ್ಮೆಯ ತ್ರಿವರ್ಣ ಧ್ವಜ ಕೂಡ.

ಸಾತಂತ್ರ್ಯ ಎಂಬುದು ಮನದಲ್ಲಿ ಅಂಕುರಿಸುವ ಅನುಭವ; ಹಾಗೂ ಸುತ್ತಮುತ್ತಲ ಸೂಕ್ಷ್ಮ ಸಂವೇದನೆಯ ಅನುಭಾವ ಇದರ ನಿರ್ದಿಷ್ಟತೆಯನ್ನು ನಿಖರತೆಯನ್ನು ಭಾರತದಂತಹ ವಿಶಾಲ ದೇಶದಲ್ಲಿ ಪಡಿಮೂಡಿಸುವಲ್ಲಿ ಕಾನೂನಿನ ಆವಶ್ಯಕತೆ ಇದ್ದೇ ಇದೆ. ಅಂತಹ ನಮ್ಮ ಮೂಲಭೂತ ಕಾನೂನು ಸಮುತ್ಛಯವೇ ಭಾರತ ಸಂವಿಧಾನ. “”ರಾಷ್ಟ್ರ ಧ್ವಜ, ರಾಷ್ಟ್ರ ಗೀತೆ ಅಂತೆಯೇ ರಾಷ್ಟ್ರ ಸಂವಿಧಾನಕ್ಕೆ ಪ್ರತಿಯೊಬ್ಬ ಪ್ರಜೆಯೂ ಗೌರವಿಸಬೇಕು”-ಇದು ನಮ್ಮ ಸಂವಿಧಾನ ನಮೂದಿತ ಮೂಲಭೂತ ಕರ್ತವ್ಯಗಳ ಪಟ್ಟಿಯ ಮೊದಲ ಒಕ್ಕಣೆ. ಸ್ವಾತಂತ್ರ್ಯ   ಎಂಬುದು ತುಟಿ ಮೀರಿದ ಹಲ್ಲು ಎನಿಸಬಾರದು ; ಇತರರ ಸಾತಂತ್ರ್ಯ ಹೃಸ್ವಗೊಳಿಸುವ ಸಾಧನವೂ ಆಗಬಾರದು; ನೈಜ ಸ್ವಾತಂತ್ರ್ಯದ ಹರವು ಇದ್ದಲ್ಲಿ ಕೊಲೆ, ಕಳ್ಳತನ, ಅಶಾಂತಿ, ಕಾನೂನು ಭಂಜನೆ, ಮುಂತಾದ ಸಮಾಜದ್ರೋಹಿ ಶಕ್ತಿಗಳು ಅನಾವರಣಗೊಳ್ಳಲಾರವು. ಸ್ವಾತಂತ್ರ್ಯದ ಪೂರಕ ವಾತಾವರಣ ಮನೆಯಲ್ಲಿ, ಗ್ರಾಮ, ನಗರಗಳಲ್ಲಿ, ರಾಜ್ಯ ಹಾಗೂ ಸಮಗ್ರ ರಾಷ್ಟ್ರದಲ್ಲಿ ಇರುವಂತಾಗಲೀ ಎಂಬುದೇ ಮನೆ ಮನೆಯ ತ್ರಿವರ್ಣ ಧ್ವಜದ ಆರೋಹಣದ ಸಾಂಕೇತಿಕ ವಿಚಾರಧಾರೆ.

ಸ್ವಾತಂತ್ರ್ಯ ಎಂಬುದು ಏಕಮುಖೀಯಲ್ಲ; ಬಹುಮುಖೀ. ಸಾಮಾಜಿಕ ಸ್ವಾತಂತ್ರ್ಯ, ರಾಜಕೀಯ ಸಾತಂತ್ರ್ಯ, ಸಾಂಸ್ಕೃತಿಕ ಸಾತಂತ್ರ್ಯ, ಆರ್ಥಿಕ ಸ್ವಾತಂತ್ರ್ಯ ಹೀಗೆ ಸಾತಂತ್ರ್ಯ ರಾಷ್ಟ್ರದ ನಾಡಿ ಮಿಡಿತದಲ್ಲಿ ಇವೆಲ್ಲಾ ಬಿಡಿ ಬಿಡಿಯಾಗಿ, ಅದೇ ರೀತಿ ಒಟ್ಟಾಗಿ ಸಮ್ಮಿಳಿತಗೊಳ್ಳುತ್ತವೆ. ಇದೇ ತೆರನಾಗಿ ವ್ಯಕ್ತಿಗತ ಬದುಕಿನಲ್ಲಿಯೂ ಇದೆಲ್ಲದರ ಸಮಾನ ಪರಿಪಕ್ವತೆಯೇ ಮುಕ್ತ ಜೀವನದ ಹೆಗ್ಗುರುತು. ಪ್ರಗತಿಯ ಸೊಪಾನವೇ ಸ್ವಾತಂತ್ರ್ಯ. ಏಕೆಂದರೆ ಮುಕ್ತಮನಸ್ಸಿನ ಓಘ, ಕಾರ್ಯವತುಲದ ಸಾಧ್ಯತೆ ಇಲ್ಲದ ಬಂಧನದ ವಾತವರಣದಲ್ಲಿ ಪ್ರಗತಿಯ ಚಕ್ರದ ಪರಿಭ್ರಮಣೆಯಾದರೂ ಹೇಗೆ ಸಾಧ್ಯ? 1947 ಆಗಸ್ಟ್‌ 14ರ ಮಧ್ಯರಾತ್ರಿ ನಮ್ಮ ನೆಲ, ಜಲ, ಆಗಸದ ಪರಕೀಯತೆಯ ಸಂಕೋಲೆ ಕಳಚಿತು. ಮರುದಿನ ಅಂದರೆ 15ರ ಸೂರ್ಯೋದಯದೊಂದಿಗೆ ಸಾತಂತ್ರ್ಯ ಹೊಳಹು ತುಂಬಿ ನಿಂತು ನಮ್ಮ ಭಾರತ ನಳನಳಿಸಿತು.

Advertisement

“”ಕಟ್ಟುವೆವು ನಾವು ಹೊಸ ನಾಡೊಂದನು; ರಸದ  ಬೀಡೊಂದನು” ಎಂದು ಉಲಿದ ಗೋಪಾಲಕೃಷ್ಣ ಅಡಿಗರ ಕವಿವಾಣಿಯ ಏರುಗತಿ ನಮ್ಮ ನಾಡಿನದಾಗಬೇಕು. ಮಣ್ಣಿನ ಮಕ್ಕಳ ಏಕತಾನದೊಂದಿಗೆ ಕಾರಂತರ ಚೋಮನ ದುಡಿಯ ನಿನಾದವೂ ಅಲೆ ಅಲೆಯಾಗಿ ತೇಲಿ ಬರಬೇಕು. ಭಾರತ ತನುಜಾತೆಯೆನಿಸಿದ “ಕರ್ನಾಟಕ ಮಾತೆ’ಯ ಜಯಘೋಷದ ಕಂಪು ಕುವೆಂಪು ಶಬ್ದ ಪುಂಜಗಳಿಂದ ಸದಾ ಹೊಮ್ಮಿ ಬರಬೇಕು. “ಪಡುವಣ ತೀರದ ಕನ್ನಡ ನಾಡಿನ ಕಾರ್ಗಾಲದ ವೈಭವದ ವರ್ಣನೆಯ ಕಡೆಂಗೋಡ್ಲು ಕವಿವಾಣಿಯಲ್ಲಿ, ಮೈಸೂರಿನ ಒಡೆಯರ ಕನ್ನಂಬಾಡಿಯ ಕಾವೇರಿಯ ಪುಳಕ, ಭಾರತ ರತ್ನ ವಿಶ್ವೇಶ್ವರಯ್ಯನವರ ಕಾರ್ಯ ಕೌಶಲ ಇವೆಲ್ಲಾ ಮಿಡಿತಗೊಂಡು ಪ್ರಗತಿಯ ಚಕ್ರ ಮುಂದೆ ಸರಿಯುವಂತಾಗಬೇಕು. ಅದೇ ರೀತಿ ದಕ್ಷಿಣದ ಕನ್ಯಾಕುಮಾರಿಯ ವಿವೇಕಾನಂದರ ಶಿಲಾಮಂಟಪದಿಂದ ಕಾಶ್ಮೀರದ ಶಾರದ ಪೀಠದವರೆಗಿನ ವಿಶಾಲ ಭಾರತದಲ್ಲಿ ವಿವೇಕದ ಹೊಸತನದೊಂದಿಗೆ ಸ್ವಾತಂತ್ರ್ಯದ ಕೇಸರಿ ಹುಲುಸಾಗಿ ಬೆಳೆಯಬೇಕು. ಅಸ್ಸಾಂನ  ಗುಡ್ಡಗಾಡುಗಳಿಂದ ಹಿಡಿದು ಗುಜರಾತಿನ ಪಟೇಲರ ಬೃಹತ್‌ “ಏಕತಾ ಮೂರ್ತಿ’ಯವರೆಗೆ ಸಮಗ್ರತೆೆಯ ಕುಳಿರ್‌ ಗಾಳಿ ಪಸರಿಸಬೇಕು. ತಮ್ಮ ಪಯಣದ ವೇಳೆಯೇ ಹೃದಯ ತುಂಬಿ ಬಂದು, ಮತ್ತೆ ಲೇಖನಿಯಲ್ಲಿ ಇಳಿದ, ಬಂಕಿಮ್‌ ಚಂದ್ರ ಚಟರ್ಜಿಯವರ “”ಸಸ್ಯ ಶ್ಯಾಮಲೆ”ಯ ರಾಷ್ಟ್ರ ಮಾತೆಗೆ “”ವಂದೇ” ಎನ್ನುವ ಪಲ್ಲವಿ ಮನೆ ಮನಗಳಲ್ಲಿ ಧ್ವನಿಸುತ್ತಿರಬೇಕು.

“”ಶ್ರಮ ಏವ ಜಯತೇ” ಪದಪುಂಜಗಳು ಸ್ವಾತಂತ್ರ್ಯದ ಅಮೃತ ಮಹೋತ್ಸದ ಧ್ಯೇಯ ವಾಕ್ಯವಾಗಲಿ. ಕೀರ್ತಿ ಶ್ರೇಷ ಲಾಲ್‌ ಬಹದೂರ್‌ ಶಾಸ್ತ್ರಿಯವರಿಂದ ಮೊಳಗಿದ “”ಜೈ ಜವಾನ್‌ ಜೈ ಕಿಸಾನ್‌” ಘೋಷಣೆ ಚಿರಾಯು ಎನಿಸಲಿ. ಪಂಡಿತ್‌  ನೆಹರೂ “”ವಿಶ್ವ ಶಾಂತಿ”ಗಾಗಿ ಹಾರಿಸಿದ ಪಾರಿವಾಳ ನಭದಲ್ಲಿ ನಿರಾಳವಾಗಿ ಹಾರುತ್ತಲಿರಲಿ “”ಪ್ರಧಾನಿ ರಾಷ್ಟ್ರ ನೌಕೆಯ ದಂಡನಾಯಕ” (captain of the Ship of the State ) ಎಂಬ ಮಾತಿಗೆ ಅರ್ಥ ತುಂಬಿದ ಇಂದಿರಾ, ವಾಜಪೇಯಿಯವರಿಂದ ಹಿಡಿದು ಇಂದಿನ ಧೀಮಂತ ನಾಯಕತ್ವದ ಮೋದಿಯವರೆಗಿನ ಪ್ರಧಾನಿತ್ವದಲ್ಲಿ “”ಭಾರತ ವಿಶ್ವಗುರು”ವಿನ ಪದವಿ ಏರುವಂತಾಗಲಿ. ಹಿಮಗಿರಿ ಕಾರ್ಗಿಲ್‌ನ “”ಟೈಗರ್‌ ಹಿಲ್‌”ನ ತ್ರಿವರ್ಣ ಧ್ವಜದ  ಅಭಿಮಾನ ಬರಲಿರುವ ಪೀಳಿಗೆಗಳಿಗೂ ಧೃತಿ ಸಂಕೇತವೆನಿಸಲಿ. ಅವರವರ ಪಾಲಿನ ಪೂರಕ, ಪ್ರೇರಕ ಶಕ್ತಿ ಸಂಚಯನದೊಂದಿಗೇ ಕೃಷಿ, ಕೈಗಾರಿಕೆ, ಸಾರಿಗೆ ಶಿಕ್ಷಣದಿಂದ ಹಿಡಿದು ಅಂತರಿಕ್ಷ ಸಾಧನದ ಸಾಧನೆಯವರೆಗೂ ಭಾರತದ ಏಳಿಗೆಯ ಚಕ್ರ ಸರಿಯುತ್ತಲೇ ಸಾಗಲೀ. “ಕಾಯಕವೇ ಕೈಲಾಸ” ಎಂಬ ಭಕ್ತಿ ಭಂಡಾರಿ ಬಸವಣ್ಣನವರ‌ ಸಾರ್ವಕಾಲಿಕ ಸತ್ಯ ಸದಾ ಸತ್ವ ತುಂಬಿಕೊಳ್ಳಲಿ. ದೇಶ ಭಕ್ತಿಯು ದೇಶ ಶಕ್ತಿಯಾಗಿ ಪರಿವರ್ತಿತಗೊಳ್ಳಲಿ. “ಶುಭ ನುಡಿಯೇ ಶಕುನದ ಹಕ್ಕಿ” ಎಂಬ ಸಿರಿ ಹರಕೆಗೆ ಮೈಮನದ ಹೊಸ ಹುರುಪಿನ ತಾರುಣ್ಯ ಶಕ್ತಿ ತುಂಬಲಿ. ಇದೇ ಅಮೃತ ಮಹೋತ್ಸವದ ಅಮೃತ ತುಲ್ಯ ಆಶಯ.

-ಡಾ| ಪಿ. ಅನಂತಕೃಷ್ಣ ಭಟ್‌

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next