Advertisement

Independence Day: 2036ರ ಒಲಿಂಪಿಕ್ಸ್‌  ಆಯೋಜಿಸಲು ಭಾರತ ಬದ್ಧ: ಪ್ರಧಾನಿ

11:45 PM Aug 15, 2024 | Team Udayavani |

ಹೊಸದಿಲ್ಲಿ: ಜಗತ್ತಿನ ಅತೀ ದೊಡ್ಡ ಕ್ರೀಡಾಹಬ್ಬವಾಗಿರುವ ಒಲಿಂಪಿಕ್ಸ್‌ ಕೂಟವನ್ನು ಆಯೋಜಿಸುವ ಸಾಮರ್ಥ್ಯ ಭಾರತಕ್ಕಿದ್ದು, 2036ರಲ್ಲಿ ಇದನ್ನು ನಡೆಸಲು ಸಕಲ ಪ್ರಯತ್ನ ಮಾಡುತ್ತಿರುವುದಾಗಿ ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

Advertisement

ಸ್ವಾತಂತ್ರೋತ್ಸವ ಕಾರ್ಯಕ್ರಮದಲ್ಲಿ ದೇಶವನ್ನುದ್ದೇಶಿಸಿ ಮಾತನಾಡಿದ ಮೋದಿ, “ದೇಶವು ಒಲಿಂಪಿಕ್ಸ್‌ ಕ್ರೀಡಾ ಕೂಟವನ್ನು ಆಯೋಜಿಸಲು ಸಿದ್ಧತೆ ನಡೆಸುತ್ತಿದೆ. 2036ರಲ್ಲಿ ನಡೆಯಲಿರುವ ಒಲಿಂಪಿಕ್ಸ್‌ ಭಾರತದ ನೆಲದಲ್ಲಿ ನಡೆಯಬೇಕು ಎಂಬುದು ಭಾರತೀಯರ ಕನಸಾಗಿದೆ. ಅದಕ್ಕಾಗಿ ತಯಾರಿ ಮಾಡಿಕೊಂಡು ಮುಂದೆ ಸಾಗುತ್ತಿದ್ದೇವೆ’ ಎಂದರು.

ಇದೇ ಸಂದರ್ಭದಲ್ಲಿ ಪ್ಯಾರಿಸ್‌ ಒಲಿಂಪಿಕ್ಸ್‌ನಲ್ಲಿ ಉತ್ತಮ ಪ್ರದರ್ಶನ ನೀಡಿದ ಭಾರತೀಯ ಆಟಗಾರರನ್ನು ಅಭಿನಂದಿಸಿದ ಪ್ರಧಾನಿ ಮೋದಿ, “ಒಲಿಂಪಿಕ್ಸ್‌ ಜಗತ್ತಿನಲ್ಲಿ ಭಾರತದ ಧ್ವಜವನ್ನು ಹಾರಿಸಿದ ನಮ್ಮ ಕ್ರೀಡಾ ಸಾಧಕರು ಇಂದು ತ್ರಿವರ್ಣ ಧ್ವಜದ ಕೆಳಗೆ ನಮ್ಮೊಂದಿಗೆ ಕುಳಿತಿದ್ದಾರೆ. 140 ಕೋಟಿ ದೇಶವಾಸಿಗಳ ಪರವಾಗಿ ನಾನು ನಮ್ಮ ದೇಶದ ಎಲ್ಲ ಆಟಗಾರರನ್ನು ಅಭಿನಂದಿಸುತ್ತೇನೆ. ಇನ್ನು ಕೆಲವೇ ದಿನ ಗಳಲ್ಲಿ ಪ್ಯಾರಾಲಿಂಪಿಕ್ಸ್‌ಗಾಗಿ ಭಾರತದ ತಂಡ ಪ್ಯಾರಿಸ್‌ಗೆ ತೆರಳಲಿದೆ. ಅವರಿಗೆ ಶುಭಾಶಯ ಕೋರುತ್ತೇವೆ’ ಎಂದರು.

2036ರ ಒಲಿಂಪಿಕ್ಸ್‌ ಆಯೋಜನೆಗೆ ಭಾರತ ಕಳೆದ ಒಂದು ವರ್ಷದಿಂದ ಉತ್ಸುಕತೆ ತೋರುತ್ತಿದ್ದು, ಆತಿಥೇಯ ದೇಶದ ಆಯ್ಕೆ ಮುಂದಿನ ವರ್ಷ ನಡೆಯಲಿದೆ. ಭಾರತದೊಂದಿಗೆ ಸೌದಿ ಅರೇಬಿಯಾ ಮತ್ತು ಟರ್ಕಿ ಕೂಡ ಬಿಡ್‌ ಸಲ್ಲಿಸಲು ಉತ್ಸುಕವಾಗಿವೆ. ಭಾರತದಲ್ಲಿ ಒಲಿಂಪಿಕ್ಸ್‌ ಆಯೋಜನೆಯಾದರೆ ಅಹ್ಮದಾ ಬಾದ್‌ ಪ್ರಮುಖ ನಗರವಾಗಲಿದೆ.

Advertisement

ಒಲಿಂಪಿಕ್ಸ್‌  ಸಾಧಕರ ಕುಶಲ ವಿಚಾರಿಸಿದ ಮೋದಿ
ಪ್ರಧಾನಿ ನರೇಂದ್ರ ಮೋದಿ ಅವರು ಪ್ಯಾರಿಸ್‌ ಒಲಿಂಪಿಕ್ಸ್‌ ನಲ್ಲಿ ಪದಕ ಸಾಧನೆಗೈದ ಭಾರತದ ಕ್ರೀಡಾಪಟುಗಳನ್ನು ಗುರುವಾರ ತಮ್ಮ ನಿವಾಸದಲ್ಲಿ ಭೇಟಿ ಮಾಡಿ ಕುಶಲೋಪರಿ ನಡೆಸಿದರು. ಪ್ಯಾರಿಸ್‌ಗೆ ತೆರಳಿದವರೆಲ್ಲರೂ ಚಾಂಪಿಯನ್ಸ್‌ ಎಂದು ಪ್ರಶಂಸಿಸಿದರು.

ಈ ಸಂದರ್ಭದಲ್ಲಿ ಹಾಕಿ ತಂಡದ ಸದಸ್ಯರು, ಅವಳಿ ಪದಕ ಗೆದ್ದ ಮನು ಭಾಕರ್‌, ಸರಬ್ಜೋತ್‌ ಸಿಂಗ್‌, ಸ್ವಪ್ನಿಲ್‌ ಕುಸಾಲೆ, ಅಮನ್‌ ಸೆಹ್ರಾವತ್‌ ಅವ ರೆಲ್ಲ ಉಪಸ್ಥಿತರಿದ್ದರು. ಆದರೆ ಬೆಳ್ಳಿ ಪದಕ ಜಯಿಸಿದ ನೀರಜ್‌ ಚೋಪ್ರಾ ಜರ್ಮ ನಿಗೆ ತೆರಳಿದ್ದರಿಂದ ಗೈರಾಗಿದ್ದರು. ಇವರೆಲ್ಲರ ಜತೆ ಪ್ಯಾರಿಸ್‌ ಒಲಿಂಪಿಕ್ಸ್‌ ನಲ್ಲಿ ಪಾಲ್ಗೊಂಡ ಲಕ್ಷ್ಯ ಸೇನ್‌, ಮೀರಾಬಾಯಿ ಚಾನು, ಲವ್ಲಿನಾ ಬೊರ್ಗೊಹೇನ್‌ ಕೂಡ ಇದ್ದರು. ಕ್ರೀಡಾ ಸಚಿವ ಮನ್‌ಸುಖ್‌ ಮಾಂಡ ವೀಯ ಮತ್ತು ಭಾರತೀಯ ಒಲಿಂ ಪಿಕ್‌ ಅಸೋಸಿಯೇಶನ್‌ ಅಧ್ಯಕ್ಷೆ ಪಿ.ಟಿ. ಉಷಾ ಹಾಜರಿದ್ದರು.

ಹಾಕಿ ಸ್ಟಿಕ್‌, ಜೆರ್ಸಿ ಗಿಫ್ಟ್
ಈ ಸಂದರ್ಭದಲ್ಲಿ ಕಂಚಿನ ಪದಕ ಗೆದ್ದ ಭಾರತೀಯ ಹಾಕಿ ತಂಡದ ನಾಯಕ ಹರ್ಮನ್‌ಪ್ರೀತ್‌ ಸಿಂಗ್‌, ಗೋಲ್‌ಕೀಪರ್‌ ಪಿ.ಆರ್‌. ಶ್ರೀಜೇಶ್‌ ಅವರು ಎಲ್ಲ ಆಟಗಾರರ ಸಹಿಯುಳ್ಳ ಜೆರ್ಸಿ ಹಾಗೂ ಹಾಕಿ ಸ್ಟಿಕ್‌ ಒಂದನ್ನು ಪ್ರಧಾನಿಯವರಿಗೆ ಉಡುಗೊರೆಯಾಗಿ ನೀಡಿದರು. ಕುಸ್ತಿಪಟು ಅಮನ್‌ ಸೆಹ್ರಾವತ್‌ ತಮ್ಮ ಹಸ್ತಾಕ್ಷರವುಳ್ಳ ಜೆರ್ಸಿಯೊಂದನ್ನು ನೆನಪಿನ ಕಾಣಿಕೆಯಾಗಿ ಕೊಟ್ಟರು.
ಶೂಟರ್‌ ಮನು ಭಾಕರ್‌ ಅವರು, ಅವಳಿ ಪದಕ ತಂದಿತ್ತ ಪಿಸ್ತೂಲನ್ನು ಪ್ರಧಾನಿಯವರಿಗೆ ತೋರಿಸುತ್ತ, ಇದರ ಕಾರ್ಯ ವಿಧಾನದ ಕುರಿತು ವಿವರಿಸಿದರು. ಮೋದಿ ಇದನ್ನು ತೀವ್ರ ಕುತೂಹಲದಿಂದ ವೀಕ್ಷಿಸಿದರು.

ಎಲ್ಲರೂ ಚಾಂಪಿಯನ್ಸ್‌
“ಪ್ಯಾರಿಸ್‌ ಒಲಿಂಪಿಕ್ಸ್‌ನಲ್ಲಿ ಭಾರತವನ್ನು ಪ್ರತಿನಿಧಿಸಿದವರನ್ನು ಭೇಟಿಯಾಗಿ ಖುಷಿಯಾಯಿತು. ಪ್ಯಾರಿಸ್‌ಗೆ ತೆರಳಿದವರೆಲ್ಲರೂ ಚಾಂಪಿಯನ್ಸ್‌. ಭಾರತ ಸರಕಾರ ಕ್ರೀಡೆಗೆ ಉನ್ನತ ಮಟ್ಟದ ಬೆಂಬಲ ನೀಡುವುದನ್ನು ಮುಂದುವರಿಸಲಿದೆ’ ಎಂದು ಮೋದಿ ಟ್ವೀಟ್‌ ಮಾಡಿದರು.

Advertisement

Udayavani is now on Telegram. Click here to join our channel and stay updated with the latest news.

Next