Advertisement

ದೇಶ ಪ್ರೇಮ ತೆರೆದಿಡುವ ಸ್ವಾತಂತ್ರ್ಯೋತ್ಸವ‌ ಸಂಭ್ರಮ

10:34 PM Aug 14, 2019 | Sriram |

ವಿದ್ಯಾನಗರ: ಧ್ವಜಾರೋಹಣ, ಮೆರವಣಿಗೆ, ಪಟಾಕಿ, ದೇಶಭಕ್ತಿಗೀತೆಗಳು, ರಾಷ್ಟ್ರಗೀತೆಯ ಮೈನವಿರೇಳಿಸುವ ಗಾಯನಗಳೊಂದಿಗೆ ಸಂತಸ, ಸಡಗರ ಜತೆಗೆ ದೇಶವೇ ಕುತೂಹಲದಿಂದ ಕಾಯುವ ಕೆಂಪುಕೋಟೆಯಿಂದ ಕೇಳಿ ಬರುವ ಪ್ರಧಾನಿ, ರಾಷ್ಟ್ರಪತಿಯವರ ಭಾಷಣ ಇದು ನಮ್ಮ ದೇಶದ ಸ್ವಾತಂತ್ರ್ಯದಿನಾಚರಣೆ. ರಾಷ್ಟ್ರವೇ ಸಂಭ್ರಮಿಸುವ, ಪುಟ್ಟ ಮಕ್ಕಳಿಂದ ಹಿಡಿದು ಹಿರಿ ಹಿರಿಯ ನಾಗರಿಕರೂ ಉತ್ಸಾಹದಿಂದ ಪಾಲ್ಗೊಳ್ಳುವ ಹೆಮ್ಮೆಯ ದಿನ. ಹಬ್ಬದ ಸಡಗರ, ತ್ರಿವರ್ಣ ಧ್ವಜ ಬಾನಲ್ಲಿ ಹಾರಾಡುತ್ತಿದ್ದರೆ ಸಂತಸದಿಂದ ತುಂಬಿಕೊಳ್ಳುವ ಕಂಗಳು, ಸೆಲ್ಯೂಟ್‌ ಹೊಡೆಯುವ, ಚಪ್ಪಾಳೆ ತಟ್ಟುವ ಕೈಗಳು ದೇಶಪ್ರೇಮವನ್ನ ಸಾರುವ ಚೆಲುವು.

Advertisement

ಸ್ವಾರ್ಥ, ಭ್ರಷ್ಟ ಆಡಳಿತದ ತೆಕ್ಕೆಯಲ್ಲಿ ನಲುಗಿಹೋದ ಭಾರತೀಯರು ಶತಕಗಳ ಕಾಲ ಅನ್ಯರ ಅಧೀನದಲ್ಲಿ ನರಳಿದರು. ಆದರೂ ಜಾಗೃತಗೊಳ್ಳದ ದೇಶಪ್ರೇಮ, ಒಗ್ಗಟ್ಟಿನ ಕೊರತೆ ಪರಕೀಯರಿಗೆ ರಾಜ್ಯವಾಳಲು ಅನುವು ಮಾಡಿಕೊಟ್ಟಿತು. ಆದರೆ ರಾಷ್ಟ್ರಪ್ರೇಮ ಹಾಗೂ ಸ್ವರಾಜ್ಯದ ಬಗೆಗಿನ ಅರಿವು ಮೂಡಿದ ಮಹನೀಯರ ಸತತ ಪ್ರಯತ್ನ, ದೇಶ ಕಟ್ಟುವಲ್ಲಿ ಅನ್ಯರ ಅಟ್ಟುವಲ್ಲಿ ತೋರಿದ ಸಮಯಪ್ರಜ್ಞೆ, ಗುಂಡಿಗೆ ಎದೆಯೊಡ್ಡುವ ಧೀರತೆ ಸ್ವತಂತ್ರ ಭಾರತದ ಜನಮಾನಸದಲ್ಲಿ ಜೀವಂತವಾಗಿದೆ.

ಸವಾಲುಗಳ ಶಿಖರವನ್ನು ಏರಿ ತ್ರವರ್ಣ ಧ್ವಜವನ್ನು ಹಾರಿಸಿದ ನ್ಮಮ ದೇಶವು ಅಭಿವೃದ್ಧಿಯ ಹಾದಿಯಲ್ಲಿ ದಿಟ್ಟ ಹೆಜ್ಜೆಗಳನ್ನಿಟ್ಟು ಅಭಿವೃದ್ಧಿ ಹೊಂದಿದ ರಾಜ್ಯಗಳೇ ಬೆರಗಾಗುವಂತಹ ಸಾಧನೆ ಮಾಡುವುದು ಸಾಧ್ಯವಾಗಿದೆ. ಪ್ರಗತಿ ಪಥದಲ್ಲಿ ಸಾಗುವ ದೇಶದ ಮುಂದಿರುವ ಸವಾಲುಗಳೂ ಹತ್ತು ಹಲವು.

ವಿಜ್ಞಾನ, ತಂತ್ರಜ್ಞಾನ ಕ್ಷೇತ್ರಗಳಲ್ಲಿನ ಸಾಧನೆ ಆರ್ಥಿಕ ಸುಧಾರಣೆಗೆ ಕಾರಣವಾಯಿತು. ವಿದೇಶಿ ಹೂಡಿಕೆಗಳೂ ಇದಕ್ಕೆ ಪೂರಕವಾಗಿದ್ದು ದೇಶದ ಅಭಿವೃದ್ಧಿಯ ವೇಗವನ್ನು ಹೆಚ್ಚಿಸುತ್ತಿದೆ. ಬಡತನ ನೀಗುವಲ್ಲಿ ಸೃಷ್ಟಿಸಿದ ಉದ್ಯೋಗಾವಕಾಶಗಳು ಪ್ರಧಾನ ಪಾತ್ರವಹಿಸುತ್ತವೆ,ಭ್ರಷ್ಟಾಚಾರ ಬಾಲಸುತ್ತಿ ಮೂಲೆ ಸೇರುವ ದಿನಗಳೂ ದೂರವಿಲ್ಲ.

ವಿದ್ಯಾವಂತ ಜನತೆ ಯಾವುದೇ ರಾಷ್ಟ್ರದ ಆಸ್ತಿ. ಆದುದರಿಂದ ರಾಷ್ಟ್ರೀಯ ಸಾಕ್ಷರತಾ ಮಿಷನ್‌ನ ಸ್ಥಾಪನೆ, 14 ವರ್ಷದ ವರೆಗಿನ ಮಕ್ಕಳಿಗೆ ಖಡ್ಡಾಯ ವಿದ್ಯಾಭ್ಯಾಸ ಮೊದಲಾದ ನಿಯಮಗಳೊಂದಿಗೆ ಶಾಲೆಗಳಲ್ಲಿ ಹೆಚ್ಚಿದ ಸೌಕರ್ಯ, ಉನ್ನತ ವಿದ್ಯಾಭ್ಯಾಸಕ್ಕಿರುವ ವಿಫುಲವಾದ ಅವಕಾಶ ಭಾರತೀಯರು ಎಲ್ಲ ಕ್ಷೇತ್ರಗಳಲ್ಲೂ ಸಾಧನೆ ಮಾಡುವಂತೆ ಪ್ರೇರಿಸಿತು. ದೇಶವಿದೇಶಗಳಲ್ಲಿ ಜ್ಞಾನಾರ್ಜನೆಗೆ„ದ ಭಾರತೀಯರನೇಕರು ಬಹುರಾಷ್ಟ್ರೀಯ ಕಂಪೆನಿಗಳಲ್ಲಿ ಮಿಂಚುತ್ತಿದ್ದಾರೆ.

Advertisement

ಭುವಿಯಿಂದ ನಭಕ್ಕೆ
1975ರಲ್ಲಿ ಆರ್ಯಭಟನಿಂದ ಪ್ರಾರಂಭ ವಾದ ನಭದೆಡೆಗಿನ ಜಿಗಿತ ಇಂದು ಚಂದ್ರಯಾನದ ವರೆಗೂ ಬೆಳೆದು ನಿಂತಿದೆ. ಬಲಿಷ್ಠ ರಾಷ್ಟ್ರಗಳೂ ಬೆರಗುಗೊಳ್ಳುವಂತೆ ಮಾಡಿದ ಮಂಗಳಯಾನ, ಸುರಕ್ಷತೆಗೆ ಆಧ್ಯತೆ ನೀಡಿ ದೇಶವನ್ನು ಸುಭದ್ರವಾಗಿಸುವ ಭದ್ರತಾ ವ್ಯವಸ್ಥೆ ಭವ್ಯ ಭಾರತವನ್ನು ಬಲಿಷ್ಠ ಭಾರತವನ್ನಾಗಿ ಮಾಡಿದೆ.

ಆದರೆ ದುರಂತವೆದ್ದರೆ ಜನರ ವಿಶ್ವಾಸ ದಿಂದ ಆರಿಸಿಬಂದ ರಾಜಕಾರಣಿಗಳು ಭೋಗಿಗಳಾಗುತ್ತಿದ್ದಾರೆ. ಸಾಮಾನ್ಯ ಜನರು ಭ್ರಷ್ಟತೆಯ ಎದುರು ದನಿಯೆತ್ತಲು ಹಿಂಜರಿಯುತ್ತಿದ್ದಾರೆ. ಧರ್ಮಾಂಧತೆ, ಮತೀಯತೆ, ಜಾತೀಯತೆಯ ಹೆಸರಲ್ಲಿ ಹೊಡೆದಾಡಿಕೊಳ್ಳುವ ಸಣ್ಣತನ ದೂರಾಗಿ ವಿಶಾಲವಾದ ಆಲೋಚನೆಗಳು, ಮುಕ್ತವಾದ ಅವಕಾಶಗಳು ಸಾಮಾಜಿಕ ರೀತಿನೀತಿಗಳೊಂದಿಗೆ ರಾಜಿಮಾಡಿಕೊಂಡು ಪರಸ್ಪರ ಪ್ರೀತಿ, ವಿಶ್ವಾಸ ನೆಲೆನಿಂತಾಗ ದೇಶದಲ್ಲಿ ಶಾಂತಿ ಸಮಾಧಾನ ನೆಲೆನಿಲ್ಲಲು ಸಾಧ್ಯ.
ಯುವಜನಾಂಗದ ನಮ್ಮ ದೇಶದ ಅತ್ಯಂತ ದೊಡ್ಡ ಆಸ್ತಿ. ಆ ನಿಟ್ಟಿನಲ್ಲಿ ಇಂದಿನ ಯುವ ಜನಾಂಗ ಸರ್ವಧರ್ಮ ಜಾತಿ ಮತಗಳನ್ನು ಅರಿತುಕೊಂಡು ಪರಸ್ಪರ ಸೌಹಾದ‌ìವನ್ನು ಮೈಗೂಡಿಸಿಕೊಂಡು ಜಾತ್ಯತೀತ ಪ್ರಜಾಪ್ರಭುತ್ವ ರಾಷ್ಟ್ರವಾದ ಭಾರತದ ಘನತೆಯನ್ನು ಎತ್ತಿ ಹಿಡಿದು ನಿಜವಾದ ಸ್ವಾತಂತ್ರ್ಯದ ಪರಿಕಲ್ಪನೆಯನ್ನು ಸಾಕಾರಗೊಳಿಸಬೇಕಾಗಿದೆ. ಹಾಗೆಯೇ ಸ್ವಾತಂತ್ರ್ಯಕ್ಕಾಗಿ ಹೋರಾಡಿ ದೇಶಕ್ಕಾಗಿ ಮಡಿದ ನಾಯಕರನ್ನು, ಛಲದಿಂದ ಹೋರಾಡಿದ ಮಹಾನ್‌ ಮಹಾನ್‌ ದೇಶಭಕ್ತರನ್ನು ನೆನೆಸುತ್ತಾ ಅವರ ತ್ಯಾಗಕ್ಕೆ ಶಿರಬಾಗೋಣ. ಆಮೂಲಕ ನಮ್ಮ ಆಚರಣೆಗಳನ್ನು ಇನ್ನಷ್ಟು ಅರ್ಥಪೂರ್ಣವಾಗಿಸೋಣ.

ಕಾಶ್ಮೀರ: ಹೊಸ ಅಧ್ಯಾಯ
ಸ್ವತಂತ್ರ ಭಾರತ ಇಂದು ಸಂಪೂರ್ಣ ಸ್ವತಂತ್ರವಾಗಿದೆ. 370ನೇ ವಿಧಿಯನ್ನು ರದ್ದುಗೊಳಿಸುವ ಮೂಲಕ ಪ್ರಧಾನಿ ನರೇಂದ್ರ ಮೋದಿಯವರು ಕಾಶ್ಮೀರದಲ್ಲೂ ಈ ಬಾರಿಯ ಸ್ವಾತಂತ್ರ ದಿನದಂದು ತ್ರಿವರ್ಣ ಧ್ವಜ ಹಾರಾಡುವಂತೆ ಮಾಡಿರುವುದು ಭಾರತದ ಇತಿಹಾಸದಲ್ಲೇ ಹೊಸ ಆಧ್ಯಾಯಕ್ಕೆ ನಾಂದಿ ಹಾಡಿದೆ.

ಫೀನಿಕ್ಸ್‌ನಂತೆ ತಲೆ ಎತ್ತಿನಿಂತ ಭಾರತ
ಹತ್ತು ಹಲವು ಏಳುಬೀಳುಗಳನ್ನು ಕಂಡ ನಮ್ಮ ದೇಶವು 1947ರಲ್ಲಿ ಸ್ವತಂತ್ರವಾಯಿತು. ಸಂಪತ್ತೆಲ್ಲ ಬ್ರಿಟಿಷರ ಪಾಲಾದರೂ ಧೆ„ರ್ಯದಿಂದ ಮುನ್ನುಗ್ಗಿ ಮತ್ತೆ ಚಿಗುರಿತು. ಫನಿಕ್ಸ್‌ ಪಕ್ಷಿಯಂತೆ ಮೇಲೆದ್ದು ಇಂದು ಬಾನೆತ್ತರ ಹಾರಾಡುವ ಕೀರ್ತಿಯನ್ನು ಗಳಿಸುವ ಹಿಂದಿರುವ ತ್ಯಾಗ, ಬಲಿದಾನಗಳ ಕತೆ ಮರೆಯುವಂತಿಲ್ಲ. ಕಲ್ಲುಮುಲ್ಲಿನ ಹಾದಿಯಲಿ ತ್ರಿವರ್ಣ ಧ್ವಜ ಎತ್ತಿಹಿಡಿದ ಮಹನೀಯರ, ವೀರರ ಕತೆಗಳು ಚರಿತ್ರೆಯ ಪುಟಗಳಲ್ಲಿ ರಾರಾಜಿಸುತ್ತಿವೆ. ಅವರ ಹೋರಾಟದ ಫಲ ನಾವಿಂದು ಸ್ವತಂತ್ರ ಭಾರತದಲ್ಲಿ ಸಂಭ್ರಮದಿಂದ, ನೆಮ್ಮದಿಯಿಂದ ಬದುಕುವಂತೆ ಮಾಡಿದೆ. ಗಾಂಧೀಜಿಯ ತತ್ವಗಳು, ನೇತಾಜಿಯ ಆಲೋಚನೆಗಳು, ಟಾಗೂರರ ಹೆಜ್ಜೆಗಳು, ಸರೋಜಿನಿ ನಾಯ್ಡುರಂತಹ ಧೀರ ಮಹಿಳೆಯರ ಕೆಚ್ಚೆದೆ ದೇಶವನ್ನು ಪರಕೀಯರಿಂದ ಮುಕ್ತವಾಗಿಸಿದೆ.

-ವಿದ್ಯಾಗಣೇಶ್‌ ಆಣಂಗೂರು

Advertisement

Udayavani is now on Telegram. Click here to join our channel and stay updated with the latest news.

Next