Advertisement

ಪುಣೆ: ಸರಣಿ ಗೆಲುವಿನತ್ತ ಭಾರತದ ನಡೆ

10:02 PM Jan 04, 2023 | Team Udayavani |

ಪುಣೆ: “ಲಾಸ್ಟ್‌ ಬಾಲ್‌ ಥ್ರಿಲ್ಲರ್‌’ಗೆ ಸಾಕ್ಷಿಯಾದ ಮುಂಬಯಿ ಟಿ20 ಪಂದ್ಯವನ್ನು ಎರಡೇ ಎರಡು ರನ್ನುಗಳಿಂದ ಗೆದ್ದ ಭಾರತವಿನ್ನು ಗುರುವಾರ ಪುಣೆಯಲ್ಲಿ ಶ್ರೀಲಂಕಾವನ್ನು ಎದುರಿಸಲಿದೆ. ಗೆದ್ದರೆ ಸರಣಿ ಕೈವಶವಾಗಲಿದೆ. ಇನ್ನೊಂದೆಡೆ ಸರಣಿಯನ್ನು ಸಮಬಲಕ್ಕೆ ತರಲು ಲಂಕಾ ಪಡೆ ಹೋರಾಟವನ್ನು ಜಾರಿಯಲ್ಲಿರಿಸಲಿದೆ.

Advertisement

ವಾಂಖೇಡೆಯಲ್ಲಿ ಎರಡೂ ತಂಡಗಳಿಂದ ಸಮ ಬಲದ ಹೋರಾಟ ಕಂಡುಬಂದಿತ್ತು. ಆದರೆ ಅದೃಷ್ಟ ಪಾಂಡ್ಯ ಪಾಳೆಯದಲ್ಲಿತ್ತು, ಅಷ್ಟೇ. ಪುಣೆಯಲ್ಲಿ ಅದೃಷ್ಟ ಯಾರ ಕೈಹಿಡಿದೀತೇ, ಮತ್ತೆ ಟಿ20ಯ ನೈಜ ರೋಮಾಂಚನ ಗರಿಗೆದರೀತೇ ಎಂಬುದೆಲ್ಲ ಕುತೂಹಲದ ಸಂಗತಿಗಳು.

ಭಾರತದ ಪವರ್‌ ಪ್ಲೇ ವೈಫ‌ಲ್ಯ ಎದ್ದು ಕಂಡಿತ್ತು. ಡೆತ್‌ ಓವರ್‌ಗಳಲ್ಲಿ ದೀಪಕ್‌ ಹೂಡಾ-ಅಕ್ಷರ್‌ ಪಟೇಲ್‌ ಸಿಡಿದು ನಿಲ್ಲದೇ ಹೋಗಿದ್ದರೆ ಭಾರತದ ಮೊತ್ತ ನೂರೈವತ್ತರ ಗಡಿ ದಾಟುವುದೂ ಕಷ್ಟವಿತ್ತು. ಆಗ ಲಂಕೆಗೆ ಗೆಲುವಿನ ಅವಕಾಶ ಹೆಚ್ಚಿರುತ್ತಿತ್ತು.

ಗಮನ ಸೆಳೆದ ಬೌಲಿಂಗ್‌:

ಭಾರತದ ಯುವ ಬೌಲಿಂಗ್‌ ಪಡೆಯ ಪ್ರಯತ್ನ ಸ್ತುತ್ಯರ್ಹ. ಶಿವಂ ಮಾವಿ ಅವರದು “ಡ್ರೀಮ್‌ ಡೆಬ್ಯು’. ಪದಾರ್ಪಣ ಪಂದ್ಯದಲ್ಲೇ ಮಿಂಚು ಹರಿಸಿದರು. ಸ್ವಿಂಗ್‌ ಎಸೆತಗಳ ಮೂಲಕ ಘಾತಕವಾಗಿ ಪರಿಣಮಿಸಿದರು. ಉಮ್ರಾನ್‌ ಮಲಿಕ್‌ ಅತ್ಯಂತ ವೇಗದ ಎಸೆತದ ಮೂಲಕ ಸುದ್ದಿಯಾದರು. ಹರ್ಷಲ್‌ ಪಟೇಲ್‌ ದುಬಾರಿಯಾದರೂ ಎರಡು ಬ್ರೇಕ್‌ ಒದಗಿಸುವಲ್ಲಿ ಯಶಸ್ವಿಯಾದರು. ಆದರೆ ಅಂತಿಮ ಓವರ್‌ ಎಸೆಯಲು ಸ್ಪಿನ್ನರ್‌ ಅಕ್ಷರ್‌ ಪಟೇಲ್‌ ಬಂದಾಗ ಎದೆ ಢವಗುಟ್ಟಿದ್ದು ಸುಳ್ಳಲ್ಲ. ಆಗ ಚಮಿಕ ಕರುಣರತ್ನೆ ಸಿಡಿದು ನಿಂತಿದ್ದರು. ಭಾರತದ ಕೈಲಿದ್ದ ಪಂದ್ಯ ಜಾರಿಹೋಗಲು ಎರಡು ಸಿಕ್ಸರ್‌ ಸಾಕಿತ್ತು! ಆದರೆ ಅಕ್ಷರ್‌ ಬಹಳ ಲೆಕ್ಕಾಚಾರದಿಂದ ಅಳೆದು ತೂಗಿ ಎಸೆತಗಳನ್ನಿಕ್ಕಿದರು. ನಮ್ಮವರ ಫೀಲ್ಡಿಂಗ್‌ ಕೂಡ ಅಮೋಘ ಮಟ್ಟದಲ್ಲಿತ್ತು. ಎರಡು ರನೌಟ್‌ ಸಂಭವಿಸುವುದರೊಂದಿಗೆ ರೋಚಕ ಗೆಲುವು ನಮ್ಮದಾಯಿತು.

Advertisement

ಇಲ್ಲಿ ನಾಯಕ ಹಾರ್ದಿಕ್‌ ಪಾಂಡ್ಯ ಅವರ ಬೌಲಿಂಗ್‌ ಲೆಕ್ಕಾಚಾರ ತಲೆಕೆಳಗಾಯಿತೇ ಎಂಬ ಪ್ರಶ್ನೆಯೂ ಉದ್ಭವಿಸದಿರದು. ಅಂತಿಮ ಓವರ್‌ ಎಸೆಯಲು ಸ್ಪೆಷಲಿಸ್ಟ್‌ ಪೇಸ್‌ ಬೌಲರ್‌ಗಳಾÂರೂ ಇರಲಿಲ್ಲ. ಅವರೆಲ್ಲರ ಕೋಟಾ ಆಗಲೇ ಮುಗಿದಿತ್ತು. ಒಂದು ಓವರ್‌ ಉಳಿಸಿಕೊಂಡಿದ್ದ ಪಾಂಡ್ಯ ಅವರೇ ಸ್ವತಃ ದಾಳಿಗೆ ಇಳಿಯಬಹುದೆಂಬ ನಿರೀಕ್ಷೆ ಇತ್ತು. ಆದರೆ ಚೆಂಡು ಅಕ್ಷರ್‌ ಪಟೇಲ್‌ ಕೈಸೇರಿತು.

ಲೆಗ್‌ ಸ್ಪಿನ್ನರ್‌ ಯಜುವೇಂದ್ರ ಚಹಲ್‌ ಮರಳಿ ಟ್ರ್ಯಾಕ್‌ ಏರಬೇಕಾದ ಅಗತ್ಯವಿದೆ. ಟಿ20 ವಿಶ್ವಕಪ್‌ನಿಂದ ಹೊರಗಿರಿಸಿದ ಬಳಿಕ ಅವರ ಆತ್ಮವಿಶ್ವಾಸ ಕುಂಟಿತಗೊಂಡಂತಿದೆ. 2 ಓವರ್‌ಗಳಲ್ಲಿ 26 ರನ್‌ ನೀಡಿದ ಚಹಲ್‌ ಅವರನ್ನು ಮತ್ತೆ ಬೌಲಿಂಗ್‌ ದಾಳಿಗೆ ಇಳಿಸಲೇ ಇಲ್ಲ.

ಪವರ್‌ ಪ್ಲೇ ವೈಫ‌ಲ್ಯ:

ಟೀಮ್‌ ಇಂಡಿಯಾದ ಬಗೆಹರಿಯದ ಸಮಸ್ಯೆಯೆಂದರೆ ಪವರ್‌ ಪ್ಲೇ ಬ್ಯಾಟಿಂಗ್‌ನದ್ದು. ಕಳೆದ ವಿಶ್ವಕಪ್‌ನಲ್ಲಿ ರೋಹಿತ್‌ ಶರ್ಮ-ಕೆ.ಎಲ್‌. ರಾಹುಲ್‌ ಈ ಅವಧಿಯಲ್ಲಿ ಸಾಕಷ್ಟು ತಿಣುಕಾಡಿ ರನ್‌ ಗಳಿಸಿದ್ದರು. ಶ್ರೀಲಂಕಾ ವಿರುದ್ಧ ಇಶಾನ್‌ ಕಿಶನ್‌ ಮೊದಲ ಓವರ್‌ನಲ್ಲೇ 17 ರನ್‌ ದೋಚಿದಾಗ ಭಾರತದ ಸಮಸ್ಯೆ ಬಗೆಹರಿಯಿತು ಎಂದೇ ಭಾವಿಸಲಾಯಿತು. ಆದರೆ ಮೊದಲ ಪಂದ್ಯ ಕಂಡ ಶುಭಮನ್‌ ಗಿಲ್‌ ಸಿಡಿಯಲು ವಿಫ‌ಲರಾದರು. ಐಪಿಎಲ್‌ ಸೇರಿದಂತೆ 96 ಟಿ20 ಪಂದ್ಯಗಳಿಂದ 128.74ರಷ್ಟು ಉನ್ನತ ಸ್ಟ್ರೈಕ್‌ರೇಟ್‌ ದಾಖಲಿಸಿರುವ ಗಿಲ್‌ ಚೊಚ್ಚಲ ಪಂದ್ಯದಲ್ಲಿ “ಶೇಕಿ’ಯಾಗಿ ಕಂಡರು. ದ್ವಿತೀಯ ಪಂದ್ಯದಲ್ಲಿ ಅವರು ತಮ್ಮ ಸಮಸ್ಯೆಯನ್ನು ಬಗೆಹರಿಸಿಕೊಳ್ಳಬೇಕಿದೆ.

ಋತುರಾಜ್‌ ಗಾಯಕ್ವಾಡ್‌, ರಾಹುಲ್‌ ತ್ರಿಪಾಠಿ ರೇಸ್‌ನಲ್ಲಿರುವುದರಿಂದ ಯಾರೂ ನಿರ್ಲಕ್ಷ್ಯ ಮಾಡುವಂತಿಲ್ಲ.

“360 ಡಿಗ್ರಿ’ ಬ್ಯಾಟರ್‌ ಸೂರ್ಯಕುಮಾರ್‌ ಯಾದವ್‌ ಕೂಡ ಅಗ್ಗಕ್ಕೆ ಔಟಾದರು. 2022ರಲ್ಲಿ ಪ್ರಚಂಡ ಪ್ರದರ್ಶನ ನೀಡಿದ ಅವರ ಅಪರೂಪದ ಟಿ20 ವೈಫ‌ಲ್ಯ ಇದಾಗಿದೆ. ಸಂಜು ಸ್ಯಾಮ್ಸನ್‌ ಕೂಡ ಲಭಿಸಿದ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಬೇಕಿದೆ.

ಅರ್ಷದೀಪ್‌ ಸಿಂಗ್‌, ವಾಷಿಂಗ್ಟನ್‌ ಸುಂದರ್‌, ಮುಕೇಶ್‌ ಕುಮಾರ್‌ ಬೌಲಿಂಗ್‌ ಸರದಿಯಲ್ಲಿ ಕಾದು ನಿಂತಿದ್ದಾರೆ.

ಲಂಕಾ ಟಿ20 ಸ್ಪೆಷಲಿಸ್ಟ್‌ :

ಶ್ರೀಲಂಕಾ ಟಿ20 ಸ್ಪೆಷಲಿಸ್ಟ್‌ ಗಳನ್ನೇ ಹೊಂದಿರುವ ತಂಡ. ಏಷ್ಯಾ ಕಪ್‌ ಚಾಂಪಿಯನ್‌ ಎಂಬ ಕಿರೀಟವನ್ನೂ ಹೊತ್ತಿದೆ. ಇದಕ್ಕೆ ತಕ್ಕ ಪ್ರದರ್ಶನ  ನೀಡುವ ಸಾಮರ್ಥ್ಯವಂತೂ ಇದ್ದೇ ಇದೆ. ಆದರೆ ಅದೃಷ್ಟ ಕೈ ಹಿಡಿಯಬೇಕಷ್ಟೇ.  ಶಣಕ, ನಿಸ್ಸಂಕ, ರಾಜಪಕ್ಸ, ಹಸರಂಗ, ಧನಂಜಯ, ಕರುಣರತ್ನೆ ಅವರೆಲ್ಲ ಅತ್ಯಂತ ಅಪಾಯಕಾರಿಗಳೆಂಬುದರಲ್ಲಿ ಅನುಮಾನವಿಲ್ಲ.

Advertisement

Udayavani is now on Telegram. Click here to join our channel and stay updated with the latest news.

Next