Advertisement

ಟೀಮ್‌ ಇಂಡಿಯಾಕ್ಕೆ ಒಲಿಯಬೇಕಿದೆ ಲಕ್ನೋ ಲಕ್‌

11:54 PM Jan 28, 2023 | Team Udayavani |

ಲಕ್ನೋ: ಭಾರತಕ್ಕೆ ಕಾಲಿಟ್ಟ ಬಳಿಕ ನ್ಯೂಜಿಲ್ಯಾಂಡ್‌ ಮೊಗದಲ್ಲಿ ಮೊದಲ ಸಲ ಗೆಲುವಿನ ಮಂದಹಾಸ ಮೂಡಿದೆ. ಏಕದಿನ ಸರಣಿಯಲ್ಲಿ ವೈಟ್‌ವಾಶ್‌ ಅನುಭವಿಸಿದ ಬಳಿಕ ಟಿ20 ಸರಣಿಯ ಮೊದಲ ಮುಖಾಮುಖಿ ಯಲ್ಲಿ ಟೀಮ್‌ ಇಂಡಿಯಾವನ್ನು ಮಗುಚಿದೆ. ರವಿವಾರ ಲಕ್ನೋದಲ್ಲಿ ದ್ವಿತೀಯ ಪಂದ್ಯ ಏರ್ಪಡಲಿದ್ದು, ಇದನ್ನು ಗೆದ್ದರೆ ಸರಣಿ ಕಿವೀಸ್‌ ಪಾಲಾಗಲಿದೆ. ಪಾಂಡ್ಯ ಪಡೆ ಈ ಸಂಕಟದಿಂದ ಪಾರಾಗಬೇಕಾದ ಕಾರಣ ಮಾಡು-ಮಡಿ ಸ್ಥಿತಿಯಲ್ಲಿದೆ.

Advertisement

ರಾಂಚಿ ಪಂದ್ಯದಲ್ಲಿ ಭಾರತದ ಅನೇಕ ಸಮಸ್ಯೆಗಳು ಗೋಚರಕ್ಕೆ ಬಂದವು. ಇದರಲ್ಲಿ ಮುಖ್ಯವಾದುದು, ಡೆತ್‌ ಓವರ್‌ನಲ್ಲಿ ಅರ್ಷದೀಪ್‌ ಸಿಂಗ್‌ ತೋರ್ಪಡಿಸಿದ ಲೈನ್‌-ಲೆಂತ್‌ ಇಲ್ಲದ ಬೌಲಿಂಗ್‌. ಪರಿಣಾಮ, ಅಂತಿಮ ಓವರ್‌ನಲ್ಲಿ 27 ರನ್‌ ಸೋರಿ ಹೋಯಿತು. 21 ರನ್‌ ಅಂತರದ ಫ‌ಲಿತಾಂಶದಲ್ಲಿ ಅರ್ಷದೀಪ್‌ ಅವರ ಈ ದುಬಾರಿ ಬೌಲಿಂಗೇ ಟರ್ನಿಂಗ್‌ ಪಾಯಿಂಟ್‌ ಆಗಿತ್ತೆಂದೇ ಹೇಳಬೇಕು.

ವೇಗಿ ಉಮ್ರಾನ್‌ ಮಲಿಕ್‌ ಕೂಡ ದುಬಾರಿಯಾಗಿ ಪರಿಣಮಿಸಿದರು. ಒಂದೇ ಓವರ್‌ನಲ್ಲಿ ಅವರು 16 ರನ್‌ ಕೊಟ್ಟರು. ಹೀಗಾಗಿ ಅವರಿಗೆ ಇನ್ನೊಂದು ಓವರ್‌ ಸಿಗಲೇ ಇಲ್ಲ. ಬೌಲಿಂಗ್‌ ಆರಂಭಿಸಿದ ನಾಯಕ ಹಾರ್ದಿಕ್‌ ಪಾಂಡ್ಯ ಕೂಡ ಪರಿಣಾಮ ಬೀರಲಿಲ್ಲ. ಒಟ್ಟಾರೆ ಆರಂಭದಲ್ಲಿ ಹಾಗೂ ಕೊನೆಯಲ್ಲಿ ನಮ್ಮವರಿಗೆ ಬೌಲಿಂಗ್‌ ಹಿಡಿತಕ್ಕೇ ಸಿಗಲಿಲ್ಲ.

ಲಕ್ನೋದಲ್ಲಿ ಇದಕ್ಕೆ ಹೇಗೆ ಪರಿಹಾರ ಕಂಡುಕೊಳ್ಳಬಹುದು ಎಂಬ ಬಗ್ಗೆ ಯೋಚಿಸಬೇಕಿದೆ. ವೇಗದ ವಿಭಾಗದ ಬದಲಿ ಆಯ್ಕೆಯೆಂದರೆ ಮುಕೇಶ್‌ ಕುಮಾರ್‌ ಮಾತ್ರ. ಅರ್ಷದೀಪ್‌ ಅಥವಾ ಮಲಿಕ್‌ ಬದಲು ಮುಕೇಶ್‌ ದಾಳಿಗೆ ಇಳಿದರೆ ಅಚ್ಚರಿಯೇನಿಲ್ಲ. ಇಲ್ಲವೇ ತ್ರಿವಳಿ ಸ್ಪಿನ್‌ ದಾಳಿ ಸಂಘಟಿಸ ಬೇಕು.

ರಾಂಚಿಯಲ್ಲಿ ವೇಗಿಗಳೆಲ್ಲ ಧಾರಾಳಿಗಳಾಗುತ್ತಿದ್ದಾಗ ಕಿವೀಸ್‌ಗೆ ನಿಯಂತ್ರಣ ಹೇರಿದ್ದು ಕುಲದೀಪ್‌ ಯಾದವ್‌, ವಾಷಿಂಗ್ಟನ್‌ ಸುಂದರ್‌ ಮಾತ್ರ. ತೃತೀಯ ಸ್ಪಿನ್ನರ್‌ ಆಗಿ ಯಜು ವೇಂದ್ರ ಚಹಲ್‌ ಅವರನ್ನು ಸೇರಿಸಿ ಕೊಂಡರೆ ಹೇಗೆ ಎಂಬುದು ತಂಡದ ಆಡಳಿತ ಮಂಡಳಿಯ ಯೋಚನೆ.

Advertisement

ಬೇಕಿದೆ ಭದ್ರ ಬುನಾದಿ
ದೊಡ್ಡ ಮೊತ್ತದ ಚೇಸಿಂಗ್‌ ವೇಳೆ ಅಗ್ರ ಕ್ರಮಾಂಕದ ಬ್ಯಾಟರ್ ಭದ್ರ ಬುನಾದಿ ನಿರ್ಮಿಸುವುದು ಅತ್ಯಗತ್ಯ. ಆದರೆ ರಾಂಚಿಯಲ್ಲಿ ಭಾರತಕ್ಕೆ ಇದು ಸಾಧ್ಯವಾಗಲಿಲ್ಲ. 15 ರನ್‌ ಆಗುವ ಷ್ಟರಲ್ಲಿ ಶುಭಮನ್‌ ಗಿಲ್‌, ರಾಹುಲ್‌ ತ್ರಿಪಾಠಿ, ಇಶಾನ್‌ ಕಿಶನ್‌ ಪೆವಿಲಿಯನ್‌ ಸೇರಿಯಾಗಿತ್ತು. ಭಾರತಕ್ಕೆ ಪಂದ್ಯಕ್ಕೆ ಮರಳಲು ಸಾಧ್ಯವೇ ಇಲ್ಲ ಎಂಬ ಸ್ಥಿತಿಯನ್ನು ನಿರ್ಮಾಣ ಮಾಡಿಟ್ಟರು.

ಆದರೂ ನಂ.1 ಟಿ20 ಬ್ಯಾಟರ್‌ ಸೂರ್ಯಕುಮಾರ್‌ ಯಾದವ್‌, ಆಲ್‌ರೌಂಡರ್‌ ವಾಷಿಂಗ್ಟನ್‌ ಸುಂದರ್‌ ಒಂದು ಹಂತದ ಹೋರಾಟ ಸಂಘಟಿ ಸುವಲ್ಲಿ ಯಶಸ್ವಿಯಾದರು. ಸೋಲಿನ ಅಂತರವನ್ನು ತಗ್ಗಿಸಿದರು. ಆದರೆ ಅಗ್ರ ಕ್ರಮಾಂಕದ ಆಟಗಾರರು ಕ್ರೀಸ್‌ ಆಕ್ರಮಿಸಿಕೊಳ್ಳುವುದು ಅತೀ ಅಗತ್ಯ. ಪ್ರಚಂಡ ಫಾರ್ಮ್ ನಲ್ಲಿರುವ ಗಿಲ್‌, ಮುನ್ನುಗ್ಗಿ ಬೀಸಬಲ್ಲ ಇಶಾನ್‌, ಇನ್ನೂ ಅಂತಾರಾಷ್ಟ್ರೀಯ ಮಟ್ಟಕ್ಕೆ ಒಗ್ಗಿಕೊಳ್ಳದ ತ್ರಿಪಾಠಿ ಸಿಡಿದು ನಿಲ್ಲಬೇಕಿದೆ.

ಜಯದ ರುಚಿ ಕಂಡ ಕಿವೀಸ್‌
ನ್ಯೂಜಿಲ್ಯಾಂಡ್‌ಗೆ ಇದೀಗ ಗೆಲುವಿನ ರುಚಿ ಸಿಕ್ಕಿದೆ. ಟಿ20ಯಲ್ಲಿ ತಮ್ಮದು ಬೇರೆಯೇ ಶೈಲಿಯ ಆಟ ಎಂಬುದನ್ನು ತೋರಿಸಿ ಕೊಟ್ಟಿದ್ದಾರೆ. ಮುಖ್ಯವಾಗಿ ಓಪನರ್‌ ಡೇವನ್‌ ಕಾನ್ವೇ ಫಾರ್ಮ್ ಗೆ  ಮರಳಿದ್ದಾರೆ. 6ನೇ ಕ್ರಮಾಂಕದ ಬಳಿಕವೂ ಮುನ್ನುಗ್ಗಿ ಬ್ಯಾಟ್‌ ಬೀಸಬಲ್ಲ ಆಟಗಾರರು ಇಲ್ಲಿ ದ್ದಾರೆ. ಆಲ್‌ರೌಂಡರ್‌ಗಳ ದೊಡ್ಡ ಪಡೆಯೇ ಇದೆ. ಒಬ್ಬರಲ್ಲದಿದ್ದರೆ ಮತ್ತೂಬ್ಬರು ಆಡುತ್ತಾರೆ. ಬ್ರೇಸ್‌ವೆಲ್‌ ರನೌಟಾದರೇನಂತೆ, ತಾನಿದ್ದೇನೆ ಎಂದು ಡ್ಯಾರಿಲ್‌ ಮಿಚೆಲ್‌ ತೋರಿಸಿ ಕೊಟ್ಟರು. ನಾಳೆ ಇನ್ನೊಬ್ಬರು ಸಿಡಿಯಬಹುದು ಎಂಬ ಎಚ್ಚರದಲ್ಲಿ ಭಾರತ ಇರಬೇಕು. ಏಕೆಂದರೆ ಲಕ್ನೋ ಟ್ರ್ಯಾಕ್‌ ಬ್ಯಾಟಿಂಗ್‌ ಸ್ನೇಹಿ ಎಂಬುದನ್ನು ಬಹಳಷ್ಟು ಸಲ ಸಾಬೀತುಪಡಿಸಿದೆ.

 

 

Advertisement

Udayavani is now on Telegram. Click here to join our channel and stay updated with the latest news.

Next