Advertisement

ಏರುತ್ತಿದೆ ತಾಪಮಾನ: ಜನ ಜಾಗೃತಿಗೆ ಮುಂದಾದ ಆರೋಗ್ಯ ಇಲಾಖೆ

02:42 PM Mar 05, 2023 | Team Udayavani |

ಮಂಗಳೂರು : ಜಿಲ್ಲೆಯಲ್ಲಿ ಕಳೆದ ಕೆಲ ದಿನಗಳಿಂದ ಉಷ್ಣಾಂಶದಲ್ಲಿ ಭಾರೀ ಏರಿಕೆ ಕಾಣುತ್ತಿದ್ದು, ವೈರಲ್‌ ಜ್ವರ ಸೇರಿದಂತೆ ಆರೋಗ್ಯ ಮಸ್ಯೆಗಳಿಗೆ ಕಾಡುತ್ತಿದೆ. ಈ ಹಿನ್ನೆಲೆಯಲ್ಲಿ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಆರೋಗ್ಯ ಇಲಾಖೆ ಮುಂದಾಗಿದೆ. ದ.ಕ. ಜಿಲ್ಲಾ ಆರೋಗ್ಯ ಇಲಾಖೆಯಿಂದ ಎಲ್ಲ ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಈಗಾಗಲೇ ಸೂಚನೆ ನೀಡಲಾಗಿದ್ದು, ಅದರಂತೆ ಗರಿಷ್ಠ ಉಷ್ಣಾಂಶ ಏರಿಕೆಯಿಂದಾಗಿ ಏನೆಲ್ಲ ಮುನ್ನೆಚ್ಚರಿಕಾ ಕ್ರಮ ಕೈಗೊಳ್ಳಬೇಕು ಎಂಬ ಬಗ್ಗೆ ಸಾರ್ವಜನಿಕರಿಗೆ ಮಾಹಿತಿ ನೀಡಲು ವೈದ್ಯರಿಗೆ ಸೂಚಿಸಲಾಗಿದೆ.

Advertisement

ವೈದ್ಯರು/ತಂಡ ಕ್ಷೇತ್ರ ವೀಕ್ಷಣೆಗೆ ತೆರಳುವ ವೇಳೆ ಮತ್ತು ಸಾರ್ವಜನಿಕರು ಆರೋಗ್ಯ ಕೇಂದ್ರಕ್ಕೆ ಆಗಮಿಸುವಾಗ ಈ ಅರಿವು ಮೂಡಿಸಲಾಗುತ್ತದೆ. ವೈದ್ಯರು ಹೇಳುವಂತೆ ಉಷ್ಣಾಂಶ ಹೆಚ್ಚಾದಂತೆ ಹಲವಾರು ರೋಗಗಳು ಕಾಣಿಸಿಕೊಳ್ಳುವ ಸಾಧ್ಯತೆ ಹೆಚ್ಚಿರುತ್ತದೆ. ಬಿಸಿಲಿನ ಉರಿಗೆ ಬೆವರುವ ಕಾರಣ ದೇಹದಲ್ಲಿ ನೀರಿನ ಅಂಶ ಕಡಿಮೆಯಾಗುತ್ತದೆ. ಆಗ ದೇಹದಲ್ಲಿ ರೋಗ ನಿರೋಧಕ ಶಕ್ತಿಯೂ ಕುಂದುತ್ತದೆ.

ನಿರ್ಜಲೀಕರಣದಿಂದಾಗಿ ಮೈ-ಕೈ ನೋವು, ಮಾಂಸ ಖಂಡಗಳಲ್ಲಿ ನೋವು, ಉರಿ ಮೂತ್ರ, ಮೂತ್ರದ ಬಣ್ಣ ಕೆಂಪು ಇರಬಹುದು. ಮೈ ಮೇಲೆ ಚಿಕನ್‌ಪಾಕ್ಸ್‌ ಸೇರಿದಂತೆ ಸೆಕೆ ಬೊಕ್ಕೆ ಬೀಳಬಹುದು. ವೈರಲ್‌ ಜ್ವರ, ಶೀತ, ಕೆಮ್ಮು ಕಾಣಿಸಿಕೊಳ್ಳಬಹುದು. ಬಿಸಿಲಿಗೆ ಆಹಾರ ಬೇಗ ಹಾಳಾಗಿ ಹೊಟ್ಟೆ ಕೆಡಬಹುದು. ಈ ಹಿನ್ನೆಲೆಯಲ್ಲಿ ಎಳನೀರು, ಪಾನೀಯ ಸೇರಿದಂತೆ ದ್ರವ ರೂಪದ ಆಹಾರಗಳನ್ನು ಹೆಚ್ಚಾಗಿ ಸೇವಿಸಬೇಕು.

ಸಾವಯವ, ಬೆಚ್ಚಗಿನ ಆಹಾರ ಬಳಸಿದರೆ ಉತ್ತಮ. ಮಧ್ಯಾಹ್ನದ ವೇಳೆ ಓಡಾಡುವುದನ್ನು ತುಸು ಕಡಿಮೆ ಮಾಡಬೇಕು. ಬಾಯಾರಿಕೆಯಾಗದಿದ್ದರೂ ನೀರು ಕುಡಿಯುತ್ತಿರಬೇಕು. ಬಾಡುತ್ತಿದೆ ತರಕಾರಿ, ಹೂವು, ಹಣ್ಣುಗಳು ನಗರದ ರಸ್ತೆ ಬದಿ ಅಂಗಡಿಗಳಲ್ಲಿ ಮಾರಾಟಕ್ಕೆ ಇಟ್ಟಿರುವ ತರಕಾರಿ, ಹಣ್ಣುಗಳು ಬಾಡುತ್ತಿದ್ದು, ಗ್ರಾಹಕರ ಖರೀದಿಯೂ ಅಷ್ಟೊಂದಿಲ್ಲ. ವಾತಾವರಣ ಹೆಚ್ಚಾಗಿ ಬಿಸಿಲಿನ ಬೇಗೆಗೆ ಮಧ್ಯಾಹ್ನ ಆಗುತ್ತಿದ್ದಂತೆಯೇ ತರಕಾರಿ, ಹಣ್ಣುಗಳು ಬಾಡಿ ಹೋಗುತ್ತಿದೆ. ಅದೇ ರೀತಿ, ರಸ್ತೆ ಬದಿ ಮಾರಾಟ ಮಾಡುವ ಹೂವುಗಳು ಕೂಡ ಬಾಡುವ ಸ್ಥಿತಿಯಲ್ಲಿರುವುದು ಕಂಡುಬರುತ್ತಿದೆ. ಬಿಸಿಲಿನ ಝಳ ಏರುತ್ತಿದ್ದಂತೆ ಕಲ್ಲಂಗಡಿ, ಅನಾನಾಸು, ಸಿಯಾಳ, ಕರಬೂಜಗಳಿಗೆ ಬೇಡಿಕೆ ಹೆಚ್ಚಾಗಿದೆ.

ಮುನ್ನೆಚ್ಚರಿಕೆ ಅಗತ್ಯ

Advertisement

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಳೆದ ಕೆಲ ದಿನಗಳಿಂದ ಗರಿಷ್ಠ ತಾಪಮಾನ ವಾಡಿಕೆಗಿಂತ ಏರಿಕೆಯಾಗುತ್ತಿದೆ. ಈ ಸಮಯ ಸಾರ್ವಜನಿಕರು ಆರೋಗ್ಯದ ಬಗ್ಗೆ ಕಾಳಜಿ ವಹಿಸುವುದು ಅತೀ ಮುಖ್ಯ. ಇದೇ ಕಾರಣಕ್ಕೆ ಸಾರ್ವಜನಿಕರಿಗೆ ಅರಿವು ಮೂಡಿಸಲು ಆರೋಗ್ಯ ಇಲಾಖೆಯೂ ಮುಂದಾಗಿದೆ. ಸೆಕೆಯ ಪರಿಣಾಮ ದೇಹದಲ್ಲಿ ನೀರಿನ ಅಂಶ ಕಡಿಮೆಯಾಗಿ ವಿವಿಧ ರೋಗಗಳಿಗೂ ತುತ್ತಾಗುವ ಸಾಧ್ಯತೆ ಇರುತ್ತದೆ. ಸಾರ್ವಜನಿಕರು ಹೆಚ್ಚಾಗಿ ನೀರು ಕುಡಿಯಬೇಕು. ರೋಗ ಲಕ್ಷಣ ಕಂಡುಬಂದರೆ ವೈದ್ಯರನ್ನು ಭೇಟಿಯಾಗಿ.
– ಡಾ| ಕಿಶೋರ್‌ ಕುಮಾರ್‌, ದ.ಕ. ಜಿಲ್ಲಾ ಆರೋಗ್ಯಾಧಿಕಾರಿ

ನಡೆಯುತ್ತಿದೆ ಫಿವರ್‌ ಸರ್ವೇ 

ಹವಾಮಾನ ಬದಲಾವಣೆಯಿಂದ ಮಂಗಳೂರು ಸಹಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ವೈರಲ್‌ ಜ್ವರ ಹೆಚ್ಚಾಗುತ್ತಿದೆ. ಈ ಹಿನ್ನೆಲೆಯಲ್ಲಿ ಆರೋಗ್ಯ ಇಲಾಖೆಯಿಂದ ಫಿವರ್‌ ಸರ್ವೇ ನಡೆಯುತ್ತಿದೆ. ಮಂಗಳೂರು ಪಾಲಿಕೆ ವ್ಯಾಪ್ತಿ ಸಹಿತ ಜಿಲ್ಲೆಯ ಪ್ರಾಥಮಿಕ ಆರೋಗ್ಯ ಕೇಂದ್ರ ವ್ಯಾಪ್ತಿಯಲ್ಲಿ ಮನೆ ಮನೆ ಸರ್ವೇ ನಡೆಸಲಾಗುತ್ತಿದೆ. ಆಶಾ ಕಾರ್ಯಕರ್ತೆಯರು, ಮಲೇರಿಯಾ ನಿಯಂತ್ರಣಾ ಕಾರ್ಯಕರ್ತರು, ಆರೋಗ್ಯ ಸುರಕ್ಷತಾ ಅಧಿಕಾರಿಗಳು ಮತ್ತು ಪಾಲಿಕೆ ವ್ಯಾಪ್ತಿಯಲ್ಲಿ ಎಂಪಿಡಬ್ಲೂ ಕಾರ್ಯಕರ್ತರು ಮನೆ ಮನೆ ಭೇಟಿ ನೀಡಿ ಜ್ವರದ ಲಕ್ಷಣ ಇದ್ದರೆ ಅವರನ್ನು ಪರೀಕ್ಷೆಗೆ ಒಳಪಡಿಸುವಂತೆ ಸೂಚಿಸುತ್ತಿದ್ದಾರೆ. ಮುನ್ನೆಚ್ಚರಿಕೆ ಕೈಗೊಳ್ಳುವಂತೆ ಮನೆ ಮಂದಿಗೆ ಮಾಹಿತಿ ನೀಡುತ್ತಿದ್ದಾರೆ.

~ನವೀನ್‌ ಭಟ್‌ ಇಳಂತಿಲ

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next