Advertisement

ರಾಜ್ಯದಲ್ಲಿ ಹೆಚ್ಚುತ್ತಿದೆ ಗರ್ಭಪಾತ ಪ್ರಕರಣ

11:05 PM Jun 18, 2019 | Lakshmi GovindaRaj |

ಬೆಂಗಳೂರು: ಹೆಣ್ಣು ಮತ್ತು ಗಂಡು ಸಮಾನರು, ಯಾವ ಮಗುವಾದರೂ ಒಂದೇ ಎನ್ನುವ “ಪ್ರಜ್ಞೆ’ ವಿಶ್ವದಾದ್ಯಂತ ಹೆಚ್ಚಾಗುತ್ತಿದೆ. ಆದರೆ, ರಾಜ್ಯದ ಮಟ್ಟಿಗೆ ಅದು ತದ್ವಿರುದ್ಧವಾಗಿದೆ. ರಾಜ್ಯದಲ್ಲಿ ಕಳೆದ ಎರಡು ವರ್ಷದಲ್ಲಿ ಗರ್ಭಪಾತದ ಸಂಖ್ಯೆ ದುಪ್ಪಟ್ಟಾಗಿರುವುದೇ ಇದಕ್ಕೆ ಸಾಕ್ಷಿ!

Advertisement

ಎರಡೇ ವರ್ಷಗಳಲ್ಲಿ 56,186 ಗರ್ಭಪಾತಗಳು ನಡೆದಿವೆ. ಇವುಗಳಲ್ಲಿ ಹೆಣ್ಣು ಭ್ರೂಣ ಹತ್ಯೆಯೂ ಸೇರಿದೆ ಎನ್ನುವ ಅನುಮಾನ ದಟ್ಟವಾಗಿದೆ. ರಾಜ್ಯದಲ್ಲಿ ಕಟ್ಟುನಿಟ್ಟಿನ ಕಾಯ್ದೆಗಳ ಹೊರತಾಗಿಯೂ ಭ್ರೂಣ ಲಿಂಗ ಪತ್ತೆ ಮತ್ತು ಹತ್ಯೆ ನಡೆಯುತ್ತಿದೆ. 2015ರಲ್ಲಿ 12,754, 2016ರಲ್ಲಿ 14,877 ಗರ್ಭಪಾತದ ಪ್ರಕರಣಗಳು ದಾಖಲಾಗಿದ್ದು, ಈ ಪ್ರಮಾಣ 2017ಕ್ಕೆ ಏಕಾಏಕಿ 29,534ಕ್ಕೆ ಏರಿಕೆಯಾಗಿದೆ. 2018ರಲ್ಲಿಯೂ 26,652ರಷ್ಟು ಗರ್ಭಪಾತ ಪ್ರಕರಣಗಳು ದಾಖಲಾಗಿವೆ.

ಗರ್ಭಪಾತ ಹೆಚ್ಚಾಗುತ್ತಿರುವುದಕ್ಕೆ ಹೆಣ್ಣು ಭ್ರೂಣ ಹತ್ಯೆಯ ಜತೆಗೆ ವಿವಾಹ ಪೂರ್ವ ಗರ್ಭಧಾರಣೆ ಮತ್ತು ಭ್ರೂಣಗಳ ಬೆಳವಣಿಗೆಯಲ್ಲಿ ಉಂಟಾಗುತ್ತಿರುವ ಸಮಸ್ಯೆಗಳೂ ಕಾರಣ ಎನ್ನುತ್ತಾರೆ ವೈದ್ಯರು. ವೈದ್ಯಕೀಯ ಸೌಲಭ್ಯಗಳು ಸಾಕಷ್ಟು ಸುಧಾರಿಸಿರುವುದರಿಂದ ಭ್ರೂಣದ ಬೆಳವಣಿಗೆಯಲ್ಲಿ ನ್ಯೂನತೆಗಳು ಕಂಡು ಬಂದರೆ, ಅದನ್ನು ಪೋಷಕರ ಗಮನಕ್ಕೆ ತರಲಾಗುತ್ತಿದೆ. ಭ್ರೂಣದ ಮೆದುಳು, ಹೃದಯ ಸೇರಿದಂತೆ ಪ್ರಮುಖ ಅಂಗಾಂಗಗಳ ಬೆಳವಣಿಗೆಯಲ್ಲಿ ನ್ಯೂನತೆಗಳು ಕಂಡು ಬಂದರೆ ಅಥವಾ ಭ್ರೂಣದಿಂದ ತಾಯಿಯ ಜೀವಕ್ಕೆ ಕಂಟಕ ಉಂಟಾಗುವಂತಿದ್ದರೆ ಭ್ರೂಣಹತ್ಯೆಗೆ ಕಾನೂನಿನಲ್ಲಿ ಅವಕಾಶವಿದೆ ಎನ್ನುತ್ತಾರೆ ತಜ್ಞರು.

ಭ್ರೂಣ ಲಿಂಗ ಪತ್ತೆ ತಡೆಯಲು ಸುಪ್ರೀಂಕೋರ್ಟ್‌ನ ಮಾರ್ಗಸೂಚಿಗಳನ್ನು ಕಡ್ಡಾಯವಾಗಿ ಪಾಲಿಸಬೇಕು. “ಪ್ರಸವ ಪೂರ್ವ ಭ್ರೂಣ ಲಿಂಗ ಪತ್ತೆ ಕಾಯ್ದೆ-1994’ಯನ್ವಯ ಪ್ರಸೂತಿದಾರರು “ಅಲ್ಟ್ರಾಸೌಂಡ್‌ ಮಷೀನ್‌’ಗಳನ್ನು ಬಳಸಬಾರದು. ತರಬೇತಿ ಹೊಂದಿದ ರೆಡಿಯೋಲಾಜಿಸ್ಟ್‌ಗಳಿಗೆ ಮಾತ್ರ ಅವಕಾಶ ಕೊಡಬೇಕು ಎಂದು ಹಲವರು ಒತ್ತಾಯಿಸುತ್ತಲೇ ಇದ್ದಾರೆ. ಆದರೆ, ಯಾವುದೂ ಜಾರಿಯಾಗದೆ ಇರುವುದರಿಂದ ಭ್ರೂಣಲಿಂಗ ಹತ್ಯೆ ನಡೆಯುತ್ತಲೇ ಇದೆ.

ಬದಲಾದ ಜೀವನ ಕ್ರಮವೂ ಕಾರಣ: ಗರ್ಭಪಾತದ ಪ್ರಮಾಣ ಹೆಚ್ಚಾಗುತ್ತಿರುವುದಕ್ಕೆ ಜೀವನ ಕ್ರಮವೂ ಕಾರಣ ಎನ್ನುತ್ತಾರೆ ಸ್ತ್ರೀರೋಗ ತಜ್ಞೆ ಡಾ.ಸಂಗೀತ ರಾವ್‌. ಬೊಜ್ಜು, ಮಧುಮೇಹ ಮತ್ತು ಬಿಪಿ ಸೇರಿದಂತೆ ವಿವಿಧ ರೀತಿಯ ಆರೋಗ್ಯ ಸಮಸ್ಯೆಗಳು ಜನರಲ್ಲಿ ಹೆಚ್ಚುತ್ತಿವೆ. ಮದ್ಯಸೇವನೆ ಮತ್ತು ಸಿಗರೇಟು ಸೇದುವುದು ಸಹ ಇದಕ್ಕೆ ಪರೋಕ್ಷ ಕಾರಣವಾಗುತ್ತಿದೆ.

Advertisement

ತಡವಾಗಿ ಮದುವೆ, ಮದುವೆಯಾದ ಮೇಲೂ ಹಲವು ವರ್ಷ “ಪ್ಲ್ರಾನಿಂಗ್‌’ ಮಾಡಿಕೊಳ್ಳುವುದು. ಭ್ರೂಣದ ಫ‌ಲವತ್ತತೆಯ ಮೇಲೆ ಪರಿಣಾಮ ಬೀರುತ್ತದೆ. ಹೀಗಾಗಿ, ಇತ್ತೀಚಿನ ದಿನಗಳಲ್ಲಿ “ಮಿಸ್ಡ್ ಅಬೋರ್ಷನ್‌’ ಪ್ರಕರಣಗಳು (ಏಳುವಾರಗಳ ನಂತರ ಭ್ರೂಣದ ಹೃದಯ ಬಡಿತ ನಿಂತು ಹೋಗುವುದು) ಹೆಚ್ಚಾಗುತ್ತಿದೆ ಎಂದು ವಿವರಿಸುತ್ತಾರೆ.

ಮಕ್ಕಳಾಗುವ ಮುನ್ನ ಕೌನ್ಸಿಲಿಂಗ್‌ ಮಾಡಿಸಿಕೊಳ್ಳುವುದು ಮತ್ತು ಆರೋಗ್ಯಕರ ಜೀವನ ಶೈಲಿಯನ್ನು ದಂಪತಿಗಳು ರೂಢಿಸಿಕೊಳ್ಳುವುದರಿಂದ ಇಂತಹ ಸಮಸ್ಯೆಗಳನ್ನು ತಪ್ಪಿಸಬಹುದು ಎಂದು ಅವರು ಸಲಹೆ ನೀಡುತ್ತಾರೆ.

ನೆರೆ ರಾಜ್ಯಗಳಿಂದಲೂ ಜನ ಬರುತ್ತಿದ್ದಾರೆ: ನೆರೆಯ ರಾಜ್ಯಗಳಿಂದಲೂ ಭ್ರೂಣ ಲಿಂಗಪತ್ತೆಗೆ ಜನ ಬರುತ್ತಿದ್ದಾರೆ. ರಾಜ್ಯದಲ್ಲಿ “ಪ್ರಸವ ಪೂರ್ವ ಭ್ರೂಣ ಲಿಂಗ ಪತ್ತೆ ನಿಷೇಧ ಕಾಯ್ದೆ-1994’ನ್ನು ಜಾರಿಗೆ ತರಲು 2016ರಲ್ಲಿ ಸುಪ್ರೀಂಕೋರ್ಟ್‌ ಹೊರಡಿಸಿರುವ ಮಾರ್ಗಸೂಚಿಗಳನ್ನು ಕಟ್ಟು ನಿಟ್ಟಾಗಿ ಪಾಲಿಸುವಂತೆ ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡುವಂತೆ ಕೋರಿ ಹೈಕೋರ್ಟ್‌ಗೆ ವಿಜಯಪುರ ಜಿಲ್ಲೆ ಇಂಡಿ ಕ್ಷೇತ್ರದ ಮಾಜಿ ಶಾಸಕ ಹಾಗೂ ವೈದ್ಯ ಡಾ. ಸಾರ್ವಭೌಮ ಎಸ್‌.ಬಗಲಿ ಕಳೆದ ವರ್ಷ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು.

ಉತ್ತರ ಕರ್ನಾಟಕದ ಭಾಗದ ವಿಜಯಪುರ, ಬೆಳಗಾವಿ, ಕಲಬುರಗಿ ಹಾಗೂ ಬೀದರ್‌ ಜಿಲ್ಲೆಗಳು ಮಹಾರಾಷ್ಟ್ರದ ಗಡಿ ಭಾಗಕ್ಕೆ ಹೊಂದಿಕೊಂಡಿವೆ. ಈ ಜಿಲ್ಲೆಗಳಿಗೆ ನೆರೆಯ ಮಹಾರಾಷ್ಟ್ರದಿಂದ ಪ್ರತಿನಿತ್ಯ ನೂರಾರು ಸಂಖ್ಯೆಯಲ್ಲಿ ಜನ ಬಂದು ಭ್ರೂಣ ಲಿಂಗ ಪತ್ತೆ ಮಾಡಿಸಿಕೊಂಡು ಹೋಗುತ್ತಾರೆ. ಇಂಡಿಯಿಂದ ಮಹಾರಾಷ್ಟ್ರ ಕೇವಲ 7 ಕಿ.ಮೀ ಇದೆ. ಇಲ್ಲಿಗೂ ಜನ ಬಂದು ಭ್ರೂಣ ಲಿಂಗ ಪರೀಕ್ಷೆ ಮಾಡಿಸಿಕೊಳ್ಳುತ್ತಾರೆ ಎಂದು ದೂರು ದಾಖಲಿಸಲಾಗಿತ್ತು.

ಇದೇ ರೀತಿ ಇತ್ತೀಚಿಗೆ ತುಮಕೂರಿನ ಪಾವಗಡದಲ್ಲೂ ಹೆಣ್ಣು ಭ್ರೂಣ ಪತ್ತೆ ಮತ್ತು ಹತ್ಯೆ ಹೆಚ್ಚುತ್ತಿರುವುದರ ಬಗ್ಗೆ ರಾಜ್ಯ ಆರೋಗ್ಯ ಇಲಾಖೆಯಿಂದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳಿಗೆ ಪತ್ರ ಬರೆಯಲಾಗಿದೆ. ತುಮಕೂರಿನ ಪಾವಗಡಕ್ಕೆ ಆಂಧ್ರಪ್ರದೇಶದ ಅನಂತಪುರ ಜಿಲ್ಲೆಯ ಮಡಕಶಿರಾ, ಅಮರಾಪುರ ಮತ್ತು ಕಲ್ಯಾಣದುರ್ಗ ಸೇರಿದಂತೆ ವಿವಿಧ ಜಿಲ್ಲೆಗಳಿಂದ ಗರ್ಭಿಣಿಯರು ಬರುತ್ತಿರುವ ಬಗ್ಗೆ ಎಚ್ಚರಿಕೆ ವಹಿಸುವಂತೆ ಹೇಳಲಾಗಿದೆ. ಇದು ರಾಜ್ಯದಲ್ಲಿ ಅವ್ಯಾಹತವಾಗಿ ಹೆಣ್ಣು ಭ್ರೂಣ ಲಿಂಗ ಪತ್ತೆ ಮತ್ತು ಹತ್ಯೆ ನಡೆಯುತ್ತಿದೆ ಎನ್ನುವುದನ್ನು ಸಾಬೀತುಪಡಿಸುವಂತಿದೆ.

* ಹಿತೇಶ್‌ ವೈ

Advertisement

Udayavani is now on Telegram. Click here to join our channel and stay updated with the latest news.

Next