Advertisement

ಜಿಲ್ಲೆಯಲ್ಲಿ ಹೆಚ್ಚಾದ ವನ್ಯಮೃಗಗಳ ದಾಳಿ

12:39 PM Jul 12, 2019 | Suhan S |

ತುಮಕೂರು: ಮಾನವನ ದುರಾಸೆಗೆ ಎಲ್ಲೆಡೆ ಮಿತಿ ಮೀರಿದ ಗಣಿಗಾರಿಕೆ, ಜಮೀನು ಒತ್ತುವರಿಯಿಂದಾಗಿ ಮರಗಿಡಗಳ ಮಾರಣ ಹೋಮ ನಡೆಯುತ್ತಿದೆ. ಕಾಡಿನಲ್ಲಿರುವ ಪ್ರಾಣಿಗಳ ಜೀವನಕ್ಕೆ ಅಗತ್ಯವಿರುವ ಆಹಾರ ದೊರಕದೇ, ಕಾಡು ಪ್ರಾಣಿಗಳೆಲ್ಲಾ ಒಂದೊಂದಾಗಿ ನಾಡಿನತ್ತ ಬರುತ್ತಿದ್ದು, ರೈತರು ಬೆಳೆದ ಬೆಳೆಗಳನ್ನು ನಾಶ ಪಡಿಸುತ್ತಿವೆ. ಪ್ರಾಣಿಗಳಿಗೆ ಹೆದರಿ ಹೊಲ ತೋಟಗಳಲ್ಲಿ ಕೆಲಸ ಮಾಡವ ರೈತರು ಆತಂಕದ ಸ್ಥಿತಿ ಎದುರಿಸುತ್ತಿದ್ದಾರೆ.

Advertisement

ಜಿಲ್ಲೆಯ ಮಧುಗಿರಿ, ಪಾವಗಡ, ಕೊರಟಗೆರೆ ಸೇರಿದಂತೆ ವಿವಿಧ ಕಡೆಗಳಲ್ಲಿ ಕರಡಿ ದಾಳಿಗಳು ಹೆಚ್ಚುತ್ತಿವೆ. ಅದೇ ರೀತಿಯಲ್ಲಿ ಕುಣಿಗಲ್, ತಿಪಟೂರು, ಶಿರಾ, ಸೇರಿದಂತೆ ಇತರೆ ತಾಲೂಕುಗಳಲ್ಲಿ ಚಿರತೆಗಳು ಸಾಕು ಪ್ರಾಣಿಗಳ ಮೇಲೆ ದಾಳಿ ನಡೆಯುವುದು ಮುಂದುವರಿದಿದೆ. ಕಾಡುಪ್ರಾಣಿಗಳು ನಾಡಿಗೆ ಬರು ವುದು ನಿರಂತರವಾಗುತ್ತಿದೆ. ಇದರಿಂದ ಜನಜೀವನ ಅಸ್ತವ್ಯಸ್ತವಾಗಿದ್ದು, ಜೀವವನ್ನು ಕೈಯಲ್ಲಿಡಿದು ಬಾಳು ನಡೆಸುವಂತಾಗಿದೆ.

ಅರಣ್ಯ ಸಂಪತ್ತು ದಿನೇ ದಿನೆ ನಾಶ: ಜಿಲ್ಲೆಯಲ್ಲಿ ದಟ್ಟವಾಗಿದ್ದ ಅರಣ್ಯ ಸಂಪತ್ತು ಇಂದು ಹಂತ ಹಂತ ವಾಗಿ ನಾಶವಾಗುತ್ತಿದೆ. ಅರಣ್ಯ ಸಂಪತ್ತು ನಾಶ ವಾಗುತ್ತಿರುವ ಹಿನ್ನೆಲೆಯಲ್ಲಿ ಕಾಡು ಪ್ರಾಣಿಗಳು ಕಾಡಿನಲ್ಲಿ ವಾಸಿಸಲು ಆಗದಂತಹ ಸ್ಥಿತಿ ನಿರ್ಮಾಣ ಗೊಂಡು ಆಹಾರಕ್ಕಾಗಿ ಕಾಡು ಬಿಟ್ಟು ಹಲವು ಪ್ರಾಣಿಗಳು ನಾಡಿಗೆ ಬರುತ್ತಿವೆ.

ಕಾಡಿನಲ್ಲಿ ಹೇರಳವಾಗಿದ್ದ ಮರ ಗಿಡಗಳು ಮರಗಳ್ಳರ ಕಾಟದ ಜೊತೆಗೆ ಗಣಿ ಅಬ್ಬರದಿಂದ ಸಾವಿರಾರು ಎಕರೆ ಪ್ರದೇಶದಲ್ಲಿ ಅರಣ್ಯ ಸಂಪತ್ತು ನಾಶವಾಗುತ್ತಿದೆ. ಕಾಡು ಪ್ರಕೃತಿಯ ಸಮತೋಲನ ವನ್ನು ಕಾಪಾಡಲು ಪ್ರಮುಖ ಪಾತ್ರ ವಹಿಸುತ್ತದೆ. ಅದಕ್ಕಾಗಿಯೇ ನಮ್ಮ ಪೂರ್ವಿಕರು ಕಾಡು ಬೆಳೆಸಿದರೆ ನಾಡು ಉಳಿಯುತ್ತದೆ ಎನ್ನುವ ಕಲ್ಪನೆಯಿಂದ ಗಿಡ ಮರಗಳನ್ನು ಬೆಳೆಸುತ್ತಿದ್ದರು.

ಪ್ರಕೃತಿಯಲ್ಲಿ ನಡೆಯುವ ಎಲ್ಲಾ ವೈಪರೀತ್ಯಕ್ಕೂ ಇಲ್ಲಿ ಉಂಟಾಗುತ್ತಿರುವ ಅಸಮತೋಲನವೇ ಕಾರಣ ವಾಗಿದೆ. ಹಣದ ಆಸೆಗಾಗಿ ಬಲಿಯಾಗಿ ನೂರಾರು ವರ್ಷಗಳಿಂದ ಬೆಳೆದು ನಿಂತು ಹೆಮ್ಮರವಾಗಿದ್ದ ಗಿಡ ಮರಗಳನ್ನು ಕಡಿದು ಪರಿಸರ ನಾಶ ಮಾಡುವುದು ಎಲ್ಲೆಡೆ ಕಂಡು ಬಂದಿದೆ.

Advertisement

ಬರಿದಾಗುತ್ತಿರುವ ದೇವರಾಯನದುರ್ಗ ಅರಣ್ಯ: ನಗರದ ಸಮೀಪವಿರುವ ದೇವರಾಯನದುರ್ಗ ಅರಣ್ಯ ಪ್ರದೇಶ ಇಂದು ಮರಗಳ್ಳರ ಅಟ್ಟಹಾಸಕ್ಕೆ ಬಲಿಯಾಗಿ ಅರಣ್ಯದಲ್ಲಿದ್ದ ಪ್ರಮುಖ ಮರಗಳು ಇಂದು ಕಣ್ಮರೆಯಾಗುತ್ತಿವೆ. ಇದರಿಂದ ಈ ಅರಣ್ಯ ಪ್ರದೇಶದಲ್ಲಿದ್ದ ಅಮೂಲ್ಯ ಜೀವ ಜಂತುಗಳು ಮರೆಯಾಗಿವೆ. ಇದಲ್ಲದೆ ಮಧುಗಿರಿ ತಾಲೂಕಿನ ಅರಣ್ಯ ಪ್ರದೇಶಗಳು, ಗುಬ್ಬಿ, ತುರುವೇಕೆರೆ, ಚಿಕ್ಕನಾಯಕನಹಳ್ಳಿ ಹಾಗೂ ಶಿರಾ ತಾಲೂಕು ಬುಕ್ಕಾಪಟ್ಟಣ ಅರಣ್ಯ ಪ್ರದೇಶಗಳು ಬಟಾ ಬಯಲಾಗುತ್ತಿವೆ.

ಈ ಅರಣ್ಯದಲ್ಲಿ ಅತ್ಯುತ್ತಮವಾದ ಗಿಡ ಮರಗಳು ಬೆಳೆದು ನಿಂತಿದ್ದವು. ಆದರೆ, ಈ ಮರಗಿಡಗಳನ್ನು ಅವ್ಯಾಹತವಾಗಿ ನಾಶಪಡಿಸಿದರ ಜೊತೆಗೆ ಜಿಲ್ಲೆಗೆ ಹೊಂದಿಕೊಂಡಂತೆ ಇರುವ ಅರಣ್ಯ ಪ್ರದೇಶಗಳಲ್ಲಿ ಮರಗಳು ನಾಶವಾಗುತ್ತಿರುವ ಕಾರಣ ಚಿರತೆ, ಕರಡಿ, ಕಾಡುಹಂದಿ, ಕೃಷ್ಣಮೃಗ ಸೇರಿದಂತೆ ಇತರೆ ಪ್ರಾಣಿಗಳು ಕಾಡಿನಲ್ಲಿ ನೀರು, ಆಹಾರ ದೊರಕದೆ ನಾಡಿನತ್ತ ಮುಖಮಾಡಿವೆ.

ನಿಲ್ಲದ ಚಿರತೆ, ಕರಡಿ ದಾಳಿ: ಜಿಲ್ಲೆಯಲ್ಲಿ ಕರಡಿ ದಾಳಿ ನಿರಂತರವಾಗಿ ನಡೆಯುತ್ತಲೇ ಇದೆ. ಮಧುಗಿರಿ, ಪಾವಗಡ, ಕೊರಟಗೆರೆ ತಾಲೂಕುಗಳಲ್ಲಿ ಮನುಷ್ಯರ ಮೇಲೆ ಕರಡಿಗಳ ದಾಳಿ ನಿರಂತರವಾಗಿದೆ. ಹಲವು ಜನರು ಕರಡಿ ದಾಳಿಯಿಂದ ಶಾಶ್ವತವಾಗಿ ಅಂಗ ವಿಕಲಗಿದ್ದಾರೆ. ಕೆಲವರು ಮೃತಪಟ್ಟಿದ್ದಾರೆ.

ಇದೇ ರೀತಿ ಯಲ್ಲಿ ಚಿರತೆ ಮತ್ತು ಕಾಡು ಹಂದಿಗಳು ಮನುಷ್ಯರ ಮೇಲೆ ಮತ್ತು ಸಾಕು ಪ್ರಾಣಿಗಳ ಮೇಲೆ ದಾಳಿ ಮಾಡಿವೆ. 2005-06 ರಿಂದ 2019-20 ರ ಜೂನ್‌ವರೆಗೆ 34 ಜನರು ಕಾಡುಪ್ರಾಣಿಗಳ ದಾಳಿಗೆ ತುತ್ತಾಗಿ ಮೃತಪಟ್ಟಿದ್ದಾರೆ 470 ಜನರು ಗಾಯಗೊಂಡಿದ್ದಾರೆ.

ರೈತರ ಬೆಳೆ ನಷ್ಟ : ಜಿಲ್ಲೆಯಲ್ಲಿ ಪ್ರತಿ ಭಾರಿಯೂ ಕಾಡಿನಿಂದ ನಾಡಿಗೆ ಬರುವ ಕಾಡು ಪ್ರಾಣಿಗಳಿಂದ ರೈತರು ಬೆಳೆದಿರುವ ಬೆಳೆಗಳನ್ನು ನಿರಂತರವಾಗಿ ನಾಶಪಡಿಸುತ್ತಿವೆ. ರಾತ್ರಿ ಎಲ್ಲಾ ರೈತರ ತೋಟ, ಹೊಲ, ಗದ್ದೆಗಳ ಮೇಲೆ ದಾಳಿ ಮಾಡಿ ಬೆಳೆ ಹಾನಿ ಮಾಡುತ್ತಿವೆ. ಈವರೆಗೆ ಕಾಡಾನೆಗಳು ಹೆಚ್ಚು ರೈತರ ಬೆಳೆಗಳನ್ನು ಹಾನಿ ಮಾಡುತ್ತಿದ್ದವು. ಆದರೆ ಕಳೆದ ವರ್ಷದಿಂದ ಕಾಡಾನೆಗಳ ಉಪಟಳ ನಿಂತಿದೆ. ಆದರೆ, ಕೃಷ್ಣಮೃಗ, ಕಾಡಂದಿ, ಕೆಲವೆಡೆ ನವಿಲು ಸೇರಿದಂತೆ ಇತರೆ ಪ್ರಾಣಿಗಳಿಂದ ರೈತರ ಬೆಳದ ಬೆಳೆಗಳಿಗೆ ತೊಂದರೆ ಹೆಚ್ಚಾಗಿದೆ.

 

● ಚಿ.ನಿ.ಪುರುಷೋತ್ತಮ್‌

Advertisement

Udayavani is now on Telegram. Click here to join our channel and stay updated with the latest news.

Next