ಧಾರವಾಡ: ಭಾಷಾ ಸಾಹಿತ್ಯವನ್ನು ಮಾತ್ರ ವಿದ್ಯಾರ್ಥಿಗಳಿಗೆ ನೀಡುತ್ತಿದ್ದೇವೆ ಹೊರತು ಭಾಷಾ ಅಧ್ಯಯನದಲ್ಲಿ ವೈವಿಧ್ಯತೆ ಇಲ್ಲವಾಗಿದೆ ಎಂದು ಆಂಧ್ರ ಪ್ರದೇಶದ ಬುಡಕಟ್ಟು ವಿವಿ ಕುಲಪತಿ ಪ್ರೊ| ಟಿ.ವಿ. ಕಟ್ಟಿಮನಿ ಹೇಳಿದರು.
ಕವಿವಿ ಮಾನಸೋಲ್ಲಾಸ ಸಭಾಂಗಣದಲ್ಲಿ ಕವಿವಿ ಹಿಂದಿ ಅಧ್ಯಯನ ವಿಭಾಗ ಮತ್ತು ದಕ್ಷಿಣ ಭಾರತ ಹಿಂದಿ ಪ್ರಚಾರ ಸಭಾ ಸಹಯೋಗದಲ್ಲಿ ಅಜಾದಿ ಕಾ ಅಮೃತ ಮಹೋತ್ಸವ ಅಂಗವಾಗಿ “ಸ್ವಾತಂತ್ರ್ಯ ಸಂಗ್ರಾಮಕ್ಕೆ ಭಾರತೀಯ ಸಾಹಿತ್ಯದ ಕೊಡುಗೆ’ ಎಂಬ ವಿಷಯದ ಕುರಿತು ಹಮ್ಮಿಕೊಂಡಿರುವ ಎರಡು ದಿನಗಳ ನಾಲ್ಕನೇ ಅಂತಾರಾಷ್ಟ್ರೀಯ ಸಮ್ಮೇಳನ ಉದ್ಘಾಟಿಸಿ ಅವರು ಮಾತನಾಡಿದರು.
ಭಾಷಾ ಅನುವಾದ ಕ್ಷೇತ್ರಕ್ಕೆ ಹೆಚ್ಚಿನ ಬೇಡಿಕೆ ಇದೆ. ಆದರೆ ಭಾರತೀಯ ಭಾಷೆಯನ್ನು ಅಧ್ಯಯನ ಮಾಡಿದವರಿಗೆ ಉದ್ಯೋಗ ದೊರೆಯುತ್ತಿಲ್ಲ. ಭಾಷಾ ಶಿಕ್ಷಕರ ಸ್ಥಿತಿ ಅಷ್ಟೊಂದು ಉತ್ತಮವಾಗಿಲ್ಲ. ಆದ್ದರಿಂದ ಭಾಷಾ ಅಧ್ಯಯನದಲ್ಲಿ ವೈವಿಧ್ಯತೆ ಅಳವಡಿಸಿಕೊಳ್ಳಬೇಕಾಗಿದೆ ಎಂದರು.
ರಾಷ್ಟ್ರೀಯ ಹೊಸ ಶಿಕ್ಷಣ ನೀತಿಗೆ ಅನುಗುಣವಾಗಿ ಬಹುಶಿಸ್ತೀಯ ಕೌಶಲ್ಯ ಆಧಾರಿತ ಪಠ್ಯಕ್ರಮ ಹೊಂದಬೇಕಾಗಿದೆ. ಇಂದು ಕೃತಕ ಬುದ್ಧಿಮತ್ತೆಯಿಂದ ಅನುವಾದ ಮಾಡಲಾಗುತ್ತದೆ. ತಂತ್ರಜ್ಞಾನ ಆಧಾರಿತ ಶಿಕ್ಷಣ ಹೆಚ್ಚಿನ ಮಹತ್ವ ಪಡೆದಿದೆ. ಪ್ರಸ್ತುತ ಸ್ಟಾರ್ಟ್ಅಪ್ ಉದ್ಯಮಕ್ಕೆ ತಕ್ಕಂತೆ ವಿದ್ಯಾರ್ಥಿಗಳನ್ನು ರೂಪಿಸಬೇಕಾಗಿದೆ.
Related Articles
ವಿದ್ಯಾರ್ಥಿಗಳು-ಶಿಕ್ಷಕರು ವಿಷಯ ಆಧಾರಿತ ಜ್ಞಾನವನ್ನು ವೃದ್ಧಿಗೊಳಿಸಬೇಕಾಗಿದೆ. ವಿಶೇಷವಾದ ಸೃಜನಶೀಲ ಚಿಂತನೆಯನ್ನು ಶೈಕ್ಷಣಿಕ ಕ್ಷೇತ್ರದಲ್ಲಿ ಅಳವಡಿಸಿಕೊಳ್ಳಬೇಕಾಗಿದೆ ಎಂದು ಹೇಳಿದರು. ಕೊಲ್ಹಾಪುರದ ವಿಮರ್ಶಕ ಪ್ರೊ| ಅರ್ಜುನ ಚವ್ಹಾಣ ಮಾತನಾಡಿ, ಸಾಹಿತ್ಯ ಬೋಧನೆ ಅಧ್ಯಯನ ಮಾಡುವ ಅವಶ್ಯಕತೆ ಇದೆ. ಸಾಹಿತ್ಯದಿಂದ ದೇಶದ ಇತಿಹಾಸ ಅರಿಯಲು ಸಾಧ್ಯ ಎಂದರು.
ಬಿಹಾರದ ರಾಂಚಿಯ ಕೇಂದ್ರ ಸಾಹಿತ್ಯ ಅಕಾಡೆಮಿ ಪುರಸ್ಕೃತ ಕುಮಾರ ಮನಿಷ್ ಅರವಿಂದ ಮಾತನಾಡಿ, ಸಾಹಿತ್ಯ ವಿವಿಧ ಕ್ಷೇತ್ರದಲ್ಲಿ ಸಕ್ರಿಯವಾಗಿದೆ. ಸಾಹಿತ್ಯ ಒಂದು ಪ್ರಬಲ ಮಾಧ್ಯಮವಾಗಿದೆ. ಸಾಮಾಜಿಕ ವಲಯಕ್ಕೆ ಸಾಹಿತ್ಯದ ಕೊಡುಗೆ ಬಹಳ ಇದೆ. ಸಾಹಿತ್ಯವಲಯ ರಾಷ್ಟ್ರದ ಏಕತೆ ಸೌಹಾರ್ದತೆಯನ್ನು ಸೂಚಿಸುತ್ತದೆ ಎಂದು ಹೇಳಿದರು.
ಜಪಾನ್ ಮಾಧ್ಯಮ ತಜ್ಞ ಡಾ| ಅಶ್ವಿನಿ ಕುಮಾರ ಮಾತನಾಡಿ, ದೇಶಕ್ಕೆ ಸ್ವಾತಂತ್ರ್ಯ ನೀಡುವಲ್ಲಿ ಬರಹಗಾರ, ಸಂಗೀತಗಾರ ಮತ್ತು ಹೋರಾಟಗಾರರನ್ನು ನೆನೆಯುವುದು ಅವಶ್ಯಕವಾಗಿದೆ. ಭಾಷೆಗಳ ಮೂಲಕ ದೇಶವನ್ನು ಜೋಡಿಸಬಹುದಾಗಿದೆ ಎಂದರು.
ಸಮ್ಮೇಳನದ ಸ್ಮರಣ ಸಂಚಿಕೆ ಮತ್ತು ಹಿಂದಿ ಭಾಷೆಯ ಶಿಕ್ಷಕರು ರಚಿಸಿದ ಗ್ರಂಥವನ್ನು ಬಿಡುಗಡೆ ಮಾಡಲಾಯಿತು. ಕವಿವಿ ಪ್ರಭಾರಿ ಕುಲಪತಿ ಪ್ರೊ| ಬಿ.ಬಸವನಗೌಡ ಅಧ್ಯಕ್ಷತೆ ವಹಿಸಿದ್ದರು. ಹಿಂದಿ ವಿಭಾಗದ ಮುಖ್ಯಸ್ಥರಾದ ಪ್ರೊ| ಎಸ್.ಕೆ. ಪವಾರ, ದಕ್ಷಿಣ ಭಾರತ ಹಿಂದಿ ಪ್ರಚಾರ ಸಭಾ ಕಾರ್ಯದರ್ಶಿ ಪ್ರೊ| ಎಸ್.ಬಿ.ಹಿಂಚಿಗೇರಿ, ವಿಶ್ರಾಂತ ಸಾಲಿಸಿಟರ್ ಜನರಲ್ ಅರುಣ ಜೋಶಿ, ಕವಿವಿ ಕುಲಸಚಿವ ಯಶಪಾಲ್ ಕ್ಷೀರಸಾಗರ, ಮೌಲ್ಯಮಾಪನ ಕುಲಸಚಿವ ಪ್ರೊ| ಸಿ.ಕೃಷ್ಣಮೂರ್ತಿ, ಡಾ| ಜಾಕೀರ ಗುಳಗುಂಡಿ ಇನ್ನಿತರರಿದ್ದರು.