ಚಿಕ್ಕಬಳ್ಳಾಪುರ: ಯೋಗ ಮಾಡಿದರೆ ರೋಗ ಮುಕ್ತರಾಗಬಹುದು. ಇದರಿಂದ ದೈಹಿಕ ಹಾಗೂ ಮಾನಸಿಕ ಸಾಮರ್ಥ್ಯ ವೃದ್ಧಿಸುತ್ತದೆ ಎಂದು ರಾಜ್ಯ ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿ ಅಧ್ಯಕ್ಷ ಕೆ.ವಿ.ನಾಗರಾಜ್ ಹೇಳಿದರು.
ನಗರದ ಹೊರವಲಯದ ಆದಿಚುಂಚನಗಿರಿ ಮಠದ ಎಸ್.ಜೆ.ಸಿ.ಐ.ಟಿ ಕಾಲೇಜು ಆವರಣದಲ್ಲಿ ಜಿಲ್ಲಾಡಳಿತ, ಜಿಪಂ, ಆಯುಷ್ ಇಲಾಖೆ, ಎನ್ ಎಸ್ಎಸ್ ಘಟಕ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಎನ್ಸಿಸಿ ಘಟಕ ಹಾಗೂ ಯೋಗ ಸಂಸ್ಥೆಗಳು ಆಯೋಜಿಸಿದ್ದ ಯೋಗಥಾನ್-2023 ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಜ್ಞಾಪಕ ಶಕ್ತಿಯೂ ಹೆಚ್ಚುತ್ತೆ: ಯೋಗದಿಂದ ದೈಹಿಕ ಮತ್ತು ಮಾನಸಿಕ ಆರೋಗ್ಯ ವೃದ್ಧಿಯೊಂದಿಗೆ ಜ್ಞಾಪಕ ಶಕ್ತಿಯೂ ಹೆಚ್ಚುತ್ತದೆ. ಜೊತೆಗೆ, ಕಾರ್ಯದೊತ್ತಡ ನಿಭಾಯಿಸಲು ಸಹಾಯಕಾರಿ ಆಗುತ್ತದೆ. ವಿದ್ಯಾರ್ಥಿ ದೆಸೆ ಯಲ್ಲಿಯೇ ಮಕ್ಕಳು ಜೀವನದಲ್ಲಿ ಶಿಕ್ಷಣದ ಜೊತೆಗೆ ಯೋಗಾ ಭ್ಯಾಸ, ವ್ಯಾಯಾಮ ಅಳವಡಿಸಿ ಕೊಳ್ಳಬೇಕು.
ಆರೋಗ್ಯ ಸದೃಢ: ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಎನ್.ಎಂ.ನಾಗರಾಜ್ ಮಾತನಾಡಿ, ಯೋಗದಿಂದ ದೈಹಿಕವಾಗಿ ಮಾತ್ರವಲ್ಲದೆ, ಮಾನಸಿಕವಾಗಿಯೂ ಆರೋಗ್ಯ ಸದೃಢವಾಗಲಿದ್ದು, ಆರೋಗ್ಯವೂ ಸುಧಾರಣೆಯಾಗಲಿದೆ. ಯೋಗದಿಂದ ದೇಹದ ಎಲ್ಲಾ ಅಂಗಗಳಿಗೆ ವ್ಯಾಯಾಮ ಆಗುತ್ತದೆ. ಮಾನಸಿಕ ಸುಸ್ಥಿತಿ ಕಾಪಾಡಲು, ಮನಃಶಾಂತಿ ಪಡೆಯಲು, ಆತ್ಮ ವಿಶ್ವಾಸಗಳಿಸಲು ಹಾಗೂ ದಿನವಿಡೀ ಲವಲವಿಕೆಯಿಂದ ಇರಲು ಯೋಗ ಸಹಕಾರಿ ಎಂದು ಹೇಳಿದರು.
Related Articles
ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಕ್ಕೆ ಧನ್ಯವಾದ: ಇಂತಹ ನಮ್ಮ ಪ್ರಾಚೀನ ಯೋಗ ಪದ್ಧತಿಯನ್ನು ಲೋಕಕ್ಕೆ ವ್ಯಾಪಕವಾಗಿ ಪಸರಿಸಲು ದಾಖಲೆಯ ಯೋಗಥಾನ್ ಅನ್ನು ಸ್ವಾತಂತ್ರ್ಯದ ಅಮೃತ ಮಹೋತ್ಸವ ಅಂಗವಾಗಿ ಆಯೋಜನೆ ಮಾಡಲಾಗಿದೆ. ಅದರಂತೆ ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ ಎಲ್ಲರಿಗೂ ಧನ್ಯವಾದ ತಿಳಿಸಿದರು.
ಸ್ವಾತಂತ್ರ್ಯದ ಅಮೃತ ಮಹೋತ್ಸವ ಅಂಗವಾಗಿ ಕಳೆದ ವರ್ಷದಲ್ಲಿ 8ನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಪ್ರಯುಕ್ತ ಚಿಕ್ಕಬಳ್ಳಾಪುರ ಜಿಲ್ಲೆಯ ಐತಿಹಾಸಿಕ ಪ್ರಸಿದ್ಧ ಸ್ಥಳಗಳಾದ ಶ್ರೀಭೋಗನಂದೀಶ್ವರ ದೇವಸ್ಥಾನದ ಆವರಣ, ವಿಧುರಾಶ್ವತ್ಥ ಕ್ಷೇತ್ರದ ಆವರಣ, ಕೈವಾರದ ಶ್ರೀಯೋಗಿ ನಾರೇಯಣ ಕ್ಷೇತ್ರದ ಆವರಣ ಹಾಗೂ ಇತರ ಸಾರ್ವಜನಿಕ ಸ್ಥಳಗಳಲ್ಲಿ ಏಕಕಾಲಕ್ಕೆ ಸಾಮೂಹಿಕ ಯೋಗ ಪ್ರದರ್ಶನ ಜರುಗುವುದಾಗಿ ತಿಳಿಸಿದರು.
ರಾಜ್ಯ ಖಾದಿ ಗ್ರಾಮೋದ್ಯೋಗ ಮಂಡಳಿ ಅಧ್ಯಕ್ಷ, ಕೂಡ (ಇಖೀಈಅ)ಅಧ್ಯಕ್ಷ ಕೃಷ್ಣಮೂರ್ತಿ, ಜಿಲ್ಲಾಧಿಕಾರಿ, ತಾಲೂಕು ಮತ್ತು ಜಿಲ್ಲಾ ಮಟ್ಟದ ಅಧಿಕಾರಿ, ವಿದ್ಯಾರ್ಥಿಗಳು, ಸಾರ್ವಜನಿಕರಿಂದ ಯೋಗ ತರಬೇತುದಾರ ಜಿ.ಗೋವಿಂದ್ ಅವರು ಪ್ರಾಣಾಯಾಮ ಸೇರಿ ವಿವಿಧ ಆಸನ ಮಾಡಿಸಿದರು. ಉಪವಿಭಾಗಾಧಿಕಾರಿ ಡಾ.ಸಂತೋಷ್ ಕುಮಾರ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಎಸ್.ಮಹೇಶ್, ಜಿಲ್ಲಾ ಆಯುಷ್ ಅಧಿಕಾರಿ ತಬೀಬಬಾನು, ಯೋಗ ತರಬೇತುದಾರರಾದ ಲೋಕನಾಥ್, ವೀಣಾ ಲೋಕನಾಥ್, ದೈಹಿಕ ಶಿಕ್ಷಕ ಮಾರುತಿ, ಶ್ರೀಪತಂಜಲಿ ಯೋಗ ಶಿಕ್ಷಣ ಸಮಿತಿ ಜಿಲ್ಲಾ ಶಾಖೆಯ ಪದಾಧಿಕಾರಿಗಳು, ಜಿಲ್ಲಾ ಮತ್ತು ತಾಲೂಕು ಮಟ್ಟದ ಅಧಿಕಾರಿಗಳು, ಸಿಬ್ಬಂದಿ ಉಪಸ್ಥಿತರಿದ್ದರು.