Advertisement

ಜಿಪಂಗೆ ಅನುದಾನ ಹೆಚ್ಚಳ

01:53 AM Jul 12, 2019 | Team Udayavani |

ಬೆಂಗಳೂರು: ಜಿಲ್ಲಾ ಹಾಗೂ ತಾಲೂಕು ಪಂಚಾಯಿತಿಗಳಿಗೆ ಅಭಿವೃದ್ಧಿಗಾಗಿ ರಾಜ್ಯ ಸರ್ಕಾರ ನೀಡುವ ಅನುದಾನ ಹೆಚ್ಚಿಸುವ ಹಾಗೂ ಆಲೂಗಡ್ಡೆ ಮತ್ತು ಸಿರಿಧಾನ್ಯ ಬೆಳೆಯುವ ರೈತರಿಗೆ ವಿಶೇಷ ಪ್ರೋತ್ಸಾಹ ಧನದ ಪ್ಯಾಕೇಜ್‌ ಘೋಷಿಸಲಾಗಿದೆ.

Advertisement

ಸಂಪುಟ ಸಭೆ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಕೃಷ್ಣ ಬೈರೇಗೌಡ, ರಾಜ್ಯದ 30 ಜಿಪಂಗಳಿಗೆ ಹಾಲಿ ನೀಡುತ್ತಿರುವ 4 ಕೋಟಿ ರೂ. ಮೊತ್ತವನ್ನು ಎಂಟು ಕೋಟಿ ರೂ.ವರೆಗೆ ಹೆಚ್ಚಿಸಲು ತೀರ್ಮಾನಿಸಲಾಗಿದೆ. ಹೆಚ್ಚುವರಿ ಅನುದಾನ ಬಿಡುಗಡೆಗೆ ಭೌಗೋಳಿಕ ವಿಸ್ತೀರ್ಣ ಹಾಗೂ ಜನಸಂಖ್ಯೆ ಆಧಾರದ ಮಾನದಂಡ ನಿಗದಿಪಡಿಸಲಾಗಿದೆ. 177 ತಾಪಂಗಳಿಗೆ ಪ್ರಸ್ತುತ ನೀಡುತ್ತಿರುವ 1 ಕೋಟಿ ರೂ. ಮೊತ್ತ ಪ್ರಸಕ್ತ ಸಾಲಿಗೆ 2 ಕೋಟಿ ರೂ.ಗೆ ಏರಿಸಲಾಗಿದೆ. 2020-21ನೇ ಸಾಲಿನಲ್ಲಿ ಗರಿಷ್ಠ 3 ಕೋಟಿ ರೂ.ವರೆಗೆ ಹೆಚ್ಚಿಸಿ ಭೌಗೋಳಿಕ ವಿಸ್ತೀರ್ಣ ಹಾಗೂ ಜನಸಂಖ್ಯೆ ಮಾನದಂಡ ನಿಗದಿಪಡಿಸಲು ತೀರ್ಮಾನಿಸಲಾಗಿದೆ ಎಂದು ವಿವರಿಸಿದರು. ಆಲೂಗಡ್ಡೆ ಬೆಳೆಯುವ ರೈತರಿಗೆ ಪ್ರೋತ್ಸಾಹ ನೀಡಲು 2 ಹೆಕ್ಟೇರ್‌ ಮಿತಿಗೆ ಒಳಪಟ್ಟು ಪ್ರತಿ ಹೆಕ್ಟೇರ್‌ಗೆ ಬಿತ್ತನೆ ಬೀಜ ಖರೀದಿಗೆ 7500 ರೂ., ಕೀಟನಾಶಕ, ಗೊಬ್ಬರ ಖರೀದಿಗೆ 7200 ರೂ.ನಂತೆ ಪ್ರೋತ್ಸಾಹ ಧನಕ್ಕಾಗಿ 25.50 ಕೋಟಿ ರೂ.ಮೀಸಲಿಡಲಾಗಿದೆ ಎಂದು ಹೇಳಿದರು. ಅದೇ ರೀತಿ ನವಣೆ, ಸಾಮೆ, ಬರುಗು ಸೇರಿ ಸಿರಿಧಾನ್ಯ ಬೆಳೆಯುವ ರೈತರಿಗೆ ಪ್ರೋತ್ಸಾಹ ನೀಡಲು ಪ್ರತಿ ಹೆಕ್ಟೇರ್‌ಗೆ 10 ಸಾವಿರ ರೂ. ನೀಡಲು ಸಂಪುಟ ಒಪ್ಪಿಗೆ ನೀಡಿದೆ

ಕೆರೆ ತುಂಬಿಸುವ ಯೋಜನೆ: ಕೃಷ್ಣಾ ಮೇಲ್ದಂಡೆ ಎರಡನೇ ಹಂತದಡಿ ಬಲದಂಡೆ ನಾಲೆಯ ಆಧುನೀಕರಣ ಕಾಮಗಾರಿಗೆ 375 ಕೋಟಿ ರೂ. ಮೊತ್ತದಲ್ಲಿ ಕಾಮಗಾರಿ ಕೈಗೆತ್ತಿಕೊಳ್ಳಲು ಸಂಪುಟ ಸಮ್ಮತಿಸಿದೆ. ಹಾಸನ ಜಿಲ್ಲೆ ಕಾಚೇನಹಳ್ಳಿ ವ್ಯಾಪ್ತಿಯಲ್ಲಿ ಏತ ನೀರಾವರಿ ಮೂಲಕ 2.67 ಟಿಎಂಸಿ ನೀರು ಕೃಷಿಗೆ ಒದಗಿಸಲು 141 ಕೋಟಿ ರೂ., ಹೆಬ್ಟಾಳ, ನಾಗವಾರ ಕಣಿವೆಯಿಂದ ಬಾಗೇಪಲ್ಲಿ ತಾಲೂಕಿನ 24 ಕೆರೆಗಳಿಗೆ ಸಂಸ್ಕರಿಸಿದ ತ್ಯಾಜ್ಯ ನೀರು ಹರಿಸಲು 70 ಕೋಟಿ ರೂ., ಕೊಪ್ಪಳದ ಕುಷ್ಠಗಿ ತಾವರಗೆರೆ ಪ್ರದೇಶಕ್ಕೆ ತುಂಗಭದ್ರಾ ಎಡದಂಡೆ ಕಾಲುವೆಯಿಂದ ನೀರು ಪೂರೈಸಲು 88 ಕೋಟಿ ರೂ., ಮೇಲುಕೋಟೆಯ ಕಲ್ಯಾಣಿ ಪುನಶ್ಚೇತನಕ್ಕೆ 32 ಕೋಟಿ ರೂ., ರಾಮನಗರದಲ್ಲಿ ಅರ್ಕಾವತಿ ನದಿಯಿಂದ ಕಾಳೇಗೌಡನ ದೊಡ್ಡಿ ಕೆರೆ ತುಂಬಿಸಲು 28 ಕೋಟಿ ರೂ., ಮಂಡ್ಯದಲ್ಲಿ ಲೋಕಪಾವನಿ ನದಿಯಿಂದ ಕೆರೆ ತುಂಬಿಸಲು 30 ಕೋಟಿ ರೂ., ಬೆಂಗಳೂರು ನಗರ ಜಿಲ್ಲೆ ಗಾಣಿಗರಹಳ್ಳಿಯ ಕೆರೆ ಅಭಿವೃದ್ಧಿಗೆ 13 ಕೋಟಿ ರೂ., ಚಿಕ್ಕಬಾಣಾವರ ಕೆರೆ ಅಭಿವೃದ್ಧಿಗೆ 30 ಕೋಟಿ ರೂ., ಬೈಲಹೊಂಗಲ ಪಟ್ಟಣಕ್ಕೆ ನೀರು ಪೂರೈಕೆಗೆ 95 ಕೋಟಿ ರೂ. ಮೊತ್ತದ ಕಾಮಗಾರಿಗೆ ಸಂಪುಟ ಒಪ್ಪಿಗೆ ನೀಡಿದೆ.

ತಿರುಮಲ-ತಿರುಪತಿಯಲ್ಲಿ ಕರ್ನಾಟಕ ಭವನ ಸಮೀಪ ರಾಜ್ಯದ ಸಾರ್ವಜನಿಕರಿಗೆ ಹೊಸ ಅತಿಥಿಗೃಹ ನಿರ್ಮಾಣಕ್ಕೆ 26 ಕೋಟಿ ರೂ. ಹಾಗೂ ವಿಜಯಪುರದ ಅಲಮೇಲ, ಹಾಸನದ ಸೋಮಹಳ್ಳಿಯಲ್ಲಿ ತೋಟಗಾರಿಕೆ ಮಹಾವಿದ್ಯಾಲಯ ಸ್ಥಾಪನೆಗೆ ಸಂಪುಟ ಅನುಮತಿ ನೀಡಿದೆ ಎಂದು ಹೇಳಿದರು.

ಎಸ್‌ಟಿ ಮೀಸಲು ಪರಿಷ್ಕರಣೆಗೆ ಆಯೋಗ ರಚನೆ

ಎಸ್‌ಟಿ ಮೀಸಲಾತಿ ಪರಿಷ್ಕರಣೆ ಸಂಬಂಧ ಗುರುವಾರದ ಸಂಪುಟ ಸಭೆಯಲ್ಲಿ ಚರ್ಚೆ ನಡೆದು ಆಯೋಗ ರಚಿಸಲು ಮುಖ್ಯಮಂತ್ರಿಗೆ ಅಧಿಕಾರ ನೀಡಲಾಗಿದೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಚಿವ ಕೃಷ್ಣ ಬೈರೇಗೌಡ, ಜನಸಂಖ್ಯೆಗೆ ಅನುಗುಣವಾಗಿ ಪರಿಶಿಷ್ಟ ಪಂಗಡದ ಮೀಸಲಾತಿ ಪರಿಷ್ಕರಣೆ ಸಂಬಂಧ ಇತ್ತೀಚೆಗೆ ಹೋರಾಟ ನಡೆದಿತ್ತು. ಉಪ ಮುಖ್ಯಮಂತ್ರಿ ಸ್ಥಳಕ್ಕೆ ಭೇಟಿ ನೀಡಿ ಮಾತುಕತೆ ನಡೆಸಿದ್ದರು. ಆ ವಿಚಾರ ಸಂಪುಟ ಸಭೆಯಲ್ಲಿ ಚರ್ಚೆಯಾಗಿ ಮೀಸಲಾತಿ ಪರಿಷ್ಕರಣೆ ಸಂಬಂಧ ಸಾಧಕ-ಬಾಧಕ ಕುರಿತು ಅಧ್ಯಯನ ನಡೆಸಲು ಆಯೋಗ ರಚನೆಗೆ ಮುಖ್ಯಮಂತ್ರಿಯವರಿಗೆ ಅಧಿಕಾರ ನೀಡಲು ತೀರ್ಮಾನಿಸಲಾಯಿತು ಎಂದು ಹೇಳಿದರು.
Advertisement

Udayavani is now on Telegram. Click here to join our channel and stay updated with the latest news.

Next