Advertisement

ಫ್ಲೆಕ್ಸ್‌ನಲ್ಲಿ ಕೆಂಪೇಗೌಡರ ಬದಲು ವೀರಮದಕರಿ ಫೋಟೋ ಮುದ್ರಣ

03:21 PM Jun 28, 2022 | Team Udayavani |

ಎಚ್‌.ಡಿ.ಕೋಟೆ: ತಾಲೂಕು ಆಡಳಿತದ ಎಡವಟ್ಟಿನಿಂದ ಕೆಂಪೇಗೌಡರ ಜಯಂತಿ ಕಾರ್ಯಕ್ರಮದ ಫ್ಲೆಕ್ಸ್‌ನಲ್ಲಿ ನಾಡಪ್ರಭುಗಳ ಭಾವಚಿತ್ರದ ಬದಲಾಗಿ ವೀರಮದಕರಿ ನಾಯಕನ ಚಿತ್ರ ಹಾಕಿದ್ದು, ಗೊಂದಲಕ್ಕೆ ಕಾರಣವಾಯಿತು.

Advertisement

ಪಟ್ಟಣದಲ್ಲಿ ತಾಲೂಕು ಆಡಳಿತ ಸೋಮವಾರ ಬೆಳಗ್ಗೆ 10.30ರಲ್ಲಿ ನಾಡಪ್ರಭು ಕೆಂಪೇಗೌಡ ಜಯಂತಿ ಸರಳ ಕಾರ್ಯಕ್ರಮ ಆಯೋಜಿಸಿತ್ತು. ವೇದಿಕೆ ಹಿಂಬದಿಯಲ್ಲಿ ಕೆಂಪೇಗೌಡ ಜಯಂತಿ ಕುರಿತು ಫ್ಲೆಕ್ಸ್‌ ಅಳವಡಿಸಲಾಗಿತ್ತು. ಆದರೆ, ಅದರಲ್ಲಿ ಕೆಂಪೇಗೌಡರ ಫೋಟೋ ಬದಲಿಗೆ ವೀರ ಮದಕರಿನಾಯಕ ಚಿತ್ರ ಹಾಕಿದ್ದನ್ನು ಅಧಿಕಾರಿಗಳು ಗಮನ ಹರಿಸಿಲ್ಲ. ಸಮಾರಂಭಕ್ಕೆ ಆಗಮಿಸಿದ್ದ ಬುದ್ಧಿಜೀವಿಗಳು, ಫ್ಲೆಕ್ಸ್‌ನಲ್ಲಿ ಚಿತ್ರ ತಪ್ಪಾಗಿ ಮುದ್ರಣಗೊಂಡಿರುವುದನ್ನು ಗಮನಿಸಿ, ತಾಲೂಕು ಆಡಳಿತದ ಗಮನಕ್ಕೆ ತಂದಿದ್ದಾರೆ.

ಆಗ ಫ್ಲೆಕ್ಸ್‌ ತರಾತುರಿಯಲ್ಲಿ ತೆರವುಗೊಳಿಸಿ ಕಾರ್ಯಕ್ರಮ ನಡೆಸಲಾಯಿತು. ಕಾರ್ಯಕ್ರಮ ಬೆಳಗ್ಗೆ 10.30ಕ್ಕೆ ನಿಗದಿ ಆಗಿತ್ತು. ಆದರೆ, 11.30 ಆದ್ರೂ ಕಾರ್ಯಕ್ರಮ ಆರಂಭಗೊಳ್ಳಲಿಲ್ಲ ಮತ್ತು ಶಾಸಕರು ಕಾರ್ಯಕ್ರಮಕ್ಕೆ ಆಗಮಿಸಿದೇ ಇರುವುದರಿಂದ ಕುಪಿತರಾದ ಸಮುದಾಯದ ಮುಖಂಡರು ತಾಲೂಕು ಆಡಳಿತದ ವಿರುದ್ಧ ಘೋಷಣೆ ಕೂಗಿ ಕಾರ್ಯಕ್ರಮದಿಂದ ಹೊರ ಹೋಗಲು ನಿರ್ಧರಿಸಿದರು. ಶಾಸಕರ ಆಗಮನಕ್ಕಾಗಿ ತಾಲೂಕು ಆಡಳಿತ ಕಾದು ಕುಳಿತು ಕೆಂಪೇಗೌಡರಿಗೆ ಮತ್ತು ತಾಲೂಕಿನ ಜನತೆ ಅಪಮಾನಿಸುವುದು ತರವಲ್ಲ, ಶಾಸಕರು ಯಾವ ಸಮಾರಂಭಗಳಿಗೂ ನಿಗದಿತ ವೇಳೆಗೆ ಆಗಮಿಸುವುದೇ ಇಲ್ಲ. ಹೀಗಾಗಿ ಕಾರ್ಯಕ್ರಮ ಮುಂದುವರಿಸಲು ಸಭಿಕರು ಒತ್ತಾಯಿಸಿದರು.

ಈ ವೇಳೆ ತಹಶೀಲ್ದಾರ್‌, ಸಾರ್ವಜನಿಕರ ನಡುವೆ ಮಾತಿನ ಚಕಮಕಿ ನಡೆಯಿತು. ಬಳಿಕ ತಹಶೀಲ್ದಾರ್‌ ಎಲ್ಲರನ್ನು ಸಮಾಧಾನ ಪಡಿಸಿ, 11.30ಕ್ಕೆ ಶಾಸಕ ಅನಿಲ್‌ ಚಿಕ್ಕಮಾದು ಅವರ ಗೈರು ಹಾಜರಿಯಲ್ಲಿ ಕಾರ್ಯಕ್ರಮ ಆರಂಭಿಸಿದರು. ಮಧ್ಯಾಹ್ನ 12.20ಕ್ಕೆ ಆಗಮಿಸಿದ ಶಾಸಕರು, ವೇದಿಯಲ್ಲಿರಿಸಿದ್ದ ಚಿತ್ರಪಟಕ್ಕೆ ಪುಷ್ಪಾರ್ಚನೆ ಮಾಡಿದರು.

ಬಳಿಕ ಮಾತನಾಡಿದ ಅನಿಲ್‌ ಚಿಕ್ಕಮಾದು, ಕೆಂಪೇಗೌಡರು ಬೆಂಗಳೂರು ನಿರ್ಮಾಣಕ್ಕೆ ನೀಡಿದ ಕೊಡುಗೆ, ಕೆರೆಕಟ್ಟೆಗಳನ್ನು ನಿರ್ಮಿಸಿ ನೀರಿನ ಸಮಸ್ಯೆ ಬಗೆಹರಿಸಿದನ್ನು ಸ್ಮರಿಸಿದರು. ತಾಲೂಕು ಒಕ್ಕಲಿಗರ ಸಂಘದ ಅಧ್ಯಕ್ಷ ವೆಂಕಟೇಶ್‌, ಕೃಷ್ಣೇಗೌಡ, ಯಡತೊರೆ ಮಹೇಶ, ರಾಜೇಂದ್ರ, ಎಚ್‌.ಬಿ.ನರಸಿಂಹೇಗೌಡ, ಜಯಪ್ರಕಾಶ್‌, ರೈತ ಸಂಘದ ನಾಗರಾಜು ಮೊದಲಾದವರು ಉಪಸ್ಥಿತರಿದ್ದರು.

Advertisement

ಕೆಂಪೇಗೌಡ ಜಯಂತಿ ಕಾರ್ಯಕ್ರಮಕ್ಕೆ 11.30ಗಂಟೆಗೆ ನಾನು ಆಗಮಿಸುತ್ತೇನೆ. ಕಾರ್ಯಕ್ರಮ ಪ್ರಾರಂಭಿಸಿ ನಂತರ ಬಂದು ಪಾಲ್ಗೊಳ್ಳುತ್ತೇನೆಂದು ತಹಶೀಲ್ದಾರ್‌ಗೆ ತಿಳಿಸಿದ್ದೆ. ಅದಂತೆಯೇ ಕೊಂಚ ತಡವಾಗಿ ಆಗಮಿಸಿದ್ದೇನೆ. -ಅನಿಲ್‌ ಚಿಕ್ಕಮಾದು, ಶಾಸಕ.

ಅಕ್ರಮ, ಸಕ್ರಮ ದಾಖಲಾತಿಗಳ ಪರಿಶೀಲನೆಯಲ್ಲಿ ತೊಡಗಿಸಿಕೊಳ್ಳ ಬೇಕಿತ್ತು. ನನ್ನ ಕಚೇರಿ ಸಿಬ್ಬಂ ದಿಗೆ ಕೆಂಪೇಗೌಡರ ಫ್ಲೆಕ್ಸ್‌ ಮಾಡಿಸಲು ಸೂಚನೆ ನೀಡಿದ್ದೆ. ಅವರು ತಪ್ಪು ಗ್ರಹಿಕೆಯಿಂದ ಕೆಂಪೇಗೌಡರ ಜಯಂತಿ ಫ್ಲೆಕ್ಸ್‌ನಲ್ಲಿ ವೀರ ಮದಕರಿನಾಯಕರ ಚಿತ್ರ ಮುದ್ರಣ ಗೊಂಡಿದೆ. ಸಿಬ್ಬಂದಿಗೆ ನೋಟಿಸ್‌ ಜಾರಿ ಮಾಡಿದ್ದೇನೆ. ಮುಂದೆ ಇಂತಹ ಘಟನೆಗಳು ಮರುಕಳಿಸದಂತೆ ಎಚ್ಚರವಹಿಸುತ್ತೇನೆ. – ರತ್ನಂಬಿಕಾ ತಹಶೀಲ್ದಾರ್‌

Advertisement

Udayavani is now on Telegram. Click here to join our channel and stay updated with the latest news.

Next