Advertisement

ನೀಟ್‌ ಪರೀಕ್ಷೆಯಲ್ಲಿ ಕಡಿಮೆ ಅಂಕ ಕಾರಣ? ಸೇತುವೆ ಮೇಲೆ ಸೈಕಲಿಟ್ಟು ನದಿಗೆ ಹಾರಿದ ವಿದ್ಯಾರ್ಥಿ

07:16 PM Sep 08, 2022 | Team Udayavani |

ಕುಂದಾಪುರ: ನೀಟ್‌ ಪರೀಕ್ಷೆಯಲ್ಲಿ ಕಡಿಮೆ ಅಂಕ ಬಂದಿದೆಯೆಂಬ ಬೇಜಾರಲ್ಲಿ ವಿದ್ಯಾರ್ಥಿಯೊಬ್ಬ ಕುಂದಾಪುರ- ಬೈಂದೂರು ರಾಷ್ಟ್ರೀಯ ಹೆದ್ದಾರಿಯ ಹೇರಿಕುದ್ರು ಸೇತುವೆ ಮೇಲೆ ಸೈಕಲ್‌ ಇಟ್ಟು, ನದಿಗೆ ಹಾರಿ, ನಾಪತ್ತೆಯಾದ ಘಟನೆ ಗುರುವಾರ ಸಂಭವಿಸಿದೆ.

Advertisement

ಕುಂದಾಪುರದ ವಡೇರಹೋಬಳಿ ಜೆಎಲ್‌ಬಿ ರಸ್ತೆಯ ನಿವಾಸಿ ರಘುವೀರ್‌ ಶೆಟ್ಟಿ ಎಂಬುವರ ಪುತ್ರ ಸಾಯೀಶ್‌ ಶೆಟ್ಟಿ (18) ನದಿಗೆ ಹಾರಿ, ನಾಪತ್ತೆಯಾಗಿರುವ ವಿದ್ಯಾರ್ಥಿ.

ಗುರುವಾರ ಮಧ್ಯಾಹ್ನ ಸುಮಾರು 12 ಗಂಟೆಯ ಸುಮಾರಿಗೆ ಸಾಯೀಶ್‌ ಶೆಟ್ಟಿಯು ಸೈಕಲ್‌ನಲ್ಲಿ ಬಂದು, ಹೇರಿಕುದ್ರು ಸೇತುವೆಯ ಮೇಲೆ ಸೈಕಲ್‌ ಹಾಗೂ ಮೊಬೈಲ್‌ ಇಟ್ಟು, ನದಿಗೆ ಹಾರಿದ್ದಾನೆ. ಆತ ಸೈಕಲ್‌ ಹಾಗೂ ಮೊಬೈಲನ್ನು ಇಡುತ್ತಿದ್ದುದನ್ನು ಅಲ್ಲಿದ್ದ ಕೆಲವರು ನೋಡಿದ್ದು, ಆದರೆ ಅಲ್ಲಿಗೆ ಬರುವಷ್ಟರಲ್ಲಿ ಆತ ನದಿಗೆ ಹಾರಿದ್ದಾನೆ.

ಕಡಿಮೆ ಅಂಕ ಕಾರಣ ?

ಕಲಿಕೆಯಲ್ಲಿ ಮುಂಚೂಣಿಯಲ್ಲಿದ್ದ ಸಾಯೀಶ್‌ ಶೆಟ್ಟಿ ಶಿವಮೊಗ್ಗದ ಕಾಲೇಜೊಂದರಲ್ಲಿ ಪಿಯುಸಿ ಮುಗಿಸಿದ್ದು, ನೀಟ್‌ ಪರೀಕ್ಷೆ ಬರೆದಿದ್ದ. 630 ಅಂಕ ಪಡೆಯುವ ಭರವಸೆ ಇಟ್ಟುಕೊಂಡಿದ್ದ ಈತ, ಫಲಿತಾಂಶಕ್ಕಾಗಿ ಕಾಯುತ್ತಿದ್ದ. ಫಲಿತಾಂಶ ಬಂದಿತೆಂದು, ಬೆಳಗ್ಗೆ ಸೈಬರ್‌ಗೆ ತೆರಳಿ ಫಲಿತಾಂಶ ನೋಡಿದಾಗ ಕಡಿಮೆ ಅಂಕ ಬಂತೆಂದು ಬೇಜಾರಲ್ಲಿ ನದಿಗೆ ಹಾರಿರಬಹುದು ಎನ್ನಲಾಗುತ್ತಿದೆ.

Advertisement

ಸೇತುವೆ ಮೇಲಿಂದ ನದಿಗೆ ಹಾರಿದ್ದನ್ನು ಗಮನಿಸಿದ ವಾಹನ ಸವಾರರು ತತ್‌ಕ್ಷಣ ಪೊಲೀಸರಿಗೆ ಮಾಹಿತಿ ನೀಡಿದ್ದು, ಪೊಲೀಸರು, ಮುಳುಗು ತಜ್ಞರು ಹಾಗೂ ಸ್ಥಳೀಯರು ವಿದ್ಯಾರ್ಥಿಯ ಶೋಧ ಕಾರ್ಯಾಚರಣೆಯಲ್ಲಿ ತೊಡಗಿದರು. ಬುಧವಾರ ರಾತ್ರಿಯಿಡೀ ನಿರಂತರ ಮಳೆಯಿಂದ ನದಿ ನೀರಿನ ಹರಿವು ಹೆಚ್ಚಿದ್ದು, ನೀರಿನ ಮಟ್ಟವೂ ಜಾಸ್ತಿಯಿದ್ದು, ಶೋಧ ಕಾರ್ಯಕ್ಕೆ ತೊಡಕಾಗಿದೆ.

ಘಟನಾ ಸ್ಥಳಕ್ಕೆ ಕುಂದಾಪುರ ಡಿವೈಎಸ್‌ಪಿ ಶ್ರೀಕಾಂತ್‌ ಭೇಟಿ ನೀಡಿ, ಪರಿಶೀಲಿಸಿದರು. ಕುಂದಾಪುರ ಎಸ್‌ಐ ಸದಾಶಿವ ಗವರೋಜಿ ಸ್ಥಳದಲ್ಲೇ ಮೊಕ್ಕಾಂ ಹೂಡಿದ್ದರು.

ಸೇತುವೆಯಿಂದ ಯುವಕನೊಬ್ಬ ಹಾರಿದ ಸುದ್ದಿ ತಿಳಿಯುತ್ತಿದ್ದಂತೆ ಕುಂದಾಪುರ ಪರಿಸರದ ಸುತ್ತಮುತ್ತಲಿನ ಜನ ಬಂದು, ಶೋಧ ಕಾರ್ಯಾಚರಣೆಯನ್ನು ವೀಕ್ಷಿಸುತ್ತಿದ್ದುದು ಕಂಡು ಬಂತು. ಹೆದ್ದಾರಿಯಲ್ಲಿ ಸಂಚರಿಸುತ್ತಿದ್ದವರು ಸಹ ಸೇತುವೆ ಮೇಲೆ ನಿಂತು ಕುತೂಹಲದಿಂದ ವೀಕ್ಷಿಸುತ್ತಿದ್ದರು.

ಕುಂದಾಪುರ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

 

 

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next