Advertisement

 ಮದ್ಯದ ವಿಚಾರಕ್ಕೆ ಗಲಾಟೆ: ಹೂ ವ್ಯಾಪಾರಿ ಕೊಲೆ

08:11 PM Jul 28, 2022 | Team Udayavani |

ಬೆಂಗಳೂರು: ಮದ್ಯದ ವಿಚಾರಕ್ಕೆ ಸ್ನೇಹಿತರ ನಡುವೆ ಉಂಟಾದ ಗಲಾಟೆ ಹೂ ವ್ಯಾಪಾರಿಯ ಕೊಲೆಯಲ್ಲಿ ಅಂತ್ಯವಾಗಿರುವ ಘಟನೆ ಕೆ.ಆರ್‌.ಮಾರುಕಟ್ಟೆ ಠಾಣೆ ವ್ಯಾಪ್ತಿಯಲ್ಲಿ ಗುರುವಾರ ನಡೆದಿದೆ.

Advertisement

ಬನಶಂಕರಿಯ ಕದಿರೇನಹಳ್ಳಿ ನಿವಾಸಿ ಪ್ರಶಾಂತ್‌(28) ಕೊಲೆಯಾದವ. ಈ ಸಂಬಂಧ ಈತನ ಇಬ್ಬರು ವ್ಯಕ್ತಿಗಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ ಎಂದು ಪೊಲೀಸರು ಹೇಳಿದರು.

ಸಿಟಿ ಮಾರುಕಟ್ಟೆಯಲ್ಲಿ ಹೂ ವ್ಯಾಪಾರ ಮಾಡುವ ಪ್ರಶಾಂತ್‌, ತನ್ನ ಬಿಡುವಿನ ವೇಳೆಯಲ್ಲಿ ವೆಲ್ಡಿಂಗ್‌ ಕೆಲಸವನ್ನು ಮಾಡುತ್ತಿದ್ದ. ಬುಧವಾರ ರಾತ್ರಿ ಪ್ರಶಾಂತ್‌ ಹಾಗೂ ನಾಲ್ವರು ಸ್ನೇಹಿತರು ಮಾರುಕಟ್ಟೆ ಸಮೀಪದ ಬಾರ್‌ನಲ್ಲಿ ಕಂಠಪೂರ್ತಿ ಮದ್ಯ ಸೇವಿಸಿದ್ದರು. ಬಳಿಕ ಊಟ ಮುಗಿಸಿ ತಡರಾತ್ರಿ 12.30ರ ಸುಮಾರಿಗೆ ಮಾರುಕಟ್ಟೆ ಕಾಂಪ್ಲೆಕ್ಸ್‌ ಕಡೆ ಬರುವಾಗ ಮದ್ಯದ ವಿಚಾರಕ್ಕೆ ಸ್ನೇಹಿತರ ನಡುವೆ ಜಗಳ ನಡೆದಿದೆ.

ಆಗ ಆಕ್ರೋಶ ಸ್ನೇಹಿತರೇ ಪ್ರಶಾಂತ್‌ಗೆ ಹಲ್ಲೆ ನಡೆಸಿ, ಅಲ್ಲದೆ, ಮರದ ಪಟ್ಟಿ ಹಾಗೂ ಬಿಯರ್‌ ಬಾಟಲಿಯಿಂದ ತಲೆಗೆ ಹೊಡೆದಿದ್ದಾರೆ. ತೀವ್ರರಕ್ತಸ್ರಾವದಿಂದ ಪ್ರಶಾಂತ್‌ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ವಿಷಯ ತಿಳಿದು ಸ್ಥಳಕ್ಕೆ ದೌಡಾಯಿಸಿದ ಕೆ.ಆರ್‌.ಮಾರುಕಟ್ಟೆ ಪೊಲೀಸರು ಮೃತದೇಹವನ್ನು ಮರಣೋತ್ತರ ಪರೀಕ್ಷೆ ನಡೆಸಿ ಕುಟುಂಬ ಸದಸ್ಯರಿಗೆ ಹಸ್ತಾಂತರಿಸಿದ್ದಾರೆ. ಕೊಲೆಗೈದ ಆರೋಪಿಗಳ ಪೈಕಿ ಇಬ್ಬರನ್ನು ವಶಕ್ಕೆ ಪಡೆದುವಿಚಾರಣೆ ನಡೆಸಲಾಗುತ್ತಿದೆ. ಇತರೆ ಆರೋಪಿಗಳು ತಮಿಳುನಾಡಿನ ಕಡೆ ಪರಾರಿಯಾಗಿರುವ ಸಾಧ್ಯತೆಯಿದೆ.

ಆರೋಪಿಗಳಿಗಾಗಿ ಒಂದು ತಂಡ ತಮಿಳುನಾಡಿಗೆ ತೆರಳಿದ್ದು,ಶೋಧ ಕಾರ್ಯ ಮುಂದುವರಿದಿದೆ ಎಂದು ಪೊಲೀಸರು ಹೇಳಿದರು. ಸಿಟಿ ಮಾರುಕಟ್ಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next