Advertisement

ಹಬ್ಬಕ್ಕೆ ಮನೆಗೆ ಬಂದಾತ ಮಸಣ ಸೇರಿದ; ಅಕ್ರಮ ಸಂಬಂಧಕ್ಕೆ ವ್ಯಕ್ತಿ ಬರ್ಬರ ಹತ್ಯೆ

12:27 PM Jan 17, 2022 | Team Udayavani |

ಕನಕಪುರ: ಸಂಕ್ರಾಂತಿ ಸುಗ್ಗಿ ಹಬ್ಬದ ದಿನವೇ ಅಕ್ರಮ ಸಂಬಂಧದ ಹಿನ್ನೆಲೆ ವ್ಯಕ್ತಿಯೊಬ್ಬನನ್ನು ಮಚ್ಚಿನಿಂದ ಕೊಚ್ಚಿ ಕೊಲೆ ಮಾಡಿರುವ ಘಟನೆ ತೇರಿನದೊಡ್ಡಿ ಗ್ರಾಮದಲ್ಲಿ ನಡೆದಿದೆ.

Advertisement

ತಾಲೂಕಿನ ಕಸಬಾ ಹೋಬಳಿಯ ತೇರಿನದೊಡ್ಡಿ ಗ್ರಾಮದ ಜಗದೀಶ್‌(28) ಕೊಲೆಯಾದ ವ್ಯಕ್ತಿ. ಅದೇ ಗ್ರಾಮದ ರಾಮು (35) ಕೊಲೆ ಆರೋಪಿ.

ತೇರಿನ ದೊಡ್ಡಿಗ್ರಾಮದ ಕೊಲೆ ಆರೋಪಿ ರಾಮು ತನ್ನ ಸೋದರ ಮಾವನ ಮಗಳನ್ನೆ ವಿವಾಹವಾಗಿದ್ದ. ದಂಪತಿಗೆ ಇಬ್ಬರು ಮಕ್ಕಳಿದ್ದರು. ರಾಮು ಪತ್ನಿ ಜೊತೆಗೆ ಅದೇ ಜಗದೀಶ್‌ ವಿವಾಹೇತರ ಸಂಬಂಧ ಹೊಂದಿದ್ದ. ಈ ಸಂಬಂಧ ರಾಮು ದಂಪತಿಗಳ ನಡುವೆ ಆನೇಕ ಬಾರಿ ಕೌಟುಂಬಿಕ ಕಲಹ ಉಂಟಾಗಿತ್ತು. ಎರಡು ಮೂರು ಬಾರಿ ನ್ಯಾಯ ಪಂಚಾಯ್ತಿ ಮಾಡಿ ಗ್ರಾಮದ ಮುಖಂಡರು ಆರೋಪಿ ರಾಮು ಪತ್ನಿಗೆ ತಿಳಿ ಹೇಳಿದ್ದರು. ಆದರೂ ಇವರ ಸಂಬಂಧ ಮುಂದುವರಿದಿತ್ತು. ಇದರಿಂದ ಕೆರಳಿದ ಆರೋಪಿ ರಾಮು ಜಗದೀಶನ ಕೊಲೆ ಮಾಡಲು ಸಂಚು ರೂಪಿಸಿದ್ದ. ಕೊಲೆಯಾದ ಜಗದೀಶ್‌ ಶನಿವಾರ ರಾತ್ರಿ 8 ಗಂಟೆಗೆ ಬಸ್‌ ನಿಲ್ದಾಣದಲ್ಲಿ ಬಂದು ಕುಳಿತ್ತಿದ್ದ. ಈ ವೇಳೆ ಹಿಂಬದಿಯಿಂದ ಬಂದ ಆರೋಪಿ ರಾಮು, ಜಗದೀಶನ ತಲೆಗೆ ಮಚ್ಚಿನಿಂದ ಹಲ್ಲೆ ನಡೆಸಿದ್ದಾನೆ.

ಗಂಭೀರವಾಗಿ ಗಾಯಗೊಂಡ ಜಗದೀಶ್‌ ಸ್ಥಳದಲ್ಲೇ ಅಸುನೀಗಿದ್ದಾನೆ. ಹಲ್ಲೆ ಬಳಿಕ ಕೃತ್ಯಕ್ಕೆ ಬಳಸಿದ್ದ ಮಚ್ಚಿನ ಸಮೇತ ಆರೋಪಿ ರಾಮು ಗ್ರಾಮಾಂತರ ಠಾಣೆಯಲ್ಲಿ ಶರಣಾಗಿದ್ದಾನೆ. ಗ್ರಾಮಾಂತರ ಠಾಣಾ ಪೊಲೀಸರು ಈ ಸಂಬಂಧ ಪ್ರಕರಣ ದಾಖಲಿಸಿಕೊಂಡು, ಸ್ಥಳ ಮಹಜರು ಮಾಡಿ, ಶವವನ್ನು ಮರಣೋತ್ತರ ಪರೀಕ್ಷೆ ನಡೆಸಿ ಬಳಿಕ ವಾರಸುದಾರರಿಗೆ ಒಪ್ಪಿಸಿದ್ದಾರೆ.

ಕೊಲೆ ಆರೋಪಿಗೆ ಆರೋಗ್ಯ ತಪಾಸಣೆ ನಡೆಸಿದ್ದು ಆತನಿಗೆ ಕೋವಿಡ್‌ ದೃಢಪಟ್ಟಿದೆ. ಆರೋಪಿ ರಾಮು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next