Advertisement

ರಾಜ್ಯಸಭೆ ಚುನಾವಣೆ ಮುಗಿದರೂ ನಿಲ್ಲದ ಆರೋಪ-ಪ್ರತ್ಯಾರೋಪ

12:13 AM Jun 12, 2022 | Team Udayavani |

ಬೆಂಗಳೂರು: ರಾಜ್ಯಸಭೆ ಚುನಾವಣೆ ಮುಗಿದರೂ ಆರೋಪ- ಪ್ರತ್ಯಾರೋಪ ಮುಗಿದಿಲ್ಲ.ಕಾಂಗ್ರೆಸ್‌ ಮತ್ತು ಜೆಡಿಎಸ್‌ ನಡುವೆ ಶನಿವಾರವೂ ವಾಗ್ವಾದ ಮುಂದುವರಿದಿದೆ.

Advertisement

ಬಿಜೆಪಿ ಗೆಲುವಿಗೆ ಸಿದ್ದರಾಮಯ್ಯ ಅವರ ಒಳ ಒಪ್ಪಂದ ಕಾರಣ ಎಂದು ಸಿ.ಎಂ.ಇಬ್ರಾಹಿಂ ಆರೋಪಿಸಿದ್ದು, ಬಿಜೆಪಿ ಗೆಲ್ಲಲು ಕುಮಾರಸ್ವಾಮಿಯೇ ನೇರ ಕಾರಣ ಎಂದು ಸಿದ್ದರಾಮಯ್ಯ ಆರೋ ಪಿಸಿದ್ದಾರೆ. ಬಿಜೆಪಿಯೂ ಸಿದ್ದರಾಮಯ್ಯ ಅವರನ್ನು “ಅಡ್ಡ ಮತ ದಾನ ರೂವಾರಿ’ ಎಂದು ಕಾಲೆಳೆದಿದೆ.

ಸೋಲು ನಿರೀಕ್ಷಿತ
ಸುದ್ದಿಗಾರರ ಜತೆ ಮಾತನಾಡಿದ ಸಿದ್ದರಾಮಯ್ಯ, ಬಿಜೆಪಿ ಗೆಲ್ಲಬಾರದಿತ್ತು ಎಂಬ ಕಾಳಜಿ ಇದ್ದರೆ ಎಚ್‌.ಡಿ. ಕುಮಾರಸ್ವಾಮಿ ಯಾಕೆ ಕಾಂಗ್ರೆಸ್‌ನ ಮುಸ್ಲಿಂ ಅಭ್ಯರ್ಥಿಗೆ ಬೆಂಬಲ ನೀಡಲಿಲ್ಲ ಎಂದು ಪ್ರಶ್ನಿಸಿದ್ದಾರೆ.

ನಾವು ಸೋಲುತ್ತೇವೆ ಎಂದು ಗೊತ್ತಿತ್ತು. ನಮ್ಮ ಮತ ನಮಗೆ ಹಾಕಿ ಕೊಂಡಿದ್ದೇವೆ. ಜೆಡಿಎಸ್‌ ಸಹವಾಸ ಮಾಡಿಯೇ ಕಳೆದ ಲೋಕಸಭೆ ಚುನಾವಣೆಯಲ್ಲಿ ನಾವು ಕೆಟ್ಟೆವು. ಹೀಗಾಗಿ ಪಕ್ಷದ ಹಿತಾಸಕ್ತಿಯಿಂದ ನಾವು ತೀರ್ಮಾನ ಮಾಡಿದ್ದೆವು. ಜೆಡಿಎಸ್‌ ಯಾರ ಜತೆ ಯಾವಾಗ ಒಳ ಒಪ್ಪಂದ ಮಾಡಿಕೊಂಡಿದೆ ಎಂಬುದು ಎಲ್ಲರಿಗೂ ಗೊತ್ತಿದೆ ಎಂದಿದ್ದಾರೆ.

ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಕೂಡ ಎರಡನೇ ಅಭ್ಯರ್ಥಿ ಹಾಕಿದ್ದನ್ನು ಬಲವಾಗಿ ಸಮರ್ಥಿಸಿಕೊಂಡಿದ್ದು, ನಮ್ಮ ಪಕ್ಷ ಸ್ವಾಭಿಮಾನದಿಂದ ತೆಗೆದು ಕೊಂಡ ನಿರ್ಧಾರಕ್ಕೆ ಬದ್ಧರಾಗಿದ್ದೇವೆ ಎಂದು ಹೇಳಿದ್ದಾರೆ.
ನಾವು ಯಾಕೆ ಅಭ್ಯರ್ಥಿಯನ್ನು ಕಣಕ್ಕಿಳಿಸಿದೆವು ಎಂಬುದಕ್ಕೆ ನಮ್ಮ ಕಾರ್ಯಕರ್ತರೇ ಉತ್ತರಿಸುತ್ತಾರೆ. ಇಲ್ಲಿ ಲಾಭ-ನಷ್ಟ ವಿಚಾರ ಬೇರೆ. ನಮಗೆ ಕಳೆದ ಬಾರಿಯ ಘಟನೆ ಮರುಕಳಿಸುವ ಇಚ್ಛೆ ಇರಲಿಲ್ಲ. ಬೇರೆ ಪಕ್ಷದ ಶಾಸಕರು ಮತ ಹಾಕಲು ಸಿದ್ಧರಿದ್ದರೂ ನಾವು ಒಪ್ಪಲಿಲ್ಲ, ಆತ್ಮಸಾಕ್ಷಿ ಮತ ಕೇಳಿ ಸುಮ್ಮನಾದೆವು ಎಂದು ಹೇಳಿದ್ದಾರೆ.

Advertisement

ಕೋಮುವಾದಿಗಳನ್ನು ಸೋಲಿಸ ಬೇಕು ಎಂದು ರಾಷ್ಟ್ರಮಟ್ಟದಲ್ಲಿ ಮಾತನಾಡುವ ಪಕ್ಷ ಬಿಜೆಪಿ ಗೆಲ್ಲಿಸಲು ಡೀಲ್‌ ಮಾಡಿಕೊಂಡು ರಾಜ್ಯದ ಜನತೆ ಮುಂದೆ ನಗ್ನವಾಗಿದೆ ಎಂದು ಸಿ.ಎಂ. ಇಬ್ರಾಹಿಂ ಹೇಳಿದರು.

ಸಿದ್ದು ವಿರುದ್ಧ ಬಿಜೆಪಿ ಟ್ವೀಟ್‌
ರಾಜ್ಯ ಬಿಜೆಪಿ ರಾಜ್ಯಸಭೆ ಚುನಾವಣೆ, ಅಡ್ಡಮತದಾನ, ಪಕ್ಷಾಂತರ ಮುಂತಾದ ವಿಚಾರಗಳನ್ನು ಪ್ರಸ್ತಾಪಿಸಿ ಟ್ವೀಟ್‌ ಮೂಲಕ ಸಿದ್ದರಾಮಯ್ಯ ಅವರನ್ನು ಕೆಣಕಿದ್ದು, ಪಕ್ಷಾಂತರ ಹಾಗೂ ಕುದುರೆ ವ್ಯಾಪಾರದ ವಿಚಾರ ಬಂದರೆ ವಲಸೆ ನಾಯಕ ಸಿದ್ದರಾಮಯ್ಯ ಅವರೇ ನಿಜವಾದ ಕಿಂಗ್‌ ಎಂದಿದೆ.

ಪ್ರತಿ ಶಾಸಕರಿಗೆ 50 ಲ. ರೂ.: ಗೌಡ ಆರೋಪ
ವಿಧಾನಪರಿಷತ್‌ ಚುನಾವಣೆಯಲ್ಲಿ ಇಂಚರ ಗೋವಿಂದರಾಜು ಗೆಲ್ಲಲು ಪ್ರತಿ ಶಾಸಕರಿಗೆ 50 ಲಕ್ಷ ರೂ. ಹಣ ನೀಡಿದ್ದರು. ನನಗೂ ಕೊಡಲು ಬಂದಿದ್ದರು ನಾನು ಪಡೆಯಲಿಲ್ಲ ಎಂದು ಕೋಲಾರ ಶಾಸಕ ಶ್ರೀನಿವಾಸ ಗೌಡ ಅವರು ಆರೋಪಿಸಿದ್ದು, ಇದು ಕೂಡ ತೀವ್ರ ಚರ್ಚೆಗೆ ನಾಂದಿ ಹಾಡಿದೆ.

ರಾಜ್ಯಸಭೆ ಚುನಾವಣೆಯಲ್ಲಿ ಹಣ ಪಡೆದು ಮತ ಹಾಕಿದ್ದಾರೆ. ಬಿಜೆಪಿಗೆ ಮತ ಹಾಕಿರುವುದು ನಿಜ, ದೇವರು ಶಿಕ್ಷೆ ಕೊಡುತ್ತಾರೆ. ಕುಮಾರಸ್ವಾಮಿ ಯಾರ್ಯಾರನ್ನೋ ಕರೆದುಕೊಂಡು ಬಂದು ಎಂಎಲ್‌ಎ ಮಾಡುತ್ತಾರೆ. ಅವರೇ ಬೆನ್ನಿಗೆ ಚೂರಿ ಹಾಕುತ್ತಾರೆ.
– ಎಚ್‌.ಡಿ.ರೇವಣ್ಣ, ಜೆಡಿಎಸ್‌ ಶಾಸಕ

ಅಡ್ಡ ಮತದಾನ ಮಾಡಿದ ಇಬ್ಬರಿಗೂ ನೋಟಿಸ್‌ ನೀಡಿದ್ದೇವೆ. ಕಾಂಗ್ರೆಸ್‌ ಹಾಗೂ ಬಿಜೆಪಿಗೆ ಮತ ಕೊಟ್ಟು ವಿಪ್‌ ಉಲ್ಲಂಘಿಸಿದ್ದಾರೆ. ಅವರ ವಿರುದ್ಧ ಕ್ರಮ ಕೈಗೊಂಡು ಆರು ವರ್ಷ ಚುನಾವಣೆಗೆ ಸ್ಪರ್ಧೆ ಮಾಡದಂತೆ ಮಾಡುತ್ತೇವೆ.
-ಸಿ.ಎಂ.ಇಬ್ರಾಹಿಂ, ಜೆಡಿಎಸ್‌ ರಾಜ್ಯಾಧ್ಯಕ್ಷ

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next