Advertisement

ಮನೆಗಳಿಂದ ಅಸಮರ್ಪಕ ತ್ಯಾಜ್ಯ ಸಂಗ್ರಹ 

09:07 PM Jan 27, 2022 | Team Udayavani |

ಉಡುಪಿ: ಕಳೆದ ಹಲವು ವರ್ಷಗಳಿಂದ ತ್ಯಾಜ್ಯ ಸಂಗ್ರಹ ಮತ್ತು ವಿಲೇವಾರಿ ಕ್ರಮದಲ್ಲಿ ಉಡುಪಿ ನಗರಸಭೆ ಮಾದರಿಯಾಗಿ ಗುರುತಿಸಿಕೊಂಡಿದ್ದು,  ಇತ್ತೀಚಿನ ದಿನಗಳಲ್ಲಿ ನಗರದ ಮನೆಗಳಿಂದ ತ್ಯಾಜ್ಯ ಸಂಗ್ರಹ ಸಮರ್ಪಕವಾಗಿ ನಡೆಯುತ್ತಿಲ್ಲ ಎಂದು ಹಲವು ವಾರ್ಡ್‌ಗಳ ವ್ಯಾಪ್ತಿಯಲ್ಲಿ ದೂರು ಕೇಳಿ ಬಂದಿದೆ.

Advertisement

ನಗರ ಬೆಳೆದಂತೆ ತ್ಯಾಜ್ಯ ಸಂಗ್ರಹ ಮತ್ತು ವಿಲೇವಾರಿಯೂ ಸ್ಥಳೀಯಾಡಳಿತಕ್ಕೆ ಸವಾಲಾಗಿ ಪರಿಣಮಿಸಿದೆ. ಪರಿಣಾಮ ನಗರದ ಬೀದಿಗಳಲ್ಲಿ ತ್ಯಾಜ್ಯ ಎಸೆಯುವುದು, ಜನ ರಹಿತ ಪ್ರದೇಶದಲ್ಲಿ ತ್ಯಾಜ್ಯ ರಾಶಿ ರೂಪುಗೊಳ್ಳಲು ಕಾರಣವಾಗುತ್ತಿದೆ. ಕುಕ್ಕಿಕಟ್ಟೆ, ಇಂದಿರಾನಗರ, ಕಸ್ತೂರ್ಬಾ ನಗರ, ಮಲ್ಪೆ, ವಡಭಾಂಡೇಶ್ವರ ವಾರ್ಡ್‌ ವ್ಯಾಪ್ತಿಯಲ್ಲಿ ಇಂತಹ ಸಮಸ್ಯೆ ಎದುರಾಗಿದೆ. ಹಲವಾರು ದಿನಗಳಿಂದ ಮನೆಯ ಕಾಂಪೌಂಡ್‌ ಬಳಿ ಮತ್ತು ಆವರಣದಲ್ಲಿ ತ್ಯಾಜ್ಯ ಕೊಳೆಯುತ್ತಿದೆ.  ತ್ಯಾಜ್ಯ ಸಂಗ್ರಹಕ್ಕೆ ನಗರಸಭೆ ಕಡೆಯಿಂದ ಬರುತ್ತಿಲ್ಲ. ತ್ಯಾಜ್ಯ ಸಂಗ್ರಹಿಸುವ ಮಂದಿಗೆ ಸಾಕಷ್ಟು ಸಲ ಫೋನ್‌ ಮಾಡಿದರೂ ಸ್ಪಂದಿಸುತ್ತಿಲ್ಲ ಎಂದು ಜನರು ಅಸಹಾಯಕತೆ ವ್ಯಕ್ತಪಡಿಸಿದ್ದಾರೆ.

ಕಾಂಪೌಂಡ್‌ ಮೇಲೆ ಕೊಳೆಯುತ್ತಿರುವ ತ್ಯಾಜ್ಯ :

ಇಂದಿರಾನಗರ, ಕುಕ್ಕಿಕಟ್ಟೆ ಭಾಗದಲ್ಲಿ ವಾರಕ್ಕೊಮ್ಮೆ ವ್ಯವಸ್ಥಿತವಾಗಿ ತ್ಯಾಜ್ಯ ಸಂಗ್ರಹವಾಗದ ಕಾರಣ ಕಾಂಪೌಂಡ್‌ ಮೇಲೆ ಕೊಳೆಯುತ್ತಿದೆ. ದುರ್ವಾಸನೆ, ಕ್ರಿಮಿಕೀಟಗಳು ತ್ಯಾಜ್ಯದಿಂದ ಹುಟ್ಟಿಕೊಂಡು ಅನಾರೋಗ್ಯದ ಆತಂಕ ಮೂಡಿಸುತ್ತಿದೆ. ತ್ಯಾಜ್ಯ ಸಂಗ್ರಹಕ್ಕೆ ಬಾರದ ಆಡಳಿತವು ಶುಲ್ಕ ತೆಗೆದುಕೊಳ್ಳಲು ಸರಿಯಾದ ಸಮಯಕ್ಕೆ ಆಗಮಿಸುತ್ತದೆ. ಹೆಚ್ಚುವರಿ ಶುಲ್ಕ ಬೇಕಾದರೂ ತೆಗೆದುಕೊಳ್ಳಿ, ಸರಿಯಾದ ಸಮಯಕ್ಕೆ ಬನ್ನಿ ಎಂದರೂ ಸರಿಯಾಗಿ ಸ್ಪಂದಿಸುವುದಿಲ್ಲ ಎಂದು ನಾಗರಿಕರು ದೂರುತ್ತಾರೆ. ತ್ಯಾಜ್ಯವನ್ನು ಬಿಸಾಡಲು ಆಗದೆ, ಸೂಕ್ತ ರೀತಿಯಲ್ಲಿ ವಿಲೇವಾರಿ ಮಾಡಲು ಸಾಧ್ಯವಾಗದೆ ಮನೆ ಆವರಣದಲ್ಲೇ ಹಲವಾರು ದಿನಗಳಿಂದ ಇರಿಸಿಕೊಂಡಿದ್ದೇವೆ ಎಂದು ಜನರು ಬೇಸರ ವ್ಯಕ್ತಪಡಿಸಿದ್ದಾರೆ.

ಸ್ವಸಹಾಯ ಗುಂಪುಗಳಿಂದ ನಿರ್ವಹಣೆ :

Advertisement

ಮನೆಗಳಿಂದ ತ್ಯಾಜ್ಯ ಸಂಗ್ರಹಕ್ಕೆ ಸಂಬಂಧಿಸಿ 35 ವಾರ್ಡ್‌ಗಳನ್ನು ಹಂಚಿಕೆ ಮಾಡಿ ಬಹುಪಾಲು ಸ್ವಸಹಾಯ ಗುಂಪುಗಳಿಂದ ನಿರ್ವಹಿಸಲಾಗುತ್ತಿದೆ. 35 ವಾರ್ಡ್‌ಗಳಲ್ಲಿ 8 ವಾರ್ಡ್‌ಗಳು ನಗರಸಭೆಯಿಂದ ನಿರ್ವಹಿಸುತ್ತಿದ್ದು, ಉಳಿದ ವಾರ್ಡ್‌ಗಳಲ್ಲಿ ಮನೆ ಕಸ ಸಂಗ್ರಹವನ್ನು ಮಹಿಳಾ ಸ್ವಸಹಾಯ ಗುಂಪುಗಳಿಗೆ ವಹಿಸಿಕೊಡಲಾಗಿದೆ. ಇದರಲ್ಲಿ ಇಂದಿರಾನಗರ, ಕುಕ್ಕಿಕಟ್ಟೆ, ಮಲ್ಪೆ ಭಾಗದಲ್ಲಿ ಎರಡರಿಂದ ಮೂರು ವಾರ್ಡ್‌ಗಳಲ್ಲಿ ಸಮಸ್ಯೆ ಹೆಚ್ಚಿದೆ. ಇನ್ನುಳಿದ ವಾರ್ಡ್‌ಗಳಲ್ಲಿ ಮಹಿಳಾ ಸ್ವಸಹಾಯ ಸಂಘ ವ್ಯವಸ್ಥಿತವಾಗಿ ಕಾರ್ಯನಿರ್ವಹಿಸುತ್ತಿದೆ ಎಂದು ಪೌರ ಘನ ತ್ಯಾಜ್ಯ ನಿರ್ವಹಣೆ ಮೇಲ್ವಿಚಾರಕಿ ಸ್ನೇಹಾ ಕೆ.ಎಸ್‌. ತಿಳಿಸಿದ್ದಾರೆ.

ಸಾಮಾನ್ಯ ಸಭೆಯಲ್ಲಿ  ಪ್ರಸ್ತಾವ :

ನಗರಸಭೆ ಕೆಲವು ವಾರ್ಡ್‌ಗಳಲ್ಲಿ ತ್ಯಾಜ್ಯ ಸಂಗ್ರಹ ವ್ಯವಸ್ಥಿತವಾಗಿ ನಡೆಯುತ್ತಿಲ್ಲ, ಪರಿಣಾಮ ಜನರು ಬೇಕಾಬಿಟ್ಟಿ ತ್ಯಾಜ್ಯವನ್ನು ಎಲ್ಲೆಂದರಲ್ಲಿ ಬಿಸಾಡುವಂತ‌ ಪರಿಸ್ಥಿತಿ ಬಂದೊದಗಿದೆ ಎಂದು ಕೆಲವು ಸದಸ್ಯರು ಕಳೆದ ಬಾರಿ ಜರಗಿದ ನಗರಸಭೆ ಸಾಮಾನ್ಯ ಸಭೆಯಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದರು. ನಗರದ 35 ವಾರ್ಡ್‌ಗಳಲ್ಲಿ ಉತ್ತಮ ರೀತಿಯಲ್ಲಿ ತ್ಯಾಜ್ಯ ನಿರ್ವಹಣೆಯಾಗುವಂತೆ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದರು.

ಕುಕ್ಕಿಕಟ್ಟೆ ಭಾಗದಲ್ಲಿ ಕಳೆದ ಹಲವಾರು ದಿನಗಳಿಂದ ಮನೆಗಳಿಂದ ತ್ಯಾಜ್ಯ ಸಂಗ್ರಹ ಪ್ರಕ್ರಿಯೆ ಸಮರ್ಪಕವಾಗಿ ನಡೆಯುತ್ತಿಲ್ಲ. ಪರಿಸರದ ಬಹುತೇಕ ಮನೆಗಳ ಕಾಂಪೌಂಡ್‌ಗಳ ಮೇಲೆ ತ್ಯಾಜ್ಯ ರಾಶಿ ಗಂಟು ಕೊಳೆತು ನಾರುತ್ತಿದೆ. ನಗರಸಭೆ ಆಡಳಿತ ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಬೇಕು. – ಕಿಶೋರ್‌ ದೇವಾಡಿಗ, ಸಚ್ಚಿದಾನಂದ ಲೇಔಟ್‌, ಕುಕ್ಕಿಕಟ್ಟೆ

ಉಡುಪಿ ನಗರದಲ್ಲಿ ನಗರಸಭೆ, ಸ್ಥಳೀಯ ಸ್ವ -ಸಹಾಯ ಗುಂಪುಗಳ ಮೂಲಕ 45 ವಾಹನಗಳಿಂದ ಮನೆಗಳ ತ್ಯಾಜ್ಯ ಸಂಗ್ರಹ ನಿರ್ವಹಣೆ ಉತ್ತಮವಾಗಿ ನಡೆಯುತ್ತಿದ್ದು , ಎರಡರಿಂದ ಮೂರು ವಾರ್ಡ್‌ಗಳಲ್ಲಿ ತ್ಯಾಜ್ಯ ಸಂಗ್ರಹ ಅಸಮರ್ಪಕವಾಗಿರುವ ಬಗ್ಗೆ ದೂರು ಕೇಳಿ ಬಂದಿದೆ. ಇದನ್ನು ಮುಂದಿನ ತಿಂಗಳಿನಿಂದ ನಗರಸಭೆ ವತಿಯಿಂದಲೇ ನಿರ್ವಹಿಸುವ ಬಗ್ಗೆ  ಕ್ರಮ ಕೈಗೊಳ್ಳಲಾಗುವುದು. – ಸ್ನೇಹಾ ಕೆ. ಎಸ್‌., ಪರಿಸರ ಅಭಿಯಂತ, ಉಡುಪಿ ನಗರಸಭೆ

ಜನಹಿತದಲ್ಲಿ  ಸಮಸ್ಯೆ ಹೇಳಿಕೊಳ್ಳಿ  :

ಮನೆಗಳಲ್ಲಿ ಸಾಧ್ಯವಾದಷ್ಟು ತ್ಯಾಜ್ಯ ಉತ್ಪಾದನೆಯನ್ನು ಆಗದ ರೀತಿಯಲ್ಲಿ ಜೀವನ ಶೈಲಿ ರೂಢಿಯಾಗಬೇಕು. ಹಸಿ-ಕಸ ಒಣಕಸವನ್ನು ಬೇರ್ಪಡಿಸಿ ಹಸಿ ಕಸವನ್ನು ಮನೆಯ ಹೂದೋಟ, ಗಿಡ ಮರಗಳಿಗೆ ಹಾಕಬಹುದು. ಸಾಮಾನುಗಳನ್ನು ತರುವಾಗ ಬಟ್ಟೆ / ಬೀಣಿ ಚೀಲ ಬಳಕೆ ಅಥವಾ ಪ್ಲಾಸ್ಟಿಕ್‌ ಚೀಲಗಳ ಪುನರ್ಬಳಕೆ ಮೂಲಕ ಪ್ಲಾಸ್ಟಿಕ್‌ ತ್ಯಾಜ್ಯದ ಉತ್ಪಾದನೆಯನ್ನು ನಿಯಂತ್ರಿಸಬೇಕು. ತ್ಯಾಜ್ಯ ವಿಲೇವಾರಿ, ಚರಂಡಿ ವ್ಯವಸ್ಥೆ, ಕುಡಿಯುವ ನೀರು ಮೊದಲಾದ ದೂರುಗಳಿದ್ದಲ್ಲಿ ಜನಹಿತ ಸಹಾಯವಾಣಿ 08023108108 ನೋಂದಾಯಿಸಿ ದೂರು ಸಲ್ಲಿಸಬಹುದು. ವಾಟ್ಸಾéಪ್‌ ಮೂಲಕವು ಸಮಸ್ಯೆ ತಿಳಿಸಿದಲ್ಲಿ  8277777728 ನಿರ್ದಿಷ್ಟ ದಿನಗಳಲ್ಲಿ ಪರಿಹಾರಕ್ಕೆ ಶ್ರಮಿಸಲಾಗುವುದು ಎಂದು ನಗರಸಭೆ ಅಧಿಕಾರಿಗಳು ಭರವಸೆ ನೀಡಿದ್ದಾರೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next