Advertisement

ಹೆದ್ದಾರಿ ಪ್ರಾಧಿಕಾರದಿಂದ ಅಸಮರ್ಪಕ ಮಾಹಿತಿ

08:59 PM Sep 16, 2021 | Team Udayavani |

ಕುಂದಾಪುರ:  ವಿಧಾನಪರಿಷತ್‌ನಲ್ಲಿ  ಮಾಜಿ ಸಭಾಪತಿ, ಸದಸ್ಯ ಕೆ. ಪ್ರತಾಪಚಂದ್ರ ಶೆಟ್ಟಿ ಅವರು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೆ ಕೇಳಿದ ಚುಕ್ಕಿ ಗುರುತಿಲ್ಲದ ಪ್ರಶ್ನೆಗಳಿಗೆ ಪ್ರಾಧಿಕಾರ ನೀಡಿದ ವರದಿ ಹಾಗೂ ಉತ್ತರವನ್ನು ಲೋಕೋಪಯೋಗಿ ಇಲಾಖೆ ಸಚಿವ ಸಿ.ಸಿ. ಪಾಟೀಲ್‌ ನೀಡಿದ್ದಾರೆ.

Advertisement

ಹೆದ್ದಾರಿಯಿಂದ ಕುಂದಾಪುರ ನಗರಕ್ಕೆ ಪ್ರವೇಶ, ಫ್ಲೈಓವರ್‌ ಮೇಲಿನಿಂದ ಸರ್ವೀಸ್‌ ರಸ್ತೆಗೆ ನೀರು ಬೀಳುವುದು, ಹೆದ್ದಾರಿ ಬದಿ ಪೊದೆ, ಗಿಡಗಳ ತೆರವು ಮಾಡದಿರುವ ಕುರಿತು “ಉದಯವಾಣಿ’ “ಸುದಿನ’ ಸಕಾಲಿಕ ವರದಿಗಳನ್ನು ಪ್ರಕಟಿಸಿತ್ತು. ಇದಕ್ಕೆ ಸಂಬಂಧಿಸಿದ ಪ್ರಶ್ನೆಗಳನ್ನು  ವಿ.ಪ. ಸದಸ್ಯರು ಕೇಳಿದ್ದು  ಪ್ರಾಧಿಕಾರ ಇವುಗಳ ಪೈಕಿ ಕೆಲವಕ್ಕೆ ಅಸಮರ್ಪಕ ಉತ್ತರ ನೀಡಿದ್ದಾರೆ.

ಪ್ರವೇಶ ನಿರ್ಗಮನ ನಗರದಲ್ಲಿ ಇಲ್ಲ:

ಪ್ರಸ್ತುತ ಅಧಿವೇಶನ ನಡೆಯುತ್ತಿದ್ದು ಪ್ರತಾಪ್‌ಚಂದ್ರ ಶೆಟ್ಟಿ ಅವರು ಕುಂದಾಪುರ ನಗರದಲ್ಲಿ ಹಾದು ಹೋಗುವ ಹೆದ್ದಾರಿಯಿಂದ ನಗರಕ್ಕೆ ಪ್ರವೇಶ ಅವಕಾಶ ನೀಡುವ ಕುರಿತು ಪ್ರಶ್ನೆ ಕೇಳಿದ್ದರು. ಅದಕ್ಕೆ ಪ್ರಾಧಿಕಾರ, ಹಂಗಳೂರಿನಲ್ಲಿ  ದುರ್ಗಾಂಬಾ ಬಳಿ ಪ್ರವೇಶ ನೀಡಿ ದ್ದನ್ನು, ಎಪಿಎಂಸಿ ಬಳಿ ನಿರ್ಗಮನ ನೀಡಿದ್ದನ್ನು ಉತ್ತರಿಸಿದೆ. ಇದಲ್ಲದೆ ಆಸ್ಕರ್‌ ಫೆರ್ನಾಂಡಿಸ್‌ ಹಾಗೂ ಜಯಪ್ರಕಾಶ್‌ ಹೆಗ್ಡೆ ಅವರ ಕೋರಿಕೆ ಮೇರೆಗೆ ಅಂಡರ್‌ಪಾಸ್‌, ಫ್ಲೈಓವರ್‌, ಪೆಡೆಸ್ಟ್ರಿಯನ್‌ ಪಾತ್‌ ನೀಡಲಾಗಿದೆ. ಬೊಬ್ಬರ್ಯನಕಟ್ಟೆ ಬಳಿ ಪ್ರವೇಶಕ್ಕೆ ಅವಕಾಶ ನೀಡಿದರೆ ಅಪಘಾತಗಳು ಹೆಚ್ಚಾಗುವ ಸಾಧ್ಯತೆ ಇದೆ ಎಂದು ಸ್ವತಂತ್ರ ಎಂಜಿನಿಯರ್‌ ಮೂಲಕ ತಯಾರಿಸಿದ ವರದಿಯಲ್ಲಿ ಗೊತ್ತಾಗಿದೆ ಎಂದು ಉಲ್ಲೇಖೀಸಲಾಗಿದೆ.

ಸರ್ವಿಸ್‌ ರಸ್ತೆಗೆ ನೀರು:

Advertisement

ಶಾಸ್ತ್ರಿ ಸರ್ಕಲ್‌ ಫ್ಲೈಓವರ್‌ನಿಂದ ಸರ್ವಿಸ್‌ ರಸ್ತೆಗೆ ಮಳೆಗಾಲದಲ್ಲಿ ನೀರು ಬೀಳುತ್ತವೆ. ವಾಹನ ಸವಾರರಿಗೆ, ಪಾದಚಾರಿಗಳಿಗೆ ಅಪಘಾತ ಸಂಭವ ಜಾಸ್ತಿ ಇರುವ ಕುರಿತು ಸದಸ್ಯರ ಪ್ರಶ್ನೆಗೆ ಪ್ರಾಧಿಕಾರವು, ಗುತ್ತಿಗೆ ಕರಾರಿನಂತೆ ಒಳಚರಂಡಿ ನಿರ್ಮಿಸುವ ಕಾರ್ಯ ಕೈಗೊಂಡಿದ್ದು ಈ ಒಳಚರಂಡಿಯನ್ನು ಮಳೆ ನೀರನ್ನು ರಸ್ತೆ ಮೇಲ್ಭಾಗದಿಂದ ಹೊರಹಾಕಲು ನಿರ್ಮಿಸಲಾಗಿದೆ ಎಂದು ಉತ್ತರಿಸಿದೆ. ಆದರೆ ಒಳಚರಂಡಿ ಕಾಮಗಾರಿ ನಡೆದೇ ಇಲ್ಲ, ಮೇಲ್ಸೇತುವೆಯಿಂದ ನೀರು ಬೀಳುವುದು ತಡೆಯಲು ಯಾವುದೇ ಕ್ರಮ ಕೈಗೊಂಡಿಲ್ಲ. ಸುಳ್ಳು ಉತ್ತರ ನೀಡುವ ಮೂಲಕ ಪ್ರಾಧಿಕಾರ ಸದನದಲ್ಲಿ  ಹಾದಿ ತಪ್ಪಿಸಿದೆ.

ಮಳೆಗಾಲದ ಬಳಿಕ ಕೆಲಸ:

ಫ್ಲೈಓವರ್‌ ಕೆಳಗೆ ರಾಶಿ ಹಾಕಿದ ಗುಜುರಿ ವಸ್ತುಗಳ ತೆರವು ಯಾವಾಗ ಎಂದು ಕೇಳಿದ ಪ್ರಶ್ನೆಗೆ, ಮಳೆಗಾಲದ ಬಳಿಕ ಎಂದು ಉತ್ತರಿಸಿದೆ. ರಸ್ತೆ ಬದಿ ಬೆಳೆದ ಕುರುಚಲು ಗಿಡಗಳನ್ನು ಪ್ರಾಧಿಕಾರದ ಗುತ್ತಿಗೆ ಕರಾರಿನನ್ವಯ ಆಗಾಗ ತೆರವು ಮಾಡಲಾಗುತ್ತಿದೆ ಎಂದು ಉತ್ತರಿಸಲಾಗಿದೆ. ಲೋಕೋಪಯೋಗಿ ಇಲಾಖೆಯಲ್ಲಿ ಗ್ಯಾಂಗ್‌ಮೆನ್‌ ಹುದ್ದೆಯಲ್ಲಿದ್ದವರು ನಿವೃತ್ತರಾದ ಬಳಿಕ ಹೊಸನೇಮಕಾತಿ ಇಲ್ಲ. ಅನುದಾನ ಲಭ್ಯ ಇದ್ದು ಗುತ್ತಿಗೆ ಮೂಲಕ ಇಂತಹ ಕೆಲಸ ನಿರ್ವಹಿಸಲಾಗುತ್ತಿದೆ ಎಂದು ಸಚಿವರು ಉತ್ತರಿಸಿದ್ದಾರೆ.

ಸುದಿನ ವರದಿ:

ಹೆದ್ದಾರಿಯಿಂದ ಕುಂದಾಪುರ ನಗರ ವ್ಯಾಪ್ತಿಯಲ್ಲಿ ಪ್ರವೇಶ ಅವಕಾಶ ನೀಡಿಲ್ಲ. ಹಂಗಳೂರು ಪಂಚಾಯತ್‌ ವ್ಯಾಪ್ತಿಯಲ್ಲಷ್ಟೇ ನೀಡಲಾಗಿದೆ. ಇದರಿಂದ ನಗರದ ಆರ್ಥಿಕತೆಗೆ ಹೊಡೆತ ಬಿದ್ದಿದೆ ಎಂದು “ಉದಯವಾಣಿ’ “ಸುದಿನ’ ಸತತ ವರದಿ ಮಾಡಿದೆ. ವರ್ತಕರು ಮನವಿ ನೀಡಿದ್ದಾರೆ. ಬೊಬ್ಬರ್ಯನಕಟ್ಟೆ ಪ್ರದೇಶದ 15ಕ್ಕೂ ಅಧಿಕ ಸರಕಾರಿ ಕಚೇರಿಗಳಿಗೆ ತೊಂದರೆಯಾಗುತ್ತದೆ ಎಂದು ಮನವಿ ನೀಡಲಾಗಿದೆ. ಪುರಸಭೆ ಸಾಮಾನ್ಯ ಸಭೆಯಲ್ಲಿ ಚರ್ಚೆ ನಡೆದು ಮನವಿ ಮಾಡಲಾಗಿದೆ. ಹೆದ್ದಾರಿಯಿಂದ ಸರ್ವಿಸ್‌ ರಸ್ತೆಗೆ ನೀರು ಬೀಳುವ ಕುರಿತು ಆ.2ರಂದು  “ಸುದಿನ’ ವರದಿ ಮಾಡಿತ್ತು.  ಪೊದೆ ಗಿಡಗಳಿಂದ ಪಾದಚಾರಿಗಳಿಗೆ ತೊಂದರೆಯಾಗುವ ಕುರಿತು ಜು.3ರಂದು  “ಸುದಿನ’ ವರದಿ ಪ್ರಕಟಿಸಿತ್ತು. ಈ ವಿಚಾರಗಳ ಕುರಿತು ಸದನದಲ್ಲಿ ಗಮನ ಸೆಳೆದು ಪ್ರಶ್ನೆ ಕೇಳಿದ್ದು ಸಾರ್ವಜನಿಕರಿಂದ ಮೆಚ್ಚುಗೆಗೆ ಪಾತ್ರವಾಗಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next