Advertisement

ಸೋಲಿನ ಆತಾವಲೋಕನದಲ್ಲಿ ಜೆಡಿಎಸ್‌, ಬಿಜೆಪಿ

12:34 PM May 17, 2018 | |

ಚಿಕ್ಕಬಳ್ಳಾಪುರ: ಜಿಲ್ಲೆಯ ರಾಜಕಾರಣದಲ್ಲಿ ತೀವ್ರ ಕುತೂಹಲ ಕೆರಳಿಸಿದ್ದ ಜಿಲ್ಲೆಯ ಐದು ವಿಧಾನ ಸಭಾ ಕ್ಷೇತ್ರಗಳ ಚುನಾವಣಾ ಫ‌ಲಿತಾಂಶ ಹಲವು ಐತಿಹಾಸಿಕ ದಾಖಲೆ ಬರೆದು ಮುಕ್ತಾಯಗೊಂಡ ಬೆನ್ನಲೇ ಚುನಾವಣಾ ಅಖಾಡದಲ್ಲಿ ನಿಂತು ತಮ್ಮ ಎದುರಾಳಿಗಳ ವಿರುದ್ಧ ಪ್ರಬಲ ಹೋರಾಟ ನಡೆಸಿ ಪರಾಜಿತಗೊಂಡ ಅಭ್ಯರ್ಥಿಗಳು ಈಗ ತಮ್ಮ ಸೋಲಿನ ಪರಾಮರ್ಶೆಯಲ್ಲಿ ತೊಡಗಿದ್ದಾರೆ.

Advertisement

ಇದೇ ಮೊದಲ ಬಾರಿಗೆ ಕಳೆದ ಎರಡು ದಶಕದಲ್ಲಿ ಜೆಡಿಎಸ್‌ ಜಿಲ್ಲೆಯಲ್ಲಿ ಅತ್ಯಂತ ಕಳಪೆ ಸಾಧನೆ ಮಾಡಿದ್ದರೆ, ಖಾತೆ ತೆರೆಯುವ ಕನಸು ಹೊಂದಿದ್ದ ಬಿಜೆಪಿಗೆ ಚುನಾವಣೆಯ ಫ‌ಲಿತಾಂಶ ಭಾರೀ ನಿರಾಶೆ ಮೂಡಿಸಿದೆ. ಈಗಾಗಿ ಜಿಲ್ಲೆಯ ವಿವಿಧ ಕ್ಷೇತ್ರಗಳಲ್ಲಿ ಕಾಂಗ್ರೆಸ್‌ ವಿರುದ್ದ ಸೋತ ಜೆಡಿಎಸ್‌ ಹಾಗೂ ಬಿಜೆಪಿ ಪಕ್ಷಗಳು ಚುನಾವಣಾ ಹೋರಾಟದಲ್ಲಿ ಎಡವಿದ್ದರ ಬಗ್ಗೆ ಅತ್ಮವಲೋಕನಕ್ಕೆ ಜಾರಿವೆ.

ಜಿಲ್ಲೆಯ ಐದು ವಿಧಾನಸಭಾ ಕ್ಷೇತ್ರಗಳ ಪೈಕಿ ಚಿಂತಾಮಣಿ ಹೊರತುಪಡಿಸಿ ಉಳಿದ ಬಾಗೇಪಲ್ಲಿ, ಶಿಡ್ಲಘಟ್ಟ, ಗೌರಿಬಿದನೂರು, ಚಿಕ್ಕಬಳ್ಳಾಪುರ ಸೇರಿ ನಾಲ್ಕು ಕ್ಷೇತ್ರಗಳಲ್ಲಿ ಕಾಂಗ್ರೆಸ್‌ ತನ್ನ ಪ್ರಾಬಲ್ಯ ಮೆರೆಯುವ ಮೂಲಕ ತನ್ನ ಭದ್ರಕೋಟೆ ಉಳಿಸಿಕೊಂಡಿದೆ. ಆದರೆ ಕಳೆದ ಚುನಾವಣೆಯಲ್ಲಿ ಶಿಡ್ಲಘಟ್ಟ, ಚಿಂತಾಮಣಿ ಕ್ಷೇತ್ರಗಳಲ್ಲಿ ತಮ್ಮ ಪ್ರಾಬಲ್ಯ ಮರೆದಿದ್ದ ಜೆಡಿಎಸ್‌ ಈ ಬಾರಿ ಇದ್ದ ಎರಡರ ಪೈಕಿ ಶಿಡ್ಲಘಟ್ಟ ಕಳೆದುಕೊಂಡು. ಚಿಂತಾಮಣಿ ಉಳಿಸಿಕೊಂಡಿದೆ. ಜತೆಗೆ ಈ ಬಾರಿ ಗೆಲ್ಲುವ ಬಗ್ಗೆ ಭಾರೀ ನಿರೀಕ್ಷೆ ಇಟ್ಟುಕೊಂಡಿದ್ದ ಬಾಗೇಪಲ್ಲಿ, ಚಿಕ್ಕಬಳ್ಳಾಪುರ, ಗೌರಿಬಿದನೂರು ಕ್ಷೇತ್ರಗಳಲ್ಲಿ
ಜೆಡಿಎಸ್‌ ಸೋತಿರುವುದು ಆ ಪಕ್ಷಕ್ಕೆ ತೀವ್ರ ಆಘಾತವಾಗಿದೆ.

 ಬಿಜೆಪಿ ಕೂಡ ನಾವು ಈ ಬಾರಿ ಜಿಲ್ಲೆಯಲ್ಲಿ ಖಾತೆ ತೆರೆಯುತ್ತೇ ವೆಂದು ಶಪಥ ಮಾಡಿ ಚುನಾವಣೆ ಎದುರಿಸಿತ್ತು. ಗೌರಿಬಿದನೂರಲ್ಲಿ ನಮ್ಮ ಗೆಲುವು ಪಕ್ಕಾ ಎಂದಿದ್ದರು. ಆದರೆ ಬಿಜೆಪಿಗೆ ತಾನು ಹೊಂದಿದ್ದ ಭರವಸೆ ಹುಸಿಯಾಗಿ ಮುಜುಗರಕ್ಕೀಡಾಗಿದೆ. ಆದ್ದರಿಂದ ವಿವಿಧ ಕ್ಷೇತ್ರಗಳಲ್ಲಿ ಸೋತ ಕಾರಣಗಳ ಹುಡುಕಾಟದಲ್ಲಿ ಜೆಡಿಎಸ್‌, ಬಿಜೆಪಿ ಮುಖಂಡರು, ನಾಯಕರು ತೊಡಗಿದ್ದಾರೆ. ಪರಾಜಿತಗೊಂಡಿದ್ದ ಅಭ್ಯರ್ಥಿಗಳು ತೀವ್ರ ಬೇಸರದಿಂದ ಇದ್ದರೂ ಬುಧವಾರ ತಮ್ಮ ಅಪ್ತ ಮುಖಂಡರನ್ನು, ಕಾರ್ಯಕರ್ತರನ್ನು ಕರೆಸಿಕೊಂಡು ಸಭೆಗಳನ್ನು ನಡೆಸುವ ಮೂಲಕ ಸೋಲಿನ ಕಹಿ ಬಗ್ಗೆ ಸಾಕಷ್ಟು ಚಿಂತನ, ಮಂಥನ ನಡೆಸಿದ್ದಾರೆ.

ಮತ ಎಣಿಕೆ ಕೇಂದ್ರದಲ್ಲಿ ಪಡೆದುಕೊಂಡಿರುವ ಕ್ಷೇತ್ರ ಮತದಾನ ಪ್ರಮಾಣವನ್ನು ಮುಂದಿಟ್ಟುಕೊಂಡು ಕ್ಷೇತ್ರದ ಯಾವ ಹೋಬಳಿಯಲ್ಲಿ ಯಾವ ಪಕ್ಷ ಮುನ್ನಡೆ ಸಾಧಿಸಿದೆ. ಎಲ್ಲಿ ಹಿನ್ನಡೆ ಸಾಧಿಸಿದೆ. ಯಾವ ಮತಗಟ್ಟೆಯಲ್ಲಿ ಎದುರಾಳಿ
ಗಳು ಮುನ್ನಡೆ ಸಾಧಿಸಿದ್ದಾರೆ. ಪಕ್ಷಕ್ಕೆ ಬಂದ ಮತಗಳು ಎಷ್ಟು? ಪಕ್ಷದ ಚುನಾವಣಾ ವೈಫ‌ಲ್ಯಗಳೇನು? ಯಾವ ಹೋಬಳಿ ಯಾರ ಕೈ ಹಿಡಿದಿದೆ. ನಗರ, ಪಟ್ಟಣದಲ್ಲಿ ಯಾವ ಪಕ್ಷ ಲೀಡ್‌ ತೆಗೆದುಕೊಂಡಿದೆ. ನಮ್ಮ ಪಕ್ಷಗಳಿಗೆ ಎಷ್ಟು ಮತ ಬಿದ್ದಿದೆ. ಹೀಗೆ ವಿವಿಧ ಅಯಾಮಗಳಲ್ಲಿ ಸೋಲು ಕಂಡ ರಾಜಕೀಯ ಪಕ್ಷಗಳ ಅಭ್ಯರ್ಥಿಗಳು ಅತ್ಮವಲೋಕನ ಮಾಡಿಕೊಳ್ಳುತ್ತಿದ್ದಾರೆ.

Advertisement

 ಮತದಾರರಿಗೆ ಕೃತಜ್ಞತೆ: ಚುನಾವಣೆಯಲ್ಲಿ ಗೆದ್ದ ಅಭ್ಯರ್ಥಿಗಳು ರಾಜಧಾನಿ ಸೇರಿದ್ದರೆ ಸೋತ ಅಭ್ಯರ್ಥಿಗಳು ಮತದಾರರಿಗೆ ಕೃತಜ್ಞತೆ ಸಲ್ಲಿಸುವ ಕಾರ್ಯದಲ್ಲಿ ತೊಡಗಿದ್ದಾರೆ.  ಜಿಲ್ಲೆಯ ಗೌರಿಬಿದನೂರು ಕ್ಷೇತ್ರದ ಪರಾಜಿತ ಜೆಡಿಎಸ್‌ ಅಭ್ಯರ್ಥಿ ಸಿ.ಆರ್‌.ನರಸಿಂಹಮೂರ್ತಿ, ಶಿಡ್ಲಘಟ್ಟ ಕ್ಷೇತ್ರದ ಜೆಡಿಎಸ್‌ ಪರಾಜಿತ ಅಭ್ಯರ್ಥಿ ಮೇಲೂರು ರವಿಕುಮಾರ್‌, ಚಿಂತಾಮಣಿ ಮಾಜಿ ಶಾಸಕ ಡಾ.ಎಂ.ಸಿ.ಸುಧಾಕರ್‌, ಬುಧವಾರ ಮುಖಂಡರ, ಕಾರ್ಯಕರ್ತರ ಸಭೆಗಳನ್ನು ನಡೆಸಿ ಚುನಾವಣೆಯಲ್ಲಿ ಕೆಲಸ ಮಾಡಿದ ಮುಖಂಡರಿಗೆ, ಮತ ಕೊಟ್ಟ ಮತದಾರರಿಗೆ ಕೃತಜ್ಞತೆಗಳನ್ನು ಅರ್ಪಿಸಿದ್ದಾರೆ.

ಸಾಕಷ್ಟು ಹೋರಾಟ ಪಕ್ಷ ಈ ಹಿಂದೆಗಿಂತಲೂ ಈ ಬಾರಿ ಸಾಕಷ್ಟು ಕೆಲಸ ಮಾಡಿತು. ಆದರೆ ಜಿಲ್ಲಾದ್ಯಂತ ಕಾಂಗ್ರೆಸ್‌ ಹರಿಸಿದ ಹಣದ ಹೊಳೆಯಿಂದ ನಮ್ಮ ಪಕ್ಷ ಗೆಲುವು ಸಾಧಿಸಲಿಕ್ಕೆ ಆಗಲಿಲ್ಲ. ಆದರೆ ನಾವು ಪ್ರಾಮಾಣಿಕವಾಗಿ
ಮತದಾರರನ್ನು ತಲುಪುವ ಕೆಲಸ ಮಾಡಿದವು. ಆದರೆ ಜನರ ನಿರ್ಧಾರ ಬೇರೆಯಾಗಿತ್ತು. ಗೌರಿಬಿದನೂರು ಕ್ಷೇತ್ರದಲ್ಲಿ ನಮ್ಮಲ್ಲಿನ ಕೆಲವು ಅಡಚಣೆಗಳಿಂದ ಸೋಲಬೇಕಾಯಿತು ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಡಾ.ಜಿ.ವಿ.ಮಂಜುನಾಥ ಬೇಸರ ವ್ಯಕ್ತಪಡಿಸಿದರು.

ಕಣ್ಣೀರಿಟ್ಟ ಚಿಂತಾಮಣಿ ಡಾ.ಎಂ.ಸಿ.ಸುಧಾಕರ್‌ ಜಿಲ್ಲೆಯ ವಿಧಾನಸಭಾ ಚುನಾವಣೆಯಲ್ಲಿ ಸೋತ ಪ್ರಮುಖರಲ್ಲಿ ಚಿಂತಾಮಣಿ ಕ್ಷೇತ್ರದ ಮಾಜಿ ಶಾಸಕ ಭಾರತೀಯ ಪ್ರಜಾ ಪಕ್ಷದ ಅಭ್ಯರ್ಥಿ ಡಾ.ಎಂ.ಸಿ.ಸುಧಾಕರ್‌ ಒಬ್ಬರು. ಗೆಲುವಿನ ಬಗ್ಗೆ ಸಾಕಷ್ಟು ವಿಶ್ವಾಸ ಹೊಂದಿದ್ದರು.

ಆದರೆ ಅಲ್ಪಮತಗಳ ಅಂತರದಿಂದ ಜೆಡಿಎಸ್‌ ಅಭ್ಯರ್ಥಿ ಜೆ.ಕೆ. ಕೃಷ್ಣಾರೆಡ್ಡಿ ವಿರುದ್ಧ ಪರಾಜಿತಗೊಂಡಿದ್ದಾರೆ. ಸೋಲಿನ
ಕಹಿಯಿಂದ ಸುಧಾಕರ್‌ ಕಣ್ಣೀರು ಇಟ್ಟರು ಎನ್ನಲಾಗಿದೆ. ಇನ್ನೂ ಬಾಗೇಪಲ್ಲಿ ಕ್ಷೇತ್ರದ ಸಿಪಿಎಂ ಅಭ್ಯರ್ಥಿ ಜಿ.ವಿ.ಶ್ರೀರಾಮರೆಡ್ಡಿ, ಗೌರಿಬಿದನೂರಿನ ಜೆಡಿಎಸ್‌ ಅಭ್ಯರ್ಥಿ ಸಿ.ಆರ್‌.ನರಸಿಂಹಮೂರ್ತಿ, ಚಿಕ್ಕಬಳ್ಳಾಪುರದ ಜೆಡಿಎಸ್‌ ಅಭ್ಯರ್ಥಿ ಕೆ.ಪಿ.ಬಚ್ಚೇಗೌಡ, ಶಿಡ್ಲಘಟ್ಟದ ಜೆಡಿಸ್‌ ಅಭ್ಯರ್ಥಿ ಮೇಲೂರು ರವಿಕುಮಾರ್‌ ಸೋತ ಪ್ರಮುಖ ರಾಜಕೀಯ
ಪಕ್ಷಗಳ ಅಭ್ಯರ್ಥಿಗಳಾಗಿದ್ದಾರೆ.

 ಕಾಗತಿ ನಾಗರಾಜಪ್ಪ

Advertisement

Udayavani is now on Telegram. Click here to join our channel and stay updated with the latest news.

Next