Advertisement

ದುಡ್ಡಿನ ಮುಂದೆ ಪಕ್ಷಗಳ ಸಂಸ್ಕಾರ, ಸಿದ್ಧಾಂತ ಗೌಣ

11:51 PM Jan 24, 2023 | Team Udayavani |

ಎಂ.ಎಲ್‌.ಮುತ್ತೆಣ್ಣವರ, ಮಾಜಿ ಶಾಸಕ
ಬೆಳಗಾವಿ: ನಮ್ಮ ಕಾಲದಲ್ಲಿ ಮಾನವೀಯತೆಯ ಆಧಾರದ ಮೇಲೆ ಚುನಾವಣೆ ನಡೆಯುತ್ತಿತ್ತು. ಮತದಾರರು ಅಭ್ಯರ್ಥಿಯ ಸಂಸ್ಕಾರ, ಸಂಸ್ಕೃತಿ, ನಡತೆ ನೋಡಿ ಮತ ಹಾಕುತ್ತಿದ್ದರು. ಆದರೆ ಈಗ ದುಡ್ಡೇ ದೊಡ್ಡಪ್ಪ. ಇದರ ಮುಂದೆ ಯಾವ ಸಂಸ್ಕಾರ, ಸಂಸ್ಕೃತಿ ಹಾಗೂ ನಿಷ್ಠೆಗೆ ಗೌರವ ಮತ್ತು ಬೆಲೆ ಇಲ್ಲ. ಕಾಲ ಬದಲಾದಂತೆ ಮತದಾರರೂ ಬದಲಾಗಿದ್ದಾರೆ. ಪಕ್ಷದ ತಣ್ತೀ-ಸಿದ್ಧಾಂತಗಳು ಸಹ ಬದಲಾಗಿವೆ.

Advertisement

ಇದು ಬೆಳಗಾವಿ ಜಿಲ್ಲೆಯ ಹಿರಿಯ ರಾಜಕಾರಣಿ, ಮಾಜಿ ಶಾಸಕ ಎಂ.ಎಲ್‌.ಮುತ್ತೆಣ್ಣವರ ಅವರ ವಿಷಾದದ ಮಾತು. ಮೊದಲು ಜನತಾ ಪಕ್ಷದಲ್ಲಿದ್ದು ಅನಂತರ ಬಿಜೆಪಿ ನಾಯಕರಾಗಿ ಗುರುತಿಸಿಕೊಂಡಿದ್ದಲ್ಲದೆ ಗೋಕಾಕ ಕ್ಷೇತ್ರದಿಂದ ಆರು ಬಾರಿ ಚುನಾವಣೆ ಎದುರಿಸಿ ಸತತ ಎರಡು ಬಾರಿ ಶಾಸಕರಾಗಿದ್ದ ಮುತ್ತೆಣ್ಣವರ ಈಗಿನ ರಾಜಕಾರಣ ಮತ್ತು ರಾಜಕಾರಣಿಗಳ ಬಗ್ಗೆ ಮಾತನಾಡಲು ಬಹಳ ಆಲೋಚನೆ ಮಾಡುತ್ತಾರೆ.

ನಮ್ಮ ಅವಧಿಯಲ್ಲಿ ಪಕ್ಷದ ಟಿಕೆಟ್‌ಗಾಗಿ ಹೈಕಮಾಂಡ್‌ ಮುಂದೆ ಲಾಬಿ ಮಾಡುವ, ನಾಯಕರ ಮೇಲೆ ಒತ್ತಡ ಹಾಕುವ ಪ್ರಮೇಯವೇ ಇರಲಿಲ್ಲ. ಯಾವುದೇ ರೀತಿಯಲ್ಲಿ ಶಿಫಾರಸು ಮಾಡುತ್ತಿರಲಿಲ್ಲ. ಪಕ್ಷದ ವರಿಷ್ಠರ ಜತೆಗೆ ಮುಖಾಮುಖೀಯಾಗುತ್ತಿದ್ದೆವು. ಅವರೂ ಸಹ ಸಮೀಕ್ಷೆ ಮಾಡುವುದಲ್ಲದೆ ಕ್ಷೇತ್ರದಲ್ಲಿ ಅಭಿಪ್ರಾಯ ಸಂಗ್ರಹಿಸಿ, ನಮ್ಮ ಬಗ್ಗೆ ಅಧ್ಯಯನ ಮಾಡಿ ಅನಂತರವಷ್ಟೇ ಟಿಕೆಟ್‌ ನೀಡುತ್ತಿದ್ದರು. ಈಗ ಹಾಗಿಲ್ಲ. ದುಡ್ಡಿನ ಮುಂದೆ ನಿಷ್ಠೆ, ಪ್ರಾಮಾಣಿಕತೆ, ಪಕ್ಷವನ್ನು ಕಟ್ಟಿದ ಶ್ರಮದ ಬಗ್ಗೆ ಯಾರೂ ಕೇಳುವುದೇ ಇಲ್ಲ.

ನನಗೆ ಟಿಕೆಟ್‌ ಕೊಡಬಾರದು ಎಂದು ಜಿಲ್ಲೆಯ ಜನತಾದಳದ ಕೆಲವು ನಾಯಕರು ಆಗ ಧರಣಿ ಮಾಡಿದ್ದರು. ಪಕ್ಷದ ವರಿಷ್ಠರಾದ ರಾಮಕೃಷ್ಣ ಹೆಗಡೆ ಅವರ ಮನೆಗೆ ಹೋಗಿ ಪ್ರತಿಭಟನೆ ಮಾಡಿದ್ದಲ್ಲದೆ ಯಾವುದೇ ಕಾರಣಕ್ಕೂ ಮುತ್ತೆಣ್ಣವರ ಅವರಿಗೆ ಟಿಕೆಟ್‌ ನೀಡಬಾರದು ಎಂದು ಆಗ್ರಹಿಸಿದ್ದರು. ಆದರೆ ಹೆಗಡೆ ಅವರು ಇಂತಹ ಪ್ರತಿಭಟನೆಗಳಿಗೆ ಸೊಪ್ಪು ಹಾಕಲಿಲ್ಲ. ಆಗ ನಿಷ್ಠೆಗೆ ಬೆಲೆ ಇತ್ತು ಎಂದು 80ರ ದಶಕದ ಚುನಾವಣೆಗಳನ್ನು ನೆನಪು ಮಾಡಿಕೊಂಡರು.

ಚುನಾವಣೆಗೆ ಹೊಲ ಮಾರಿದ್ದೆ: 1983ರಲ್ಲಿ ಮೊದಲ ಬಾರಿಗೆ ಜನತಾ ಪಕ್ಷದಿಂದ ಸ್ಪರ್ಧೆ ಮಾಡಿದ್ದಾಗ ಚುನಾ ವಣೆಗೆ ಖರ್ಚು ಮಾಡಿದ್ದು 88 ಸಾವಿರ ಮಾತ್ರ. ಈ ಹಣವನ್ನು ಹೊಂದಿಸಲು ಆಗ ಪ್ರತೀ ಎಕ್ರೆಗೆ 3,000 ರೂ.ದಂತೆ 10 ಎಕ್ರೆ ಹೊಲ ಮಾರಿದ್ದೆ. ಜನರು ಒಂದಿಷ್ಟು ಹಣ ಕೂಡಿಸಿ ಕೊಟ್ಟಿದ್ದರು. ಆಗ ಪ್ರಚಾರಕ್ಕೆ ನಮ್ಮ ಬಳಿ ಗಾಡಿ ಇರಲಿಲ್ಲ. ಸೈಕಲ್‌ ಮೇಲೆ ಹಳ್ಳಿ ಸುತ್ತಿದೆವು. ಇದ್ದ ಒಂದೇ ಗಾಡಿಗೆ ಮೈಕ್‌ ಹಾಕಿಕೊಂಡು ಊರೂರು ಸುತ್ತಿ ಪ್ರಚಾರ ಮಾಡಲಾಯಿತು. ದಿನಕ್ಕೆ 8ರಿಂದ 10 ಹಳ್ಳಿಗಳಲ್ಲಿ ಪ್ರಚಾರ ಮಾಡುತ್ತಿದ್ದೆವು. ಪ್ರಚಾರದ ಸಮಯದಲ್ಲಿ ಊರಿನ ಮಠಗಳು ಅಥವಾ ಮನೆಗಳಲ್ಲಿ ಅಂಬಲಿ ಇಲ್ಲವೇ ಚಹಾ ಕುಡಿದು ದಿನ ಕಳೆಯುತ್ತಿದ್ದೆವು. ಪ್ರಚಾರದ ಸಮಯದಲ್ಲಿ ಒಂದು ಬೂತ್‌ಗೆ ಒಂದು ಚೀಲ ಚುರುಮುರಿ, ಚಹಾ ಪಾನೀಯಕ್ಕೆ 50 ರೂ. ಮಾತ್ರ ಕೊಡುತ್ತಿದ್ದೆವು. ಇದನ್ನು ಬಿಟ್ಟರೆ ಬೇರೆ ಯಾವುದಕ್ಕೂ ಹಣ ಖರ್ಚು ಮಾಡುವ ಪ್ರಶ್ನೆಯೇ ಬರುತ್ತಿರಲಿಲ್ಲ.

Advertisement

ವಿಶೇಷವೆಂದರೆ ಆಗ ಪ್ರತೀ ಊರಲ್ಲಿ ಜನರು ಮರ್ಯಾದೆ ಕೊಡುತ್ತಿದ್ದರು. ಪ್ರಚಾರದಲ್ಲಿ ಯಾವುದೇ ಟೀಕೆ ಅಥವಾ ಆರೋಪಗಳನ್ನು ಮಾಡುತ್ತಿರಲಿಲ್ಲ. ಅದು ಚುನಾವಣೆಯ ವಿಷಯವೂ ಆಗಿರಲಿಲ್ಲ. ಜನರ ಸಮಸ್ಯೆಗಳು ಮತ್ತು ಅವುಗಳಿಗೆ ಪರಿಹಾರ ನೀಡುವುದು ನಮ್ಮ ಪ್ರಚಾರದ ವಿಷಯಗಳಾಗಿದ್ದವು. ಎರಡು ಬಾರಿ ಶಾಸಕರಾಗಿ 33 ಹಳ್ಳಿಗಳಿಗೆ ಕುಡಿಯುವ ನೀರು ಮತ್ತು ಗುಡ್ಡದ ಮೇಲಿನ 17 ಹಳ್ಳಿಗಳಿಗೆ ವಿದ್ಯುತ್‌ ಸೌಲಭ್ಯ ಕಲ್ಪಿಸಿಕೊಟ್ಟಿದ್ದನ್ನು ಜನರು ಈಗಲೂ ಮರೆತಿಲ್ಲ. ಮತದಾರರು ಆಗ ನಾವು ಮಾಡಿದ ಕೆಲಸ, ವ್ಯಕ್ತಿಯ ನಡತೆ, ಒಳ್ಳೆಯ ಗುಣಗಳನ್ನು ನೋಡಿ ಲೆಕ್ಕ ಹಾಕುತ್ತಿದ್ದರು.

ಇನ್ನು ಕಾರ್ಯಕರ್ತರ ಪಡೆ ನಿಜಕ್ಕೂ ಅದ್ಭುತ. ಪ್ರತಿ ಯೊಬ್ಬರೂ ತಮ್ಮದೇ ಚುನಾವಣೆ ಎನ್ನುವ ರೀತಿಯಲ್ಲಿ ಕೆಲಸ ಮಾಡುತ್ತಿದ್ದರು. 1985ರ ಚುನಾವಣೆ ಯಲ್ಲಿ ನನ್ನ ಚುನಾವಣ ವೆಚ್ಚ 1.5 ಲಕ್ಷದ ಗಡಿ ದಾಟಿರಲಿಲ್ಲ. ಆದರೆ ವಿಪಕ್ಷದವರು ಆಗಲೇ 32 ಲಕ್ಷ ರೂ. ಖರ್ಚು ಮಾಡಿದ್ದರು. ನನ್ನನ್ನು ಸೋಲಿಸಬೇಕು ಎಂದು ಆಗ ಕಾಂಗ್ರೆಸ್‌ ನಾಯಕ ರಾಜೀವ ಗಾಂಧಿ ಗೋಕಾಕಕ್ಕೆ ಬಂದು ತಮ್ಮ ಅಭ್ಯರ್ಥಿ ರಮೇಶ್‌ಜಾರಕಿಹೊಳಿ ಪರ ಪ್ರಚಾರ ಮಾಡಿದ್ದರು. ಆಗ ನನ್ನ ಬಳಿ ಒಂದು ಗಾಡಿಯೂ ಇರಲಿಲ್ಲ. ಪಕ್ಷದ ಕಚೇರಿ ತೆರೆಯಲು ವಿರೋಧಿಗಳು ಬಿಡಲಿಲ್ಲ. ಮನೆಯಲ್ಲೇ ಕಚೇರಿ ತೆರೆದೆ. ಅದರ ಮೂಲಕವೇ ಚುನಾವಣೆ ಮಾಡಿದೆ. ಸುಮಾರು ಆರು ಸಾವಿರ ಮತಗಳ ಅಂತರದಿಂದ ಗೆದ್ದು ಬಂದೆ.

ಈಗ ಚುನಾವಣೆಯ ದಿಕ್ಕೇ ಬದಲಾಗಿದೆ. ಒಂದು ಕ್ಷೇತ್ರದಲ್ಲಿ ಕನಿಷ್ಠ 25ರಿಂದ 30 ಕೋಟಿ ಖರ್ಚು ಮಾಡಬೇಕು. ದುಡ್ಡಿದ್ದವರಿಗೆ ಮರ್ಯಾದೆ, ಗೌರವ. ನಿಷ್ಠೆ, ತಣ್ತೀ, ಸಿದ್ಧಾಂತಗಳಿಗೆ ಪ್ರಾಧಾನ್ಯ ಕಡಿಮೆಯಾಗಿದೆ. ಮುಖ್ಯವಾಗಿ ಹೈಕಮಾಂಡ್‌ ಸಹ ಅದೇ ರೀತಿ ನಡೆದುಕೊಳ್ಳುತ್ತಿದೆ. ದುಡ್ಡು ಇದ್ದವರಿಗೆ ಕಣ್ಣುಮುಚ್ಚಿ ಮಣೆ ಹಾಕುತ್ತಿದೆ. ಅಂತಹ ಸಾಮರ್ಥ್ಯ ನಮ್ಮಲ್ಲಿ ಇಲ್ಲ. ಹೀಗಾಗಿ ಚುನಾವಣೆಯಿಂದ ದೂರ ಉಳಿದಿದ್ದೇವೆ.

-ಕೇಶವ ಆದಿ

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next