Advertisement

ಎನ್‌ಕೌಂಟರ್‌ನಲ್ಲಿ 12 ನಕ್ಸಲರ ಹತ್ಯೆ

06:00 AM Mar 03, 2018 | Team Udayavani |

ಹೈದರಾಬಾದ್‌: ನಕ್ಸಲ್‌ ನಿಗ್ರಹ ಕಾರ್ಯಾಚರಣೆಯಲ್ಲಿ ಮಹತ್ವದ ಯಶಸ್ಸು ಎಂಬಂತೆ, ಛತ್ತೀಸ್‌ಗಢದಲ್ಲಿ ಶುಕ್ರವಾರ ಮುಂಜಾನೆ ಗ್ರೇಹೌಂಡ್ಸ್‌ ಪಡೆ ನಡೆಸಿದ ದಾಳಿಯಲ್ಲಿ 12 ಮಂದಿ ನಕ್ಸಲರನ್ನು ಹೊಡೆದುರುಳಿಸಲಾಗಿದೆ. ಕಾರ್ಯಾಚರಣೆ ವೇಳೆ, ನಕ್ಸಲ್‌ ನಿಗ್ರಹ ಪಡೆಯ ಜೂನಿಯರ್‌ ಕಮಾಂಡೋ ಸುಶೀಲ್‌ ಕುಮಾರ್‌ ಅಸುನೀಗಿದ್ದು, ಮೂವರು ಸಿಬ್ಬಂದಿ ಗಾಯಗೊಂಡಿದ್ದಾರೆ.

Advertisement

ಛತ್ತೀಸ್‌ಗಢದ ರಾಜಧಾನಿ 500 ಕಿ.ಮೀ. ದೂರವಿರುವ ಬಿಜಾಪುರ ಜಿಲ್ಲೆಯ ಹಳ್ಳಿಯಾದ ಪಾಮೇದ್‌ನ ಪೊಲೀಸ್‌ ಠಾಣೆಯ ಸರಹದ್ದಿನಲ್ಲಿನ ಪೂಜಾರಿ ಕಾಂಕೆರ್‌ ಬಳಿಯ ಅರಣ್ಯ ಪ್ರದೇಶದಲ್ಲಿ ಈ ಎನ್‌ಕೌಂಟರ್‌ ನಡೆದಿದೆ. ನಕ್ಸಲ್‌ ನಿಗ್ರಹ ದಳ ಹಾಗೂ ನಕ್ಸಲರ ನಡುವೆ ನಡೆದ ಗುಂಡಿನ ಚಕಮಕಿಯಲ್ಲಿ ಆರು ಮಹಿಳಾ ನಕ್ಸಲರು ಸೇರಿ, 12 ಮಂದಿ ಮೃತಪಟ್ಟಿದ್ದಾರೆ. ತೆಲಂಗಾಣ ಹಾಗೂ ಆಂಧ್ರಪ್ರದೇಶದ ಗ್ರೇಹೌಂಡ್ಸ್‌ ಪಡೆ ಹಾಗೂ ಛತ್ತೀಸ್‌ಗಢ ಪೊಲೀಸರ ವಿಶೇಷ ತಂಡ ಈ ಜಂಟಿ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿತ್ತು.

ತೆಲಂಗಾಣದ ಗುಪ್ತಚರ ಇಲಾಖೆಯ ಖಚಿತ ಮಾಹಿತಿಯ ಮೇರೆಗೆ ನಕ್ಸಲ್‌ ನಿಗ್ರಹ ದಳವಾದ ಗ್ರೇಹೌಂಡ್ಸ್‌ ಈ ದಾಳಿಗೆ ಯೋಜನೆ ರೂಪಿಸಿತ್ತು. ಇದಕ್ಕೆ ಛತ್ತೀಸ್‌ಗಢದ ಪೊಲೀಸ್‌ ತಂಡವೂ ಕೈ ಜೋಡಿಸಿತ್ತು. ಗುಂಡಿನ ಚಕಮಕಿಯ ಆರಂಭಿಕ ಹಂತದಲ್ಲೇ, ಜೂನಿಯರ್‌ ಕಮಾಂಡರ್‌ ಸುಶೀಲ್‌ ಕುಮಾರ್‌ ಹುತಾತ್ಮರಾದರು. ಆನಂತರ, ಇನ್ನಷ್ಟು ತೀವ್ರಗೊಂಡ ಗುಂಡಿನ ಚಕಮಕಿಯಲ್ಲಿ, ನಕ್ಸಲ್‌ ತಂಡದ ಎಲ್ಲಾ ಸದಸ್ಯರೂ ಹತರಾದರು ಎಂದು ಪೊಲೀಸ್‌ ಅಧಿಕಾರಿಗಳು ತಿಳಿಸಿದ್ದಾರೆ.

ಪ್ರಮುಖ ಸದಸ್ಯರು ಮೃತಪಟ್ಟಿರುವ ಶಂಕೆ:
ಎನ್‌ಕೌಂಟರ್‌ನಲ್ಲಿ ಅಸುನೀಗಿರುವ ನಕ್ಸಲರ ಪೈಕಿ ಕೆಲವರು ಆ ಗುಂಪಿನ ಪ್ರಮುಖ ನಾಯಕರಿರರಬಹುದೆಂದು ಶಂಕಿಸಲಾಗಿದೆ. ಮೃತರ ಬಳಿ ಎ.ಕೆ.47 ರೈಫ‌ಲ್‌ ಸಿಕ್ಕಿರುವುದು ಇದಕ್ಕೆ ಸಾಕ್ಷಿ ಎನ್ನಲಾಗುತ್ತಿದೆ. ನಕ್ಸಲರ ಹಿರಿಯ ಸದಸ್ಯರಿಗಷ್ಟೇ ಈ ರೈಫ‌ಲ್‌ ಉಪಯೋಗಿಸಲು ಅವಕಾಶ ನೀಡಲಾಗುತ್ತದೆ ಎಂಬುದು ಪೊಲೀಸರ ಅಭಿಪ್ರಾಯ. ಈ ಮಧ್ಯೆ, ಇದೊಂದು ನಕಲಿ ಎನ್‌ ಕೌಂಟರ್‌ ಆಗಿದೆ ಎಂದು ತೆಲಂಗಾಣದ “ರೆವಲ್ಯೂಷನರಿ ರೈಟರ್ಸ್‌ ಅಸೋಸಿಯೇಷನ್‌’ನ ಸದಸ್ಯ ವಾರಾವರ ರಾವ್‌ ಅನುಮಾನ ವ್ಯಕ್ತಪಡಿಸಿದ್ದಾರೆ.

ಬೀದರ್‌ನ ಸುಶೀಲ್‌ ಕುಮಾರ್‌ ಹುತಾತ್ಮ
ಬೀದರ:
ಭದ್ರತಾ ಪಡೆ ಮತ್ತು ನಕ್ಸಲೀಯರ ನಡುವಿನ ಕದನ ದಲ್ಲಿ ರಾಜ್ಯದ ಬೀದರ್‌ ನಿವಾಸಿ ಕಮಾಂಡರ್‌ ಸುಶೀಲಕುಮಾರ ವಿಜಯಕುಮಾರ ಬಪ್ಪನಪಳ್ಳಿ (32) ಹುತಾತ್ಮರಾಗಿದ್ದಾರೆ. 

Advertisement

ಸುಶೀಲಕುಮಾರ ನಗರದ ಗ್ರೇಸ್‌ ಕಾಲೋನಿಯ ನಿವಾಸಿಯಾಗಿದ್ದು, ಗುಂಡಿನ ಕಾರ್ಯಾಚರಣೆಯಲ್ಲಿ ಸಾವಿನ ಸುದ್ದಿ ತಿಳಿಯುತ್ತಿದ್ದಂತೆ ಬಂಧು-ಬಳಗದವರ ಆಕ್ರಂದನ ಮುಗಿಲು ಮುಟ್ಟಿತ್ತು. ಹೋಳಿ ಹಬ್ಬದ ಸಂಭ್ರಮದಲ್ಲಿದ್ದ ಕುಟುಂಬಸ್ಥರನ್ನು ಸಾವು ದುಃಖದ ಮಡಿಲಲ್ಲಿ ತೇಲಿಸಿದೆ. 2004ರಲ್ಲಿ ಆಂಧ್ರದಲ್ಲಿ ಪೊಲೀಸ್‌ ಪೇದೆಯಾಗಿ ನೇಮಕಗೊಂಡಿದ್ದ ಸುಶೀಲಕುಮಾರ ಅವರು, ನಂತರ ನಕ್ಸಲ್‌ ನಿಗ್ರಹ ಪಡೆಯಲ್ಲಿ ಕಮಾಂಡೋ ಆಗಿ ಬಡ್ತಿ ಹೊಂದಿದ್ದರು. 2009ರ ಮೇ 25ರಂದು ಮದುವೆಯಾಗಿದ್ದ ಅವರು ಪತ್ನಿ, ಪುತ್ರಿಯನ್ನು ಅಗಲಿದ್ದಾರೆ. ಸುಶೀಲಕುಮಾರ ಅವರ ಪಾರ್ಥಿವ ಶರೀರ ಶುಕ್ರವಾರ ಸಂಜೆ ವೇಳೆ ಬೀದರ್‌ಗೆ ಆಗಮಿಸಲಿದ್ದು, ಶನಿವಾರ ಸಕಲ ಸರ್ಕಾರಿ ಗೌರವಗಳೊಂದಿಗೆ ಅಂತ್ಯಕ್ರಿಯೆ ನೆರವೇರಲಿದೆ.

Advertisement

Udayavani is now on Telegram. Click here to join our channel and stay updated with the latest news.

Next