Advertisement

ಆಟ ಮುಗಿಸಲೊಪ್ಪದ ಇಮ್ರಾನ್‌ ಖಾನ್‌; ಪಾಕ್‌ ಪ್ರಧಾನಿ ಭವಿಷ್ಯ ಡೋಲಾಯ ಮಾನ

01:12 AM Apr 10, 2022 | Team Udayavani |

ಇಸ್ಲಾಮಾಬಾದ್‌: ಸುಪ್ರೀಂ ಕೋರ್ಟ್‌ ಆದೇಶದ ಹಿನ್ನೆಲೆಯಲ್ಲಿ ಪಾಕ್‌ ಸಂಸತ್ತಿನಲ್ಲಿ ವಿಶ್ವಾಸಮತ ಸಾಬೀತುಪಡಿಸುವ ಅನಿವಾರ್ಯಕ್ಕೆ ಸಿಲುಕಿದ್ದ ಪ್ರಧಾನಿ ಇಮ್ರಾನ್‌ ಖಾನ್‌ ಶನಿವಾರ ಇಡೀ ದಿನ ಸಂಸತ್ತಿನ ಕಣ್ತಪ್ಪಿಸಿದರು, ರಾತ್ರಿಯ ವರೆಗೂ ಕಣ್ಣಾಮುಚ್ಚಾಲೆ ಆಟ ಆಡಿದರು.

Advertisement

ಇಮ್ರಾನ್‌ “ಆಟ’ಕ್ಕೆ ಸಾಥ್‌ ನೀಡಿದ ಪಾಕ್‌ ಸಂಸತ್ತಿನ ಸ್ಪೀಕರ್‌ ಅಸಾದ್‌ ಖೈಸರ್‌ ಕೂಡ ಬೆಳಗ್ಗೆಯಿಂದ ಮಧ್ಯರಾತ್ರಿಯ ವರೆಗೂ ಒಂದೊಂದೇ ನೆಪ ಹೇಳುತ್ತ ಕಲಾಪವನ್ನು ಮುಂದೂಡುತ್ತಾ ಸಾಗಿದರು. ಹೀಗಾಗಿ ರಾತ್ರಿ 11ರ ವರೆಗೂ ಇಮ್ರಾನ್‌ ಖಾನ್‌ ವಿರುದ್ಧದ ಅವಿಶ್ವಾಸ ಗೊತ್ತುವಳಿ ಸಂಬಂಧ ಮತದಾನ ನಡೆಯಲೇ ಇಲ್ಲ.
ಕಲಾಪ ಆರಂಭವಾದಾಗಿನಿಂದಲೂ ವಿಪಕ್ಷಗಳ ನಾಯಕರು, ಸರ್ವೋಚ್ಚ ನ್ಯಾಯಾಲಯದ ಆದೇಶದ ಅನ್ವಯ ಕೂಡಲೇ ಅವಿಶ್ವಾಸ ಗೊತ್ತುವಳಿ ಪರ ಮತದಾನ ನಡೆಸಿ ಎಂದು ಸ್ಪೀಕರ್‌ ಖೈಸರ್‌ ಅವರನ್ನು ಒತ್ತಾಯಿಸತೊಡಗಿದರು.

ವಿಪಕ್ಷ ನಾಯಕ ಶೆಹಬಾಜ್‌ ಷರೀಫ್ ಅವರು ಸಂಸತ್‌ನಲ್ಲಿ ಮಾತನಾಡುತ್ತಿದ್ದಂತೆ ಆಡಳಿತಾರೂಢ ಪಕ್ಷದ ಸಂಸದರು ಗದ್ದಲವೆಬ್ಬಿಸಿದರು ಎಂಬ ನೆಪ ಹೇಳಿ ಸ್ಪೀಕರ್‌ ಕಲಾಪವನ್ನು ಮುಂದೂಡಿದರು. ಅನಂತರ ಸದನ ಸಮಾವೇಶಗೊಂಡಾಗ ರಮ್ಜಾನ್‌ ಇರುವ ಕಾರಣ ಇಫ್ತಾರ್‌ ಬಳಿಕ ಮತದಾನ ನಡೆಸುತ್ತೇನೆ ಎಂದು ಭರವಸೆ ನೀಡಿ ಮತ್ತೆ ಕಲಾಪವನ್ನು ಮುಂದೆ ಹಾಕಿದರು. ಇಷ್ಟೆಲ್ಲ ಆಗುತ್ತಿದ್ದರೂ ಇಮ್ರಾನ್‌ ಖಾನ್‌ ಮಾತ್ರ ಸದನದಲ್ಲಿ ಉಪಸ್ಥಿತರಿರಲಿಲ್ಲ. ಆದರೆ ಈ ಬೆಳವಣಿಗೆಗಳ ನಡುವೆಯೇ ಅವರು ರಾತ್ರಿ 9ಕ್ಕೆ ಸಂಪುಟ ಸಭೆ ಕರೆದರು.

ಇಫ್ತಾರ್‌ ಮುಗಿಯುತ್ತಿದ್ದಂತೆ ಮತದಾನ ಆರಂಭವಾಗುತ್ತದೆ ಎಂದು ನಂಬಿದ್ದ ವಿಪಕ್ಷಗಳಿಗೆ ಮತ್ತೆ ನಿರಾಶೆಯಾಯಿತು. ಸ್ಪೀಕರ್‌ ಮತ್ತೆ ಕಲಾಪವನ್ನು ಮುಂದೂಡಿದರು. ಹೀಗಾಗಿ ರಾತ್ರಿಯಿಡೀ ಪಾಕ್‌ ಸಂಸತ್ತಿನಲ್ಲಿ ಹೈಡ್ರಾಮಾ ಸೃಷ್ಟಿಯಾಗುವ ಲಕ್ಷಣ ಗೋಚರಿಸಿತು.

ಸಂಸತ್ತಿನ ಕಲಾಪ ನಡೆಯುತ್ತಿರುವಂತೆಯೇ ರಾತ್ರಿ 9ಕ್ಕೆ ಸಂಪುಟ ಸಭೆ ಕರೆದ ಇಮ್ರಾನ್‌ ಖಾನ್‌ ನಡೆಯನ್ನು ವಿಪಕ್ಷ ನಾಯಕ ಬಿಲಾವಲ್‌ ಭುಟ್ಟೋ ಜರ್ದಾರಿ ಖಂಡಿಸಿದ್ದಾರೆ.

Advertisement

ಇದನ್ನೂ ಓದಿ:ಲಷ್ಕರ್ ಕಮಾಂಡರ್ ಬಲಿ: ಜನವರಿಯಿಂದ ಕಾಶ್ಮೀರದಲ್ಲಿ ಹತ್ಯೆಯಾದ ಉಗ್ರರೆಷ್ಟು?

ಇತಿಹಾಸ ನಿಮ್ಮನ್ನು ಕ್ಷಮಿಸದು
“ಇಮ್ರಾನ್‌ ಖಾನ್‌ ಮತ್ತು ತಂಡ ನ್ಯಾಯಾಂಗ ನಿಂದನೆಗೆ ಮುಂದಾಗಿರುವುದು ಸ್ಪಷ್ಟವಾಗುತ್ತಿದೆ. ಇತಿಹಾಸ ಯಾವತ್ತೂ ಅವರನ್ನು ಸಂವಿಧಾನವನ್ನು ಉಲ್ಲಂ ಸಿದ ವಂಚಕರು ಎಂದೇ ಸ್ಮರಿಸಿಕೊಳ್ಳಲಿದೆ. ಅವರ ಅಹಂಕಾರವು ದೇಶಕ್ಕಿಂತ ದೊಡ್ಡದೇ’ ಎಂದು ವಿಪಕ್ಷ ನಾಯಕ ಶೆಹಬಾಜ್‌ ಷರೀಫ್ ಪ್ರಶ್ನಿಸಿದ್ದಾರೆ. ರಾಜಕೀಯ ಅನಿಶ್ಚಿತತೆ ಮುಂದುವರಿದಿರುವಂತೆಯೇ ರವಿವಾರ ಎಲ್ಲರೂ ಶಾಂತಿಯುತ ಪ್ರತಿಭಟನೆ ನಡೆಸುವಂತೆ ದೇಶವಾಸಿಗಳಿಗೆ ಇಮ್ರಾನ್‌ ಕರೆ ನೀಡಿದ್ದಾರೆ.

ಪಂದ್ಯದಲ್ಲಿ ಸೋಲುತ್ತೇನೆಂಬ ಭಯದಿಂದ ವಿಕೆಟ್‌ನೊಂದಿಗೆ ಪಿಚ್‌ ನಿಂದಲೇ ಓಡಿ ಹೋದ ಮೊದಲ ಕ್ಯಾಪ್ಟನ್‌ ಇಮ್ರಾನ್‌ ಖಾನ್‌. ಅಧಿಕಾರ ಕಳೆದುಕೊಳ್ಳುವ ಮುನ್ನ ಸ್ವಲ್ಪವಾದರೂ ಕ್ರೀಡಾ ಸ್ಫೂರ್ತಿ ಪ್ರದರ್ಶಿಸಿ.
– ಬಿಲಾವಲ್‌ ಭುಟ್ಟೋ, ಪಿಪಿಪಿ ಮುಖ್ಯಸ್ಥ

 

Advertisement

Udayavani is now on Telegram. Click here to join our channel and stay updated with the latest news.

Next