Advertisement

ಮೊಳಕೆ ಕಾಳುಗಳಿಂದ ಆರೋಗ್ಯ ವೃದ್ಧಿ

03:33 PM Jul 06, 2019 | mahesh |

ಆರೋಗ್ಯವನ್ನು ಉತ್ತಮವಾಗಿರಿಸಿಕೊಳ್ಳಲು ಎಲ್ಲರೂ ನಾನಾ ಬಗೆಯ ಕಸರತ್ತುಗಳನ್ನು ಮಾಡುತ್ತಾರೆ. ಮಾಡುವ ಕಸರತ್ತುಗಳು ಮಾತ್ರ ಆರೋಗ್ಯಕರವಾಗಿರುವುದಿಲ್ಲ. ಉತ್ತಮ ಆರೋಗ್ಯ ನಮ್ಮದಾಗಲು ಆರೋಗ್ಯಕರ ಚಟುವಟಿಕೆಗಳನ್ನು ಅನುಸರಿಸುವುದು ನಮ್ಮ ಕರ್ತವ್ಯ. ನಮ್ಮ ಆರೋಗ್ಯವನ್ನು ಉತ್ತಮಗೊಳಿಸುವಲ್ಲಿ ಮೊಳಕೆ ಕಾಳು ಪ್ರಮುಖ ಪಾತ್ರವಹಿಸುತ್ತದೆ. ಅದ್ರಲ್ಲೂ ಬೆಳಗ್ಗಿನ ಜಾವ ಖಾಲಿ ಹೊಟ್ಟೆಯಲ್ಲಿ ಮೊಳಕೆಕಾಳುಗಳನ್ನು ಸೇವಿಸುವುದರಿಂದ ಉತ್ತಮ ಆರೋಗ್ಯ ನಮ್ಮದಾಗಿಸಿಕೊಳ್ಳಬಹುದು.

Advertisement

ಈ ಮೊಳಕೆ ಕಾಳುಗಳು ಪೌಷ್ಟಿಕಾಂಶವನ್ನು ವೃದ್ಧಿಸುವುದು ಮಾತ್ರವಲ್ಲದೆ ದಿನವಿಡೀ ಉಲ್ಲಾಸ ಭರಿತವಾಗಿರಲು ಸಹಾಯ ಮಾಡುತ್ತದೆ. ಇದನ್ನು ಹಸಿಯಾಗಿ ಸೇವಿಸುವುದಕ್ಕಿಂತ ಬೇಯಿಸಿಕೊಂಡು ತಿನ್ನಬಹುದು. ಕೆಲವೊಮ್ಮೆ ಹಸಿ ಕಾಳುಗಳಲ್ಲಿ ಬ್ಯಾಕ್ಟಿರಿಯಾಗಳ ಪ್ರಮಾಣ ಜಾಸ್ತಿಯಾಗಿರುವುದರಿಂದ ಬೇಯಿಸಿ ತಿನ್ನುವುದು ಉತ್ತಮ.

ಮೊಳಕೆಯುಕ್ತ ಹೆಸರು ಕಾಳು
ಮೊಳಕೆಯುಕ್ತ ಹೆಸರುಕಾಳಿನಲ್ಲಿ ವಿಟಮಿನ್‌ ಸಿ ಅಧಿಕವಾಗಿದ್ದು ದೇಹದಲ್ಲಿ ಪ್ರತಿರೋಧಕ ವ್ಯವಸ್ಥೆಯನ್ನು ಬಲಪಡಿಸುತ್ತದೆ. ಸೋಂಕು ಕಾಯಿಲೆಗಳ ವಿರುದ್ಧ ಹೋರಾಡುತ್ತದೆ. ವಿಟಮಿನ್‌ ಸಿ ಯಲ್ಲಿರುವಂತಹ ಆ್ಯಂಟಿ ಆಕ್ಸಿಡೆಂಟ್ ಅಂಶವು ಫ್ರೀ ರ್ಯಾಡಿಕಲ್ನಿಂದ ರಕ್ಷಿಸುತ್ತದೆ. ಫ್ರೀ ರ್ಯಾಡಿಕಲ್ನ್ನು ಆ್ಯಂಟಿ ಆಕ್ಸಿಡೆಂಟ್‌ಗಳನ್ನು ತಟಸ್ಥಗೊಳಿಸದೆ ಇದ್ದರೆ ಅದು ಆರೋಗ್ಯಕರ ಕೋಶಗಳ ಮೇಲೆ ದಾಳಿ ಮಾಡುವುದು. ಇದು ರಕ್ತ ಸಂಚಾರವನ್ನು ಸುಗಮಗೊಳಿಸಿಸುತ್ತದೆ. ಇದರಿಂದ ದೇಹದ ವಿವಿಧ ಅಂಗಾಂಶ ಹಾಗೂ ಕೋಶಗಳಿಗೆ ಆಮ್ಲಜನಕವು ಸರಬರಾಜು ಆಗುವುದು.

ಡಯಟ್ ಮಾಡುವವರಿಗೆ ಉತ್ತಮ ತಿನಿಸು
ಬೆಳಗ್ಗಿನ ಸಮಯದಲ್ಲಿ ಮೊಳಕೆ ಕಾಳುಗಳನ್ನು ತಿನ್ನುವುದಿಂದ ಬೇಕಾಗಿರುವ ಪೌಷ್ಠಿಕಾಂಶ ದೊರೆತು, ಮೆಟಾಫೋಲಿಸಮ್‌ಹೆಚ್ಚಾಗಿ ಕೊಬ್ಬು ಕರಗಲು ಸಹಾಯ ಮಾಡುತ್ತದೆ. ಇದರಲ್ಲಿ ಫೈಬರ್‌, ಪ್ರೋಟೀನ್‌ ಹೆಚ್ಚಾಗಿರುವುದರಿಂದ ಮತ್ತು ಕ್ಯಾಲೋರಿ ಅಂಶ ಕಡಿಮೆ ಇರುವುದರಿಂದ ಹೊಟ್ಟೆ ತುಂಬಿದಂತೆ ಆಗಿ ಹಸಿವಾಗದಂತೆ ಮಾಡುವುದರ ಜತೆಗೆ ಫಿಟ್ ಆಗಿ ಆರೋಗ್ಯವಾಗಿ ಇರಲು ಸಹಕಾರಿ. ಇದನ್ನು ಅನುಕ್ರಮವಾಗಿ ಪ್ರತಿನಿತ್ಯ ಒಂದೇ ಸಮಯದಲ್ಲಿ ತೆಗೆದುಕೊಳ್ಳುವುದರಿಂದ ರಕ್ತದ ಕಣಗಳನ್ನು ಶುದ್ದವಾಗುತ್ತದೆ. ಅಲ್ಲದೆ ಚರ್ಮವನ್ನು ಕಾಂತಿಯಕ್ತವಾಗಿ ಮಾಡುತ್ತದೆ. ವೃದ್ಧಾಪ್ಯ ಲಕ್ಷಣಗಳು ಬಾರದಂತೆ ನೋಡಿಕೊಳ್ಳುತ್ತದೆ. ಹಾಲಿನಲ್ಲಿ ದೊರೆಯುವಷ್ಟು ಮೊಳಕೆ ಕಾಳಿನಲ್ಲಿ ದೊರೆಯುವುದರಿಂದ ಮೂಳೆಗಳು ಗಟ್ಟಿಗೊಳ್ಳುತ್ತವೆ. ಚಿಕ್ಕ ಮಕ್ಕಳಿಂದ ಹಿಡಿದು ದೊಡ್ಡವರಲ್ಲೂ ಜೀರ್ಣಕ್ರಿಯೆಯ ಸಮಸ್ಯೆ ಇರುತ್ತದೆ ಅಂಥವರು ಮೊಳಕೆಕಾಳುಗಳನ್ನು ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ತಿಂದು ಬಿಸಿ ನೀರನ್ನು ಕುಡಿಯುವುದರಿಂದ ಜೀರ್ಣಕ್ರಿಯೆ ಸರಾಗವಾಗುತ್ತದೆ. ಇದನ್ನು ಸಾಯಂಕಾಲದ ಸಮಯದಲ್ಲಿ ಕೂಡ ತಿನ್ನುವುದರಿಂದ ಆರೋಗ್ಯ ಚೆನ್ನಾಗಿರುತ್ತದೆ. ಇದರಿಂದ ಮಳೆಗಾಲದ ಕಾಯಿಲೆಗಳನ್ನು ತಡೆಗಟ್ಟಬಹುದು. ಇದೇ ರೀತಿ ಮಡಕೆ ಕಾಳು, ಹುರುಳಿಕಾಳು ಹೀಗೆ ವಿವಿಧ ರೀತಿಯ ಕಾಳುಗಳಲ್ಲಿ ಪೌಷ್ಟಿಕಾಂಶಗಳಿದ್ದು ಪ್ರತಿನಿತ್ಯ ಸೇವಿಸುವುದರಿಂದ ಆರೋಗ್ಯವನ್ನು ಉತ್ತಮವಾಗಿರಿಸಿಕೊಳ್ಳಬಹುದು.

• ••ಪ್ರೀತಿ ಭಟ್ ಗುಣವಂತೆ

 

Advertisement
Advertisement

Udayavani is now on Telegram. Click here to join our channel and stay updated with the latest news.

Next