Advertisement

ಮಕ್ಕಳ ಕಲಿಕಾ ಸಾಮರ್ಥ್ಯ ವೃದ್ಧಿಗೆ ಆದ್ಯತೆ ಬೇಕು

12:26 AM Oct 19, 2021 | Team Udayavani |

ಸರಿಸುಮಾರು ಒಂದೂವರೆ ವರ್ಷದಿಂದ ಶಾಲೆಯತ್ತ ಸುಳಿಯದ ಪುಟ್ಟ ಮಕ್ಕಳೀಗ ಶಾಲೆಗೆ ಹೋಗಲು ಸಿದ್ಧರಾಗಬೇಕಿದೆ. ಇದೇ 25ರಿಂದ ಪ್ರಾಥಮಿಕ ಶಾಲೆಗಳೂ ಆರಂಭವಾಗಲಿದ್ದು, ರಾಜ್ಯ ಸರಕಾರ ಸೋಮವಾರ ಅಧಿಕೃತವಾಗಿ ಪ್ರಕಟನೆ ಹೊರಡಿಸಿದೆ. ಸದ್ಯ 6ನೇ ತರಗತಿಯಿಂದ ಸ್ನಾತಕೋತ್ತರ ಪದವಿವರೆಗೂ ಭೌತಿಕ ತರಗತಿಗಳು ಆರಂಭವಾಗಿದ್ದು, ಇವು ಉತ್ತಮವಾಗಿಯೇ ನಡೆಯುತ್ತಿವೆ. ಜತೆಗೆ ರಾಜ್ಯದ ಯಾವುದೇ ಭಾಗದಲ್ಲೂ ಶಾಲೆಗಳಲ್ಲಿ ಕೊರೊನಾ ಕಾಣಿಸಿಕೊಂಡಿರುವುದಾಗಲಿ, ಇನ್ನಾವುದೇ ಸಮಸ್ಯೆಗಳಾಗಲಿ ಕಾಣಿಸಿಕೊಂಡಿಲ್ಲ. ಆದರೂ ಕೇರಳದಿಂದ ಬಂದ ಕೆಲವು ವಿದ್ಯಾರ್ಥಿಗಳಲ್ಲಿ ಕೊರೊನಾ ಕಾಣಿಸಿಕೊಂಡು ಈ ಸಮಸ್ಯೆಯೂ ಸದ್ಯ ಬಗೆಹರಿದಿದೆ.

Advertisement

ಪ್ರಸ್ತುತದಲ್ಲಿ ತಜ್ಞರೇ ಹೇಳಿರುವಂತೆ ಮೂರನೇ ಅಲೆಯ ಅಪಾಯದಿಂದ ಪಾರಾಗಿದ್ದೇವೆ. ತ್ವರಿತಗತಿಯಲ್ಲಿ ಲಸಿಕೆ ನೀಡುತ್ತಿರುವ ಕ್ರಮವಾಗಿರಬಹುದು, ಸರಕಾರಗಳ ನಿಯಂತ್ರಣ ಕ್ರಮಗಳಿರಬಹುದು. ಇದರಿಂದಾಗಿ ರಾಜ್ಯದಲ್ಲಿ ಕೊರೊನಾ ಪ್ರಕರಣಗಳು ದಿನಕ್ಕೆ ಸರಾಸರಿ 500ಕ್ಕಿಂತ ಕೆಳಗೆ ಇಳಿದಿವೆ. ಎಷ್ಟೋ ಜಿಲ್ಲೆಗಳಲ್ಲಿ ಶೂನ್ಯ ಪ್ರಕರಣ ವರದಿಯಾಗುತ್ತಿವೆ. ಅಲ್ಲದೆ ಮರಣ ದರವೂ ಇಳಿದಿದೆ.

ಇದುವರೆಗೆ ರಾಜ್ಯ ಸರಕಾರ ಮತ್ತು ಹೆತ್ತವರಿಗೆ ಇದ್ದ ಒಂದೇ ಒಂದು ಆತಂಕವೆಂದರೆ ಅದು ಮೂರನೇ ಅಲೆ. ಸೆಪ್ಟಂಬರ್‌ನಲ್ಲಿಯೇ ಮೂರನೇ ಅಲೆ ಕಾಡಲಿದೆ ಎಂದು ಬಹುಹಿಂದೆಯೇ ತಜ್ಞರು ಎಚ್ಚರಿಕೆ ನೀಡಿದ್ದರು. ಅದರಲ್ಲೂ 3ನೇ ಅಲೆ ವೇಳೆ ಮಕ್ಕಳಿಗೇ ಹೆಚ್ಚು ಅಪಾಯ ಎಂಬ ಆತಂಕವೂ ಇತ್ತು. ಮಧ್ಯಾಂತರದಲ್ಲಿ ಹವಾಮಾನ ಬದಲಾವಣೆಯಿಂದಾಗಿ ಸೆಪ್ಟಂಬರ್‌ನಲ್ಲಿ ಮಕ್ಕಳಲ್ಲಿ ಶೀತ, ಜ್ವರದಂಥ ಕಾಯಿಲೆಗಳು ಕಾಣಿಸಿಕೊಂಡಿದ್ದರೂ ಇದು ಕೊರೊನಾ ಆಗಿರಲಿಲ್ಲ. ಒಂದು ಲೆಕ್ಕಾಚಾರದಲ್ಲಿ ಮಕ್ಕಳಲ್ಲೂ ಕೊರೊನಾ ಪ್ರತಿಕಾಯಗಳು ಬೆಳೆದಿರುವ ಸಾಧ್ಯತೆಗಳನ್ನೂ ತಳ್ಳಿಹಾಕುವಂತಿಲ್ಲ. ಇನ್ನು ಇಡೀ ದೇಶದಲ್ಲಿ ಕೇರಳ ರಾಜ್ಯವೊಂದನ್ನು ಹೊರತುಪಡಿಸಿದರೆ ಅಷ್ಟೇನೂ ಕೊರೊನಾ ಕಾಟವೂ ಇಲ್ಲ.

ಇದನ್ನೂ ಓದಿ:ಸೆಕ್ಯೂರಿಟಿ ಗಾರ್ಡ್‌ ಸೋಗಿನಲ್ಲಿ ಮನೆ ಕಳವು: ನಾಲ್ವರು ಭದ್ರತಾ ಸಿಬ್ಬಂದಿ ಸೇರಿ ಐವರ ಬಂಧನ

ಈ ನಿಟ್ಟಿನಲ್ಲಿ ರಾಜ್ಯ ಸರಕಾರ ಮಕ್ಕಳಿಗೂ ಶಾಲೆ ಆರಂಭಿಸುತ್ತಿರುವುದು ಉತ್ತಮ ನಿರ್ಧಾರವೇ ಸರಿ. ಕಳೆದ ಒಂದೂವರೆ ವರ್ಷದಿಂದಲೂ ಮಕ್ಕಳು ಶಾಲೆಯನ್ನೇ ಮರೆತಿದ್ದಾರೆ. ಇದರ ನಡುವೆ ಆನ್‌ಲೈನ್‌ ಪಾಠದ ಕಿರಿಕಿರಿಗೂ ತುತ್ತಾಗಿದ್ದಾರೆ. ಒಂದನೇ ತರಗತಿಯಿಂದ ಐದನೇ ತರಗತಿ ಮಕ್ಕಳನ್ನು ಆನ್‌ಲೈನ್‌ ಪಾಠದ ನೆಪದಲ್ಲಿ ಕಂಪ್ಯೂಟರ್‌ ಅಥವಾ ಮೊಬೈಲ್‌ ಮುಂದೆ ಕುಳಿಸುವುದು ಕಷ್ಟವಾಗಿತ್ತು ಎಂಬುದೂ ಎಲ್ಲರಿಗೂ ಗೊತ್ತಿರುವ ವಿಚಾರ. ಹೀಗಾಗಿ ಮಕ್ಕಳು ಶಾಲೆಗೆ ಹೋದರೆ ಕಲಿಯುವ ಸಾಮರ್ಥ್ಯ ಇನ್ನಷ್ಟು ಹೆಚ್ಚಳವಾಗಬಹುದು. ಮಕ್ಕಳ ಕಲಿಕಾ ಸಾ ಮರ್ಥ್ಯ ಹೆಚ್ಚಿಸುವುದು ಶಿಕ್ಷಕ ಸಮುದಾಯಕ್ಕೂ ದೊಡ್ಡ ಸವಾಲು. ಮಕ್ಕಳ ಮಾನಸಿಕತೆಯನ್ನು ಅರ್ಥ ಮಾಡಿಕೊಂಡು ಅವರ ಕಲಿಕಾ ಸಾಮರ್ಥ್ಯ ವೃದ್ಧಿಸುವತ್ತ ಶಿಕ್ಷಕರು ಹಾಗೂ ಹೆತ್ತವರು ಗಮನಹರಿಸಬೇಕು. ಶಾಲೆ ಎನ್ನುವುದು ಮಕ್ಕಳಿಗೆ ಶಿಕ್ಷೆ ಎಂಬ ಅಭಿಪ್ರಾಯ ಬಾರದಂತೆ ನೋಡಿಕೊಳ್ಳುವ ಅಗತ್ಯವಿದೆ.

Advertisement

ಅ.25ರಂದು ಶಾಲೆ ಆರಂಭವಾಗಲಿದೆ. ಆದರೆ ಇಲ್ಲಿ ಹೆತ್ತವರಾಗಲಿ ಅಥವಾ ಶಿಕ್ಷಕರಾಗಲಿ ಮೈಮರೆಯಲೇಬಾರದು. ಎಲ್ಲ ಕೊರೊನಾ ನಿಯಮಾವಳಿಗಳನ್ನು ಪಾಲಿಸಿಕೊಂಡೇ ಶಾಲಾ ತರಗತಿ ನಡೆಸಬೇಕು. ಇಲ್ಲಿ ಒಂದು ಚೂರು ಯಾಮಾರಿದರೂ ಸಂಕಷ್ಟ ಎದುರಾಗುತ್ತದೆ ಎಂಬುದರಲ್ಲಿ ಯಾವುದೇ ಸಂದೇಹವಿಲ್ಲ. ಹೀಗಾಗಿ ಎಲ್ಲ ಎಚ್ಚರಿಕೆಯನ್ನು ಪಾಲನೆ ಮಾಡಿಕೊಂಡು ಶಾಲೆಗಳನ್ನು ತೆರೆಯಲಿ.

Advertisement

Udayavani is now on Telegram. Click here to join our channel and stay updated with the latest news.

Next