Advertisement

ಇನ್ವೆಸ್ಟ್‌ಗೆ ಅನುಷ್ಠಾನ ಫಾಲೋಅಪ್‌ ಮುಖ್ಯ

10:28 AM Feb 11, 2020 | Suhan S |

ಹುಬ್ಬಳ್ಳಿ: “ಉತ್ತರ ಕರ್ನಾಟಕದಲ್ಲಿ ಕೃಷಿ-ತೋಟಗಾರಿಕೆ ಉತ್ಪನ್ನ ಸೇರಿದಂತೆ ಅನೇಕ ನೈಸರ್ಗಿಕ ಸಂಪತ್ತು, ಮಾನವ ಸಂಪನ್ಮೂಲ ಇದೆ. ಇದೆಲ್ಲದರ ಸದ್ಬಳಕೆಗೆ ಉದ್ಯಮ ಜಗತ್ತು ಬೆಳೆಯಬೇಕಾಗಿದೆ. ಉದ್ಯಮ ಆಕರ್ಷಣೆಗೆ ಹೂಡಿಕೆದಾರರ ಮೇಳ ಮಾಡುವುದರ ಜತೆಗೆ ಹೂಡಿಕೆ ವಾಗ್ಧಾನ-ಒಡಂಬಡಿಕೆ ಅನುಷ್ಠಾನಕ್ಕೆ ಪೂರಕ ವಾತಾವರಣ ಸೃಷ್ಟಿ, ತ್ವರಿತ ಜಾರಿಗೆ ಫಾಲೋಅಪ್‌ ಅತ್ಯಂತ ಪರಿಣಾಮಕಾರಿಯಾಗುವುದು ಅತ್ಯವಶ್ಯವಾಗಿದೆ’.

Advertisement

ದೇಶದ ಅನೇಕ ರಾಜ್ಯಗಳಲ್ಲಿ ಅದೆಷ್ಟೋ ಹೂಡಿಕೆದಾರರ ಮೇಳಗಳಾಗಿವೆ. ಅನುಷ್ಠಾನ ನೋಡಿದರೆ ಅತ್ಯಲ್ಪವಾಗಿದೆ. ಇದು ನಮಗೆ ಪಾಠವಾಗಬೇಕು. ಉಕ ಕ್ಕೆ ಮುಖ್ಯವಾಗಿ ಉದ್ಯೋಗ ಸೃಷ್ಟಿ ಹಾಗೂ ಉತ್ಪಾದನಾ ವಲಯಕ್ಕೆ ಒಲವು ತೋರಬೇಕಾಗಿದೆ. ಹೂಡಿಕೆದಾರರು ಉಕ ಕಡೆ ಯಾಕೆ ಬರಬೇಕೆಂಬುದನ್ನು ಪರಿಣಾಮಕಾರಿ ಮನವರಿಕೆ ನಮ್ಮ ಮುಂದಿರುವ ಸವಾಲು ಎಂಬುದು ಕೆಎಲ್‌ಇ ತಾಂತ್ರಿಕ ವಿಶ್ವವಿದ್ಯಾಲಯದ ಕುಲಪತಿ, ಹು-ಧಾ ಅಭಿವೃದ್ಧಿ ವೇದಿಕೆ ಉಪಾಧ್ಯಕ್ಷ ಡಾ| ಅಶೋಕ ಶೆಟ್ಟರ ಅವರ ಅಭಿಪ್ರಾಯ.

ಫೆ.14ರಂದು ಹುಬ್ಬಳ್ಳಿಯಲ್ಲಿ ನಡೆಯುವ ಹೂಡಿಕೆದಾರರ ಮೇಳದ ಹಿನ್ನೆಲೆಯಲ್ಲಿ ಉಕ ದಲ್ಲಿ ಉದ್ಯಮ ವೃದ್ಧಿಗಿರುವ ಅವಕಾಶ, ಸರಕಾರ ನೀತಿ- ಕ್ರಮಗಳೇನಾಗಬೇಕು, ಬೆಂಗಳೂರು ಅವಲಂಬನೆಯಿಂದ ಹೊರಬರಲು ಏನೆಲ್ಲಾ ಕ್ರಮಗಳ ಅವಶ್ಯಕತೆ ಎಂಬುದರ ಕುರಿತಾಗಿ ಡಾ| ಅಶೋಕ ಶೆಟ್ಟರ “ಉದಯವಾಣಿ’ಯೊಂದಿಗೆ ತಮ್ಮ ಮನದಾಳ ಅನಿಸಿಕೆಗಳನ್ನು ಹಂಚಿಕೊಂಡರು.

ಫಾಲೋಅಪ್‌ ಅತ್ಯಂತ ಮುಖ್ಯ: ನನ್ನ ದೃಷ್ಟಿಯಲ್ಲಿ ಹೂಡಿಕೆದಾರರ ಮೇಳಕ್ಕೆ ಸರಕಾರ ಸೇರಿದಂತೆ ನಾವೆಲ್ಲ ಎಷ್ಟು ಉತ್ಸುಕರಾಗಿದ್ದೇವೋ, ಅದಕ್ಕಿಂತಲೂ ಒಂದಿಷ್ಟು ಹೆಚ್ಚು ಮೇಳದ ಒಡಂಬಡಿಕೆ-ವಾಗ್ಧಾಗಳ ಅನುಷ್ಠಾನದ ಮುನ್ನಡೆಗೆ ಕಾಳಜಿ ತೋರಬೇಕಾಗಿದೆ. ಬದ್ಧತೆ ಪ್ರದರ್ಶಿಸಬೇಕಾಗಿದೆ.

ದೇಶದ ವಿವಿಧ ರಾಜ್ಯಗಳಲ್ಲಿ ಹೂಡಿಕೆದಾರರ ಮೇಳ ನಡೆದಿವೆ. ಮೇಳದಲ್ಲಿನ ಹೂಡಿಕೆ ಒಡಂಬಡಿಕೆಗಳ ಅನುಷ್ಠಾನ ವರದಿನೋಡಿದರೆ ಸರಾಸರಿ ಕೇವಲ ಶೇ.12-15ರಷ್ಟು ಮಾತ್ರವಾಗಿದೆ ಎಂಬುದನ್ನು ಹಲವು ಸಮೀಕ್ಷೆಗಳು ಹೇಳುತ್ತಿವೆ. ಅದಕ್ಕೆನಾನು ಹೇಳಿದ್ದು, ಮೇಳದ ನಂತರದ ಫಾಲೋಅಪ್‌ಗೆ ಒತ್ತು ನೀಡಬೇಕಾಗಿದೆ. ಮೇಳದ ನಂತರ ಮೈ ಮರೆತರೆ ಪ್ರಯೋಜನವೇನಿದೆ? ಕೃಷಿ-ತೋಟಗಾರಿಕೆ ಉತ್ಪನ್ನಗಳಿಗೆ ಪೂರಕವಾದ, ವ್ಯಾಪಾರ-ವಾಣಿಜ್ಯಕ್ಕೆ ಅನುಕೂಲಕರವಾದ ಉತ್ಪಾದನಾ ವಲಯ ಉದ್ಯಮಗಳು ಹೆಚ್ಚು ಹೆಚ್ಚು ಆಕರ್ಷಿತವಾಗಬೇಕಾಗಿದೆ. ಜ್ಞಾನಕ್ಕೆ ಪೂರಕವಾಗಿ ಇಲೆಕ್ಟ್ರಾನಿಕ್‌ ಮತ್ತು ಮಾಹಿತಿ ತಂತ್ರಜ್ಞಾನ ಉದ್ಯಮಗಳು ಬರಬೇಕಾಗಿದೆ. ಹೂಡಿಕೆ ಎಂದ ಕೂಡಲೇ ಹೊರಗಿನವರನ್ನು ಎದುರು ನೋಡುವುದಲ್ಲ. ಬದಲಾಗಿ ಸ್ಥಳೀಯ ಹೂಡಿಕೆದಾರಿಗೂ ಪ್ರೇರಣೆ-ಪ್ರೋತ್ಸಾಹ ದೊರಕಿಸಬೇಕಾಗಿದೆ. ಸ್ಥಳೀಯ ಹೂಡಿಕದಾರರ ಉತ್ತೇಜನ ನಿಟ್ಟಿನಲ್ಲಿ ನಿರೀಕ್ಷಿತ ಯತ್ನಗಳು ಆಗಿಲ್ಲವೆಂದೇ ಹೇಳಬೇಕು.

Advertisement

ಕೃಷಿ-ತೋಟಗಾರಿಕೆಯ ವೈವಿಧ್ಯಮಯ ಉತ್ಪನ್ನಗಳು, ಖನಿಜ ಸಂಪತ್ತು, ಮಾನವ ಸಂಪನ್ಮೂಲ, ಹುಬ್ಬಳ್ಳಿ-ಧಾರವಾಡ ಆಟೋಮೊಬೈಲ್‌ ಉದ್ಯಮದಲ್ಲಿ, ಬೆಳಗಾವಿ ಏರೋಸ್ಪೇಸ್‌ ಉದ್ಯಮದಲ್ಲಿ ಮಹತ್ವದ ಸಾಧನೆ ತೋರಿರುವುದು, ಸಂಪರ್ಕ ಸೌಲಭ್ಯಗಳಿಲ್ಲ ಎಂಬ ಕೊರತೆ ಬಹುತೇಕ ನೀಗಿರುವುದು, ಸ್ನೇಹಮಯ ಮನೋಭಾವ ಉ.ಕರ್ನಾಟಕದ ಸಾಮರ್ಥ್ಯವಾಗಿದೆ. ನಮ್ಮಲ್ಲಿನ ಕೀಳರಿಮೆ ಸಾಕಷ್ಟು ಹೊಡೆತ ಕೊಟ್ಟಿದೆ ಎಂಬುದನ್ನು ನಾನು ಮುಕ್ತ ಮನಸ್ಸಿನಿಂದ ಒಪ್ಪುತ್ತೇನೆ. ಆಶಾದಾಯಕ ಬೆಳವಣಿಗೆ ಎಂದರೆ, ನಾವೀಗ ಕೀಳರಿಮೆಯಿಂದ ಹೊರಬರುತ್ತಿದ್ದೇವೆ. ನಮ್ಮ ವಿಶ್ವಾಸ ಮಟ್ಟ ಹೆಚ್ಚುತ್ತಿದೆ. ಆಡಳಿತಾತ್ಮಕ ಇನ್ನಿತರ ದೃಷ್ಟಿಯಿಂದ ಬೆಂಗಳೂರು ಅತಿಯಾದ ಅವಲಂಬನೆ ಈಗಲೂ ನಮ್ಮನ್ನು ಕಾಡುವಂತಾಗಿದೆ.

ದೃಢ ನಿರ್ಧಾರದ ಹೆಜ್ಜೆ ಅವಶ್ಯ: ಉದ್ಯಮ ಬೆಳವಣಿಗೆ ಎಂದರೆ ಅದು ಕೇವಲ ಒಂದೆರಡು ನಗರಗಳಿಗೆ ಕೇಂದ್ರಿಕೃತವಾಗಿರಬಾರದು. ಅದು ಬೆಳವಣಿಗೆ ವಿಕೇಂದ್ರೀಕರಣಗೊಳ್ಳಬೇಕು, ಸುಸ್ಥಿರತೆ, ಪ್ರಾದೇಶಿಕ ಸಮತೋಲನಕ್ಕೆ ಪೂರಕವಾಗಿರಬೇಕು. ಇದು ರಾಜ್ಯದ ಸರ್ವಾಂಗೀಣ ಬೆಳವಣಿಗೆಗೆ ಸಹಕಾರಿ. ಮಹಾರಾಷ್ಟ್ರ, ಆಂಧ್ರಪ್ರದೇಶ, ತಮಿಳುನಾಡು, ಗುಜರಾತ್‌ ಇನ್ನಿತರರಾಜ್ಯಗಳನ್ನೇ ತೆಗೆದುಕೊಳ್ಳಿ, ಅಲ್ಲಿನ ರಾಜ್ಯಗಳ ರಾಜಧಾನಿಯಷ್ಟೇ ಅಲ್ಲ. ಅನೇಕ ನಗರಗಳು ಉದ್ಯಮ-ಅಭಿವೃದ್ಧಿ ದೃಷ್ಟಿಯಿಂದ ಬೆಳೆದಿವೆ. ನಮ್ಮಲ್ಲಿ ಬೆಂಗಳೂರು ಕೇಂದ್ರಿಕೃತ ಉದ್ಯಮ ಬೆಳವಣಿಗೆ ಆಗುತ್ತಿದ್ದು, ಮುಂದೆಯೂ ಇದೇ ಸ್ಥಿತಿ ಇರಬೇಕಾ? ಬೆಂಗಳೂರು ಹೊರತಾದ ಬೆಳವಣಿಗೆ ನಿಟ್ಟಿನಲ್ಲಿ ಸರಕಾರ ದೃಢ ನಿರ್ಧಾರ, ರಾಜಕೀಯ ಇಚ್ಛಾಶಕ್ತಿ ಪ್ರದರ್ಶಿಸಬೇಕಾಗಿದೆ.

ದೇಶದ ಅನೇಕ ರಾಜ್ಯಗಳು ಹೂಡಿಕೆದಾರ ಮೇಳ ಮಾಡುತ್ತಿವೆ. ಪೈಪೋಟಿ ರೂಪದ ಆಕರ್ಷಕ ಕೊಡುಗೆ-ರಿಯಾಯ್ತಿ ಘೋಷಿಸುತ್ತಿವೆ. ನಮ್ಮಲ್ಲಿಯೇ ಯಾಕೆ ಉದ್ಯಮಿಗಳು ಬರಬೇಕು ಎಂಬುದ ಸ್ಪಷ್ಟ ನಿಲುವು, ಉತ್ತರ ಕರ್ನಾಟಕದ ಸಂಪನ್ಮೂಲ, ಇಲ್ಲಿನಉದ್ಯಮಸ್ನೇಹಿ ವಾತಾವರಣವನ್ನು ಹೂಡಿಕೆದಾರರಿಗೆ ಮನದಟ್ಟು ಮಾಡಿಕೊಡುವ ಕೆಲಸ ಆಗಬೇಕಾಗಿದೆ. ಹೂಡಿಕೆದಾರರ ಮೇಳದಲ್ಲಿ ಉದ್ಯಮದಾರರು ಹಾಗೂ ರಾಜ್ಯ ಸರಕಾರ ಒಡಂಬಡಿಕೆಗೆ ಸಹಿ ಹಾಕಿದರೆ ಅಲ್ಲಿಗೆ ಮುಗಿಯಲಿಲ್ಲ. ಒಬ್ಬ ಉದ್ಯಮಿ ಬಯಸುವುದು ಸರಳ ಹಾಗೂ ತ್ವರಿತ ರೀತಿಯ ಅನುಷ್ಠಾನ ಕ್ರಮಗಳನ್ನು. ಉದ್ಯಮಕ್ಕೆ ಭೂಮಿ ಪಡೆಯುವುವಿಕೆ, ವಿವಿಧ ರೀತಿಯ 20-30 ಪರವಾನಿಗೆಗೆ ಇರುವ ಅಡೆ-ತಡೆ, ವಿಳಂಬ ಧೋರಣೆ, ಉದ್ಯಮ ಪರವಾನಿಗೆಗೆ ಏಕಗವಾಕ್ಷಿ ವ್ಯವಸ್ಥೆ ಎಂದು ಸರಕಾರ ಹೇಳುತ್ತಿದ್ದರೂ, ನೈಜ ಸ್ವರೂಪದ ಏಕಗವಾಕ್ಷಿ ವ್ಯವಸ್ಥೆ ಇದೆಯೇ? ಉದ್ಯಮಿಗಳು ಬಯಸುವ ಸರಳ ಹಾಗೂ ತ್ವರಿತ ಕ್ರಮಗಳನ್ನು ಅನುಸರಿಸಲಾಗುತ್ತಿದೆಯೇ ಎಂಬ ಆತ್ಮಾವಲೋಕನ ಅವಶ್ಯವಾಗಿದೆ.

 

-ಅಮರೇಗೌಡ ಗೋನವಾರ

Advertisement

Udayavani is now on Telegram. Click here to join our channel and stay updated with the latest news.

Next