Advertisement

ಸಮಾಜಘಾತುಕ ಕೃತ್ಯದಲ್ಲಿ ತೊಡಗಿದರೆ ನಿರ್ದಾಕ್ಷಿಣ್ಯ ಕ್ರಮ: ಎನ್. ಶಶಿಕುಮಾರ್ ಖಡಕ್ ಎಚ್ಚರಿಕೆ

07:10 PM Jan 31, 2021 | Team Udayavani |

ಸುರತ್ಕಲ್: ಹಲವಾರು ಕ್ರಿಮಿನಲ್ ಪ್ರಕರಣದಲ್ಲಿ ಅಪರಾಧ ಮಾಡಿ ಜೈಲು ಸೇರಿ ಹೊರ ಬಂದಿದ್ದೀರಿ. ಇನ್ನಾದರೂ ಸಮಾಜ ಘಾತುಕ ಕೃತ್ಯದಲ್ಲಿ ತೊಡಗದೆ ನಿಮ್ಮ ಜೀವನವನ್ನು ಒಳ್ಳೆಯ ರೀತಿಯಲ್ಲಿ ಸಾಗಿಸಿ. ಮತ್ತೆ ಏನಾದರೂ ಅಪರಾಧ ಪ್ರಕರಣದಲ್ಲಿ ಕಂಡು ಬಂದದ್ದೇ ಆದರೆ ಪೊಲೀಸ್ ಕಾನೂನಿನಲ್ಲಿ ಅವಕಾಶ ಇರುವ  ಸೆಕ್ಷನ್ ಬಳಸಿ ಕೇಸು ದಾಖಲಿಸಲಾಗುವುದು ಮಾತ್ರವಲ್ಲ ಸಮಾಜದ ಶಾಂತಿಗೆ ಭಂಗವಾದರೆ  ರೌಡಿ ಶೀಟ್ ದಾಖಲಿಸಿ ಗಡಿಪಾರು ಮಾಡಬೇಕಾಗಬಹುದು ಎಂದು ಮಂಗಳೂರು ಪೊಲೀಸ್ ಆಯುಕ್ತ ಎನ್.ಶಶಿಕುಮಾರ್  ಈಗಾಗಲೇ ಅಪರಾಧಿ ಕೃತ್ಯದಲ್ಲಿ ಭಾಗಿಯಾಗಿರುವವರಿಗೆ ಖಡಕ್ ಎಚ್ಚರಿಕೆ ನೀಡಿದರು.

Advertisement

ಸುರತ್ಕಲ್ ನಲ್ಲಿ ರವಿವಾರ ಸುರತ್ಕಲ್, ಪಣಂಬೂರು, ಬಜಪೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿನ 148ಕ್ಕೂ ಹೆಚ್ಚು ರೌಡಿಗಳ ಪೆರೆಡ್ ನಡೆಸಿ ಎಚ್ಚರಿಸಿದರು.

ಇದನ್ನೂ ಓದಿ: ಕೋವಿಡ್ ಲಸಿಕೆ ಪಡೆದಿದ್ದ ಆರೋಗ್ಯ ಕಾರ್ಯಕರ್ತೆ ಸಾವು; ತೆಲಂಗಾಣದಲ್ಲಿ 3ನೇ ಪ್ರಕರಣ

ಜೀವನವನ್ನು ಬದಲಾಯಿಸಿಕೊಳ್ಳಿ ಗಲಭೆ, ಅಪರಾಧ ಮಾಡಿ ಮತ್ತೆ ಜೈಲು ಸೇರಿದರೆ ಕಠಿಣ ಕಾನೂನು ಕ್ರಮ ಕೈಗೊಳ್ಳುತ್ತೇನೆ. ಸ್ಥಳೀಯವಾಗಿ ನಿಮಗೆ ಅಪರಾಧದ ಮಾಹಿತಿ ತಿಳಿದು ಬಂದರೆ ಸ್ಥಳೀಯ ಪೊಲೀಸ್ ಠಾಣೆಗೆ, ಬೀಟ್ ಪೊಲೀಸರಿಗೆ ತಿಳಿಸಿ. ಕ್ರಿಮಿನಲ್ ಚಟುವಟಿಕೆ ನಡೆಯದಂತೆ ಸಹಕರಿಸಬೇಕು. ನಿಮ್ಮ ಬಗ್ಗೆ ಒಳ್ಳೆಯ ಅಭಿಪ್ರಾಯ ಬಂದು ಉತ್ತಮ ಜೀವನ ನಡೆಸುತ್ತೀರಿ ಎಂದು ನಮ್ಮ ಗಮನಕ್ಕೆ ಬಂದರೆ ರೌಡಿ ಶೀಟ್ ತೆಗೆದು ಅವಕಾಶ ಮಾಡಿಕೊಡುತ್ತೇವೆ. ಇತರರಂತೆ ಸಾಮಾನ್ಯರಾಗಿ ಬಾಳಿ, ಉದ್ದ ಗಡ್ಡ, ಮೀಸೆ ಬಿಟ್ಟು, ಕೊರಳಿಗೆ, ಕೈಗೆ ದಪ್ಪದ ಚೈನುಗಳನ್ನು ಹಾಕಿಕೊಂಡು, ಭೀತಿಯುಟ್ಟಿಸುವ ಟ್ಯಾಟುಗಳನ್ನು ಅಚ್ಚು ಹಾಕಿಸಿಕೊಂಡು ಜನರನ್ನು ಹೆದರಿಸುವ ಮಾದರಿಯ ಶೈಲಿಗಳನ್ನು ಇಂದೇ ಬಿಡಿ. ಪೊಲೀಸ್ ಇಲಾಖೆ ಇರುವುದೇ ಅಪರಾಧಿಗಳನ್ನು ಮಟ್ಟ ಹಾಕಲು ಎಂದು ಎಚ್ಚರಿಸಿದರು.

Advertisement

ಬಳಿಕ  ಪಣಂಬೂರು ಉಪವಿಭಾಗದ ಮೂರು  ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿನ ರೌಡಿ ಶೀಟರ್ ಗಳನ್ನು ಕರೆಸಿ ಅವರ ಚಟುವಟಿಕೆಗಳ ಕುರಿತು ಆಯಾ ಠಾಣಾ ಅಧಿಕಾರಿಗಳಿಂದ ಮಾಹಿತಿ ಪಡೆದ  ಎನ್.ಶಶಿಕುಮಾರ್ ಅವರು ಪ್ರತೀ ರೌಡಿಗಳ ಮಾಹಿತಿಯನ್ನು ಪೊಲೀಸ್ ಠಾಣೆಗಳಲ್ಲಿ ಇರುವ ಅಧಿಕಾರಿಗಳು, ಸಿಬಂದಿಗಳು, ಬೀಟ್ ಪೊಲೀಸರು ಪಡೆದುಕೊಂಡು ನಿಗಾವಹಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.  ಯಾರಾದರೂ ಸಮಾಜಘಾತುಕ ಚಟುವಟಿಕೆಗಳಲ್ಲಿ ಭಾಗವಹಿಸಿದ್ದೇ ಆದಲ್ಲಿ ಅಂತಹವರ ವಿರುದ್ದ ನಿರ್ದಾಕ್ಷಿಣ್ಯ ಕ್ರಮ ಜರುಗಿಸಿ ಎಂದು ಸೂಚಿಸಿದರು. ಈ ಸಂದರ್ಭ ಡಿಸಿಪಿ ಹರಿರಾಮ್ ಶಂಕರ್, ಎಸಿಪಿ ಬೆಳ್ಳಿಯಪ್ಪ, ಸುರತ್ಕಲ್ ಸಿಐ ಚಂದ್ರಪ್ಪ, ವಿವಿಧ ಠಾಣೆಯ ಪೊಲೀಸ್ ಅಧಿಕಾರಿಗಳು ಮತ್ತಿತರರು ಅಧಿಕಾರಿಗಳು ಉಪಸ್ಥಿತರಿದ್ದರು.

ಇದನ್ನೂ ಓದಿ: ಸೋದರಳಿಯನ ಪ್ರಗತಿಗೆ ಶ್ರಮಿಸುತ್ತಿರುವ ಮಮತಾ ಬ್ಯಾನರ್ಜಿ ಇನ್ಮುಂದೆ ಏಕಾಂಗಿ: ಶಾ ಆಕ್ರೋಶ

ಬಳಿಕ ಮಾಧ್ಯಮದೊಂದಿಗೆ ಮಾತನಾಡಿದ ಆಯುಕ್ತರು, ಪ್ರತೀ ಠಾಣಾ ವ್ಯಾಪ್ತಿಯ ಅಪರಾಧಿಗಳ ಬಗ್ಗೆ ಠಾಣೆಯ ಎಲ್ಲಾ ಅಧಿಕಾರಿ, ಸಿಬಂದಿಗಳಿಗೆ ಮಾಹಿತಿ ಇರಬೇಕು. ಈ ನಿಟ್ಟಿನಲ್ಲಿ ರೌಡಿ ಪೆರೇಡ್ ಸಾಮಾನ್ಯವಾಗಿ ಮಾಡಲಾಗುತ್ತದೆ. ಇತ್ತೀಚೆಗೆ ಸುರತ್ಕಲ್ ಸಮೀಪದ ಗಣೇಶಪುರದಲ್ಲಿ ಚೂರಿ ಇರಿತ ಪ್ರಕರಣವಾಗಿದೆ. ಅಪರಾಧಿಗಳ ಬಂಧನ ಮಾಡಲಾಗಿದೆ. ಇಂತಹ ಘಟನೆ ಮರುಕಳಿಸದಂತೆ ರೌಡಿ ಪೆರೆಡ್ ನಡೆಸಿ ಎಚ್ಚರಿಕೆ ನೀಡಲಾಗಿದೆ. ಪಣಂಬೂರು, ಸುರತ್ಕಲ್, ಬಜಪೆ ಠಾಣೆ ವ್ಯಾಪ್ತಿಯಲ್ಲಿ ಅಪರಾಧ ಹಿನ್ನಲೆಯ ಸೂಕ್ಷ್ಮ ಪ್ರದೇಶ. ಹೀಗಾಗಿ ಕ್ರಿಮಿನಲ್ ಗಳ ವಿರುದ್ದ ಅಗತ್ಯ ಬಿದ್ದರೆ ರೌಡಿ ಶೀಟ್ ಹಾಕುವ ಬಗ್ಗೆಯೂ ಮಾಹಿತಿ ಕಲೆ ಹಾಕಲಾಗುವುದು. ಸಮಾಜದಲ್ಲಿ ಶಾಂತಿಯಿಂದ ಬದುಕುವ ಹಳೆ ರೌಡಿಗಳಿದ್ದರೆ ಅವರಿಗೆ ಉತ್ತಮ ಜೀವನ ನಡೆಸಲು ಸಹಕಾರ ನೀಡಲಾಗುವುದು. ಗಾಂಜಾ ಮಾರಾಟ ಸಹಿತ ಅಪರಾಧ ಚಟುವಟಿಕೆಗಳಿಗೂ ಕಡಿವಾಣ ಹಾಕಲು ಎಲ್ಲಾ ಕ್ರಮ ಕೈಗೊಳ್ಳಲಾಗಿದೆ ಎಂದರು.

ಕೃಷ್ಣಾಪುರ-ಕಾಟಿಪಳ್ಳದಲ್ಲಿ ಆಯುಕ್ತರ ಪಥಸಂಚಲನ, ವಾಹನ ತಪಾಸಣೆ

ಇತ್ತೀಚೆಗೆ ಕ್ಷುಲ್ಲಕ ಕಾರಣಕ್ಕೆ ಯುವಕನೊಬ್ಬನಿಗೆ ಚೂರಿ ಇರಿದ ಪ್ರಕರಣಕ್ಕೆ ಸಂಬಂಧಿಸಿ ಅದೇ ದಿನ ಆರೋಪಿಗಳನ್ನು ಬಂಧಿಸಿ  ಯಾವುದೇ ಅಹಿತಕರ ಘಟನೆ ನಡೆಯದಂತೆ ಮುಂಜಾಗ್ರತೆ ವಹಿಸಿದ ಪೊಲೀಸರ ಕಾರ್ಯಾಚರಣೆಗೆ ವ್ಯಾಪಕ ಪ್ರಶಂಸೆ ವ್ಯಕ್ತವಾಗಿರುವಂತೆಯೇ  ಶನಿವಾರ ಸೂಕ್ಷ್ಮ ಪ್ರದೇಶವಾದ ಕಾಟಿಪಳ್ಳ, ಕೃಷ್ಣಾಪುರ, ಸುರತ್ಕಲ್ ಪ್ರದೇಶದ 6 ಕಿ.ಮೀ ವ್ಯಾಪ್ತಿಯಲ್ಲಿ ಪೊಲೀಸ್ ಆಯುಕ್ತ ಎನ್.ಶಶಿಕುಮಾರ್ ಪಥ ಸಂಚಲನದಲ್ಲಿ ಭಾಗವಹಿಸಿ ಜನರಲ್ಲಿ ಧೈರ್ಯ ತುಂಬುವ ಕೆಲಸ ಮಾಡಿದರು.

ಮಾತ್ರವಲ್ಲದೆ ಈ ವೇಳೆ ಸಮಾಘಾತುಕ ಶಕ್ತಿಗಳಿಗೆ ಎಚ್ಚರಿಕೆ ನೀಡಿದರು. ದಾರಿಯುದ್ದಕ್ಕೂ ಹೆಚ್ಚಿನ ವಾಹನಗಳ ದಾಖಲೆಗಳನ್ನು ತಪಾಸಣೆ ನಡೆಸಿ ಸರಿಯಾದ ದಾಖಲೆ ಇಲ್ಲದ ವಾಹನಗಳನ್ನು ಮುಟ್ಟುಗೋಲು ಹಾಕಿಕೊಳ್ಳುವಂತೆ ಸೂಚಿಸಿದರೆ. ಸ್ಥಳೀಯ ಜನಪ್ರತಿನಿಧಿಗಳನ್ನು ಭೇಟಿಯಾಗಿ ಮಾಹಿತಿ ಕಲೆ ಹಾಕಿದರು.

ಇದನ್ನೂ ಓದಿ:  ಪದವಿ, ಡಿಪ್ಲೊಮಾ, ಎಂಜಿನಿಯರಿಂಗ್‌ ಕಾಲೇಜುಗಳ ಉಪನ್ಯಾಸಕರ ವರ್ಗಕ್ಕೆ ಕೌನ್ಸೆಲಿಂಗ್: ಡಿಸಿಎಂ

Advertisement

Udayavani is now on Telegram. Click here to join our channel and stay updated with the latest news.

Next