Advertisement

ಅಕ್ರಮ ಮರಳುಗಾರಿಕೆ: ಪೊಲೀಸ್‌ ಕರ್ತವ್ಯಕ್ಕೆ ಅಡ್ಡಿ

12:52 AM Nov 30, 2021 | Team Udayavani |

ಮಲ್ಪೆ: ಅಕ್ರಮ ಮರಳು ಗಣಿಗಾರಿಕೆ ನಡೆಸುವ ಸ್ಥಳಕ್ಕೆ ಪರಿಶೀಲನೆಗಾಗಿ ತೆರಳುತ್ತಿದ್ದ ಪೊಲೀಸರ ಮೇಲೆ ಅಕ್ರಮ ಮರಳು ಸಾಗಾಟಗಾರರು ಕಲ್ಲು ತೂರಿ ಪೊಲೀಸರ ವಾಹನಗಳನ್ನು ಜಖಂಗೊಳಿಸಿ ಹಲ್ಲೆ ಮುಂದಾದ ಘಟನೆ ರವಿವಾರ ತಡರಾತ್ರಿ ಹೂಡೆಯಲ್ಲಿ ನಡೆದಿದೆ.

Advertisement

ಕೆಮ್ಮಣ್ಣು ಹಂಪನಕಟ್ಟೆ ಜಂಕ್ಷನ್‌ ಬಳಿ ಹೂಡೆ ಕಡೆಯಿಂದ ಬಂದ ಅಕ್ರಮ ಮರಳು ಸಾಗಾಟದ ಲಾರಿಯೊಂದು ಅತಿ ವೇಗವಾಗಿ ಸಾರ್ವಜನಿಕರ ಜೀವಕ್ಕೆ ಹಾನಿಯುಂಟು ಮಾಡುವ ರೀತಿಯಲ್ಲಿ ಚಲಾಯಿಸಿಕೊಂಡು ಬಂದು ಭೀತಿಯನ್ನು ಹುಟ್ಟಿಸಿದೆ. ಇದನ್ನು ಪ್ರಶ್ನಿಸಿದ ಸಾರ್ವಜನಿಕರು ಮತ್ತು ಅಕ್ರಮ ಮರಳು ಸಾಗಾಟಗಾರರ ಮಧ್ಯೆ ಘರ್ಷಣೆ ಉಂಟಾಗಿತ್ತು.

ಈ ಬಗ್ಗೆ ಮಾಹಿತಿ ಪಡೆದ ಮಲ್ಪೆ ಪೊಲೀಸ್‌ ಠಾಣಾಧಿಕಾರಿ ಶಕ್ತಿವೇಲು ಸ್ಥಳಕ್ಕೆ ಭೇಟಿ ನೀಡಿದ ಸಂದರ್ಭ ಹೂಡೆಯ ಖದೀಮಿ ಜಾಮೀಯ ಮಸೀದಿಯ ಬಳಿ ರಸ್ತೆಯ ಎರಡೂ ಬದಿಯಲ್ಲಿ ಸೇರಿದ್ದ 12 ಮಂದಿಯ ಗುಂಪು ಕರ್ತವ್ಯದಲ್ಲಿದ್ದ ಪೊಲೀಸರಿಗೆ ಮತ್ತು ಅವರ ವಾಹನಕ್ಕೆ ಕಲ್ಲೆಸೆದು ಹಾನಿ ಮಾಡಿದೆ. ಸಾರ್ವಜನಿಕರ ವಾಹನಗಳಿಗೆ ಕಲ್ಲು ತೂರಾಟ ನಡೆಸಿದ್ದಾರೆ. ಪೊಲೀಸರು ಆರೋಪಿಗಳನ್ನು ಹಿಡಿಯಲು ಪ್ರಯತ್ನಿಸಿದಾಗ ತಪ್ಪಿಸಿಕೊಂಡು ಪರಾರಿಯಾಗಿದ್ದಾರೆ. ಘಟನೆಯಲ್ಲಿ ಪೊಲೀಸ್‌ ವಾಹನ ಮತ್ತು ಸಾರ್ವಜನಿಕರ ವಾಹನಕ್ಕೆ ಹಾನಿಯುಂಟಾಗಿದೆ.

ಪ್ರಕರಣ ದಾಖಲು
ರಾತ್ರಿ 12.30ರ ವೇಳೆ ಹೂಡೆ ಉರ್ದು ಶಾಲೆಯ ಬಳಿ ಗಸ್ತು ನಿರತರಾಗಿದ್ದ ಪೊಲೀಸ್‌ ಮತ್ತು ವಾಹನದ ಮೇಲೆ ಮತ್ತೆ ಕಲ್ಲು ತೂರಾಟ ನಡೆಸಲಾಗಿದೆ. ಕೋಡಿಬೇಂಗ್ರೆ ಮಸೀದಿಯ ಹತ್ತಿರ ಖಾಸಗಿ ವಾಹನಗಳು ಹಾಗೂ ರಸ್ತೆಯಲ್ಲಿ ಹೋಗುವ ಸಾರ್ವಜನಿಕರ ಮೇಲೂ ಕಲ್ಲು ತೂರಿದ್ದಾರೆ.

ಇದನ್ನೂ ಓದಿ:ಕೊಚ್ಚಿ ಏರ್ ಪೋರ್ಟ್ ನಲ್ಲಿ ಶಬರಿಮಲೆ ದೇಗುಲದ ಸಹಾಯಕೇಂದ್ರ

Advertisement

ಘಟನೆಯ ಬಗ್ಗೆ ಮಲ್ಪೆ ಠಾಣಾಧಿಕಾರಿ ಶಕ್ತಿವೇಲು ಅವರು ಕರ್ತವ್ಯಕ್ಕೆ ಅಡ್ಡಿಪಡಿಸಿದ ಹಿನ್ನೆಲೆಯಲ್ಲಿ ಹಾಗೂ ಪೊಲೀಸ್‌ ವಾಹನಕ್ಕೆ ಹಾನಿಗೊಳಿಸಿದ ಬಗ್ಗೆ ದೂರು ನೀಡಿದ್ದಾರೆ. ಈ ಬಗ್ಗೆ ಆರೋಪಿಗಳಾದ ಇರ್ಷಾದ್‌, ಅಹಾದ್‌, ಅಲ್ಫಾಜ್, ಶಾಹಿಲ್ , ಇರ್ಫಾನ್‌, ಇದಾಯತ್‌ ಹಾಗೂ ಇತರ ನಾಲ್ವರ ಮೇಲೆ ಮಲ್ಪೆ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಉಡುಪಿಯಲ್ಲಿ ಅಕ್ರಮ ಮರಳುಗಾರಿಕೆ ಮಿತಿ ಮೀರಿದೆ. ಟ್ರಿಪ್‌ ಶೀಟ್‌ ಇಲ್ಲದೆ ಮರಳು ಸಾಗಾಟ ಮಾಡಿದರೆ, ಇನ್ನೊಂದೆಡೆ ಮರಳು ತೆಗೆಯಲು ಯಾವುದೇ ಸರಕಾರದ ನಿಯಮ ಪಾಲಿಸದೆ ಅಕ್ರಮಗಳು ನಡೆಯುತ್ತಿವೆ. ಸಾರ್ವಜನಿಕರ ದೂರು ಇದ್ದರೂ, ಗಣಿ ಇಲಾಖೆಯ ಅಧಿಕಾರಿಗಳು ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ ಎನ್ನುವ ಆರೋಪ ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿದೆ.

 

Advertisement

Udayavani is now on Telegram. Click here to join our channel and stay updated with the latest news.

Next